ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು “ದೇಶದ್ರೋಹಿ” ಎಂದು ಟೀಕಿಸಿದ್ದಕ್ಕಾಗಿ ಮುಂಬೈ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಾಮ್ರಾ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅವರು ಏಪ್ರಿಲ್ 5 ರಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ತಮ್ಮ ವಿರುದ್ಧದ ದೂರುಗಳು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಯಾವುದೇ ವೃತ್ತಿ ಮತ್ತು ವ್ಯವಹಾರವನ್ನು ನಡೆಸುವ ಹಕ್ಕು ಮತ್ತು ಭಾರತದ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಲಾದ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತವೆ ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದಾರೆ. ವಕೀಲ ಮೀನಾಜ್ ಕಾಕಾಲಿಯಾ ಅವರ ಮೂಲಕ ಸಲ್ಲಿಸಲಾದ ಅರ್ಜಿಯು ಏಪ್ರಿಲ್ 21 ರಂದು ನ್ಯಾಯಮೂರ್ತಿ ಸಾರಂಗ್ ಕೊತ್ವಾಲ್ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಕುನಾಲ್ ತಮ್ಮ ವಿರುದ್ಧದ ಪ್ರಕರಣದಲ್ಲಿ ಕಳೆದ ತಿಂಗಳು ಮದ್ರಾಸ್ ಹೈಕೋರ್ಟ್ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದರು. ತಾನು ತಮಿಳುನಾಡಿನ ಖಾಯಂ ನಿವಾಸಿ ಆಗಿರುವುದರಿಂದ ತನ್ನ ಅರ್ಜಿ ಆಲಿಸುವ ಹಕ್ಕು ಮದ್ರಾಸ್ ಹೈಕೋರ್ಟ್ಗೆ ಇದೆ ಎಂದು ಅವರು ಹೇಳಿದ್ದರು. ಅವರ ವಿರುದ್ಧ ಪೊಲೀಸರು ಮೂರು ಸಮನ್ಸ್ ಜಾರಿ ಮಾಡಿದ್ದರೂ ಅವರು ಇನ್ನೂ ವಿಚಾರಣೆಗೆ ಹಾಜರಾಗಿಲ್ಲ.
ಹಾಸ್ಯ ಕಾರ್ಯಕ್ರಮದ ಸಂದರ್ಭದಲ್ಲಿ ಕುನಾಲ್ ಅವರು “ದಿಲ್ ತೋ ಪಾಗಲ್ ಹೈ” ಚಿತ್ರದ ಹಿಂದಿ ಹಾಡಿನ ಮಾರ್ಪಡಿಸಿದ ಆವೃತ್ತಿಯನ್ನು ಬಳಸಿಕೊಂಡು ಶಿಂಧೆ ಅವರನ್ನು “ಗದ್ದರ್” (ದೇಶದ್ರೋಹಿ) ಎಂದು ಕರೆದಿದ್ದರು. ಶಿಂಧೆ ಅವರು ಉದ್ಧವ್ ಠಾಕ್ರೆ ವಿರುದ್ಧ ರಾಜಕೀಯ ದಂಗೆ ಎದ್ದು ಸರ್ಕಾರ ಪತನ ಮಾಡಿದ್ದ ಘಟನೆಯನ್ನು ಅವರು ಹಾಸ್ಯವಾಗಿ ನಿರೂಪಿಸಿದ್ದರು.
ಶಿವಸೇನಾ ಶಾಸಕ ಮುರ್ಜಿ ಪಟೇಲ್ ಅವರ ದೂರಿನ ನಂತರ, ಮುಂಬೈ ಪೊಲೀಸರು ಕುನಾಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 353(1)(b) (ಸಾರ್ವಜನಿಕ ಕಿರುಕುಳಕ್ಕೆ ಕಾರಣವಾಗುವ ಹೇಳಿಕೆಗಳು) ಮತ್ತು 356(2) (ಮಾನನಷ್ಟ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ವಕ್ಫ್ ಮಸೂದೆ ಕುರಿತು ಚರ್ಚೆಗೆ ಅವಕಾಶ ನಿರಾಕರಣೆ: ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಗದ್ದಲ
ವಕ್ಫ್ ಮಸೂದೆ ಕುರಿತು ಚರ್ಚೆಗೆ ಅವಕಾಶ ನಿರಾಕರಣೆ: ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಗದ್ದಲ

