Homeಅಂಕಣಗಳುಪುಸ್ತಕ ವಿಮರ್ಶೆ; ಸೋಲಿಗ ಬುಡಕಟ್ಟು ಸಮುದಾಯದ ಆಪ್ತ ಚಿತ್ರಣ; ಪರಿಸರ-ಜೀವಶಾಸ್ತ್ರ ವೈವಿಧ್ಯತೆಯ ಭಂಡಾರ

ಪುಸ್ತಕ ವಿಮರ್ಶೆ; ಸೋಲಿಗ ಬುಡಕಟ್ಟು ಸಮುದಾಯದ ಆಪ್ತ ಚಿತ್ರಣ; ಪರಿಸರ-ಜೀವಶಾಸ್ತ್ರ ವೈವಿಧ್ಯತೆಯ ಭಂಡಾರ

- Advertisement -
- Advertisement -

ಯಾವುದೇ ಸಮುದಾಯದ ಅಥವಾ ಬುಡಕಟ್ಟಿನ ಅಧ್ಯಯನದ ಹಲವು ಮಾದರಿಗಳಿವೆ. ಮಾನವಶಾಸ್ತ್ರೀಯ-ಐತಿಹಾಸಿಕ-ಸಮಾಜಶಾಸ್ತ್ರೀಯ-ಕುಲಶಾಸ್ತ್ರೀಯ ಅಧ್ಯಯನಗಳು ಒಂದು ಕಡೆಯಾದರೆ ಸಮುದಾಯಗಳ ಆಚರಣೆ ಮತ್ತು ಸಾಂಸ್ಕೃತಿಕ ಅಂಶಗಳನ್ನು ಜನಪದೀಯ ಮಾದರಿಯಲ್ಲಿ ದಾಖಲೆ ಮಾಡಿರುವವು ಇನ್ನೊಂದು ಬಗೆ. ಈ ಎಲ್ಲಾ ಅಧ್ಯಯನಗಳಿಗೆ ಅವುಗಳದ್ದೇ ಆದ ಮಹತ್ವವಿದೆ. ಕರ್ನಾಟಕದ ಚಾಮರಾಜನಗರ-ಮಲೆಮಾದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟದ ಅರಣ್ಯ ಸಾಲಿನಲ್ಲಿ ವಾಸಿಸುವ ಬುಡಕಟ್ಟಾದ ಸೋಲಿಗರ ಚಿತ್ರಣಕ್ಕೆ ಅಕಾಡೆಮಿಕ್ ಮಾದರಿಯದ್ದಲ್ಲದ ಜಾಡನ್ನು ಲೇಖಕ, ಉಪನ್ಯಾಸಕ, ದೀನಬಂಧು ಸಂಸ್ಥೆಯ ಜಿ ಎಸ್ ಜಯದೇವ ಅವರು ತುಳಿದಿದ್ದಾರೆ.

ಜಯದೇವ ಅವರು ರಚಿಸಿರುವ ’ಸೋಲಿಗ ಚಿತ್ರಗಳು: ಆದಿವಾಸಿಗಳ ಬದುಕಿನೊಂದಿಗಿನ ಸ್ಮೃತಿ ಚಿತ್ರಗಳು’, ಒಂದು ಕಡೆ ಸೋಲಿಗ ಬುಡಕಟ್ಟು ಸಮುದಾಯದ ವ್ಯಕ್ತಿಗಳ ಜೊತೆಗಿನ ಲೇಖಕರ ಒಡನಾಟದ ನೆನಪಿನ ಗಣಿಯಿಂದ ತೆಗೆದು ಕಟ್ಟಿದ ಆಪ್ತ ಚಿತ್ರಣವೆನಿಸಿದರೆ, ಮತ್ತೊಂದು ಕಡೆ ಒಂದು ಸಮುದಾಯದ ಜೀವನ ದೃಷ್ಟಿಯ ದಾಖಲೆಯೂ ಆಗಿ, ಮತ್ತವುಗಳು ಪರಿಸರದ ಕಥೆಗಳಾಗಿ, ಜೀವ ವೈವಿಧ್ಯದ ಸಂಭ್ರಮವಾಗಿ, ಕಾಡಿನ ಹಲವು ನಿಗೂಢಗಳ ಕಥಾನಕವಾಗಿ ಹಿಗ್ಗಿ, ಹಲವು ಭಾಗಗಳಲ್ಲಿ ಓದುಗರಿಗೆ ಕಚಗುಳಿ ಇಡುತ್ತಾ, ಮನುಷ್ಯ ಮತ್ತು ಪ್ರಕೃತಿಯ ಸಂಬಂಧದ ಬಗ್ಗೆ ಆಳವಾದ ಆಲೋಚನೆಗೆ ಹಚ್ಚುವ, ಕಾಡು ಹಾಗೂ ವನ್ಯಜೀವಿ ಸಂಕುಲದ ಸಂರಕ್ಷಣೆಯ ಬಗ್ಗೆ ಇರುವ ಹಲವು ಸಿದ್ಧಾಂತಗಳು ಮತ್ತು ವಿಧಾನಗಳನ್ನು ಪ್ರಶ್ನಿಸಿ ಅವುಗಳನ್ನು ಒರೆಗೆ ಹಚ್ಚುವ ದಾಖಲೆಯೂ ಆಗಿದೆ. ಇವೆಲ್ಲವೂ ಹದವಾಗಿ ಬೆರೆತ ಪಾಕ, ಸೋಲಿಗ ಸಮುದಾಯದವರು ಕಾಡಿನಲ್ಲಿ ನೈಸರ್ಗಿಕವಾಗಿ ಸಿಗುವ ಸೊಪ್ಪು ಮತ್ತಿತರ ಅಡುಗೆ ಪದಾರ್ಥಗಳನ್ನೇ ಬಳಸಿ ಮಾಡುವ ಆರೋಗ್ಯಕರ-ರುಚಿಕರ ಖಾದ್ಯದಂತೆ ಆಹ್ಲಾದವೆನಿಸುತ್ತದೆ.

ಕುನ್ನೇಗೌಡರ ಬಗ್ಗೆ ಬರೆದಿರುವ ಅಧ್ಯಾಯದಲ್ಲಿ, ಸೋಲಿಗರು ಮನೆ ಕಟ್ಟುವುದಕ್ಕೆ ಕೋಲು ಮತ್ತು ಹುಲ್ಲೇನೋ ಯಥೆಚ್ಛವಾಗಿ ಸಿಕ್ಕರೂ ಅದನ್ನು ಕಟ್ಟುವುದಕ್ಕೆ ಹಗ್ಗಕ್ಕೆ ಏನು ಮಾಡುತ್ತೀರಿ ಎಂಬ ಲೇಖಕರ ಪ್ರಶ್ನೆಗೆ, ತೆಂಗಿನ ಹುರಿ ಇತ್ತೀಚಿನದ್ದು ಎನ್ನುವ ಕುನ್ನೇಗೌಡರು ಸೊವ್ವೆ ಮರದ ತೊಗಟೆ ಸಿಗಿದು ಗಟ್ಟಿಯಾದ ದಾರ ಮಾಡಿಕೊಳ್ಳುವ, ಅಥವಾ ’ಉರಿಯನ ಅಂಬು’, ’ಕೋಣನ ಅಂಬು’, ’ಕರೂರಿನಾರು’ ಹೀಗೆ ತಮ್ಮ ಪ್ರದೇಶದಲ್ಲಿ ಸಿಗುವ ಹಲವು ಬಗೆಯ ಬಳ್ಳಿಗಳನ್ನು ಹೆಸರಿಸುತ್ತಾ ಹೋಗುತ್ತಾರೆ. ಜೀವವೈವಿಧ್ಯದ ಬಗ್ಗೆ ಅಚ್ಚರಿ ಕುತೂಹಲಗಳನ್ನು ಮೂಡಿಸುವ ಇಂತಹ ಸಂವಾದಗಳು ಪುಸ್ತಕದಲ್ಲಿ ಹೇರಳವಾಗಿವೆ. ಅದೇ ಸಮಯದಲ್ಲಿ ಲಂಟಾನ ವಿಪರೀತವಾಗಿ ಬೆಳೆದಿರುವ ಕಾರಣದಿಂದ ಈ ಬಳ್ಳಿಗಳಿಗೆ ಕುತ್ತು ಬರುತ್ತಿರುವ ವಿಷಯವನ್ನೂ ಕುನ್ನೇಗೌಡರು ಹೇಳುತ್ತಾರೆ. ಲಂಟಾನ ಗಿಡಗಳಿಂದ ಕಾಡಿನ ಜೀವ ವೈವಿಧ್ಯಕ್ಕೆ ಕುತ್ತಾಗುತ್ತಿರುವ ಬಗ್ಗೆ ಲೇಖಕರು ಮಾತನಾಡಿಸಿರುವ ಹಲವು ಸೋಲಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಅದರೆ ಜೊತೆಗೆ ಕಾಡು ಉಳಿಸುವ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮಾಡುತ್ತಿರುವ ಕೆಲಸ, ಅರಣ್ಯ ಇಲಾಖೆ ರೂಪಿಸಿರುವ ಹಲವು ನೀತಿಗಳು ಹೇಗೆ ಸೋಲಿಗರ ಬದುಕಿಗೆ ಮಾರಕವಾಗಿವೆ ಎಂಬುದು ಕೂಡ ಪುಸ್ತಕದಲ್ಲಿ ಹಲವು ಬಾರಿ ಚರ್ಚೆಯಾಗಿ ಮೂಡಿದೆ.

ಸೋಲಿಗರು ಆಹಾರವಾಗಿ ಬಳಸುವ – ಕಾಡಿನಲ್ಲಿ ಸಿಗುವ ಹಲವು ರೀತಿಯ ಸೊಪ್ಪುಗಳು, ಬೇರೆ ಬೇರೆ ಸಮಯದಲ್ಲಿ ಅರಳುವ ವಿಭಿನ್ನ ಹೂವಿನಿಂದ ಮಕರಂದ ಹೀರಿ ಕಟ್ಟುವ ಜೇನುತುಪ್ಪದ ವಿಭಿನ್ನ ರುಚಿ ಮತ್ತು ವಾಸನೆಯ ಬಗ್ಗೆ ಸೋಲಿಗರಿಗೆ ಇರುವ ಅರಿವು, ಹೀಗೆ ಆ ತಿಳಿವಳಿಕೆಗಳ ಆಕರ-ದಾಖಲೆ ಪುಸ್ತಕವೂ ಇದು.
ಸೋಲಿಗರು ಕಟ್ಟುವ ಗುಡಿಸಲಿಗೆ ಹೊದಿಸುವ ಬಾಣೆ ಹುಲ್ಲು ವಸಾಹತುಶಾಹಿ ಪಂಡಿತರ ಬಾಯಲ್ಲಿ ಹೇಗೆ ಬನಾನಾ ಲೀಫ್ ಆಗಿರಬಹುದು ಎಂಬುದನ್ನು ಜಯದೇವ ವಿವರಿಸುತ್ತಾರೆ. ಆದರೆ ಕಾಡಿನಿಂದ ಬಾಣೆ ಹುಲ್ಲು ಕಾಣೆಯಾಗುತ್ತಿರುವುದು ಸೋಲಿಗರಿಗೆ ಚಿಂತೆಯ ವಿಷಯವಾಗಿದೆ ಎಂಬುದನ್ನೂ ತಿಳಿಸುತ್ತಾರೆ. ಅಚ್ಚುಗೆಗೌಡರು ವಿವರಿಸುವಂತೆ ಬಾಣೆಹುಲ್ಲು ಆನೆಗಳಿಗೆ ಪ್ರಿಯವಾದ ಆಹಾರ. ಆ ಹುಲ್ಲು ಈಗ ಕಡಿಮೆಯಾಗಿರುವುದರಿಂದ, ಆನೆಗಳು ಹೆಚ್ಚೆಚ್ಚು ಮರದ ತೊಗಟೆಗಳನ್ನು ತಿನ್ನಲು ಪ್ರಾರಂಭಿಸಿವೆ ಎನ್ನುವ ಅವರ ಪಾರಂಪರಿಕ ತಿಳಿವಳಿಕೆ ಹೆಚ್ಚು ಅಧ್ಯಯನಕ್ಕೆ ಒಳಪಟ್ಟರೆ ಬಹುಶಃ ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಆನೆ (ವನ್ಯಜೀವಿ) ಮತ್ತು ಮನುಷ್ಯನ ಸಂಘರ್ಷಕ್ಕೆ ನಿಜವಾದ ಕಾರಣವನ್ನು ಪತ್ತೆಹಚ್ಚಲು ಇನ್ನಷ್ಟು ಸಹಕರಿಸಬಲ್ಲುದು.

ಪಾರಂಪರಿಕವಾಗಿ ಉರುಳು ಹಾಕಿ ಕಾಡುಹಂದಿಯಂತಹ ಪ್ರಾಣಿಗಳನ್ನು ಹಿಡಿದು ತಿನ್ನುತ್ತಿದ್ದ ಸೋಲಿಗರಿಗೆ ಈಗ ಅರಣ್ಯ ಕಾನೂನುಗಳು ಅಡ್ಡಿಯಾಗಿವೆ. ಇದರಿಂದ ಕಾಡುಹಂದಿ ಸಂತತಿ ವಿಪರೀತ ಹೆಚ್ಚಾಗಿರುವುದು ಕೂಡ ಸಮಸ್ಯೆಯಾಗಿದೆ. ಕಾಡುಹಂದಿಗಳ ಹಾವಳಿಯಿಂದ ಸೋಲಿಗರ ಸ್ಥಿರ ಆಹಾರವಾದ ರಾಗಿಯನ್ನು ಬೆಳೆದುಕೊಳ್ಳಲು ಕೂಡ ಇಂದು ಅಡ್ಡಿಯಾಗಿದೆ. ಕಾಡಿನಿಂದ ಹೊರದಬ್ಬುವ ಪ್ರಕ್ರಿಯೆಗಳು, ದಾಖಲೆಗಳು ಸಮರ್ಪಕವಾಗಿಲ್ಲ ಎಂಬ ಸೋಲಿಗರಿಗೆ ಕಿರುಕುಳ ನೀಡುವ ಸಂಗತಿಗಳಿಂದ ಹಿಡಿದು ಅವರಿಗೆ ತಮ್ಮ ಜಮೀನುಗಳನ್ನು ನಿರಾಕರಿಸುವುದು ಇಂತವೆಲ್ಲಾ ಸಮಸ್ಯೆಗಳ ಜೊತೆಗೆ, ತಾವು ಅವಿಚ್ಛಿನ್ನವಾಗಿ ಬೆರೆತುಹೋಗಿದ್ದ ಕಾಡು ತಮ್ಮಿಂದಲ್ಲದ ಕಾರಣಕ್ಕೆ ತಮ್ಮ ಕಣ್ಣಮುಂದೆಯೇ ನಾಶವಾಗುತ್ತಿರುವುದನ್ನು ಕಾಣಬೇಕಾದ ಒಡಲಿನ ಸಂಕಟವನ್ನು ಸೋಲಿಗರ ಮಾತುಗಳ ಮೂಲಕವೇ ಲೇಖಕರು ದಾಖಲಿಸುತ್ತಾರೆ. ಇವುಗಳನ್ನು ವಿವರಿಸುವಾಗಲೇ ಕಾಡುನಾಯಿಗಳನ್ನು ಓಡಿಸಿ ಅದರ ಬೇಟೆಯನ್ನು ಕಸಿದು ತರುವ ಸೋಲಿಗರ ಉಪಾಯವನ್ನು ಕುನ್ನೇಗೌಡರು ವಿವರಿಸುವುದು ಅಚ್ಚರಿಯ ವಿಷಯವೆನ್ನಿಸುತ್ತದೆ. ಕಾಡುನಾಯಿಗಳು ನಿಮಗೆ ಏನೂ ಮಾಡಲ್ವಾ ಎನ್ನುವ ಲೇಖಕರ ಪ್ರಶ್ನೆಗೆ “ಇಲ್ಲ ಸ್ವಾಮಿ ಮನುಷ್ಯರ್ ಕಂಡ್ರೆ ಅವಕ್ಕೆ ಭಯ, ಚಿರತೆಗಳನ್ನು ಬೇಕಾದರೆ ಹೆದುರುಸ್ತಾವೆ, ಆದ್ರೆ ಮನಶಾರ್ ಕಂಡ್ರೆ ಅಂಜುಕೆ” ಎನ್ನುತ್ತಾರೆ ಕುನ್ನೇಗೌಡರು.

ಕಾರನ ಕೇತೇಗೌಡರಿಗೆ ಆನೆಯ ಮತ್ತು ಅದು ಬದುಕುವ ರೀತಿಯ ಬಗೆಗೆ ಇರುವ ತಿಳಿವಳಿಕೆ, ತನ್ನ ಕುಲದಿಂದ ಹೊರಗೆ ಮದುವೆಯಾಗಿ ಕಟ್ಟುಪಾಡುಗಳನ್ನು ಮುರಿದಿರುವ ಪುಟ್ಟರಂಗನ ಸಸ್ಯಜ್ಞಾನ (ಕಾಡಿನ ಪಾರಂಪರಿಕ ಸಸ್ಯ-ಮರಗಳ ಜೊತೆಗೆ ಅವುಗಳ ವೈಜ್ಞಾನಿಕ ಹೆಸರುಗಳ ಬಗ್ಗೆ ಅಪಾರ ತಿಳಿವಳಿಕೆ), ಎಣ್ಣೆ ಮರ ಸಂತತಿ ಕಾಣೆಯಾಗುತ್ತಿರುವ ಬಗ್ಗೆ ಅವನ ಆತಂಕ, ಅರಣ್ಯ ಇಲಾಖೆಯ ಅವೈಜ್ಞಾನಿಕ ಕೆಲಸಗಳ ಬಗ್ಗೆ ಅಸಮಾಧಾನ ಹೀಗೆ ಇಲ್ಲಿ ಉದಾಹರಿಸಿದ್ದಕ್ಕೆ ನೂರಾರು ಪಟ್ಟು ಹೆಚ್ಚಿರುವ ಅಚ್ಚರಿ ಮತ್ತು ಆಸಕ್ತಿದಾಯಕ ಸಂಗತಿಗಳನ್ನು ಓದಿಯೇ ಅನುಭವಿಸಬೇಕು.

ಸೋಲಿಗ ಸಮುದಾಯದಲ್ಲಿ ಉನ್ನತ ವ್ಯಾಸಂಗ ಮಾಡಿ ತಮ್ಮ ಸಮುದಾಯದ ಅಭ್ಯುದಯಕ್ಕಾಗಿ ಕೆಲಸ ಮಾಡುತ್ತಿರುವ ಡಾ. ಮಾದೇಗೌಡರು, ಡಾ. ರತ್ನಮ್ಮ ಮತ್ತು ಡಾ. ಜಡೇಗೌಡರ ಬಗೆಗಿನ ಲೇಖಕರ ಒಡನಾಟದ ಅಧ್ಯಾಯಗಳು ಕೂಡ ಮಹತ್ವಾದ ಕಥೆಯೊಂದನ್ನು ಕಟ್ಟಿಕೊಡುತ್ತವೆ. ತಮ್ಮ ವ್ಯಯಕ್ತಿಕ ಏಳ್ಗೆಯ ನಂತರ ತಮ್ಮ ಸಮುದಾಯಕ್ಕೆ ಬೆನ್ನು ತಿರುಗಿಸದೆ, ಅವುಗಳ ಅಭ್ಯುದಯಕ್ಕೆ ಕೆಲಸ ಮಾಡುವ ಬದ್ಧತೆಯ ಮಹತ್ವವನ್ನು ಇವು ಮನಗಾಣಿಸುತ್ತದೆ.

ಪುಸ್ತಕ ಜೀವಶಾಸ್ತ್ರದ ಹಲವು ವಿಶಿಷ್ಟ ಮತ್ತು ವಿಚಿತ್ರ ಸಂಗತಿಗಳ ದಾಖಲೆಯೂ ಕೂಡ. ಇಲ್ಲಿ ಒಂದೆರಡು ಸಂಗತಿಯನ್ನು ಉದಾಹರಿಸಬಹುದಾದರೆ, ’ಚಿಕ್ಕಣ್ಣನ ಡ್ರೈವಿಂಗ್ ಮಹಾತ್ಮೆ ಅಧ್ಯಾಯದಲ್ಲಿ, ಚಿಕ್ಕಣ್ಣ ಆಂಬ್ಯುಲೆನ್ಸ ಓಡಿಸುವಾಗ ಬಂಡೆಗೆ ಗುದ್ದಿ ಮಾಡುವ ಆಕ್ಸಿಡೆಂಟ್‌ನಿಂದ ಬಂಡೆಯ ಕೆಳಗೆ ವಾಸವಿದ್ದ ಚೇಳುಗಳು ಹೊರಬರುತ್ತವೆ. ಚೇಳುಗಳು ಹೇಗೆ ಮೊಟ್ಟೆಯನ್ನು ಹೊರಗೆ ಇಡದೆ ತಮ್ಮ ಶರೀರದಲ್ಲಿಯೇ ಇರಿಸಿಕೊಂಡು ಮರಿ ಮಾಡಿ, ಮರಿಗಳನ್ನು ತಮ್ಮ ಬೆನ್ನ ಮೇಲೆ ಹೊತ್ತುಕೊಂಡು ಕಾಪಾಡುತ್ತವೆ ಎಂಬಂತಹ ಸಂಗತಿಗಳು ಓದುಗನಿಗೆ ಜೀವಶಾಸ್ತ್ರದ ಬಗ್ಗೆ ಆಸಕ್ತಿ ಹುಟ್ಟಿಸಬಲ್ಲವು. ಅವು ವಿಷಕಾರಿ ಸುಟ್ಟುಬಿಡಬೇಕು ಎಂದು ಹೇಳುವ ಸೋಲಿಗ ಸಮುದಾಯದ ಚಿಕ್ಕಣ್ಣನಿಗೆ ಲೇಖಕರು ಅವುಗಳ ಪಾಡಿಗೆ ಅವನ್ನು ಬಿಟ್ಟುಬಿಡುವಂತೆ ತಿಳಿಹೇಳುತ್ತಾರೆ. 19-20-21ನೇ ಶತಮಾನದ ಬಿಕ್ಕಟ್ಟಿಗೆ ಇದು ರೂಕವಾಗಿಯೂ ನಿಲ್ಲುತ್ತದೆ. ಪಾರಂಪರಿಕ ಜ್ಞಾನ ಕಣ್ಮರೆಯಾಗುತ್ತಿರುವ ಸಮಯದಲ್ಲಿ, ಅದು ಮತ್ತೆ ಯಾವುದೋ ವೈಜ್ಞಾನಿಕ-ಎಕಲಾಜಿಕಲ್ ಅಧ್ಯಯನಕಾರನ ಜೊತೆಗೆ ಅನುಸಂಧಾನ ನಡೆಸಿ ಹೊಸ ಮಾರ್ಗವನ್ನು ಕಂಡುಕೊಳ್ಳುವ ಬಗೆ ಅದು. ಹಾಗೆಯೇ ಕಾಡೆಮ್ಮೆ ದಾಳಿಯಿಂದ ಕೈಕಾಲು ಮುರಿದ ಸ್ಥಿತಿಯಲ್ಲಿ ಸುಮಾರು ಐದು ದಿನ ಕಾಡು ಕುರಿಗಳು ವಾಸಿಸುವ ಮರದ ಪೊಟರೆಯಲ್ಲಿ ಕಳೆದು, ಬದುಕುಳಿಯುವ ಭೂಲೋಕ ಶೆಟ್ಟಿಯ ಕಥೆ ರೋಚಕವಾಗಿದೆ.

ಆದರೆ, ಹಲವು ಅಧ್ಯಾಯಗಳಲ್ಲಿ ಲೇಖಕರು ಯಾವ ಜೀವನದೃಷ್ಟಿಯನ್ನು ಕಾಡಿನ ಹೊರಗಿನ ’ನಾಗರಿಕ’ ಜನಕ್ಕೆ ಹೋಲಿಸಿದಾಗ ಉತ್ಕೃಷ್ಟವಾದದ್ದು ಎಂದು ಕಟ್ಟಿಕೊಡುತ್ತಾರೋ, ಅದು, ಕೊನೆಯಲ್ಲಿರುವ ಸ್ವಾಮಿ ನಿರ್ಮಲಾನಂದ ಅವರ ಬಗೆಗಿನ ಅಧ್ಯಾಯದಲ್ಲಿ ಕೆಡವಿದ್ದಾರೆ ಎಂಬಂತೆ ಓದುಗನಿಗೆ ಭಾಸವಾಗುತ್ತದೆ. ಸ್ವಾಮಿಗಳು ಸರಳ ಜೀವನ ನಡೆಸುವವರು ಹೌದಾದರೂ, ಕಾಡಿನ ಮಧ್ಯ ತಮ್ಮ ಸ್ವ-ಅಭ್ಯುದಯಕ್ಕಾಗಿ ಆಶ್ರಮ ಕಟ್ಟಿಕೊಂಡು ಬಹುತೇಕ ಸಾಮಾನ್ಯ ಮನುಷ್ಯರ ರಾಗದ್ವೇಷಗಳ ಜೊತೆಗೇ ಬದುಕುವುದು ಸೋಲಿಗರ ಜೀವನ ದೃಷ್ಟಿಗೆ ಎಷ್ಟು ತದ್ವಿರುದ್ಧ ಅಲ್ಲವೇ? ಆದರೆ ಲೇಖಕರಿಗೆ ಇವರನ್ನು ಕಂಡರೆ ಒಂದು ರೀತಿಯ ಪೂಜ್ಯ ಭಾವನೆ.

ಸ್ವಾಮಿಗಳ ಬಗೆಗೆ ವರ್ಣಿಸುವ ಸಂಗತಿಗಳು ಕೂಡ ಯಾವುವೂ ಸಾಮುದಾಯಿಕ ದೃಷ್ಟಿಕೋನ ಹೊಂದಿರುವಂಥವಲ್ಲ. ತಾವು ಉರಿಸುವ ಸೀಮೆಎಣ್ಣೆ ಕಲುಷಿತ ಎಂದು ಮಂತ್ರಿಯೊಬ್ಬನಿಗೆ ಕಾಗದ ಬರೆದು ಹೊಸ ಸೀಮೆಎಣ್ಣೆಯ ಸ್ಟಾಕ್ ತರಿಸಿಕೊಳ್ಳುವುದು – ರೈಲಿನಲ್ಲಿ ಯಾರೋ ಶಿಷ್ಯ ಕಳುಹಿಸಿದ್ದ ಒಣ ದ್ರಾಕ್ಷಿಯನ್ನು ನಡುವೆ ಯಾರೋ ತಿಂದು ಹಾಕಿರುವುದನ್ನು ತನಿಖೆ ನಡೆಸುವಂತೆ ರೈಲ್ವೇ ಇಲಾಖೆ ಮೇಲೆ ಒತ್ತಡ ಹಾಕುವುದು – ಜಿಂಕೆ ಮರಿಯನ್ನು ಆಶ್ರಮದಲ್ಲಿ ಸಾಕಿಕೊಂಡು ಅದರ ಜೊತೆಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುವುದು – ಇಂತಹ ಸಂಗತಿಗಳು ಕಾಡಿನಿಂದ ಅಥವಾ ಪರಿಸರದಿಂದ ದೂರ ಉಳಿದು ನಾಗರಿಕತೆ ಕಟ್ಟಿಕೊಂಡ ಮನುಷ್ಯನ ಜೀವನದೃಷ್ಟಿಯಷ್ಟೇ ಅಪಾಯಕಾರಿಯಾದವು ಮತ್ತು ಸೋಲಿಗರ ಕಾಡಿನ ಒಡನಾಟದ ದೃಷ್ಟಿಕೋನಕ್ಕೆ ವಿರುದ್ಧವಾದವು. ಆದರೆ ಲೇಖಕರು ಇಂತಹ ಸಂಗತಿಗಳ ಬಗ್ಗೆ ಬರೆಯುವಾಗ ಕಾಡಿನ ಹೊರಗಿನ ಸಾಮಾನ್ಯ ಜನರನ್ನು ಟೀಕಿಸುವ ರೀತಿಯಲ್ಲಿ ಅವನ್ನು ಟೀಕಿಸುವ ಗೋಜಿಗೆ ಹೋಗುವುದಿಲ್ಲ.

ಓದುಗರಿಗೆ ಗೊಂದಲದಂತೆ ಭಾಸವಾಗುವ ಕೆಲವು ಕಮೆಂಟ್‌ಗಳು ಅಲ್ಲಲ್ಲಿ ಪುಸ್ತಕದಲ್ಲಿ ವಿರಳವಾಗಿಯಾದರೂ ಕಾಣುತ್ತವೆ. ಮಂಜಿಗುಂಡಿ ಕೇತಮ್ಮ ಅಧ್ಯಾಯದಲ್ಲಿ, ಬಿಳಿಗಿರಿರಂಗಪ್ಪ ದೇವರಿಗೆ ಬಿಟ್ಟಿರುವ ಬಸವ ಕಾಣೆಯಾದಾಗ ಕೇತಮ್ಮ “ಇನ್ನೇನು ಸಾರ್, ಕೊಯ್ಯಾಕ್ಕೆ ಕೊಟ್ಟಿರ್‍ತಾರೆ ಪಾಪಿಗಳು” ಎಂದು ನೊಂದು ಹೇಳಿದಳು ಎನ್ನುವ ಲೇಖಕರು ’ಕೇತಮ್ಮನ ಗೋವು ಪ್ರೀತಿಗೆ ಯಾವುದೇ ಸಿದ್ಧಾಂತದ ಅಗತ್ಯವಿಲ್ಲ. ಇದೊಂದು ಸರಳವಾದ ಜೀವನ ಮೇಲಿನ ಪ್ರೀತಿ, ಸರಳವಾದ ನಂಬಿಕೆ’ ಎನ್ನುತ್ತಾರೆ. ಆದರೆ ಪಶುಸಂಗೋಪನೆ ಯಾವತ್ತೂ ಸೋಲಿಗರ ಜೀವನದ ಭಾಗವೇ ಆಗಿರಲಿಲ್ಲ ಎಂಬುದನ್ನೂ ಲೇಖಕರು ಬೇರೊಂದು ಅಧ್ಯಾಯದಲ್ಲಿ ಖಚಿತವಾಗಿ ದಾಖಲಿಸುತ್ತಾರೆ. ಇಂತಹ ಸಮಯದಲ್ಲಿ ಸೋಲಿಗರಿಗೆ ದನದ ಬಗ್ಗೆ ಪೂಜ್ಯಭಾವನೆ ಬಂದಿರುವುದು ಮುಗ್ಧತನ ಅಲ್ಲ ಅಲ್ಲವೇ? ಅದು ಮತ್ತ್ಯಾರದೋ ಬಹುಸಂಖ್ಯಾತರ ಧಾರ್ಮಿಕ ಭಾವನೆಯ ಯಜಮಾನಿಕೆಯ ರೂಪ ಅಲ್ಲವೇ? ಇದು ಲೇಖಕರಿಗೂ ಗೊಂದಲದ ವಿಷಯ ಇರಬಹುದು.

ಲೇಖಕರು ಯಾವುದೇ ಬಹುಸಂಖ್ಯಾತ ಧಾರ್ಮಿಕ ಭಾವನೆಗೆ ಜೋತು ಬೀಳುವವರಲ್ಲ ಅಥವಾ ಮತ್ತೊಬ್ಬರ ಮೇಲೆ ಹೇರುವವರಲ್ಲ ಎಂಬುದು ಹಲವು ಕಡೆ ಪುಸ್ತಕದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಬೆಟ್ಟಕ್ಕೊಬ್ಬ ಡಾಗುಟ್ರು ಅಧ್ಯಾಯದಲ್ಲಿ ತಿಗಿನಾರ ಗ್ರಾಮದಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ಕುಷ್ಠರೋಗ ಪೀಡಿತ ವ್ಯಕ್ತಿಗಳಿರುವ ಬಗ್ಗೆ ತಿಳಿಸಿ, ಕ್ರಿಶ್ಚಿಯನ್ ಮಿಶಿನರಿ ಆ ರೋಗಿಗಳನ್ನು ಶುಶ್ರೂಷೆ ಮಾಡುತ್ತಿರುವುದರ ಬಗೆಗೆ ಬರೆಯುತ್ತ “ಈ ಕ್ರಿಶ್ಚಿಯನ್ ಸೋದರಿಯರ ಮೇಲೆ ಅಪಾರ ಗೌರವ ಹುಟ್ಟಿತು. ’ತಿಗಿನಾರ’ ಎಂಬ ಈ ದುರವಸ್ಥೆಯ ಗ್ರಾಮದಲ್ಲಿ ಇವರು ಹಗಲೂ ಇರುಳೂ ದುಡಿಯುತ್ತಿದ್ದಾರಲ್ಲ, ಭೂತಕಾಲದ ಬಗ್ಗೆ ಹೆಮ್ಮೆಪಡುವ ನಮ್ಮ ಸನಾತನವಾದಿಗಳಿಗೆ ಈ ಗ್ರಾಮದ ದುರವಸ್ಥೆ ಏಕೆ ಕಣ್ಣಿಗೆ ಕಾಣಲಿಲ್ಲ? ಇದೇ ಮುಂತಾಗಿ ಅಲೋಚಿಸುತ್ತಾ ಮನೆಗೆ ಹಿಂತಿರುಗಿದೆ” ಎನ್ನುತ್ತಾರೆ. ಮತ್ತೊಂದು ಕಡೆ ಉತ್ತರ ಭಾರತದಿಂದ ರಕ್ತಚಂದನ ಮರಗಳ ಕೆಳಗೆ ತಪಸ್ಸು ಮಾಡಬೇಕು ಎಂದು ಬರುವ ಸಾಧುವೊಬ್ಬನ ತಿಕ್ಕಲುತನವನ್ನು ಕೂಡ ಬಹಳ ತಮಾಷೆಯಾಗಿ ವಿವರಿಸುತ್ತಾರೆ.

ಬಹುಶಃ ಸೋಲಿಗರ ಜೀವನದಲ್ಲಿ ಒಂದಾಗಿ ಬದುಕುವ ಹವಣೆ, ಆಧುನಿಕ ಶಿಕ್ಷಣ, ಸಮುದಾಯಕ್ಕೆ ಸಹಾಯ ಮಾಡುವ ಸಲುವಾಗಿ ಮಾಡುತ್ತಿರುವ ಕೆಲಸ, ಆಧುನಿಕ ಜಗತ್ತಿನ ಆಧ್ಯಾತ್ಮ ಇವೆಲ್ಲ ಸಂಘರ್ಷಗಳು ಲೇಖಕರನ್ನು ತಮ್ಮ ಈ ಬರಹದಲ್ಲಿಯೂ ಕಾಡಿವೆ ಎಂದೆನಿಸದೆ ಇರದು. ಸೋಲಿಗರಲ್ಲಿ ಶಿಕ್ಷಣ ಪಡೆದವರು ಹೇಗೆ ಸಮುದಾಯದ ಹಿತಚಿಂತನೆ ಮಾಡುತ್ತಿದ್ದಾರೆ ಎಂದು ಬಹಳ ಆತ್ಮೀಯವಾಗಿ ದಾಖಲಿಸುವ ಲೇಖಕರು, ಆದಿವಾಸಿ ಸಮಾವೇಶವೊಂದರಲ್ಲಿ ಲಂಬಾಣಿ ಹುಡುಗಿ ಅಜ್ಮೀರ ಬಾಬ್ಬಿ (ಬಬಿತಾ) ಅವರ ಸಾಧನೆ ಮತ್ತು ಕನಸುಗಳ ಬಗೆಗೆ ಬರೆಯುವಾಗ “ಈಕೆಯನ್ನು ನೋಡುತ್ತಿದ್ದಂತೆ ನನಗೆ ನಮ್ಮ ಎಂ.ಜಿರೋಡ್‌ಗಳಲ್ಲಿ ಬಳುಕುತ್ತ ಓಡಾಡುವ, ಸ್ವಲ್ಪವೂ ಅಂತಸ್ಸತ್ತ್ವವಿಲ್ಲದ ಸಿಟಿ ಹುಡುಗಿಯರು ನೆನಪಿಗೆ ಬಂದರು. ಬಬಿತಳೂ ಆಧುನಿಕ ಪೋಷಾಕಿನ ಬೆಡಗಿನ ಹುಡುಗಿಯಂತೆ ಕಾಣುತ್ತಿದ್ದಳು. ಆದರೆ ಬಡತನದಲ್ಲಿ ಹುಟ್ಟಿ ಬೆಳೆದಿದ್ದರಿಂದ ಬದುಕಿನ ಆಳವನ್ನು ಅಳೆದು ಸುರಿದು ನನ್ನವರು ತನ್ನವರು ಎಂಬ ಆತ್ಮೀಯತೆಯನ್ನು ಬೆಳೆಸಿಕೊಂಡಿದ್ದಾಳೆ ಅನ್ನಿಸಿತು” ಎನ್ನುತ್ತಾರೆ. ಬಬಿತಾಳ ಜೀವನ ದೃಷ್ಟಿಯನ್ನು ಹೊಗಳುವ ಭರದಲ್ಲಿ ಅಷ್ಟೇ ದಮನಿತರಾಗಿರಬಹುದಾದ ಎಂ.ಜಿ ರೋಡ್‌ನಲ್ಲಿ ನಡೆದಾಡುವ ಹುಡುಗಿಯರ ಮೇಲೆ ಮಾಡುವ ಈ ಕಮೆಂಟ್ ಅನವಶ್ಯಕ ಎನಿಸದೆ ಇರದು.

ಹಾಗೆಯೇ ’ಅಚ್ಚುಗೆಗೌಡನ ಕಾಡುಶುಂಠಿಪಾಠ’ ಅಧ್ಯಾಯದಲ್ಲಿ ಲಾಭದ ಕಲ್ಪನೆಯಿಲ್ಲದ ಅಚ್ಚುಗೆಗೌಡರನ್ನು ಹೋಲಿಸುವ ಭರದಲ್ಲಿ “ರೈತರ ಸಮಾವೇಶದಲ್ಲಿ ಎಲ್ಲರ ಎದುರಿಗೆ ವಿಷ ಕುಡಿಯುವ ನಾಟಕ ಮಾಡುತ್ತಾ ದುರಂತ ನಾಯಕರಾಗುವ ರೈತರು ನೆನಪಿಗೆ ಬಂತು” ಎಂದು ದಾಖಲಿಸುತ್ತಾರೆ ಲೇಖಕರು. ಇಂದಿನ ತೀವ್ರ ಅಸಮಾನ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಬಹುತೇಕ ರೈತರು ಕೂಡ ಶೋಷಿತರೇ. ಯಾವ ವ್ಯವಸ್ಥೆ ಬುಡಕಟ್ಟು ಸಮುದಾಯಗಳ ಪಾರಂಪರಿಕ ಜ್ಞಾನವನ್ನು ಅಲ್ಲಗಳೆದು ಕಾಡನ್ನು ದೋಚಿ ಕಾಡಿನ ಪಾರಂಪರಿಕ ನಿವಾಸಿಗಳಾದ ಬುಡಕಟ್ಟಿನವರನ್ನೇ ಒಕ್ಕಲೆಬ್ಬಿಸಲು ಹವಣಿಸುತ್ತಿದೆಯೋ ಅದೇ ವ್ಯವಸ್ಥೆ ಇಂದು ಕೃಷಿ ಮತ್ತು ರೈತರಿಗೆ ಕೂಡ ಮುಳುವಾಗಿದೆ. ಹೀಗಾಗಿ ರೈತರ ಹೋರಾಟವಾಗಲೀ ಅಥವಾ ಬುಡಕಟ್ಟು ಸಮುದಾಯಗಳ ಹೋರಾಟವಾಗಲೀ ಬೇರೆಬೇರೆಯಾದ್ದಲ್ಲ. ಇಂತಹ ಪ್ರಶ್ನೆಗಳ ಜೊತೆಗೆ ಮತ್ತೊಂದು ಮುಖ್ಯ ಪ್ರಶ್ನೆಯೂ ಮೂಡುತ್ತದೆ. ಇಂದು ಅರಣ್ಯಗಳಲ್ಲಿ ನಾಯಿಕೊಡೆಗಳಂತೆ ಏಳುತ್ತಿರುವ ರೆಸಾರ್ಟ್ ವ್ಯವಹಾರಗಳು ಕಾಡಿನ ಪರಿಸರಕ್ಕೆ ಮಾರಕವಾಗಿರುವುದನ್ನು ಹಲವೆಡೆ ದಾಖಲಾಗಿದೆ. ಸೋಲಿಗರ ಬದುಕು ಮತ್ತು ಕಾಡಿನ ಪರಿಸರಕ್ಕೆ ಹಾನಿ ಆಗುತ್ತಿರುವ ಹಲವು ವಿಚಾರಗಳನ್ನು ಲೇಖಕರು ಚರ್ಚಿಸುವಾಗ ಈ ರೆಸಾರ್ಟ್ ಉದ್ದಿಮೆಯ ಬಗ್ಗೆ ಪುಸ್ತಕದಲ್ಲಿ ಎಲ್ಲೂ ಉಲ್ಲೇಖ ಬರದೆ ಇರುವುದು ಸೋಜಿಗವೆನಿಸುತ್ತದೆ.

ಹೀಗೆ ವಿರಳವಾಗಿ ಅಲ್ಲಲ್ಲಿ ಕಂಡ, ಅನಗತ್ಯವಾಗಿದ್ದವೇನೋ ಅನ್ನಿಸುವ ಅಥವಾ ಗೊಂದಲಮಯ ವ್ಯವಸ್ಥೆಯಲ್ಲಿ ಯಾರಿಗಾದರೂ ಕಾಡುವ ಸಮಸ್ಯೆಗಳು ಇವು ಎಂದೆನಿಸುವ ಕೆಲವೇ ಕೆಲವು ಭಾಗಗಳನ್ನು ಹೊರತುಪಡಿಸಿ, ಬಹುತ್ವವನ್ನು, ಜೀವ ವೈವಿಧ್ಯವನ್ನು, ಪರಿಸರದ ಜೊತೆಗಿನ ಮಾನವನ ಸಾವಯವ ಸಂಬಂಧವನ್ನು ಉತ್ತೇಜಿಸುವ, ಆಧುನಿಕತೆಯ ಅಸಮಾನ ಅರ್ಥ ವ್ಯವಸ್ಥೆಯ ವಿಕಾರಗಳು ಸೃಷ್ಟಿಸುವ ಸಮಸ್ಯೆಗಳಿಗೆ ಬುಡಕಟ್ಟಿನ ಪಾರಂಪರಿಕ ತಿಳಿವಳಿಕೆ ಏನಾದರೂ ಪರಿಹಾರ ಸೂಚಿಸಬಲ್ಲದೇ ಎಂಬುದನ್ನು ಅನ್ವೇಷಿಸುವ ಜಾಡಿನಲ್ಲಿ ಸೃಜನಶೀಲವಾಗಿ ಮೂಡಿರುವ ವ್ಯಕ್ತಿಚಿತ್ರ ಮಾದರಿಯ ಈ ಕೃತಿ ಕನ್ನಡ ಸಾಹಿತ್ಯ ಲೋಕಕ್ಕೆ ಅಪೂರ್ವವಾದ ಕೊಡುಗೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಬಿಳಿಮಲೆಯವರ ’ಕಾಗೆ ಮುಟ್ಟಿದ ನೀರು’ ಮೌಢ್ಯ ಕಾನನಕೆ ಬೆಂಕಿ ಹಚ್ಚಿ …

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...