ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾನಾದ ಗಡಿ ರಸ್ತೆ ಸಂಸ್ಥೆ (ಬಿಆರ್ಒ) ಶಿಬಿರದ ಬಳಿ ಶುಕ್ರವಾರ (ಫೆ.28) ಸಂಭವಿಸಿದ ಹಿಮಪಾತದಲ್ಲಿ ಸಿಲುಕಿದ್ದ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಅಪಾಯಕ್ಕೆ ಸಿಲುಕಿದ್ದ ಸುಮಾರು 50 ಮಂದಿಯನ್ನು ರಕ್ಷಿಸಲಾಗಿದೆ. ಐವರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಭಾರತೀಯ ಸೇನೆಯನ್ನು ಉಲ್ಲೇಖಿಸಿ ವರದಿಗಳು ಹೇಳಿವೆ.
ಮಾನಾ ಗ್ರಾಮ ಮತ್ತು ಮಾನಾ ಪಾಸ್ ನಡುವಿನ ರಸ್ತೆ ಯೋಜನೆಯ ಕೆಲಸವನ್ನು ಬಿಆರ್ಒ ಕೈಗೆತ್ತಿಕೊಳ್ಳುವ ಮುನ್ನ ಆ ಪ್ರದೇಶವನ್ನು ಸಿದ್ದಪಡಿಸಲು ಗುತ್ತಿಗೆದಾರರೊಬ್ಬರು ಕಾರ್ಮಿಕರನ್ನು ನೇಮಿಸಿಕೊಂಡಿದ್ದರು. ಘಟನೆ ನಡೆದಾಗ ಕಾರ್ಮಿಕರು ತಮ್ಮ ಬಂಕರ್ಗಳಲ್ಲಿದ್ದರು ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.
“ಶುಕ್ರವಾರ ಬೆಳಿಗ್ಗೆ 7.15 ರ ಸುಮಾರಿಗೆ ಘಟನೆ ನಡೆದಿದೆ. ಈ ವೇಳೆ ಕಾರ್ಮಿಕರು ಎಂಟು ಬಂಕರ್ಗಳಲ್ಲಿದ್ದರು. ನಾವು ಅವರನ್ನು ಬಂಕರ್ಗಳಿಂದ ಸ್ಥಳಾಂತರಿಸುತ್ತಿದ್ದೇವೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
‘ನಾಪತ್ತೆಯಾದ ಕಾರ್ಮಿಕರ ಪತ್ತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದೇವೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಸಮಾರೋಪಾದಿಯಲ್ಲಿ ನಡೆಯುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಹಿಮಪಾತ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಭಾರೀ ಹಿಮಪಾತದಿಂದ ಶುಕ್ರವಾರ ಸಂಜೆಯವರೆಗೂ ಸ್ಥಗಿತಗೊಂಡಿದ್ದ ರಕ್ಷಣಾ ಕಾರ್ಯಾಚರಣೆ ಶನಿವಾರ ಬೆಳಗ್ಗೆಯಿಂದ ಪುನರಾರಂಭಗೊಂಡಿದೆ” ಎಂದು ಭಾರತೀಯ ಸೇನೆ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮನೀಶ್ ಶ್ರಿವಾಸ್ತವ ತಿಳಿಸಿದ್ದಾರೆ.


