ಮೇಲ್ಜಾತಿಯ ಯುವತಿಗೆ ಮೊಬೈಲ್ ಉಡುಗೊರೆ ನೀಡಿದ್ದಕ್ಕೆ ದಲಿತ ಯುವಕರ ತಲೆ ಬೊಳಿಸಿ, ಚಪ್ಪಲಿ ಹಾರ ಹಾಕಿ, ಎಂಜಲು ತಿನ್ನಿಸಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ನಡೆದಿದೆ. ಜಾತಿ ದೌರ್ಜನ್ಯಕ್ಕೆ ಒಳಗಾದ ಯುವಕನನ್ನು 20 ವರ್ಷ ವಯಸ್ಸಿನ ರಾಜಕುಮಾರ್ ಮೆಹ್ರಾ ಎಂದು ಗುರುತಿಸಲಾಗಿದೆ.
ರಾಜ್ಕುಮಾರ್ ಮೆಹ್ರಾ ಮೇಲ್ಜಾತಿಗೆ ಸೇರಿದ 19 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ. ಯುವತಿ ರಾಜ್ಕುಮಾರ್ ಮೆಹ್ರಾ ಬಳಿ ಸ್ಮಾರ್ಟ್ ಫೋನ್ ಕೊಡಿಸುವಂತೆ ಕೇಳಿದ್ದಾಳೆ. ಸಂತ್ರಸ್ತ ರಾಜ್ಕುಮಾರ್ ಮೊಬೈಲ್ ಫೋನ್ ಅನ್ನು ಉಡುಗೊರೆಯಾಗಿ ನೀಡಿದ್ದಕ್ಕೆ ಮೇಲ್ಜಾತಿ ಜನರು ದೌರ್ಜನ್ಯವೆಸಗಿದ್ದಾರೆ. ಘಟನೆಯಲ್ಲಿ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯೊಬ್ಬನನ್ನು ಆರೋಪಿಗಳು ಮನೆಯಲ್ಲಿ ಬಂಧಿಸಿಟ್ಟಿದ್ದಾರೆ.
ಮೇಲ್ಜಾತಿಯ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ದಲಿತ ಯುವಕ ರಾಜ್ಕುಮಾರ್ ಮೆಹ್ರಾ ಮತ್ತು ಆತನ ಸ್ನೇಹಿತರ ತಲೆ ಬೋಳಿಸಿ ಒಬ್ಬರ ಎಂಜಲು ಇನ್ನೊಬ್ಬರು ಸೇವಿಸುವಂತೆ ಮಾಡಿರುವ ಅಮಾನವೀಯ ದೌರ್ಜನ್ಯ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ನಡೆದಿದೆ. ಮೇಲ್ಜಾತಿಯ ಯುವಕರು ದಲಿತ ಯುವಕರಿಗೆ ಚಪ್ಪಲ್ಲಿಯ ಹಾರಹಾಕಿ ಹಳ್ಳಿಯಲ್ಲಿ ಮೆರವಣಿಗೆಯನ್ನು ಮಾಡುವ ಮೂಲಕ ಅಮಾನುಷ ದೌರ್ಜನ್ಯ ಎಸಗಿದ್ದಾರೆ.
ಘಟನೆ ಮೇ 22 ರಂದು ಜಬಲ್ಪುರ ಜಿಲ್ಲೆಯ ಚಾರ್ಗಾವ್ ಪೋಲಿಸ್ ಸ್ಟೇಷನ್ ವ್ಯಾಪ್ತಿಯ ದಮನ್ ಕಮರಿಯಾ ಹಳ್ಳಿಯಲ್ಲಿ ನಡೆದಿದೆ. ಅಮಾನವೀಯ ದೌರ್ಜನ್ಯದ ವಿಡಿಯೋ ಮೇ 30ರ ಭಾನುವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ವಿಡಿಯೋ ಆಧಾರದಲ್ಲಿ ಪೊಲೀಸರು ದೌರ್ಜನ್ಯಕ್ಕೊಳಗಾದ ವ್ಯಕ್ತಿಯನ್ನು ಪತ್ತೆಹಚ್ಚಿದ್ದಾರೆ. ಆರೋಪಿಗಳು ದೂರು ನೀಡಿದರೆ ಗಂಭೀರ ಪರಿಣಾಮ ಎದುರಿಸುವ ಬೆದರಿಕೆ ಹಾಕಿದ್ದರಿಂದ ತಾನು ಪೊಲೀಸರಿಗೆ ಘಟನೆ ಕುರಿತು ಮಾಹಿತಿ ನೀಡಲಿಲ್ಲ ಎಂದು ಸಂತ್ರಸ್ತ ಯುವಕ ರಾಜ್ಕುಮಾರ್ ಮೆಹ್ರಾ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ರಾಜ್ಕುಮಾರ್ ಹೇಳಿಕೆ ಆಧಾರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಾವಿಬ್ಬರೂ ಮಾತನಾಡುವುದಕ್ಕಾಗಿ ನನ್ನ ಸ್ನೇಹಿತೆ ಮೊಬೈಲ್ ಕೇಳಿದಳು. ನಾನು ಸ್ನೇಹಿತ ಮಹೇಂದ್ರನಿಂದ ಪೋನ್ ಪಡೆದು ನನ್ನ ಗೆಳತಿಗೆ ನೀಡಿದೆ. ಮೇ 22 ರಂದು ಯುವತಿಯ ತಂದೆ ತನ್ನ ಮಗಳು ಮೊಬೈಲ್ ಸಂಭಾಷಣೆಯಲ್ಲಿ ನಿರತವಾಗಿರುವುದನ್ನು ಕಂಡು ಕೆಂಡಾಮಂಡಲರಾಗಿದ್ದಾರೆ. ಈ ಕುರಿತು ಯುವತಿಯನ್ನು ವಿಚಾರಿಸಿದಾಗ ರಾಜ್ಕುಮಾರ್ ಮೆಹ್ರಾ ವಿಚಾರ ಅವರಿಗೆ ತಿಳಿದಿದೆ.
ಮೊಬೈಲ್ ಘಟನೆಯಿಂದ ಕೋಪಗೊಂಡ ಯುವತಿಯ ತಂದೆ ದಲಿತ ಯುವಕರನ್ನು ಮನೆಗೆ ಕರೆಸಿ ಮನಸೋ ಇಚ್ಚೆ ಥಳಿಸಿದ್ದಾರೆ. ನಂತರ ಯುವಕರ ತಲೆ ಬೋಳಿಸಿ ಚಪ್ಪಲ್ಲಿ ಹಾರ ಹಾಕಿ ಊರಿನಲ್ಲಿ ಮೆರವಣಿಗೆ ಮಾಡಿದ್ದಾರೆ. ಒಬ್ಬರ ಕಫವನ್ನು ಇನ್ನೊಬ್ಬರಿಗೆ ತಿನ್ನಿಸಿ ಅಮಾನವೀಯವಾದ ದೌರ್ಜನ್ಯವನ್ನು ನಡೆಸಿದ್ದಾರೆ.
ಯುವತಿಯ ತಂದೆ ದಲಿತ ಯುವಕನ ಕುಟುಂಬಕ್ಕೆ ಘಟನೆ ಕುರಿತು ಪೊಲೀಸರಿಗೆ ದೂರು ನೀಡದಂತೆ ಬೆದರಿಕೆಯನ್ನು ಸಹ ಹಾಕಿದ್ದಾನೆ.
ಅಮಾನವೀಯ ಘಟನೆ ಸಂಬಂಧ ಯುವತಿಯ ತಂದೆ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿರುವುದಾಗಿ ಚಾರ್ಗಾವ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರಿತೇಶ್ ಪಾಂಡೆ ತಿಳಿಸಿದ್ದಾರೆ.
ಇದನ್ನೂ ಓದಿ: ದಲಿತರ ಮೇಲಿನ ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರಗಳನ್ನು ತಡೆಗಟ್ಟಿ: ರಾಜ್ಯಾದ್ಯಂತ ಹಕ್ಕೊತ್ತಾಯ ಸಲ್ಲಿಕೆ