Homeಮುಖಪುಟಅಮೆರಿಕನ್ ಕುಕೇಶಿಯನ್ (ಶ್ವೇತವರ್ಣಿಯ)ರ ನಿಜಮುಖ ಬಯಲಿಗಿಡುವ ಸಿನಿಮಾ 'ಗೆಟ್ ಔಟ್'!

ಅಮೆರಿಕನ್ ಕುಕೇಶಿಯನ್ (ಶ್ವೇತವರ್ಣಿಯ)ರ ನಿಜಮುಖ ಬಯಲಿಗಿಡುವ ಸಿನಿಮಾ ‘ಗೆಟ್ ಔಟ್’!

2017ರ ಫೆಬ್ರವರಿಯಲ್ಲಿ ಅಮೆರಿಕಾದಲ್ಲಿ ತೆರೆಕಂಡ ಈ ಸಿನೆಮಾ ಅತ್ಯುತ್ತಮ ಚಿತ್ರಕಥೆಗಾಗಿ ಆಸ್ಕರ್ ಪುರಸ್ಕಾರವನ್ನೂ ಪಡೆದಿರುವುದು ಗಮನಾರ್ಹ

- Advertisement -
- Advertisement -

ಅಮೆರಿಕಾ ಸಮಾಜದೊಳಗೊಂದು ಪಾತಾಳಗರುಡಿ ಬಿಟ್ಟು ಸಮಾಜೋ-ರಾಜಕೀಯ ದೃಷ್ಟಿಕೋನದಿಂದ ನೋಡುತ್ತಾ ಆಲ್ಲಿನ ಸಂಗತಿಗಳನ್ನು ಅತ್ಯುತ್ತಮ ರೀತಿಯಲ್ಲಿ ಸಿನೆಮ್ಯಾಟಿಕ್ ಪರಿಭಾಷೆಯಲ್ಲಿ ಕಟ್ಟಿಕೊಟ್ಟಿರುವ “ಗೆಟೌಟ್” ನಾನಾ ಕಾರಣಗಳಿಂದ ಈ ಕಾಲಘಟ್ಟದ ಬಹುಮುಖ್ಯವಾದ ಸಿನೆಮಾ. ಇದರ ಬಗ್ಗೆ ಅಲ್ಲಿ ತೀವ್ರವಾದ ಚರ್ಚೆಗಳಾಗುತ್ತಿವೆ. ಇದರಿಂದಾಗಿ ಈ ಚಿತ್ರ ಅಲ್ಲಿ ಎಬ್ಬಿಸಿರುವ ಕಂಪನಗಳ ಮಹತ್ವದ ಅರಿವಾಗುತ್ತದೆ. ಇನ್ನೊಂದು ಮಹತ್ವದ ಸಂಗತಿಯೆಂದರೆ ಈ ಚಿತ್ರ ನೋಡಿದ ನಂತರ ಅಮೆರಿಕಾದ ಕರಿಯರು; ಹೀಗೆನ್ನುವ ಬದಲು ಅಮೆರಿಕಾದ ದಲಿತರು ಎನ್ನುವುದೇ ಹೆಚ್ಚು ಸೂಕ್ತ. ಇವರ ಮತ್ತು ಭಾರತದ ದಲಿತರ ಸಾಮಾಜಿಕ ಸ್ಥಿತಿಗತಿಗಳು ಒಂದೇ… ಇವರಿಬ್ಬರೂ ಸಮಾಜೋ –ರಾಜಕೀಯ ಸ್ಥಾನಮಾನಗಳಿಂದ ನಿಜವಾದ ಅರ್ಥದಲ್ಲಿ ವಂಚಿತರು ಎನಿಸುತ್ತದೆ.

ಇಂಥದ್ದೊಂದು ಥಿಯರಿಯನ್ನು ಹಾಲಿವುಡ್ ನಿರ್ದೇಶಕ ಜೋರ್ಡನ್ ಪಿಲೇ ಮುಂದಿಟ್ಟಿದ್ದಾರೆ ಎನಿಸುತ್ತದೆ. ಅವರ “ಗೆಟೌಟ್” ಸಿನೆಮಾ ಇಂಥದೊಂದು ಅಭಿಪ್ರಾಯವನ್ನು ಹುದುಗಿಸಿಕೊಂಡಿದೆ. ಇಂಥ ಥಿಯರಿ ಸುಮ್ಮನೆ ಮೂಡಿದ್ದಲ್ಲ. ಶತಶತಮಾನಗಳಿಂದಲೂ ಅಮೆರಿಕಾದಲ್ಲಿರುವ ಆಫ್ರಿಕನ್ –ಅಮೆರಿಕನ್ ಪ್ರಜೆಗಳು ತಾತ್ಸಾರ, ನಿಂದನೆ, ಅವಮಾನ, ಕಗ್ಗೊಲೆಗಳನ್ನು ಅನುಭವಿಸುತ್ತಲೇ ಬಂದಿದ್ದಾರೆ. ಅವರನ್ನು ಅವಮಾನಿಸುವ ಪ್ರಕರಣಗಳೂ ಇಂದಿಗೂ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಗೆಟೌಟ್ ಸಿನೆಮಾ ಮೂಡಿರುವಂತೆ ಕಾಣುತ್ತದೆ.

ಅಮೆರಿಕಾ ಸಿನೆ-ಟಿವಿರಂಗದಲ್ಲಿ ಜೋರ್ಡನ್ ಪಿಲೆಯದು ಖ್ಯಾತ ಹೆಸರು. ಹಲವು ಯಶಸ್ವಿ ಚಿತ್ರಗಳನ್ನು ಕೊಟ್ಟಿದ್ದಾರೆ. ಗೆಟೌಟ್ ಸಿನೆಮಾದ ವಿಶೇಷ ಸಂಗತಿಯೆಂದರೆ ನಿರ್ದೇಶಕರೇ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಅಂದಹಾಗೆ ಪಿಲೆ ಕೂಡ ಆಫ್ರಿಕನ್ ಅಮೆರಿಕನ್. ಇದು ಕೂಡ ಇಥದ್ದೊಂದು ಥಿಯರಿಗೆ ಮತ್ತಷ್ಟೂ ಬಲಕೊಟ್ಟಿದೆ.

ಅಮೆರಿಕಾದ ಕುಕೇಶಿಯನ್ (ಶ್ವೇತವರ್ಣಿಯರು) ಆಫ್ರಿಕಾದವರನ್ನು ಶತಶತಮಾನಗಳ ಕಾಲ ಗುಲಾಮರನ್ನಾಗಿ ನಡೆಸಿಕೊಂಡಿದೆ. ಇಂದು ಗುಲಾಮಗಿರಿ ಪದ್ಧತಿ ಅಳಿದಿದೆ. ಆದರೆ ಅದನ್ನು ಕುಕೇಶಿಯನ್ ಸಮಾಜ ಬೇರೊಂದು ರೀತಿಯಲ್ಲಿ ಮುಂದುವರಿಸಿಕೊಂಡು ಬರುತ್ತಿದೆ ಎಂಬ ವಾದವನ್ನು ಜೋರ್ಡನ್ ಪಿಲೆ ನಮ್ಮ ಮುಂದಿಡುತ್ತಾರೆ.

ತಮ್ಮ ವಾದವನ್ನು ಕಥಾರೂಪಕ್ಕೆ ತಂದಿರುವ ಪಿಲೆ ಅದಕ್ಕೆ ಸಶಕ್ತ ಚಿತ್ರಕಥೆ ಸ್ವರೂಪ ನೀಡಿದ್ದಾರೆ. ಇದು ಎಷ್ಟು ಪರಿಪಕ್ವವಾಗಿದೆ ಎಂದರೆ ಎಲ್ಲಿಯೂ ಗೋಜಲು – ಗೊಂದಲವಿಲ್ಲ. ಸಂಭಾಷಣೆ ಕೂಡ ಅಷ್ಟೆ ಸ್ಪಷ್ಟತೆ-ನಿಖರತೆ ಹೊಂದಿದೆ. ಇದನ್ನು ಪಿಲೆ ಮತ್ತು ಅವರ ಸಂಗಡಿಗ ತಂತ್ರಜ್ಞರು ತೆರೆ ಮುಂದೆ ಕಾಣಿಸಿರುವ ರೀತಿ ಅನನ್ಯ.

“ಗೆಟೌಟ್” ಸಾಮಾಜಿಕ-ರಾಜಕೀಯ ಕಥನ. ಕೊಂಚ ಹಳಿ ತಪ್ಪಿದ್ದರೂ ಇದೊಂದು ನಿರ್ದೇಶಕನ ಹಳಹಳಿಕೆಯ ದುರ್ಬಲ ಡಾಕ್ಯುಮೆಂಟರಿಯಾಗುವ ಸಾಧ್ಯತೆ ದಟ್ಟವಾಗಿತ್ತು. ಆದರೆ ಜೋರ್ಡನ್ ಪಿಲೆಯ ಪರಿಶ‍್ರಮ ಅದಕ್ಕೆ ಅವಕಾಶ ನೀಡಿಲ್ಲ. ಈ ಕಾರಣದಿಂದ ಸಿನೆಮಾದ ಎಲ್ಲ ದೃಷ್ಟಿಕೋನಗಳಲ್ಲಿಯೂ ಇದು ಅತ್ಯುತ್ತಮ.

ಗೆಟೌಟ್ ಹಂತಹಂತವಾಗಿ ಬೆಳೆಯುತ್ತಾ ಹೋಗುತ್ತದೆ. ಆಗರ್ಭ ಶ್ರೀಮಂತ ಕುಕೇಶಿಯನ್ ಮನೆತನದ ಯುವತಿ ರೋಸಿ ಆರ್ಮಿಟೆಜ್ ತನ್ನ ಆಫ್ರಿಕನ್ –ಅಮೆರಿನ್ ಬಾಯ್ ಫ್ರೆಂಡ್ ಕ್ರಿಸ್ ಜೊತೆ ತನ್ನ ಅರಮನೆಯಂಥ ಮನೆಗೆ ಅಡಿಯಿಡುತ್ತಾಳೆ. ಕಾಲಿಟ್ಟ ಗಳಿಗೆಯಿಂದಲೂ ಕ್ರಿಸ್ ಗೆ ನಾನಾರೀತಿಯ ಮಾನಸಿಕ ಯಾತನೆಗಳು ಶುರುವಾಗುತ್ತವೆ. ರೋಸಿ ಅಪ್ಪ ಡೀನ್ ಅರ್ಮಿಟೇಜ್ ನರರೋಗ ಶಾಸ್ತ್ರಜ್ಞ. ಅಮ್ಮ ಕ್ಯಾಥ್ರೆನ್ ಕೀನರ್ ಸಮ್ಮೋಹಿನಿ ತಜ್ಞೆ.

ಈ ಎರಡು ಪಾತ್ರಗಳು ಮಾಡುತ್ತಿರುವ ವೃತ್ತಿಗಳು ಕೂಡ ಸಾಂಕೇತಿಕ. ಡೀನ್ ಅರ್ಮಿಟೇಜ್ ತನ್ನ ಮನೆತನದ ಹೆಗ್ಗಳಿಕೆಗಳನ್ನು ಹೇಳಿಕೊಳ್ಳುತ್ತಾ ಹೋಗುತ್ತಾನೆ. ಪ್ರತಿಹಂತದಲ್ಲಿಯೂ ಆ ಎಲ್ಲ ಮಾತುಗಳು ಆತ ಆಫ್ರಿಕನ್ –ಅಮೆರಿಕನ್ ಸಮುದಾಯ (ಕರಿಯರು) ದವರ ಬಗ್ಗೆ ಹೊಂದಿರುವ ಹೇವರಿಕೆಗಳನ್ನು ವ್ಯಕ್ತ ಮಾಡುತ್ತಲೇ ಹೋಗುತ್ತವೆ. ಈತನ ಹೆಂಡತಿ, ಮಗ ಕೂಡ ಇದೇ ಸ್ವಭಾವದವರು: ಚಿತ್ರದ ಕೊನೆಕೊನೆ ಹಂತ ನಮ್ಮನ್ನು ಮತ್ತೊಂದು ಮಹಾನ್ ಶಾಕ್ ಗೆ ದೂಡುತ್ತದೆ. ಅದನ್ನು ನಾನಿಲ್ಲಿ ವಿವರಿಸಲು ಹೋಗುವುದಿಲ್ಲ.

ಗೆಟ್ ಔಟ್ ಚಿತ್ರದ ದೃಶ್ಯ

ಡೀನ್ ಅರ್ಮಿಟೇಜ್ ತಾನು ಲಿಬರಲ್ ಧೋರಣೆಯುಳ್ಳವನು, ಅಮೆರಿಕಾದ ಅಧ್ಯಕ್ಷಿಯ ಚುನಾವಣೆಯಲ್ಲಿ ಬರಾಕ್ ಒಬಾಮನನ್ನು ಬೆಂಬಲಿಸಿದೆ ಎನ್ನುತ್ತಾನೆ. ಮಾತುಗಳು ಪ್ರಗತಿಪರತೆಯ ಮುಖವಾಡ ಹೊಂದಿವೆ. ಆದರೆ ಆತನ ಅಂತರಂಗದಲ್ಲಿ ಜನಾಂಗೀಯ ದ್ವೇಷ ಮಡುಗಟ್ಟಿದೆ.

ಡೀನ್ ಅರ್ಮಿಟೇಜ್ ಮನೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಆಫ್ರಿಕನ್ –ಅಮೆರಿಕನ್ ಸಮುದಾಯದವರು. ಇವರ ವರ್ತನೆ, ಹಾವಭಾವ-ಸ್ವಭಾವ ಎಲ್ಲವೂ ಕೃತಕ ಎಂದು ಕ್ರಿಸ್ ಗೆ ಮೇಲಿಂದ ಮೇಲೆ ಅನಿಸತೊಡಗುತ್ತದೆ. ಈ ದೊಡ್ಡಮನೆಯ ಪಾರ್ಟಿಗೆ ಬಂದ ಕುಕೇಶಿಯನ್ ಸಮುದಾಯದವರಿಗೂ ಕೂಡ ಆಫ್ರಿಕನ್ –ಅಮೆರಿಕನ್ ಸಮುದಾಯದ ಬಗ್ಗೆ ಹೇವರಿಕೆ ನೋಟ. ಅಲ್ಲೊಬ್ಬ ಕಪ್ಪುವರ್ಣೀಯ ಯುವಕನ ಜೊತೆ ಆತನಿಗಿಂತ ವಯಸಿನಲ್ಲಿ ಸಾಕಷ್ಟು ಹಿರಿಯಳಾದ ಮಹಿಳೆ ಸಾಂಗತ್ಯ ಹೊಂದಿರುತ್ತಾಳೆ. ಅದ್ಹೇಕೆ ಎಂದು ಚಿತ್ರ ತನ್ನದೇ ಧಾಟಿಯಲ್ಲಿ ವಿವರಿಸುತ್ತದೆ.

ತನ್ನ ಗ್ರಹಿಕೆಗಳೆಲ್ಲವನ್ನೂ ಕ್ರಿಶ್ ತನ್ನ ಪೊಲೀಸ್ ಗೆಳೆಯನ ಜೊತೆ ಪೋನಿನಲ್ಲಿ ಹಂಚಿಕೊಳ್ಳುತ್ತಿರುತ್ತಾನೆ. ಅದು ಕೂಡ ಕೊನೆಯಲ್ಲಿ ಈತನ ನೆರವಿಗೆ ಬರುತ್ತದೆ. ಕ್ರಿಸ್ ಗೆ ಕುಕೇಶಿಯನ್ ರೋಸಿ ಮನೆತನದ ಎಲ್ಲರ  ಸ್ವಭಾವ ಆಷಾಢಭೂತಿತನದಿಂದ ಕೂಡಿದೆ, ಬೇಗನೆ ಇಲ್ಲಿಂದ ಪಾರಾಗಬೇಕು ಎಂದು ಮನದಟ್ಟಾಗುತ್ತದೆ. ಹೊರಡಲು ಅನುವಾಗುತ್ತಾನೆ. ಅಷ್ಟರಲ್ಲೆ ಆತನ ಕೊಲೆಯ ಪಿತೂರಿ ನಡೆಯುತ್ತದೆ. ಇದರಿಂದ ಕ್ರಿಸ್ ಹೇಗೆ ಪಾರಾದ ಎನ್ನುವುದನ್ನು ಸಿನೆಮಾ ನೋಡಿ ಅರಿಯುವುದೇ ಸೂಕ್ತ.

ಇಂದಿಗೂ ಅಮೆರಿಕಾದಲ್ಲಿ ಜನಾಂಗೀಯ ದ್ವೇಷ ನಿಂತಿಲ್ಲ. ಕುಕೇಶಿಯನ್ (ಶ್ವೇತವರ್ಣೀಯರು) ಆಫ್ರಿಕನ್ –ಅಮೆರಿಕನ್ಸ್ ವ್ಯಕ್ತಿಗಳನ್ನು ಕಗ್ಗೊಲೆ ಮಾಡಿದ ವರದಿಗಳು ಆಗಾಗ್ಗೆ ಬರುತ್ತಲೇ ಇವೆ. ಅಲ್ಲಿನ ಪೊಲೀಸ್ ಇಲಾಖೆಯ ಕುಕೇಶಿಯನ್ಸ್ ಗಳಲ್ಲಿಯೂ ಇಂಥ ಜನಾಂಗೀಯ ದ್ವೇಷವಿದೆ. ಕಪ್ಪುವರ್ಣೀಯರು, ಶ್ವೇತವರ್ಣೀಯ ಪೊಲೀಸ್ ಅಧಿಕಾರಿಗಳ ಗುಂಡೇಟಿಗೆ ವಿನಾಃಕಾರಣ ಬಲಿಯಾದ ಉದಾಹರಣೆಗಳು ಸಾಕಷ್ಟು.

ಇಂಥ ಉದಾಹರಣೆಗಳು ಕೂಡ “ಗೆಟೌಟ್” ಸಿನೆಮಾದ ಅಂತ್ಯ ಬದಲಾಗಲು ಕಾರಣವಾಗಿದೆ. ಈ ಮೊದಲು ಇದರ ಕ್ಲೈಮ್ಯಾಕ್ಸ್ ಬೇರೆಯದೇ ಆಗಿತ್ತು. ಯಾವಾಗ ಅಲ್ಲಿನ ಪೊಲೀಸರ ಎನ್ ಕೌಂಟರಿಗೆ ಕಪ್ಪುವರ್ಣೀಯರು ಬಲಿಯಾಗುವ ಪ್ರಕರಣಗಳು ಹೆಚ್ಚಾಯಿತೋ ಆಗ ನಿರ್ದೇಶಕ ಜೋರ್ಡನ್ ಪಿಲೆ ಮತ್ತು ತಂಡದವರು ಕ್ಲೈಮ್ಯಾಕ್ಸ್ ಗೆ ಬೇರೆಯದೇ ಸ್ವರೂಪ ನೀಡಲು ನಿರ್ಧರಿಸಿದರು.

ಕುಕೇಶಿಯನ್ ಸಮಾಜದಲ್ಲಿ ಮಡುಗಟ್ಟಿರುವ ಜನಾಂಗೀಯ ದ್ವೇಷ ಯಾವ ಆಯಾಮಗಳನ್ನು ತೆಗೆದುಕೊಂಡಿದೆ, ಅದು ಯಾವ ಸ್ವರೂಪದಲ್ಲಿ ಮುಂದುವರಿದಿದೆ ಎನ್ನುವುದನ್ನು ನಿರ್ದೇಶಕ ಜೋರ್ಡನ್ ಪಿಲೆ ಗ್ರಹಿಸಿ  ಮುಂದಿಟ್ಟಿರುವ ರೀತಿ ನಮ್ಮನ್ನು ಬೆಚ್ಚಿಬೀಳಿಸುತ್ತದೆ.

ಜೋರ್ಡನ್ ಪಿಲೆ

ಈ ಸಿನೆಮಾಕ್ಕೆ ಟೊನಿ ಲಿವರ್ ಕ್ಯಾಮೆರಾ ಹಿಡಿದಿದ್ದಾರೆ. ಅದು ಚಿತ್ರಕಥೆಯ ಸಶಕ್ತತೆಯನ್ನು ಮತ್ತಷ್ಟೂ ಹೆಚ್ಚಿಸಿದೆ. ಮೈಕೆಲ್ ಅಬ್ಲಸ್ ನೀಡಿರುವ ಸಂಗೀತಕ್ಕೂ ಇದೇ ಮಾತು ಸಲ್ಲುತ್ತದೆ. 2017ರ ಫೆಬ್ರವರಿಯಲ್ಲಿ ಅಮೆರಿಕಾದಲ್ಲಿ ತೆರೆಕಂಡ ಈ ಸಿನೆಮಾ ಅತ್ಯುತ್ತಮ ಚಿತ್ರಕಥೆಗಾಗಿ ಆಸ್ಕರ್ ಪುರಸ್ಕಾರವನ್ನೂ ಪಡೆದಿರುವುದು ಗಮನಾರ್ಹ.

ಅಭಿನಯದ ಬಗ್ಗೆ ಹೇಳುವುದಾದರೆ ಕ್ರಿಸ್ ಆಗಿರುವ ಡ್ಯಾನಿಯಲ್ ಅಭಿನಯ ಅನನ್ಯ. ಈತನ ಕಂಗಳೇ ಸಂಭಾಷಣೆಗಳನ್ನು ಹೇಳುತ್ತವೆ. ಕೆಲವೊಂದು ದೃಶ್ಯಗಳಲ್ಲಿ ಈತನ ಅಭಿನಯ ಅಬ್ಬಾ ಎಂಬ ಉದ್ಗಾರದೊಡನೆ ಮೆಚ್ಚುಗೆ ಪಡೆಯುತ್ತದೆ. ರೋಸ್ ಅರ್ಮಿಟೇಜ್ ಆಗಿರುವ ಆಲಿಸನ್ ವಿಲಿಯಮ್ಸ್, ಮಿಸ್ಸಿ ಅರ್ಮಿಟೇಜ್ ಆಗಿರುವ ಕ್ಯಾಥೆರಿನ್ ಕೀರ್ನರ್, ಡೀನ್ ಅರ್ಮಿಟೇಜ್ ಪಾತ್ರಧಾರಿ ಬ್ರಾಡ್ಲಿ, ಜಿಮ್ ಹಡ್ಸನ್ ಆಗಿ ಅಭಿನಯಿಸಿರುವ ಸ್ಟಿಫನ್ ರೂಟ್ ಅಭಿನಯ ಮನೋಜ್ಞ.

ಅಮೆರಿಕಾ ಸಮಾಜದೊಳಗೊಂದು ಪಾತಾಳಗರುಡಿ ಬಿಟ್ಟು ಸಮಾಜೋ-ರಾಜಕೀಯ ದೃಷ್ಟಿಕೋನದಿಂದ ನೋಡುತ್ತಾ ಆಲ್ಲಿನ ಸಂಗತಿಗಳನ್ನು ಅತ್ಯುತ್ತಮ ರೀತಿಯಲ್ಲಿ ಸಿನೆಮ್ಯಾಟಿಕ್ ಪರಿಭಾಷೆಯಲ್ಲಿ ಕಟ್ಟಿಕೊಟ್ಟಿರುವ “ಗೆಟೌಟ್” ನಾನಾ ಕಾರಣಗಳಿಂದ ಈ ಕಾಲಘಟ್ಟದ ಬಹುಮುಖ್ಯವಾದ ಸಿನೆಮಾ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...