ಚಿತ್ತಾಪುರದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಕೊಲೆ ಬೆದರಿಕೆಯೊಡ್ಡಿ ಪರಾರಿಯಾಗಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಎಂಬುವವರನ್ನು ಕಲಬುರಗಿ ನಗರದ ಬ್ರಹ್ಮಪುರ ಪೊಲೀಸರು ಹೈದರಾಬಾದ್ನಲ್ಲಿ ವಶಕ್ಕೆ ಪಡೆದಿದ್ದಾರೆ.
“ನಿಮ್ಮನ್ನು ಶೂಟ್ ಮಾಡಲು ನಾವು ರೆಡಿ ಇದ್ದೀವಿ” ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಇತ್ತೀಚೆಗೆ ಬೆದರಿಕೆ ಹಾಕಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, “ನೀವು ಎಕೆ-47ನಿಂದ ಶೂಟ್ ಮಾಡುವಿರಾ? ಅಥವಾ ತೋಪ್ನಿಂದ ಮಾಡೋದಿದೆಯಾ? ನೀವು ಶೂಟ್ ಮಾಡಿ, ನಾವು ಸಾಯೋಕು ರೆಡಿ ಇದ್ದೀವಿ. ನಾವೂ ನಿಮಗೆ ಶೂಟ್ ಮಾಡೋಕೂ ರೆಡಿ ಇದ್ದೀವಿ” ಎನ್ನುವ ಮೂಲಕ ಬಂದೂಕಿನ ಪ್ರತಿಕ್ರಿಯೆಯನ್ನು ಪ್ರಸ್ತಾಪಿಸಿದ್ದರು.
ಈ ಹೇಳಿಕೆಯನ್ನು ಖಂಡಿಸಿ ಆರೋಪಿಯನ್ನು ಬಂಧಿಸುವಂತೆ ಕಾಂಗ್ರೆಸ್ ಒತ್ತಾಯಿಸಿತ್ತು. ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸಹ ಆ ಬಿಜೆಪಿ ರೌಡಿಯನ್ನು ಬಂಧಿಸಿ ಎಂದು ಆಗ್ರಹಿಸಿದ್ದರು.
ಇದನ್ನೂ ಓದಿ: ಬೊಮ್ಮಾಯಿಯವರ ಕ್ರಿಯೆ-ಪ್ರತಿಕ್ರಿಯೆ ಹೇಳಿಕೆ ಕೊಲೆ ಬೆದರಿಕೆಯಾಗಿ ಪ್ರಕಟವಾಗುತ್ತಿದೆ: ಸಿದ್ದರಾಮಯ್ಯ
ಶಾಸಕ ಪ್ರಿಯಾಂಕ್ ಖರ್ಗೆಯವರಿಗೆ ಜೀವ ಬೆದರಿಕೆಯೊಡ್ಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ತಿಪ್ಪಣಪ್ಪ ಕುಮಕನೂರರವರು ಕಲಬುರಗಿಯ ಬ್ರಹ್ಮಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ದೂರಿನ ಮೇರೆಗೆ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 506ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ತನ್ನ ವಿರುದ್ಧ ಪ್ರಕರಣ ದಾಖಲಾಗಿರುವುದು ತಿಳಿಯುತ್ತಲೇ ಆರೋಪಿ ಮಣಿಕಂಠ ರಾಠೋಡ್ ನಾಪತ್ತೆಯಾಗಿದ್ದರು. ಅವರ ಪತ್ತೆಯಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಹೈದರಾಬಾದ್ನಲ್ಲಿ ಅಡಗಿರುವ ಸುಳಿವು ಹಿನ್ನೆಲೆಯಲ್ಲಿ 5 ಜನರ ಪೊಲೀಸ್ ತಂಡ ಹೈದರಾಬಾದ್ಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಇತ್ತೀಚೆಗೆ ‘ಪ್ರಿಯಾಂಕ್ ಖರ್ಗೆ ನಾಪತ್ತೆ’ ಎಂಬ ಪೋಸ್ಟರ್ ಅಳವಡಿಸಿದ ಬಿಜೆಪಿ ಕಾರ್ಯಕರ್ತರ ನಡೆ ಖಂಡಿಸಿ, ಪ್ರಿಯಾಂಕ್ ಖರ್ಗೆಯವರು “ನಾವು ಮತ್ತು ನಮ್ಮ ಕಾರ್ಯಕರ್ತರು ಮನಸ್ಸು ಮಾಡಿದರೆ ಬಿಜೆಪಿ ಲೀಡರ್ಗಳು ತಿರುಗಾಡಲು ಬಿಡುವುದಿಲ್ಲ. ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದವರು ಸತ್ತೋಗಿಲ್ಲ” ಎಂದು ಹೇಳಿಕೆ ನೀಡಿದ್ದರು. ಅದನ್ನು ಖಂಡಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಶೂಟ್ ಬೆದರಿಕೆ ಹಾಕಲಾಗಿತ್ತು.
ಇತ್ತೀಚೆಗೆ ‘ಪ್ರಿಯಾಂಕ್ ಖರ್ಗೆ ನಾಪತ್ತೆ’ ಎಂಬ ಪೋಸ್ಟರ್ ಅಳವಡಿಸಿದ ಬಿಜೆಪಿ ಕಾರ್ಯಕರ್ತರ ನಡೆ ಖಂಡಿಸಿ, ಪ್ರಿಯಾಂಕ್ ಖರ್ಗೆಯವರು “ನಾವು ಮತ್ತು ನಮ್ಮ ಕಾರ್ಯಕರ್ತರು ಮನಸ್ಸು ಮಾಡಿದರೆ ಬಿಜೆಪಿ ಲೀಡರ್ಗಳು ತಿರುಗಾಡಲು ಬಿಡುವುದಿಲ್ಲ. ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದವರು ಸತ್ತೋಗಿಲ್ಲ” ಎಂದು ಹೇಳಿಕೆ ನೀಡಿದ್ದರು. ಅದನ್ನು ಖಂಡಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಶೂಟ್ ಬೆದರಿಕೆ ಹಾಕಲಾಗಿತ್ತು.
ಇದನ್ನೂ ಓದಿ; ಪ್ರಿಯಾಂಕ್ ಖರ್ಗೆಗೆ ಶೂಟ್ ಮಾಡುವುದಾಗಿ ಬಿಜೆಪಿ ಮುಖಂಡನಿಂದ ಬೆದರಿಕೆ; ಕಾಂಗ್ರೆಸ್ ಆಕ್ರೋಶ