Homeಅಂಕಣಗಳುಶುರುವಾಗಿದೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುನಾದಿ ಹಾಕುವ ಕೆಲಸ

ಶುರುವಾಗಿದೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುನಾದಿ ಹಾಕುವ ಕೆಲಸ

- Advertisement -
- Advertisement -

ಸಂಪಾದಕೀಯ |

ಚಳಿಗಾಲ ಮುಗಿದು ತಾಪಮಾನ ಏರುತ್ತಿರುವ ಜತೆಗೇ ಲೋಕಸಭಾ ಚುನಾವಣೆಯ ಬಿಸಿಯೂ ಸೇರಿ ವಾತಾವರಣದ ಶಾಖ ಏರುತ್ತಲಿದೆ. ರಾಜಕಾರಣಿಗಳ ಪ್ರತಿ ನಡೆಯೂ ಆಗಲೇ ಈ ಚುನಾವಣೆಗಳ ಮೇಲೆ ಕಣ್ಣಿಟ್ಟುಕೊಂಡೇ ಜರುಗುತ್ತಲಿದೆ. ಆದರೆ ಈ ಚುನಾವಣೆ ಹಿಂದಿನಂಥದ್ದಲ್ಲ. ಇದು ಈ ದೇಶದ ಪ್ರಜಾತಂತ್ರ ಮತ್ತು ಅದಕ್ಕೆ ಅಡಿಪಾಯವಾಗಿರುವ ಸಂವಿಧಾನವನ್ನು ಜನಸಾಮಾನ್ಯರು ಉಳಿಸಿಕೊಳ್ಳುತ್ತಾರೆಯೋ ಅಥವಾ ಮತ್ತೊಮ್ಮೆ ಹಿಂದುತ್ವ ಫ್ಯಾಸಿಸಂಗೆ ಮೇಲುಗೈ ಆಗುತ್ತದೋ ಎಂಬ ನಿರ್ಣಾಯಕ ಚುನಾವಣೆ ಇದಾಗಲಿದೆ. ಅದಕ್ಕಿಂತಲೂ ಹೆಚ್ಚಾಗಿ ಜನಸಾಮಾನ್ಯರ ಬವಣೆಗೆ ಈಗಲಾದರೂ ಕಿಂಚಿತ್ ಸಮಾಧಾನ ಸಿಗಬಹುದೋ ಎಂಬ ಕಾತರವೂ ಇದೆ. ಇದೇ ಆಶಯದಿಂದ ಈ ದೇಶದ ಜನ ಹಣ-ಹೆಂಡ, ಜಾತಿ ಇತ್ಯಾದಿ ಆಮಿಷಗಳ ನಡುವೆಯೂ ಅಧಿಕಾರರೂಢ ಪಕ್ಷಗಳ ವಿರುದ್ಧ ಮತ ಚಲಾಯಿಸುತ್ತಲೇ ಬಂದಿದ್ದಾರೆ. ಇದಕ್ಕೆ ಮೊನ್ನೆ ನಡೆದ ಉಪಚುನಾವಣೆಯಲ್ಲಿ ಆಳುವ ಪಕ್ಷ ಅನುಭವಿಸಿದ ಸೋಲೇ ಸಾಕ್ಷಿ. ಉಪಚುನಾವಣೆಯ ಫಲಿತಾಂಶ ಮಹಾ ಚುನಾವಣೆಯ ಭವಿಷ್ಯವನ್ನು ನಿರ್ಧರಿಸದಿದ್ದರೂ, ಅದು ಜನರ ಆಲೋಚನೆಯ ದಿಕ್ಕನ್ನು ಸೂಚಿಸುವಂತಿರುತ್ತದೆ. ಉದಾಹರಣೆಗೆ, ಉಪಚುನಾವಣೆಗಳ ಫಲಿತಾಂಶ ಭಾಜಪದ ದರ್ಪವನ್ನೂ, ಆತ್ಮವಿಶ್ವಾಸವನ್ನೂ ಕೊಂಚ ಕುಗ್ಗಿಸಿರುವುದು ನಿಜ. ಆದರೆ ಇದರಿಂದ ವಿರೋಧ ಪಕ್ಷಗಳು ಸಂಭ್ರಮಿಸುವ ಹಾಗೇನೂ ಇಲ್ಲ. ಆಳುವ ಪಕ್ಷಗಳ ಮೇಲಿನ ಅಸಮಾಧಾನವನ್ನು ಜನ ಹೊರಹಾಕಿದ್ದಾರೆ ಅಷ್ಟೆ. ಹಾಗೆ ನೋಡಿದರೆ ಭಾರತದ ಮತದಾರರು ತುರ್ತು ಪರಿಸ್ಥಿತಿ ನಂತರ, ಕೆಲವು ಅಪವಾದಗಳನ್ನು ಹೊರತುಪಡಿಸಿ, ನಿರಂತರವಾಗಿ ಅಧಿಕಾರ ವಿರೋಧಿ ನಿಲುವನ್ನು ಪ್ರಕಟಿಸುತ್ತಲೇ ಬಂದಿದ್ದಾರೆ. ನಮ್ಮ ಚುನಾವಣೆಯ ಸ್ವರೂಪದಲ್ಲೇ ಆಯ್ಕೆಗಳು ತೀರಾ ಮಿತವಾಗಿರುವುದರಿಂದ ಪ್ರತಿ ಬಾರಿಯೂ ಅಧಿಕಾರದಲ್ಲಿ ಇಲ್ಲದ ಪಕ್ಷಗಳು ಮತ್ತೇ ಆಯ್ಕೆ ಆಗುತ್ತಲಿವೆ.
ಈ ಅಧಿಕಾರ ವಿರೋಧಿ ನಿಲುವು ಏನನ್ನೂ ಸೂಚಿಸುತ್ತದೆ? ಅಧಿಕಾರಕ್ಕೆ ಬಂದ ಪ್ರತಿ ಪಕ್ಷವೂ ಜನರನ್ನು ಮೋಸಗೊಳಿಸಿದೆ. ಹೀಗೆ ಮೋಸ ಹೋಗುತ್ತಿದ್ದರೂ, ಜನ ಸಿನಿಕರಾಗದೆ ತಮ್ಮ ಸೀಮಿತ ಆಯ್ಕೆಯನ್ನು ನಿರಂತರವಾಗಿ ತೋರಿಸುತ್ತಲೇ ಇದ್ದಾರೆ. ಅಂದರೆ, ಜನ ಬದಲಾವಣೆ ಬಯಸುತ್ತಿದ್ದಾರೆ, ಆದರೆ ಜನರಿಗೆ ಬೇಕಾದ ಬದಲಾವಣೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಈ ಪಕ್ಷಗಳಿಗೆ ಒಂದು ಸಾಧ್ಯವಾಗುತ್ತಿಲ್ಲ; ಅಥವಾ ಅದು ತಿಳಿದಿದ್ದರೂ ಅವರಿಗೆ ಈ ಬದಲಾವಣೆಗಳನ್ನು ತರಲು ಮನಸ್ಸಿಲ್ಲ. ಇನ್ನೂ ಮುಖ್ಯವಾಗಿ ನವಉದಾರೀಕರಣದಿಂದ ಹೊರಬರುವ ತನಕ ಜನಪರ ಬದಲಾವಣೆ ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ಕೆಲವು ಜನಪ್ರಿಯ ಕಲ್ಯಾಣಯೋಜನೆಗಳನ್ನು ಮಾತ್ರ ಮುಂದಿಟ್ಟು ಅದೇ ಬದಲಾವಣೆ ಎಂಬಂತೆ ಜನರನ್ನು ಮರಳು ಮಾಡುವುದು ಎಲ್ಲ ಪಕ್ಷಗಳ ಚಾಳಿಯಾಗಿದೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಗೆ ಹೋಲಿಸಿದರೆ ಇದರಲ್ಲಿ ಬಿಜೆಪಿ ಕೊಂಚ ಭಿನ್ನ ಮತ್ತು ಹೆಚ್ಚು ಅಪಾಯಕಾರಿ. ಅದು ತನ್ನ ಹಿಂದುತ್ವ ಫ್ಯಾಸಿಸಂ ಮೂಲಕ ಹೊಸ “ಹಿಂದೂ ನಾಗರಿಕತೆ”ಯನ್ನು ಕಟ್ಟುವ ಆಮಿಷವನ್ನು ಮುಂದಿಡುತ್ತದೆ. ರಾಮಮಂದಿರ ಕಟ್ಟುವುದು ಅದರ ಪ್ರಕಾರ ಈ ನಾಗರಿಕತೆಯ ಭಾಗ. ಆದರೆ ಮೊನ್ನೆಯ ಚುನಾವಣೆಗಳು ಭಾಜಪದ ಈ ಯೋಜನೆಗೆ ಸೊಪ್ಪು ಹಾಕಿಲ್ಲ. ಅವರಿಗೆ ಏರುತ್ತಿರುವ ನಿರುದ್ಯೋಗ, ಹಣದುಬ್ಬರ, ಜಿ.ಎಸ್.ಟಿ ಮತ್ತು ನೋಟು ಅಮಾನ್ಯೀಕರಣದಿಂದಾದ ತೊಂದರೆ, ಕೃಷಿ ಬಿಕ್ಕಟ್ಟು ಇತ್ಯಾದಿ ಹಾರ್ಡ್‍ಕೋರ್ ಆರ್ಥಿಕ ಕಾರಣಗಳೇ ಮುಖ್ಯವಾಗಿವೆ. ಹೀಗಾಗಿ ರಾಮಮಂದಿರದ ವಿಚಾರ ಕೊಂಚ ಮಟ್ಟಿಗೆ ತನ್ನ ಅಪೀಲನ್ನು ಕಳೆದುಕೊಂಡಿದೆ. ಮೋದಿಯ ವಾಗ್ಝರಿ ಕೂಡ ತನ್ನ ಮೋಡಿಯನ್ನು ಕಳೆದುಕೊಳ್ಳುತ್ತಿದೆ. ಇದರಿಂದ ಕಂಗಾಲಾಗಿರುವ ಮೋದಿ ಈ ಚುನಾವಣೆಯನ್ನು ಸುಭದ್ರ (ಮಜ್ಬೂರ್) ಮತ್ತು ಅಸಹಾಯಕ (ಮಜ್ದೂರ್) ಸರ್ಕಾರದ ನಡುವಿನ ಆಯ್ಕೆ ಎಂದಿದ್ದಾರೆ. ಆದರ ಹಿಂದೆಯೇ ತಮ್ಮ ಪಕ್ಷ ತನ್ನ ಎಲ್ಲ ಹಳೆಯ ಗೆಳೆಯರನ್ನು ಸ್ವಾಗತಿಸುತ್ತದೆ ಎಂದು ಕೂಡ ಹೇಳಿದ್ದಾರೆ. ಇದು ಈ ಬಾರಿ ತಮಗೆ ಭಾರಿ ಬಹುಮತ ಸಿಗಲಾರದು ಎನ್ನುವುದನ್ನು ಬಿಜೆಪ ಈಗಾಗಲೇ ಒಪ್ಪಿಕೊಂಡ ಹಾಗಿದೆ. ಹೀಗಾಗಿ ಈ ಬಾರಿ ಸಮ್ಮಿಶ್ರ ಸರ್ಕಾರ ಹೆಚ್ಚು ಸಂಭವನೀಯ. ಇದು ಕೂಡ ಜನರ ಭ್ರಮನಿರಸನದ ಆಯ್ಕೆಯ ಪ್ರತೀಕವೇ ಹೌದು.
ಇದರಿಂದ ಹೊರಹೊಮ್ಮುವ ಪಾಠಗಳೇನು?
ಮೊದಲಿಗೆ, ಹಿಂದುತ್ವ, ಕೋಮುವಾದ, ರಾಮಮಂದಿರ…. ಇತ್ಯಾದಿ ಭಾವನಾತ್ಮಕ ಅಂಶಗಳು ಜನರಿಗೆ ಬೇಕಾದ ನೆಮ್ಮದಿಯ ಬದುಕು, ಭದ್ರತೆಗಳನ್ನು ನೀಡಲಾಗದು ಎಂಬ ಅರಿವು. ಇದು ಸ್ಪಷ್ಟವಾಗಿ ಗೋಚರವಾಗದಿದ್ದರೂ, ಆಳದಲ್ಲಿ ಕೆಲಸ ಮಾಡಿರುವುದು ನಿಜ. ಹಾಗೆಯೇ, ಈ ದೇಶ ಎದುರಿಸುತ್ತಿರುವ ಕೃಷಿ ಬಿಕ್ಕಟ್ಟು, ನಿರುದ್ಯೋಗ, ಅಭದ್ರತೆ, ಶಿಕ್ಷಣ ಮತ್ತು ಆರೋಗ್ಯ ಮುಂತಾದ ಸಾರ್ವಜನಿಕ ಸೇವೆಗಳು ದುರ್ಲಭವಾಗಿರುವುದು ಇನ್ನೊಂದು. ಮೇಲಾಗಿ, ಅಸಂಘಟಿತ ಕಾರ್ಮಿಕರ, ಮಹಿಳೆ, ದಲಿತ ಮತ್ತು ಇತರೆ ಅಲ್ಪಸಂಖ್ಯಾತರ ಆತಂಕ ಇತ್ಯಾದಿ ವಿಷಯಗಳಿಗೆ ಬೇಕಾದ ಸೂಕ್ತ ಪರಿಹಾರ ಮಾರ್ಗಗಳು ಯಾವ ರಾಜಕೀಯ ಪಕ್ಷದಲ್ಲೂ ಇಲ್ಲ ಎಂಬ ಸತ್ಯ.
ಮುಂದಿನ ಚುನಾವಣೆ ಈ ವಿಷಯಗಳನ್ನು ಮುಂದಿಟ್ಟುಕೊಂಡು ನಡೆಯಬೇಕಾಗಿದೆ. ಆದರೆ ಈಗಿನ ರಾಜಕೀಯ ಪಕ್ಷಗಳಲ್ಲಿ ಈ ವಿಚಾರಗಳಿಗೆ ಸಂಬಂಧಪಟ್ಟ ಯಾವುದೇ ಸ್ಪಷ್ಟ ಕಾರ್ಯಯೋಜನೆ ಇಲ್ಲ. ಜಾಗತೀಕರಣ ಮತ್ತು ಖಾಸಗಿಕರಣಕ್ಕೇ ಒತ್ತು ನೀಡುವ ಯಾವ ಪಕ್ಷದಿಂದಲೂ ಈ ಸಂದಿಗ್ಧತೆಯಿಂದ ಹೊರಬರುವ ಮಾರ್ಗವೇ ಇಲ್ಲ. ಹೀಗಾಗಿ ಇಂದು ಪಕ್ಷರಾಜಕಾರಣದಿಂದ ಹೊರತಾಗಿ ಯೋಚಿಸುವ, ನಮ್ಮ ದೇಶದ ಜನ ಕಾಯುತ್ತಿರುವ ಬದಲಾವಣೆಗಳನ್ನು ಜಾರಿಗೆ ತರುವ ಮಾರ್ಗೊಪಾಯಗಳನ್ನು ಜನರ ಮುಂದಿಡುವ ಕಾರ್ಯ ಅತ್ಯಂತ ಜರೂರಾಗಿ ಆಗಬೇಕಿದೆ. ಅಂಥ ಕಾರ್ಯೊದ್ದೇಶವನ್ನು ಇಟ್ಟುಕೊಂಡು ಹೋರಾಡುವ ಹೊಸ ಯುವ ಶಕ್ತಿಯೊಂದು ಈಗ ಹಿಂದೆಂದಿಗಿಂತಲೂ ಅಗತ್ಯವಾಗಿದೆ.
ಈ ಕಾರಣಕ್ಕೆ ‘ಬದಲಾವಣೆ ಸಾಧ್ಯ ಮತ್ತು ನನ್ನಿಂದಲೇ ಈ ಬದಲಾವಣೆ ಪ್ರಾರಂಭ’ ಎಂಬ ಅರ್ಥ ಧ್ವನಿಸುವ ‘ಐ ಕ್ಯಾನ್’ (I ಅಂಓ) ಆಂದೋಲನಕ್ಕೆ ಅಖಿಲ ಭಾರತ ಮಟ್ಟದಲ್ಲಿ ಚಾಲನೆ ನೀಡಲಾಗಿದೆ. ಇದೇ ಆಶಯಗಳನ್ನ ಹೊಂದಿರುವ ಆದರೆ ಕರ್ನಾಟಕದ ಸಂದರ್ಭಕ್ಕೆ ಹತ್ತಿರವಾದ ವಿಚಾರಗಳನ್ನು ಇಟ್ಟುಕೊಂಡು ‘ದೇಶಕ್ಕಾಗಿ ನಾವು – ನಂಗೂ ಸಾಧ್ಯ!’ ಎಂಬ ಘೋಷಣೆಯ ಅಡಿಯಲ್ಲಿ ಯುವ ಜನತೆಯನ್ನು ಒಟ್ಟಿಗೆ ತರುವ ಪ್ರಯತ್ನ ನಮ್ಮ ರಾಜ್ಯದಲ್ಲೂ ಪ್ರಾರಂಭವಾಗಿದೆ. ಇದರಲ್ಲಿ ಜತೆಯಾಗುವ ಕಾರ್ಮಿಕರ, ಮಹಿಳೆಯರ, ನಿರುದ್ಯೋಗಿಗಳ, ದಲಿತರ, ಅಲ್ಪಸಂಖ್ಯಾತರ ಶಿಕ್ಷಣ, ಆರೋಗ್ಯ, ಪರಿಸರ ಇತ್ಯಾದಿ ವಿಚಾರಗಳಿಗಾಗಿ ಹೋರಾಡುತ್ತಿರುವ ಸಂಘಟನೆಗಳು ಹಾಗೂ ವ್ಯಕ್ತಿಗಳು ತಮ್ಮ ತಮ್ಮ ಅಜೆಂಡಾಗಳನ್ನೂ, ಅನನ್ಯತೆಗಳನ್ನು ಇಟ್ಟುಕೊಂಡೇ ‘ದೇಶಕ್ಕಾಗಿ ನಾವು’ ಎನ್ನುವ ಸಮಾನ ಆಶಯದೊಂದಿಗೆ ಕೈಜೋಡಿಸಲಿದ್ದಾರೆ. ಇದೊಂದು ರೀತಿಯಲ್ಲಿ ‘ಪ್ರಜಾ ಮಹಾಘಟ ಬಂಧನ’. ಇದು ಬದಲಾವಣೆಗೆ ಹಾತೊರೆಯುವ ಮನಸ್ಸುಗಳೆಲ್ಲಾ ಒಗ್ಗೂಡಿ ನಿಜವಾದ ಜನ ಪರ್ಯಾಯವನ್ನು ಕಟ್ಟುವ ಪ್ರಯತ್ನ. ಇದು ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುನಾದಿ ಹಾಕುವ ಕೆಲಸ. ಈ ಆಂದೋಲನಕ್ಕೆ ಧ್ವನಿಗೂಡಿಸಿರುವ ಹಿರಿಯ ಮುತ್ಸದ್ಧಿ ಎ.ಕೆ ಸುಬ್ಬಯ್ಯನವರು ಹೇಳಿರುವ ಹಾಗೆ ಇದು ಯಾವುದೋ ಪಕ್ಷವನ್ನು ಗೆಲ್ಲಿಸಲು ಅಥವಾ ಸೋಲಿಸಲು ನಡೆಯುತ್ತಿರುವ ಆಂದೋಲನವಲ್ಲ. ಪ್ರಜೆಗಳೇ ಪ್ರಜಾಪ್ರÀಭುತ್ವದ ನಿಜವಾದ ಪ್ರಭುಗಳು ಎನ್ನುವುದನ್ನು ರಾಜಕೀಯ ಪಕ್ಷಗಳಿಗೆ ನೆನಪಿಸುವ, ಜನರ ಅಧಿಕಾರಕ್ಕಾಗಿ ಒತ್ತಾಯಿಸುವ ಹೋರಾಟ.
ಇದರಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ ಅವರ ಆದಿಯಾಗಿ ಜನಪರವಾಗಿ ಇರುವ ಎಲ್ಲ ಹಿರಿಯ ಕಿರಿಯರೂ ಭಾಗಿಯಾಗಿದ್ದಾರೆ. ನೀವೂ ಕೂಡ ಹೇಳಿ ‘ನಂಗೂ ಸಾಧ್ಯ’!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...