ಒಂದೂವರೆ ಶತಮಾನಗಳ ಅಯೋಧ್ಯೆ ವಿವಾದಕ್ಕೆ ಇಂದು ತೆರೆ ಬಿದ್ದಿದೆ. ಅಯೋಧ್ಯೆ ವಿವಾದದ ಕುರಿತು ಸರ್ವಾನುಮತದ ತೀರ್ಪು ಹೊರಬಿದ್ದಿದೆ. ಐತಿಹಾಸಿಕ ತೀರ್ಪಿನ ಕುರಿತು ನ್ಯಾಯಮೂರ್ತಿಗಳಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತವಾಗಿಲ್ಲ.
ಸಾಮಾನ್ಯವಾಗಿ ಹಲವು ಮಹತ್ವದ ಮೊಕದ್ದಮೆಗಳಲ್ಲಿ ಹಲವು ನ್ಯಾಯಾಧೀಶರ ಪೀಠ ವಿಚಾರಣೆ ನಡೆಸುವಾಗ, ಒಂದಕ್ಕಿಂತ ಹೆಚ್ಚು ತೀರ್ಪು ಬರುವ ಸಾಧ್ಯತೆಗಳು ಹೆಚ್ಚು. ಅಲಹಾಬಾದ್ ಹೈಕೋರ್ಟ್ನ ಅಯೋಧ್ಯೆ ತೀರ್ಪು ಸಹಾ ಈ ರೀತಿ ಎರಡು ತೀರ್ಪುಗಳಾಗಿದ್ದವು. ಆದರೆ ಯಾವುದು ಬಹುಮತದ ತೀರ್ಪು ಆಗಿರುತ್ತದೋ ಅದು ಮಾತ್ರ ಜಾರಿಗೆ ಬರುತ್ತದೆ.
ಸುಪ್ರೀಂಕೋರ್ಟ್ ಪಂಚ ಪೀಠ ಅಯೋಧ್ಯೆ ವಿವಾದದ (ಬಾಬ್ರಿ ಮಸೀದಿ-ರಾಮಮಂದಿರ) ಅಲಹಾಬಾದ್ ಹೈಕೋರ್ಟ್ನ ತೀರ್ಪಿನ ಮೇಲಿನ ಅಪೀಲನ್ನು ವಿಚಾರಣೆ ನಡೆಸಿತು. ಆದರೆ, ನ್ಯಾಯಮೂರ್ತಿಗಳಲ್ಲಿ ಯಾವುದೇ ಭಿನ್ನ ಅಭಿಪ್ರಾಯ ಇಲ್ಲದಿರುವುದರಿಂದ ಇದು ಸರ್ವಾನುಮತದ ತೀರ್ಪಾಗಿದ್ದು, ಬಹಳಷ್ಟು ವಿಶೇಷವಾಗಿದೆ. ತೀರ್ಪಿನ ವಿವರಗಳು ಸದ್ಯದಲ್ಲೇ ಹೊರಬರಲಿವೆ.
ಆ ಐದು ನ್ಯಾಯಮೂರ್ತಿಗಳು ಯಾರು..?
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಅಶೋಕ್ ಭೂಷಣ್, ನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ಎಸ್.ಅಬ್ದುಲ್ ನಜೀರ್. ನ್ಯಾಯಮೂರ್ತಿಗಳು ಸರ್ವಾನುಮತದ ತೀರ್ಪನ್ನು ನೀಡಿದ್ದಾರೆ.
ದೇಶದಾದ್ಯಂತ ಭಾರಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಯೋಧ್ಯೆಯಲ್ಲಿ ನಾಲ್ಕು ಹಂತದ ಅರೆಸೇನೆ ಹಾಗೂ ಪೊಲೀಸ್ ಪಡೆ ಭದ್ರತೆ ಒದಗಿಸಿದೆ. ಸಾಮಾಜಿಕ ಜಾಲತಾಣಗಳು ಕಣ್ಗಾವಲಿನಲ್ಲಿವೆ.