ಡಿಎಂಕೆ ಒಳಗೊಂಡಂತೆ ವಿವಿಧ ರಾಜಕೀಯ ಪಕ್ಷಗಳ ಸದಸ್ಯರು ಹಾಗೂ ಸಾಮಾಜಿಕ ಸಂಘಟನೆಗಳು, ಶೈಕ್ಷಣಿಕ ಹಕ್ಕುಗಳ ಸಂರಕ್ಷಣಾ ಸಮನ್ವಯ ಸಮಿತಿಯ (CCPER) ಅಡಿಯಲ್ಲಿ ತಮಿಳುನಾಡಿನ ಮನೋನ್ಮನಿಯಮ್ ಸುಂದರನಾರ್ ವಿಶ್ವವಿದ್ಯಾನಿಲಯದ ಎಂಎ ಇಂಗ್ಲಿಷ್ ಪಠ್ಯಕ್ರಮದಲ್ಲಿ ಲೇಖಕಿ ಅರುಂಧತಿ ರಾಯ್ ಅವರ “ವಾಕಿಂಗ್ ವಿಥ್ ದಿ ಕಾಮ್ರೇಡ್ಸ್” ಕೃತಿಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿದೆ.
2017 ರಿಂದ ವಿಶ್ವವಿದ್ಯಾಲಯದ ಪಠ್ಯಕ್ರಮದ ಭಾಗವಾಗಿದ್ದ ಈ ಪುಸ್ತಕವನ್ನು ವಾಪಾಸು ಪಠ್ಯಕ್ರಮಕ್ಕೆ ಸೇರಿಸುವ ನಿಟ್ಟಿನಲ್ಲಿ ಅವರು ಮಂಗಳವಾರ ಉಪಕುಲಪತಿ ಡಾ. ಕೆ.ಪಿಚ್ಚುಮಣಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದಾರೆ.
ಎಬಿವಿಪಿ ದೂರಿನ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯವು ಲೇಖಕಿ ಅರುಂದತಿ ರಾಯ್ ಮಾವೋವಾದಿ ಶಿಬಿರಗಳಿಗೆ ನೀಡಿದ್ದ ಭೇಟಿ ಆಧರಿಸಿದ ಪುಸ್ತಕವನ್ನು ವಾಪಸು ಪಡೆದಿತ್ತು. ಅದರ ಬದಲು ಎಂ ಕೃಷ್ಣನ್ ಅವರ ’ಮೈ ನೇಟಿವ್ ಲ್ಯಾಂಡ್: ಎಸ್ಸೇಸ್ ಆನ್ ನೇಚರ್’ ಎಂಬ ಪುಸ್ತಕವನ್ನು ಸೇರಿಸುತ್ತೇವೆ ಎಂದು ವಿವಿ ಹೇಳಿತ್ತು.
ಇದನ್ನೂ ಓದಿ: ABVP ದೂರು ಹಿನ್ನಲೆ: ಅರುಂಧತಿ ರಾಯ್ ಪುಸ್ತಕ ಹಿಂಪಡೆದ ತಮಿಳುನಾಡು ವಿವಿ!
CCPER ಸದಸ್ಯರಿಂದ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಡಾ. ಕೆ.ಪಿಚ್ಚುಮಣಿ, “ಈ ಹಿಂದೆ ವಿಶ್ವವಿದ್ಯಾನಿಲಯದೊಂದಿಗೆ ಸಂಬಂಧ ಹೊಂದಿದ್ದ ಶಿಕ್ಷಣ ತಜ್ಞರು ಮೂರು ವರ್ಷಗಳ ಹಿಂದೆಯೆ ಎಂಎ ಇಂಗ್ಲಿಷ್ಗಾಗಿ ಪಠ್ಯಕ್ರಮದಲ್ಲಿ ಪುಸ್ತಕವನ್ನು ಸೇರಿಸುವುದನ್ನು ಎಚ್ಚರಿಸಿದ್ದಾರೆ. ಇತ್ತೀಚೆಗೆ ನಡೆದ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆಯಲ್ಲೂ ಇದರ ಬಗ್ಗೆ ಚರ್ಚೆಗಳಾಗಿದೆ” ಎಂದು ಹೇಳಿದ್ದಾರೆ.
ಇದರ ನಂತರ, ಎಬಿವಿಪಿ ತನ್ನ ಮನವಿ ಸಲ್ಲಿಸಿ ಪಠ್ಯಕ್ರಮದಿಂದ ಪುಸ್ತಕವನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ. ಈ ಸಮಸ್ಯೆಯ ಬಗ್ಗೆ ಪರೀಕ್ಷಿಸಲು ರಚಿಸಲಾದ ಸಮಿತಿಯು ಪುಸ್ತಕದ ವಿಷಯಗಳು “ವಿವಾದಾತ್ಮಕ” ಎಂದು ಭಾವಿಸಿತು. ಆದ್ದರಿಂದ ಅದನ್ನು ಹಿಂತೆಗೆದುಕೊಳ್ಳಲಾಯಿತು ಎಂದು ಅವರು ಹೇಳಿದ್ದಾರೆ.
ಇದಕ್ಕೆ ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ಕೆ.ಜಿ. ಭಾಸ್ಕರನ್, ತಿರುನೆಲ್ವೇಲಿ ಶಾಸಕ ಎ.ಎಲ್.ಎಸ್.ಲಕ್ಷ್ಮಣನ್ ಮತ್ತು ಡಿಎಂಕೆ ತಿರುನೆಲ್ವೇಲಿ ನಗರ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ವಹಾಬ್ ಖಂಡನೆ ವ್ಯಕ್ತಪಡಿಸಿದ್ದಾರೆ. ಪುಸ್ತಕದ ಬಗ್ಗೆ ನಿರ್ಧರಿಸಬೇಕಾದ ಅಧ್ಯಯನ ಮಂಡಳಿಯನ್ನು ಕತ್ತಲೆಯಲ್ಲಿ ಇಡಲಾಗಿದೆ. ಸಂಘಟನೆಯೊಂದರ ಪತ್ರವನ್ನು ಅನುಸರಿಸಿದ ವಿವಿಯು ತರಾತುರಿಯಲ್ಲಿ ಪಠ್ಯವನ್ನು ಬದಲಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯ ವಿಶ್ವವಿದ್ಯಾಲಯಗಳ ಯುಜಿ, ಪಿಜಿ ಪರೀಕ್ಷೆಗಳನ್ನು ರದ್ದುಗೊಳಿಸಿದ ರಾಜಸ್ಥಾನ ಸರ್ಕಾರ
“ಪ್ರಸಿದ್ದ ಪ್ರಕಾಶಕರು ಪ್ರಕಟಿಸಿದ ಈ ಪುಸ್ತಕವನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ನಿಷೇಧಿಸಿಲ್ಲ. ಪುಸ್ತಕವನ್ನು ಹಿಂಪಡೆಯಲು ಅಧ್ಯಯನ ಮಂಡಳಿಯಿಂದ ಅನುಮೋದನೆ ಪಡೆಯುವ ಬದಲು, ಸಣ್ಣ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ವಿಶ್ವವಿದ್ಯಾನಿಲಯ ಅವಸರದಿಂದ ಮತ್ತು ನಿರಂಕುಶವಾಗಿ ವರ್ತಿಸಿತು” ಎಂದು ಅವರು ಹೇಳಿದ್ದಾರೆ.
ಪುಸ್ತಕವು “ಹೋರಾಟ” ದ ಬಗ್ಗೆ ಇದ್ದು, ಅದನ್ನು ಹಿಂಪಡೆದು ಕೊಳ್ಳುವುದನ್ನು ರಾಜಕೀಯಗೊಳಿಸಲಾಗುತ್ತಿದೆ ಎಂದು ಉಪಕುಲಪತಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಭಾಸ್ಕರನ್, ವಿಶ್ವವಿದ್ಯಾನಿಲಯವು ಸ್ವಾತಂತ್ರ್ಯ ಹೋರಾಟವನ್ನು ಅದರ ಪಠ್ಯಕ್ರಮದಿಂದ ತೆಗೆದುಹಾಕುತ್ತದೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
“ಈ ವಿಷಯವನ್ನು ವಿಶ್ವವಿದ್ಯಾನಿಲಯವೆ ರಾಜಕೀಯಗೊಳಿಸಿದೆ… ಎಬಿವಿಪಿಯಿಂದ ಬಂದ ಪತ್ರದ ಆಧಾರದ ಮೇಲೆ ವಿವಿ ತೆಗೆದುಕೊಂಡ ತಪ್ಪು ನಿರ್ಧಾರಕ್ಕೆ ಮಾತ್ರ ನಮ್ಮ ಪ್ರತಿಕ್ರಿಯೆ. ವಿಶ್ವವಿದ್ಯಾನಿಲಯವು ಒಂದೇ ಸಂಘಟನೆಯ ಪತ್ರದ ಮೇಲೆ ಕಾರ್ಯನಿರ್ವಹಿಸಿದರೆ, ನಾವು 15 ಸಂಘಟನೆಗಳನ್ನು ಒಳಗೊಂಡಿದ್ದೇವೆ, ಈಗ ಪಠ್ಯಕ್ರಮದಲ್ಲಿ ಪುಸ್ತಕವನ್ನು ಪುನಃ ಸೇರಿಸಲು ಒತ್ತಾಯಿಸುತ್ತೇವೆ. ಇಲ್ಲದಿದ್ದರೆ, ನಾವು ಈ ಅನ್ಯಾಯದ ವಿರುದ್ಧ ಸರಣಿ ಪ್ರತಿಭಟನೆಗಳನ್ನು ನಡೆಸುತ್ತೇವೆ” ಎಂದು ಭಾಸ್ಕರನ್ ಹೇಳಿದ್ದಾರೆ.
ಅವರ ಮನವಿಯನ್ನು ಪರಿಗಣಿಸುವುದಾಗಿ ಉಪಕುಲಪತಿ ಡಾ. ಕೆ.ಪಿಚ್ಚುಮಣಿ ತಿಳಿಸಿದ್ದಾರೆಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬೃಹತ್ ನೇಮಕಾತಿ ಹಗರಣ ಬಯಲು


