ಗಣರಾಜ್ಯೋತ್ಸವದಂದು ಹಿಂಸಾಚಾರಕ್ಕೆ ಕಾರಣವಾದ ಪ್ರತಿಭಟನಾಕಾರರನ್ನು ಪ್ರಚೋದಿಸಿದ್ದಕ್ಕಾಗಿ ದೂಷಿಸಲ್ಪಟ್ಟ ಲಖಾ ಸಿಧಾನಾ, ಸ್ವತಃ ತಾನೇ ಹೇಳಿಕೊಳ್ಳುವಂತೆ, ತಾನು ರಾಷ್ಟ್ರ ರಾಜಧಾನಿಯ ರಿಂಗ್ ರಸ್ತೆಯವರೆಗೆ ಮಾತ್ರ ಮೆರವಣಿಗೆ ನಡೆಸಿದ್ದೇನೆ ಮತ್ತು ಕೆಂಪು ಕೋಟೆಯ ಕಡೆಗೆ ಹೋಗುವ ಯಾವುದೇ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಮಜಾಯಿಷಿ ನೀಡಿದ್ದಾನೆ.
ಪಂಜಾಬ್ನ ಬತಿಂಡಾದ ಸಿಖಾನಾ ಗ್ರಾಮದ ಲಖ್ಬೀರ್ ಸಿಂಗ್ ಸಿಧಾನಾ ಅಲಿಯಾಸ್ ಲಖಾ ಸಿಧಾನಾ, “ರೈತರ ಆಂದೋಲನದ ವಿರುದ್ಧ ಸರ್ಕಾರ ಮತ್ತು ಪೊಲೀಸರು ಸಂಚು ಹೂಡಿದ್ದಾರೆ ಎಂದು ಆರೋಪಿಸುತ್ತಾ, ತಾನು ಯಾವಾಗಲೂ ಶಾಂತಿಗಾಗಿ ಕರೆ ನೀಡುತ್ತ ಬಂದಿದ್ದೇನೆ” ಎಂದು ತನ್ನನ್ನು ಸಮರ್ಥಿಸಿಕೊಂಡಿದ್ದಾನೆ.
ಮೊದಲಿಗೆ ಗ್ಯಾಂಗ್ಸ್ಟರ್ ಆಗಿದ್ದ ಈತ ಈಗ ಸಮಾಜಸೇವೆ ಮಾಡುತ್ತಿದ್ದಾನಂತೆ.
“ಮಂಗಳವಾರ ನಡೆದ ಘಟನೆಗಳ ಬಗ್ಗೆ ನನಗೆ ನೋವು ಇದೆ. ಆದರೆ ನಾನು ಇವುಗಳಲ್ಲಿ ಭಾಗಿಯಾಗಿಲ್ಲ. ನಾನು ಜನರನ್ನು ಪ್ರಚೋದಿಸಿದ್ದೇನೆ ಎಂದು ತೋರಿಸುವ ಯಾವುದೇ ವೀಡಿಯೊ, ಫೋಟೋ ಅಥವಾ ಇತರ ಪುರಾವೆಗಳಿಲ್ಲ. ನಮ್ಮ ರೈತ ಮುಖಂಡರನ್ನು ಅನುಸರಿಸಿ ನಾವು ರಿಂಗ್ ರಸ್ತೆಯ ಕಡೆಗೆ ಶಾಂತಿಯುತವಾಗಿ ಸಾಗಿದ್ದೆವು. ಕೆಂಪು ಕೋಟೆಯ ಕಡೆಗೆ ಹೋಗುವ ಯಾವುದೇ ಕಾರ್ಯಸೂಚಿಯನ್ನು ನಾವು ಎಂದಿಗೂ ಹೊಂದಿರಲಿಲ್ಲ ಎಂದು 40 ವರ್ಷದ ಸಿಧಾನಾ ಹೇಳಿದ್ದಾನೆ.
ಇದನ್ನೂ ಓದಿ: ಲಾಕ್ಡೌನ್ ಸಮಯದಲ್ಲಿ ಅಂಬಾನಿ 1 ಗಂಟೆಯಲ್ಲಿ ಗಳಿಸಿದ ಆದಾಯವನ್ನು ಸಾಮಾನ್ಯ ವ್ಯಕ್ತಿ ಗಳಿಸಲು ಎಷ್ಟು ವರ್ಷ ಬೇಕು ಗೊತ್ತೇ?
ನವೆಂಬರ್ 26 ರಿಂದ ಸಿಂಘು ಗಡಿಯಲ್ಲಿ ಟಿಕಾಣಿ ಹಾಕಿರುವ ಸಿಧಾನಾ, ಸೋಮವಾರ ಜ.25 ರ ರಾತ್ರಿ ಸಿಂಘು ಗಡಿಯಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪ ಹೊತ್ತಿರುವ ನಟ ದೀಪ್ ಸಿಧು ಜೊತೆಗೆ ವೇದಿಕೆಯನ್ನು ಹಂಚಿಕೊಂಡಿರುವ ಆರೋಪವನ್ನು ನಿರಾಕರಿಸಿದ್ದಾನೆ. ರಿಂಗ್ ರಸ್ತೆಯಲ್ಲಿ ಮೆರವಣಿಗೆ ನಡೆಸಲು ಬಯಸುತ್ತಿದ್ದ ಜನರನ್ನು ನಾನು ಸಮಾಧಾನ ಮಾಡುತ್ತಿದ್ದೆ ಅಷ್ಟೇ ಎಂದು ಹೇಳಿದ್ದಾನೆ.
ಸುಮಾರು 20 ರೈತ ಮುಖಂಡರು ತಮ್ಮ ಕಾರ್ಯಕರ್ತರೊಂದಿಗೆ ರಿಂಗ್ ರೋಡ್ವರೆಗೆ ಶಾಂತಿಯುತವಾಗಿ ತೆರಳಿದರು ಮತ್ತು ತಕ್ಷಣವೇ ಹಿಂದಿರುಗಿದರು ಎಂದು ಸಿಧಾನಾ ಹೇಳಿದ್ದಾನೆ.
ಹಳ್ಳಿಗಳಲ್ಲಿ ಸಮಾಜ ಸೇವೆಯ ಕಾರ್ಯಗಳನ್ನು ಮಾಡುವುದಾಗಿ ಹೇಳಿಕೊಳ್ಳುವ ಮಾಲ್ವಾ ಯೂತ್ ಫೆಡರೇಶನ್ ಮುಖ್ಯಸ್ಥರಾಗಿರುವ ಸಿಧಾನಾ ವಿರುದ್ಧ ಪಂಜಾಬ್ನಲ್ಲಿ 25 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಕೊಲೆ, ಕೊಲೆ ಯತ್ನ, ಅಪಹರಣ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿಯ ಪ್ರಕರಣಗಳು ಸೇರಿವೆ. ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದಿಂದ ಮಾನವಿಕ ವಿಭಾಗದಲ್ಲಿ ಪದವಿ ಪಡೆದಿರುವ ಈತ, ಸಾಮಾಜಿಕ ಕಾರ್ಯಗಳಿಗಾಗಿ ಅಪರಾಧ ಜಗತ್ತನ್ನು ತೊರೆದಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಇದನ್ನೂ ಓದಿ: ಕೆಂಪು ಕೋಟೆಯಲ್ಲಿ ಅಹಿತಕರ ಘಟನೆ: ದೀಪ್ ಸಿಧು ವಾರ ಮೊದಲೇ ತಯಾರಿ ನಡೆಸಿದ್ದನೆ?
2011 ರಲ್ಲಿ ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್ಗೆ ಸೇರಿ, 2013 ರಲ್ಲಿ ತ್ಯಜಿಸಿದ್ದ. ಅಂದಿನಿಂದ, ಮಾಲ್ವಾ ಪ್ರದೇಶದಲ್ಲಿ ಸಿಧಾನಾ ಜನಪ್ರಿಯತೆ ಗಳಿಸಿದ. ದುರ್ಬಲ ವರ್ಗದ ಹಲವಾರು ಯುವತಿಯರ ಮದುವೆಗೆ ಸಹಾಯ ಮಾಡಿ, ಬಡ ಕುಟುಂಬಗಳಿಗೆ ಹಣ ಮತ್ತು ಇತರ ರೀತಿಯ ಸಹಾಯ ಮಾಡಿ, ಮುನ್ನೆಲೆಗೆ ಬಂದ.
ರಸ್ತೆ ಫಲಕಗಳ ಮೇಲಿನ ಇಂಗ್ಲಿಷ್ ಸಂಕೇತಗಳನ್ನು ಪಂಜಾಬಿಯಲ್ಲಿ ಬರೆಯಬೇಕೆಂದು ಒತ್ತಾಯಿಸಿ 2017 ರ ಅಕ್ಟೋಬರ್ನಲ್ಲಿ ನಡೆಸಿದ ಪ್ರತಿಭಟನೆಯೊಂದರ ಮೂಲಕ ಸುದ್ದಿಯಾಗಿದ್ದ. ಅಲ್ಲಿ ಗಲಾಟೆ ಸಂಭವಿಸಿದಾಗ ಆತನನ್ನು ಬಂಧಿಸಿ ಫರೀದ್ಕೋಟ್ ಮಾಡರ್ನ್ ಜೈಲಿಗೆ ಕಳುಹಿಸಲಾಗಿತ್ತು. ಅಲ್ಲಿ ಭತ್ತದ ತ್ಯಾಜ್ಯವನ್ನು ಸುಡಬಾರದೆಂದು ರೈತರಿಗೆ ಫೇಸ್ಬುಕ್ ಮೂಲಕ ಸಲಹೆ ನೀಡಿದ್ದ! ನಂತರ ಆತನಿಂದ ಸೆಲ್ಫೋನ್ ಅನ್ನು ವಶಪಡಿಸಿಕೊಂಡು, ಮೋಸ ಪ್ರಕರಣದಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಮೇ 2019 ರಲ್ಲಿ, ಬಾದಲ್ ಗ್ರಾಮದಲ್ಲಿ ಪ್ರತಿಭಟನಾ ರ್ಯಾಲಿ ನಡೆಸುವಾಗ ಕೊಲೆ ಯತ್ನದ ಪ್ರಕರಣದಲ್ಲಿ ಆತ ಮತ್ತು ಇತರ 60 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈಗ ಈತ ತಾನು ಶಾಂತಿಪ್ರಿಯ, ದೀಪ್ ಸಿಧು ಜೊತೆ ಭಾಗಿಯಾಗಿಲ್ಲ ಎನ್ನುತ್ತಿದ್ದಾನೆ. ಆದರೆ, ಈ ಶಾಂತಿಪ್ರಿಯ ಮಹಾಶಯ, ನಿಗದಿತ ಮಾರ್ಗ ಬಿಟ್ಟು ರಿಂಗ್ರೋಡ್ ಮಾರ್ಗದತ್ತ ಹೋಗಿದ್ದೇಕೆ ಎಂಬ ಪ್ರಶ್ನೆಯನ್ನು ಕೇಳಬೇಕಾದ ಪೊಲೀಸರು ಸುಮ್ಮನೇ ಇದ್ದಾರೆ ಮತ್ತು ಇರುತ್ತಾರೆ. ಬಹುಷ: ಸಂಚಿನ ಯೋಜನೆಯಲ್ಲಿ ಈತನಿಗೂ ಪ್ರಮುಖ ಪಾತ್ರ ನೀಡಲಾಗಿತ್ತು ಅಲ್ಲವೆ?
ಇದನ್ನೂ ಓದಿ: ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದದ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿ: ಉದ್ಧವ್ ಠಾಕ್ರೆ


