ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದದ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ಒತ್ತಾಯಿಸಿದ್ದು, ಈ ಗಡಿ ವಿವಾದವನ್ನು ಗೆಲ್ಲುವವರೆಗೆ ವಿಶ್ರಮಿಸುವುದಿಲ್ಲ ಎಂದೂ ಘೋಷಿಸಿದ್ದಾರೆ.
ಎರಡು ರಾಜ್ಯಗಳ ನಡುವಿನ ಗಡಿ ವಿವಾದದ ಕುರಿತ ದೀಪಕ್ ಪವಾರ್ ಸಂಪಾದಕತ್ವದ ‘ಮಹಾರಾಷ್ಟ್ರ-ಕರ್ನಾಟಕ ಸೀಮಾವಾದ: ಸಂಘರ್ಷ ಆನಿ ಸಂಕಲ್ಪ’ ಎಂಬ 530 ಪುಟಗಳ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಠಾಕ್ರೆ, “ಕರ್ನಾಟಕದಲ್ಲಿ ಮರಾಠಿ ಭಾಷಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ಪ್ರದೇಶಗಳನ್ನು ಮಹಾರಾಷ್ಟ್ರದಲ್ಲಿ ಸೇರಿಸಲು ಹೋರಾಟದ ಅಗತ್ಯವಿದೆ. ಗಡಿ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್ನಿಂದ ಅಂತಿಮ ತೀರ್ಪು ಬರುವವರೆಗೂ ಮರಾಠಿ ಭಾಷಿಗರು ಹೆಚ್ಚಿರುವ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಸುಪ್ರೀಂಕೋರ್ಟ್ನಲ್ಲಿ ಗಡಿ ವಿವಾದದ ಇತ್ಯರ್ಥ ಬಾಕಿ ಇರುವಂತೆಯೇ ಕರ್ನಾಟಕವು ಬೆಳಗಾಂವ್ನ ಹೆಸರು ಬದಲಿಸಿ ಅದನ್ನು ದ್ವಿತೀಯ ರಾಜಧಾನಿ ಎಂದು ಘೋಷಿಸಿದೆ. ಅಲ್ಲಿ ವಿಧಾನಸಭೆ ಕಟ್ಟಡ ನಿರ್ಮಿಸಿ ಒಂದು ಅಧಿವೇಶನವನ್ನೂ ನಡೆಸಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಸ್ವಾರ್ಥ ರಾಜಕೀಯ ಹಿತಾಸಕ್ತಿಯ ಕಾರಣಕ್ಕಾಗಿ ಮರಾಠಿ ಹೋರಾಟವನ್ನು ದುರ್ಬಲಗೊಳಿಸುತ್ತಿದೆ” ಎಂದು ಆರೋಪಿಸಿದರು.
ಇದನ್ನೂ ಓದಿ: ರೈತ ಚಳುವಳಿಯನ್ನು ಕೆಣಕುವ ಸಂಚು ಈಗ ಬಹಿರಂಗವಾಗಿದೆ – ರೈತ ಒಕ್ಕೂಟ
“ಈ ಹಿಂದೆ ಎಂಇಎಸ್ನ ಕನಿಷ್ಠ 6 ಶಾಸಕರಿದ್ದರು. ಬೆಳಗಾವಿಯ ಮೇಯರ್ ಕೂಡಾ ಮರಾಠಿ ಭಾಷಿಗರೇ ಆಗಿದ್ದರು. ಎಂಇಎಸ್ ಅನ್ನು ದುರ್ಬಲಗೊಳಿಸಲು ಶಿವಸೇನೆ ಬಯಸದ ಕಾರಣ ನಾವು ಬೆಳಗಾವಿಯಲ್ಲಿ ರಾಜಕೀಯ ಕಣಕ್ಕೆ ಇಳಿದಿಲ್ಲ. ಈಗ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಮಹಾ ವಿಕಾಸ ಅಘಾಡಿ ಮೈತ್ರಿಕೂಟದ ಅವಧಿಯಲ್ಲಿ ಗಡಿ ವಿವಾದ ಬಗೆಹರಿಯದಿದ್ದರೆ ವಿವಾದ ಮುಂದೆಂದೂ ಇತ್ಯರ್ಥವಾಗದು. ಕರ್ನಾಟಕದಲ್ಲಿ ಯಾವುದೇ ಪಕ್ಷದ ಸರಕಾರವಿರಲಿ, ಅವರ ಉದ್ದೇಶ ಒಂದೇ, ಮರಾಠಿ ಭಾಷಿಕರ ಮತ್ತು ಭಾಷೆಯ ವಿರುದ್ಧ ದೌರ್ಜನ್ಯ ನಡೆಸುವುದು. ಆದ್ದರಿಂದ ಮರಾಠಿ ಜನತೆ ಕೂಡಾ ಒಗ್ಗೂಡಬೇಕು” ಎಂದು ಕರೆ ನೀಡಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೋಳಿ, “ಜನರನ್ನು ಕೆರಳಿಸುವುದು ಮತ್ತು ದಾರಿ ತಪ್ಪಿಸುವುದು ಶಿವಸೇನೆಯ ಕಾರ್ಯಸೂಚಿಯಾಗಿದೆ” ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ‘ನನಗೆ ಕುರ್ಚಿ ಬೇಡ, ನನ್ನ ದೇಶದ ರೈತನಿಗೆ ಸಂತೋಷ ಬೇಕು’ – ಮತ್ತೋರ್ವ ಶಾಸಕ…