Homeಅಂಕಣಗಳುಶುರುವಾಗಿದೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುನಾದಿ ಹಾಕುವ ಕೆಲಸ

ಶುರುವಾಗಿದೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುನಾದಿ ಹಾಕುವ ಕೆಲಸ

- Advertisement -
- Advertisement -

ಸಂಪಾದಕೀಯ |

ಚಳಿಗಾಲ ಮುಗಿದು ತಾಪಮಾನ ಏರುತ್ತಿರುವ ಜತೆಗೇ ಲೋಕಸಭಾ ಚುನಾವಣೆಯ ಬಿಸಿಯೂ ಸೇರಿ ವಾತಾವರಣದ ಶಾಖ ಏರುತ್ತಲಿದೆ. ರಾಜಕಾರಣಿಗಳ ಪ್ರತಿ ನಡೆಯೂ ಆಗಲೇ ಈ ಚುನಾವಣೆಗಳ ಮೇಲೆ ಕಣ್ಣಿಟ್ಟುಕೊಂಡೇ ಜರುಗುತ್ತಲಿದೆ. ಆದರೆ ಈ ಚುನಾವಣೆ ಹಿಂದಿನಂಥದ್ದಲ್ಲ. ಇದು ಈ ದೇಶದ ಪ್ರಜಾತಂತ್ರ ಮತ್ತು ಅದಕ್ಕೆ ಅಡಿಪಾಯವಾಗಿರುವ ಸಂವಿಧಾನವನ್ನು ಜನಸಾಮಾನ್ಯರು ಉಳಿಸಿಕೊಳ್ಳುತ್ತಾರೆಯೋ ಅಥವಾ ಮತ್ತೊಮ್ಮೆ ಹಿಂದುತ್ವ ಫ್ಯಾಸಿಸಂಗೆ ಮೇಲುಗೈ ಆಗುತ್ತದೋ ಎಂಬ ನಿರ್ಣಾಯಕ ಚುನಾವಣೆ ಇದಾಗಲಿದೆ. ಅದಕ್ಕಿಂತಲೂ ಹೆಚ್ಚಾಗಿ ಜನಸಾಮಾನ್ಯರ ಬವಣೆಗೆ ಈಗಲಾದರೂ ಕಿಂಚಿತ್ ಸಮಾಧಾನ ಸಿಗಬಹುದೋ ಎಂಬ ಕಾತರವೂ ಇದೆ. ಇದೇ ಆಶಯದಿಂದ ಈ ದೇಶದ ಜನ ಹಣ-ಹೆಂಡ, ಜಾತಿ ಇತ್ಯಾದಿ ಆಮಿಷಗಳ ನಡುವೆಯೂ ಅಧಿಕಾರರೂಢ ಪಕ್ಷಗಳ ವಿರುದ್ಧ ಮತ ಚಲಾಯಿಸುತ್ತಲೇ ಬಂದಿದ್ದಾರೆ. ಇದಕ್ಕೆ ಮೊನ್ನೆ ನಡೆದ ಉಪಚುನಾವಣೆಯಲ್ಲಿ ಆಳುವ ಪಕ್ಷ ಅನುಭವಿಸಿದ ಸೋಲೇ ಸಾಕ್ಷಿ. ಉಪಚುನಾವಣೆಯ ಫಲಿತಾಂಶ ಮಹಾ ಚುನಾವಣೆಯ ಭವಿಷ್ಯವನ್ನು ನಿರ್ಧರಿಸದಿದ್ದರೂ, ಅದು ಜನರ ಆಲೋಚನೆಯ ದಿಕ್ಕನ್ನು ಸೂಚಿಸುವಂತಿರುತ್ತದೆ. ಉದಾಹರಣೆಗೆ, ಉಪಚುನಾವಣೆಗಳ ಫಲಿತಾಂಶ ಭಾಜಪದ ದರ್ಪವನ್ನೂ, ಆತ್ಮವಿಶ್ವಾಸವನ್ನೂ ಕೊಂಚ ಕುಗ್ಗಿಸಿರುವುದು ನಿಜ. ಆದರೆ ಇದರಿಂದ ವಿರೋಧ ಪಕ್ಷಗಳು ಸಂಭ್ರಮಿಸುವ ಹಾಗೇನೂ ಇಲ್ಲ. ಆಳುವ ಪಕ್ಷಗಳ ಮೇಲಿನ ಅಸಮಾಧಾನವನ್ನು ಜನ ಹೊರಹಾಕಿದ್ದಾರೆ ಅಷ್ಟೆ. ಹಾಗೆ ನೋಡಿದರೆ ಭಾರತದ ಮತದಾರರು ತುರ್ತು ಪರಿಸ್ಥಿತಿ ನಂತರ, ಕೆಲವು ಅಪವಾದಗಳನ್ನು ಹೊರತುಪಡಿಸಿ, ನಿರಂತರವಾಗಿ ಅಧಿಕಾರ ವಿರೋಧಿ ನಿಲುವನ್ನು ಪ್ರಕಟಿಸುತ್ತಲೇ ಬಂದಿದ್ದಾರೆ. ನಮ್ಮ ಚುನಾವಣೆಯ ಸ್ವರೂಪದಲ್ಲೇ ಆಯ್ಕೆಗಳು ತೀರಾ ಮಿತವಾಗಿರುವುದರಿಂದ ಪ್ರತಿ ಬಾರಿಯೂ ಅಧಿಕಾರದಲ್ಲಿ ಇಲ್ಲದ ಪಕ್ಷಗಳು ಮತ್ತೇ ಆಯ್ಕೆ ಆಗುತ್ತಲಿವೆ.
ಈ ಅಧಿಕಾರ ವಿರೋಧಿ ನಿಲುವು ಏನನ್ನೂ ಸೂಚಿಸುತ್ತದೆ? ಅಧಿಕಾರಕ್ಕೆ ಬಂದ ಪ್ರತಿ ಪಕ್ಷವೂ ಜನರನ್ನು ಮೋಸಗೊಳಿಸಿದೆ. ಹೀಗೆ ಮೋಸ ಹೋಗುತ್ತಿದ್ದರೂ, ಜನ ಸಿನಿಕರಾಗದೆ ತಮ್ಮ ಸೀಮಿತ ಆಯ್ಕೆಯನ್ನು ನಿರಂತರವಾಗಿ ತೋರಿಸುತ್ತಲೇ ಇದ್ದಾರೆ. ಅಂದರೆ, ಜನ ಬದಲಾವಣೆ ಬಯಸುತ್ತಿದ್ದಾರೆ, ಆದರೆ ಜನರಿಗೆ ಬೇಕಾದ ಬದಲಾವಣೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಈ ಪಕ್ಷಗಳಿಗೆ ಒಂದು ಸಾಧ್ಯವಾಗುತ್ತಿಲ್ಲ; ಅಥವಾ ಅದು ತಿಳಿದಿದ್ದರೂ ಅವರಿಗೆ ಈ ಬದಲಾವಣೆಗಳನ್ನು ತರಲು ಮನಸ್ಸಿಲ್ಲ. ಇನ್ನೂ ಮುಖ್ಯವಾಗಿ ನವಉದಾರೀಕರಣದಿಂದ ಹೊರಬರುವ ತನಕ ಜನಪರ ಬದಲಾವಣೆ ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ಕೆಲವು ಜನಪ್ರಿಯ ಕಲ್ಯಾಣಯೋಜನೆಗಳನ್ನು ಮಾತ್ರ ಮುಂದಿಟ್ಟು ಅದೇ ಬದಲಾವಣೆ ಎಂಬಂತೆ ಜನರನ್ನು ಮರಳು ಮಾಡುವುದು ಎಲ್ಲ ಪಕ್ಷಗಳ ಚಾಳಿಯಾಗಿದೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಗೆ ಹೋಲಿಸಿದರೆ ಇದರಲ್ಲಿ ಬಿಜೆಪಿ ಕೊಂಚ ಭಿನ್ನ ಮತ್ತು ಹೆಚ್ಚು ಅಪಾಯಕಾರಿ. ಅದು ತನ್ನ ಹಿಂದುತ್ವ ಫ್ಯಾಸಿಸಂ ಮೂಲಕ ಹೊಸ “ಹಿಂದೂ ನಾಗರಿಕತೆ”ಯನ್ನು ಕಟ್ಟುವ ಆಮಿಷವನ್ನು ಮುಂದಿಡುತ್ತದೆ. ರಾಮಮಂದಿರ ಕಟ್ಟುವುದು ಅದರ ಪ್ರಕಾರ ಈ ನಾಗರಿಕತೆಯ ಭಾಗ. ಆದರೆ ಮೊನ್ನೆಯ ಚುನಾವಣೆಗಳು ಭಾಜಪದ ಈ ಯೋಜನೆಗೆ ಸೊಪ್ಪು ಹಾಕಿಲ್ಲ. ಅವರಿಗೆ ಏರುತ್ತಿರುವ ನಿರುದ್ಯೋಗ, ಹಣದುಬ್ಬರ, ಜಿ.ಎಸ್.ಟಿ ಮತ್ತು ನೋಟು ಅಮಾನ್ಯೀಕರಣದಿಂದಾದ ತೊಂದರೆ, ಕೃಷಿ ಬಿಕ್ಕಟ್ಟು ಇತ್ಯಾದಿ ಹಾರ್ಡ್‍ಕೋರ್ ಆರ್ಥಿಕ ಕಾರಣಗಳೇ ಮುಖ್ಯವಾಗಿವೆ. ಹೀಗಾಗಿ ರಾಮಮಂದಿರದ ವಿಚಾರ ಕೊಂಚ ಮಟ್ಟಿಗೆ ತನ್ನ ಅಪೀಲನ್ನು ಕಳೆದುಕೊಂಡಿದೆ. ಮೋದಿಯ ವಾಗ್ಝರಿ ಕೂಡ ತನ್ನ ಮೋಡಿಯನ್ನು ಕಳೆದುಕೊಳ್ಳುತ್ತಿದೆ. ಇದರಿಂದ ಕಂಗಾಲಾಗಿರುವ ಮೋದಿ ಈ ಚುನಾವಣೆಯನ್ನು ಸುಭದ್ರ (ಮಜ್ಬೂರ್) ಮತ್ತು ಅಸಹಾಯಕ (ಮಜ್ದೂರ್) ಸರ್ಕಾರದ ನಡುವಿನ ಆಯ್ಕೆ ಎಂದಿದ್ದಾರೆ. ಆದರ ಹಿಂದೆಯೇ ತಮ್ಮ ಪಕ್ಷ ತನ್ನ ಎಲ್ಲ ಹಳೆಯ ಗೆಳೆಯರನ್ನು ಸ್ವಾಗತಿಸುತ್ತದೆ ಎಂದು ಕೂಡ ಹೇಳಿದ್ದಾರೆ. ಇದು ಈ ಬಾರಿ ತಮಗೆ ಭಾರಿ ಬಹುಮತ ಸಿಗಲಾರದು ಎನ್ನುವುದನ್ನು ಬಿಜೆಪ ಈಗಾಗಲೇ ಒಪ್ಪಿಕೊಂಡ ಹಾಗಿದೆ. ಹೀಗಾಗಿ ಈ ಬಾರಿ ಸಮ್ಮಿಶ್ರ ಸರ್ಕಾರ ಹೆಚ್ಚು ಸಂಭವನೀಯ. ಇದು ಕೂಡ ಜನರ ಭ್ರಮನಿರಸನದ ಆಯ್ಕೆಯ ಪ್ರತೀಕವೇ ಹೌದು.
ಇದರಿಂದ ಹೊರಹೊಮ್ಮುವ ಪಾಠಗಳೇನು?
ಮೊದಲಿಗೆ, ಹಿಂದುತ್ವ, ಕೋಮುವಾದ, ರಾಮಮಂದಿರ…. ಇತ್ಯಾದಿ ಭಾವನಾತ್ಮಕ ಅಂಶಗಳು ಜನರಿಗೆ ಬೇಕಾದ ನೆಮ್ಮದಿಯ ಬದುಕು, ಭದ್ರತೆಗಳನ್ನು ನೀಡಲಾಗದು ಎಂಬ ಅರಿವು. ಇದು ಸ್ಪಷ್ಟವಾಗಿ ಗೋಚರವಾಗದಿದ್ದರೂ, ಆಳದಲ್ಲಿ ಕೆಲಸ ಮಾಡಿರುವುದು ನಿಜ. ಹಾಗೆಯೇ, ಈ ದೇಶ ಎದುರಿಸುತ್ತಿರುವ ಕೃಷಿ ಬಿಕ್ಕಟ್ಟು, ನಿರುದ್ಯೋಗ, ಅಭದ್ರತೆ, ಶಿಕ್ಷಣ ಮತ್ತು ಆರೋಗ್ಯ ಮುಂತಾದ ಸಾರ್ವಜನಿಕ ಸೇವೆಗಳು ದುರ್ಲಭವಾಗಿರುವುದು ಇನ್ನೊಂದು. ಮೇಲಾಗಿ, ಅಸಂಘಟಿತ ಕಾರ್ಮಿಕರ, ಮಹಿಳೆ, ದಲಿತ ಮತ್ತು ಇತರೆ ಅಲ್ಪಸಂಖ್ಯಾತರ ಆತಂಕ ಇತ್ಯಾದಿ ವಿಷಯಗಳಿಗೆ ಬೇಕಾದ ಸೂಕ್ತ ಪರಿಹಾರ ಮಾರ್ಗಗಳು ಯಾವ ರಾಜಕೀಯ ಪಕ್ಷದಲ್ಲೂ ಇಲ್ಲ ಎಂಬ ಸತ್ಯ.
ಮುಂದಿನ ಚುನಾವಣೆ ಈ ವಿಷಯಗಳನ್ನು ಮುಂದಿಟ್ಟುಕೊಂಡು ನಡೆಯಬೇಕಾಗಿದೆ. ಆದರೆ ಈಗಿನ ರಾಜಕೀಯ ಪಕ್ಷಗಳಲ್ಲಿ ಈ ವಿಚಾರಗಳಿಗೆ ಸಂಬಂಧಪಟ್ಟ ಯಾವುದೇ ಸ್ಪಷ್ಟ ಕಾರ್ಯಯೋಜನೆ ಇಲ್ಲ. ಜಾಗತೀಕರಣ ಮತ್ತು ಖಾಸಗಿಕರಣಕ್ಕೇ ಒತ್ತು ನೀಡುವ ಯಾವ ಪಕ್ಷದಿಂದಲೂ ಈ ಸಂದಿಗ್ಧತೆಯಿಂದ ಹೊರಬರುವ ಮಾರ್ಗವೇ ಇಲ್ಲ. ಹೀಗಾಗಿ ಇಂದು ಪಕ್ಷರಾಜಕಾರಣದಿಂದ ಹೊರತಾಗಿ ಯೋಚಿಸುವ, ನಮ್ಮ ದೇಶದ ಜನ ಕಾಯುತ್ತಿರುವ ಬದಲಾವಣೆಗಳನ್ನು ಜಾರಿಗೆ ತರುವ ಮಾರ್ಗೊಪಾಯಗಳನ್ನು ಜನರ ಮುಂದಿಡುವ ಕಾರ್ಯ ಅತ್ಯಂತ ಜರೂರಾಗಿ ಆಗಬೇಕಿದೆ. ಅಂಥ ಕಾರ್ಯೊದ್ದೇಶವನ್ನು ಇಟ್ಟುಕೊಂಡು ಹೋರಾಡುವ ಹೊಸ ಯುವ ಶಕ್ತಿಯೊಂದು ಈಗ ಹಿಂದೆಂದಿಗಿಂತಲೂ ಅಗತ್ಯವಾಗಿದೆ.
ಈ ಕಾರಣಕ್ಕೆ ‘ಬದಲಾವಣೆ ಸಾಧ್ಯ ಮತ್ತು ನನ್ನಿಂದಲೇ ಈ ಬದಲಾವಣೆ ಪ್ರಾರಂಭ’ ಎಂಬ ಅರ್ಥ ಧ್ವನಿಸುವ ‘ಐ ಕ್ಯಾನ್’ (I ಅಂಓ) ಆಂದೋಲನಕ್ಕೆ ಅಖಿಲ ಭಾರತ ಮಟ್ಟದಲ್ಲಿ ಚಾಲನೆ ನೀಡಲಾಗಿದೆ. ಇದೇ ಆಶಯಗಳನ್ನ ಹೊಂದಿರುವ ಆದರೆ ಕರ್ನಾಟಕದ ಸಂದರ್ಭಕ್ಕೆ ಹತ್ತಿರವಾದ ವಿಚಾರಗಳನ್ನು ಇಟ್ಟುಕೊಂಡು ‘ದೇಶಕ್ಕಾಗಿ ನಾವು – ನಂಗೂ ಸಾಧ್ಯ!’ ಎಂಬ ಘೋಷಣೆಯ ಅಡಿಯಲ್ಲಿ ಯುವ ಜನತೆಯನ್ನು ಒಟ್ಟಿಗೆ ತರುವ ಪ್ರಯತ್ನ ನಮ್ಮ ರಾಜ್ಯದಲ್ಲೂ ಪ್ರಾರಂಭವಾಗಿದೆ. ಇದರಲ್ಲಿ ಜತೆಯಾಗುವ ಕಾರ್ಮಿಕರ, ಮಹಿಳೆಯರ, ನಿರುದ್ಯೋಗಿಗಳ, ದಲಿತರ, ಅಲ್ಪಸಂಖ್ಯಾತರ ಶಿಕ್ಷಣ, ಆರೋಗ್ಯ, ಪರಿಸರ ಇತ್ಯಾದಿ ವಿಚಾರಗಳಿಗಾಗಿ ಹೋರಾಡುತ್ತಿರುವ ಸಂಘಟನೆಗಳು ಹಾಗೂ ವ್ಯಕ್ತಿಗಳು ತಮ್ಮ ತಮ್ಮ ಅಜೆಂಡಾಗಳನ್ನೂ, ಅನನ್ಯತೆಗಳನ್ನು ಇಟ್ಟುಕೊಂಡೇ ‘ದೇಶಕ್ಕಾಗಿ ನಾವು’ ಎನ್ನುವ ಸಮಾನ ಆಶಯದೊಂದಿಗೆ ಕೈಜೋಡಿಸಲಿದ್ದಾರೆ. ಇದೊಂದು ರೀತಿಯಲ್ಲಿ ‘ಪ್ರಜಾ ಮಹಾಘಟ ಬಂಧನ’. ಇದು ಬದಲಾವಣೆಗೆ ಹಾತೊರೆಯುವ ಮನಸ್ಸುಗಳೆಲ್ಲಾ ಒಗ್ಗೂಡಿ ನಿಜವಾದ ಜನ ಪರ್ಯಾಯವನ್ನು ಕಟ್ಟುವ ಪ್ರಯತ್ನ. ಇದು ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುನಾದಿ ಹಾಕುವ ಕೆಲಸ. ಈ ಆಂದೋಲನಕ್ಕೆ ಧ್ವನಿಗೂಡಿಸಿರುವ ಹಿರಿಯ ಮುತ್ಸದ್ಧಿ ಎ.ಕೆ ಸುಬ್ಬಯ್ಯನವರು ಹೇಳಿರುವ ಹಾಗೆ ಇದು ಯಾವುದೋ ಪಕ್ಷವನ್ನು ಗೆಲ್ಲಿಸಲು ಅಥವಾ ಸೋಲಿಸಲು ನಡೆಯುತ್ತಿರುವ ಆಂದೋಲನವಲ್ಲ. ಪ್ರಜೆಗಳೇ ಪ್ರಜಾಪ್ರÀಭುತ್ವದ ನಿಜವಾದ ಪ್ರಭುಗಳು ಎನ್ನುವುದನ್ನು ರಾಜಕೀಯ ಪಕ್ಷಗಳಿಗೆ ನೆನಪಿಸುವ, ಜನರ ಅಧಿಕಾರಕ್ಕಾಗಿ ಒತ್ತಾಯಿಸುವ ಹೋರಾಟ.
ಇದರಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ ಅವರ ಆದಿಯಾಗಿ ಜನಪರವಾಗಿ ಇರುವ ಎಲ್ಲ ಹಿರಿಯ ಕಿರಿಯರೂ ಭಾಗಿಯಾಗಿದ್ದಾರೆ. ನೀವೂ ಕೂಡ ಹೇಳಿ ‘ನಂಗೂ ಸಾಧ್ಯ’!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...