ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ಕೂಲಿ ಕಾರ್ಮಿಕರನ್ನು ಕರೆತಂದು ದುಡ್ಡು ಕೊಡದೆ ವಂಚಿಸಿದ್ದ ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಉದ್ಘಾಟಿಸಲು ಮೋದಿಯವರು ಆಗಮಿಸಿದ್ದರು. ಆ ವೇಳೆ ಕರೆತಂದಿದ್ದ ಕಾರ್ಮಿಕರಿಗೆ ಬಾಕಿ ಹಣ ಪಾವತಿಸದ ಆರೋಪದ ಮೇಲೆ ಕರ್ನಾಟಕ ಪೊಲೀಸರು ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸ್ಥಳೀಯ ಬಿಜೆಪಿ ಮುಖಂಡ ನಂದೀಶ್ ವಿರುದ್ಧ ಚಿಕ್ಕಬಳ್ಳಾಪುರ ಜಿಲ್ಲೆಯ ಸಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ 40 ಕೂಲಿ ಕಾರ್ಮಿಕರು ದೂರು ನೀಡಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಆವರಣದಲ್ಲಿರುವ ಪ್ರತಿಮೆಯ ಸ್ಥಳದಲ್ಲಿ ಕೆಲಸ ಮಾಡಲು ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನಂದೀಶ್ ಪ್ರತಿ ಕಾರ್ಯಕರ್ತನಿಗೆ 500 ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಕಾರ್ಯಕ್ರಮದ ನಂತರ ಕೇವಲ 100 ರೂ. ನೀಡಲಾಗಿದೆ ಎಂಬ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ.
ಬಿಜೆಪಿ ವಿರುದ್ಧ ಕಾರ್ಮಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಹಣವನ್ನು ನೀಡಬೇಕೆಂದು ಒತ್ತಾಯಿಸಿದ ಅವರು ಘೋಷಣೆಗಳನ್ನು ಕೂಗುತ್ತಿರುವ ದೃಶ್ಯಗಳು ವೈರಲ್ ಆಗಿವೆ.
PM @narendramodi ji, @BJP4Karnataka leaders promised ₹500 to daily wage labour to come down & cheer for you in Bengaluru. But got paid only ₹100.
They have lodged a complaint in the police station as well.
The Govt is #40PercentSarkara, while the party corruption is 80% ? pic.twitter.com/1OXZnF9Tr2— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 12, 2022
ಕಾಂಗ್ರೆಸ್ ನಾಯಕರು ಬಿಜೆಪಿಯ ನಡೆಯನ್ನು ಖಂಡಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ನ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಟ್ವೀಟ್ ಮಾಡಿದ್ದು, “ಪ್ರಧಾನಿ ನರೇಂದ್ರಮೋದಿಯವರೇ, ನಿಮ್ಮನ್ನು ಹುರಿದುಂಬಿಸಲೆಂದು ಬಿಜೆಪಿ ನಾಯಕರು ದಿನಕೂಲಿ ಕಾರ್ಮಿಕರಿಗೆ ₹ 500 ನೀಡುವ ಭರವಸೆ ನೀಡಿದ್ದರು. ಆದರೆ ಕೇವಲ ₹ 100 ಪಾವತಿಸಲಾಗಿದೆ. ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಬಿಜೆಪಿ ಸರ್ಕಾರವು 40% ಸರ್ಕಾರವಾಗಿದೆ. ಆದರೆ ಪಕ್ಷದ ಭ್ರಷ್ಟಾಚಾರವು 80% ಆಗಿದೆಯೇ?” ಎಂದು ಪ್ರಶ್ನಿಸಿದ್ದಾರೆ.
ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ, ನವೆಂಬರ್ 11 ರಂದು ಅನಾವರಣಗೊಳಿಸಿದರು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಪಾಳೇಗಾರರಾಗಿದ್ದ ಕೆಂಪೇಗೌಡರು 1537ರಲ್ಲಿ ಬೆಂಗಳೂರನ್ನು ಸ್ಥಾಪಿಸಿದ್ದರು.
ಕೆಂಪೇಗೌಡರು ವಿಶೇಷವಾಗಿ ಹಳೆಯ ಮೈಸೂರು ಮತ್ತು ದಕ್ಷಿಣ ಕರ್ನಾಟಕದ ಇತರ ಭಾಗಗಳಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯದ ಅಸ್ಮಿತೆಯಾಗಿದ್ದಾರೆ. ಜೊತೆಗೆ ನಾಡಪ್ರಭು ಎಂಬ ಬಿರುದಿಗೆ ಪಾತ್ರರಾಗಿರುವ ಕೆಂಪೇಗೌಡರು ಕನ್ನಡಗರ ಪ್ರೀತಿಪಾತ್ರರೂ ಹೌದು.
ಕೆಂಪೇಗೌಡರ ಪ್ರತಿಮೆ ಅನಾವರಣದ ಬಳಿಕ ಹಲವು ಚರ್ಚೆಗಳು ಶುರುವಾಗಿವೆ. ಕಾರ್ಯಕ್ರಮಕ್ಕೆ ಕರೆತಂದಿದ್ದ ಕಾರ್ಮಿಕರಿಗೆ ಹಣ ಪಾವತಿಸಿಲ್ಲ ಎಂಬ ಟೀಕೆ ಒಂದು ಕಡೆಯಾದರೆ, ಮಾಜಿ ಪ್ರಧಾನಿ ದೇವೇಗೌಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಎಚ್.ಡಿ.ದೇವೇಗೌಡರನ್ನು ಕೆಂಪೇಗೌಡರ ಪ್ರತಿಮೆ ಉದ್ಘಾಟನೆಗೆ ಆಹ್ವಾನಿಸಿಲ್ಲವೆಂಬ ವಿವಾದಕ್ಕೆ ಸಂಬಂಧಿಸಿದಂತೆ ಜೆಡಿಎಸ್- ಬಿಜೆಪಿ ನಡುವೆ ವಾಕ್ಸಮರ ಮುಂದುವರಿದಿದೆ. ಮತ್ತೆ ಸರಣಿ ಟ್ವೀಟ್ಗಳ ಮೂಲಕ ಜೆಡಿಎಸ್ ಟೀಕಾಪ್ರಹಾರ ನಡೆಸಿದೆ.
“ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿಗಳಾದ ದೇವೇಗೌಡರನ್ನು ಆಹ್ವಾನಿಸದೆ ರಾಜ್ಯ ಸರಕಾರ ಶಿಷ್ಟಾಚಾರ ಲೋಪ ಎಸಗಿದ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ಉತ್ತರ ನೀಡಬೇಕೇ ಹೊರತು ಬಿಜೆಪಿ ಅಲ್ಲ. ಇಷ್ಟಕ್ಕೂ ಅದು ಕೇಶವಕೃಪದ ಕಾರ್ಯಕ್ರಮವಲ್ಲ” ಎಂದು ಜೆಡಿಎಸ್ ಆಕ್ರೋಶ ಹೊರಹಾಕಿದೆ.
ಇದನ್ನೂ ಓದಿರಿ: ಇಷ್ಟಕ್ಕೂ ಅದು ಕೇಶವಕೃಪದ ಕಾರ್ಯಕ್ರಮವಲ್ಲ: ಬಿಜೆಪಿ ವಿರುದ್ಧ ಜೆಡಿಎಸ್ ಟೀಕಾಪ್ರಹಾರ
‘ಸುಳ್ ಬಿಜೆಪಿ, ಸುಳ್ ಸಿಎಂ, ಗೊಬೆಲ್ ಬಿಜೆಪಿ’ ಎಂಬ ಹ್ಯಾಷ್ಟ್ಯಾಗ್ ಬಳಸಿ ಟ್ವೀಟ್ಗಳನ್ನು ಮಾಡಿರುವ ಜೆಡಿಎಸ್, “ಬೂಟಾಟಿಕೆ ದಾಸಯ್ಯನಿಗೆ ಮೈಯಲ್ಲಾ ಪಂಗನಾಮʼ ಎನ್ನುವಂತಿದೆ ಬಿಜೆಪಿ ಪರಿಸ್ಥಿತಿ. ಕೊಳಕು, ವಿಕೃತಿಗಳ ಮಹಾಸಂಗಮವೇ ಬಿಜೆಪಿ. ರಕ್ತಪೀಪಾಸುತನ, ನರಹಂತಕ ಮನಃಸ್ಥಿತಿಯೇ ಬಿಜೆಪಿಯ ನೈಜಮುಖ. ಆಪರೇಷನ್ ಕಮಲವೇ ಅದರ ಶಿಷ್ಟಾಚಾರ, ಸುಳ್ಳಿನ ಪ್ರಚಾರವೇ ಅದರ ಸಂಸ್ಕಾರ” ಎಂದು ಅಭಿಪ್ರಾಯಪಟ್ಟಿದೆ.
“ಎಚ್.ಡಿ.ದೇವೇಗೌಡರನ್ನು ಜೆಡಿಎಸ್ ಎಂದಿಗೂ ಜಾತಿ ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಆದರೆ, ನರೇಂದ್ರಮೋದಿಯವರ ಅರ್ಧದಿನದ ʼಕರ್ನಾಟಕದ ಕಾಟಾಚಾರದ ಭೇಟಿʼ ಏನನ್ನು ಗುರಿ ಮಾಡಿಕೊಂಡಿತ್ತು? ಎನ್ನುವುದನ್ನು ಮಾಧ್ಯಮಗಳೇ ನಿರಂತರವಾಗಿ ವರದಿ ಮಾಡುತ್ತಿರುವುದು ಕಾಣುತ್ತಿಲ್ಲವೇ? ಕಮಲದ ಕಣ್ಣಿಗೆ ಕಾಮಾಲೆ ಎನ್ನುವುದು ಖರೆ” ಎಂದು ಟೀಕಿಸಿದೆ.
ಕೂಲಿಯವರಿಗೂ ಮೋಸ ಮಾಡುಂತಹ ಹೀನಾಯ ಸ್ಥಿತಿಗೆ ಇಳಿದಿದ್ದಾರಲ್ಲ, ಈ ಮನುವಾದಿಗಳು.
ಮೋಸಗಾರರಿಗೆ ಯಾರಾದರೇನು ಕಾರ್ಮಿಕರಾದರೇನು, ಶ್ರೀಮಂತರಾದರೇನು ಅಥವಾ ಭಿಕ್ಷುಕರಾದರೇನು, ಮೋಸ ಮಾಡುವುದೊಂದೇ ಅವರ ಕುಲ ಕಸಬು. ಈ ಬಿಜೆಪಿ ಮೋಸಗಾರರು 40 % ನಿಂದ 80% ಗೆ ತಮ್ಮ ಬೆಲೆ ಹೆಚ್ಚಿಸಿಕೊಂಡಿದ್ದಾರೆ.