ಕರ್ತಾರ್ಪುರ ಕಾರಿಡಾರ್ ಉದ್ಘಾಟನೆ ಸಮಾರಂಭಕ್ಕೆ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಆಮಂತ್ರಣ ನೀಡಲಾಗುವುದು ಎಂದು ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವ ಮೊಹಮ್ಮದ್ ಖುರೇಷಿ ಹೇಳಿದ್ದರು. ಈ ಬಗ್ಗೆ ಮನಮೋಹನ್ ಸಿಂಗ್ ಅವರಿಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಕಾರ್ಯಕ್ರಮಕ್ಕೆ ಹೋಗುವ ಯಾವುದೇ ಯೋಜನೆ ಇಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ನಿನ್ನೆಯಷ್ಟೇ ಪಾಕ್ ಸಚಿವ ಮೊಹಮ್ಮದ್ ಖುರೇಷಿ, ಕರ್ತಾರ್ಪುರ ಕಾರಿಡಾರ್ ಜಂಟಿ ಉದ್ಘಾಟನೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಮಂತ್ರಿಸಲಾಗುವುದು. ಸಿಂಗ್, ಸಿಖ್ ಸಮುದಾಯದವರು ಹೀಗಾಗಿ ಅವರನ್ನು ಸಮಾರಂಭಕ್ಕೆ ಆಹ್ವಾನಿಸಲಾಗುವುದು ಎಂದು ಹೇಳಿದ್ದರು.
ಒಂದು ವೇಳೆ ಪಾಕಿಸ್ತಾನದಿಂದ ಆಮಂತ್ರಣ ಪತ್ರಿಕೆ ಬಂದರೆ ವಿದೇಶಾಂಗ ಸಚಿವಾಲಯದ ಜತೆ ಚರ್ಚಿಸಲಾಗುವುದು. ಭಾರತ ಮತ್ತು ಪಾಕಿಸ್ತಾನ ಸಂಬಂಧ ಹದಗೆಟ್ಟಿದೆ. ಇಂಥಹ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಹೋಗುವುದು ಸರಿಯಲ್ಲ. ಆಹ್ವಾನ ನೀಡಿದರೂ ಕಾರ್ಯಕ್ರಮಕ್ಕೆ ಹೋಗೋದು ಡೌಟ್ ಎಂಬ ಮಾಹಿತಿಯಿದೆ.
ಇನ್ನು ನವೆಂಬರ್ ನಲ್ಲಿ ಕರ್ತಾರ್ಪುರ ಕಾರಿಡಾರ್ ಉದ್ಘಾಟನೆ ಆಗಲಿದೆ. ಸಿಖ್ಖರ ಪವಿತ್ರ ಯಾತ್ರೆಗೆ ಇದು ಅನುಕೂಲವಾಗಲಿದೆ. ಅಲ್ಲದೇ ನವೆಂಬರ್ ನಲ್ಲಿ ಸಿಖ್ಖರ ಧರ್ಮಗುರು ಗುರುನಾನಕ್ ದೇವ್ ಅವರ 550ನೇ ಜಯಂತಿ ನಡೆಯಲಿದೆ.