ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವ ರೈತರು ವಿವಾದಾತ್ಮಕ ಕಾನೂನುಗಳನ್ನು ಬೆಂಬಲಿಸುವ ವಾದಗಳನ್ನು ಆಲಿಸುವ ಮನಸ್ಥಿತಿಯಲ್ಲಿಲ್ಲ. ಈಗ ಈ ರೈತರನ್ನು “ದಾರಿ ತಪ್ಪಿಸಬೇಕು’ ಅಷ್ಟೇ. ದಯವಿಟ್ಟು ಈ ಕುರಿತು ಐಡಿಯಾ ಕೊಡಿ’ ಎಂದು ಹರಿಯಾಣ ಬಿಜೆಪಿ ಕಾರ್ಯಕರ್ತರು ಸೋಮವಾರ ಹಿರಿಯ ಮುಖಂಡರಿಗೆ ಆಗ್ರಹಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಕಾಂಗ್ರೆಸ್ ನಾಯಕ ರಣದೀಪ್ಸಿಂಗ್ ಸುರ್ಜೆವಾಲಾ ಇದನ್ನು ಟ್ವೀಟ್ ಮಾಡಿ ಬಿಜೆಪಿಯ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.
ರೈತರ ಪ್ರತಿಭಟನಾ ವಿಷಯದ ಕುರಿತಂತೆ ಹರಿಯಾಣ ಬಿಜೆಪಿ ಪಕ್ಷದ ಕಾರ್ಯಕರ್ತರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದೆ.
ಗುರಗಾಂವ್ನಲ್ಲಿ ಸೋಮವಾರ ನಡೆದ ಪಕ್ಷದ ಸಭೆಯಲ್ಲಿ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಒ.ಪಿ ಧಂಕರ್, ಕ್ರೀಡಾ ಸಚಿವ ಸಂದೀಪ್ ಸಿಂಗ್ ಮತ್ತು ಹಿಸಾರ್ ಸಂಸದ ಬ್ರಿಜೇಂದ್ರ ಸಿಂಗ್ ಭಾಗವಹಿಸಿದ್ದರು. ಆಗ ಕಾರ್ಯಕರ್ತರೊಬ್ಬರು, ‘ಕೃಷಿ ಕಾನೂನುಗಳು ನಿಮ್ಮ ಪರ ಇವೆ ಎಂದರೆ ರೈತರು ನಂಬುತ್ತಿಲ್ಲ. ಅವರನ್ನು ದಾರಿ ತಪ್ಪಿಸುವುದೊಂದೇ ಉಳಿದ ಮಾರ್ಗ. ಈ ಕುರಿತು ಐಡಿಯಾ ಕೊಡಿ’ ಎಂದು ನಾಯಕರನ್ನು ಆಗ್ರಹಿಸಿದ್ದಾರೆ. ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ದೃಶ್ಯ ಆನ್ಲೈನ್ನಲ್ಲಿ ಸುದ್ದಿ ಮಾಡಿದ್ದು, ಕಾಂಗ್ರೆಸ್ನ ಸುರ್ಜೆವಾಲಾ ಕೂಡ ಇದನ್ನು ಟ್ವೀಟ್ ಮಾಡಿದ್ದಾರೆ.
“ಬಿಜೆಪಿ ಕಾರ್ಯಕರ್ತರು ಪಕ್ಷದ ಮುಖಂಡರು ಮತ್ತು ಮಂತ್ರಿಗಳನ್ನು ಭೇಟಿಯಾಗುತ್ತಿದ್ದಾರೆ ಮತ್ತು ಅವರಿಗೆ ‘ರೈತರನ್ನು ಮರುಳು ಮಾಡುವ’ ಸಲಹೆಗಳನ್ನು ಕೇಳುತ್ತಿದ್ದಾರೆ. ಅವರು ಸ್ಪಷ್ಟವಾಗಿ ಹೇಳುತ್ತಿರುವುದು, ನಮ್ಮ ವಾದಗಳಿಂದ ರೈತರನ್ನು ಹತೋಟಿಗೆ ತರಲು ಸಾಧ್ಯವಿಲ್ಲ ಮತ್ತು ಅದರಿಂದ ನಾವೇವಮೂರ್ಖರಾಗಬೇಕು ಅಷ್ಟೇ. ಇದು ಬಿಜೆಪಿಯ ನಿಜವಾದ ಮುಖ. ರೈತರಿಗೆ ಅಷ್ಟಾಗಿ ಕಾಣಿಸದ ಮುಖ”ಎಂದು ಸುರ್ಜೆವಾಲಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
भाजपा नेता पार्टी अध्यक्ष से केंद्रीय मंत्री व सांसदों के साथ बैठक में किसानों को “बहकाने के मंत्र” माँग रहा है। साफ़ कह रहा है कि आपकी बात सही है कि किसान समझेंगे नहीं बहकाने ही पड़ेंगे।
अन्नदाता व देश के प्रति भाजपा का असली चेहरा यही है।
चुल्लु भर पानी में डूब मरो।#Farmers pic.twitter.com/XXyHETRIBh
— Randeep Singh Surjewala (@rssurjewala) February 22, 2021
‘ರೈತರ ಬಳಿ ಹೋಗಿ, ಈ ಕಾನೂನುಗಳ ಬಗ್ಗೆ ಅರಿವು ಮುಡಿಸಿ’ ಎಂದು ಮೋದಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಕಾರ್ಯಕರ್ತರನ್ನು ಕೇಳಿಕೊಂಡಿದ್ದರು. ಅವರ ಮಾತಿನಂತೆ ರೈತರ ಬಳಿ ಹೋದ ಕಾರ್ಯಕರ್ತರಿಗೆ ರೈತರು ಛೀಮಾರಿ ಹಾಕುತ್ತಿದ್ದಾರೆ, ಘೇರಾವ್ ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.
ನವೆಂಬರ್ ಅಂತ್ಯದಿಂದ ರೈತರು ಕೇಂದ್ರದ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದೊಂದಿಗಿನ 11 ಸುತ್ತಿನ ಮಾತುಕತೆಗಳು ವಿಫಲವಾಗಿವೆ. ರೈತರು ತಾವು ಹಿಂದೆ ಸರಿಯುವುದಿಲ್ಲ ಮತ್ತು ಮೂರು ವಿವಾದಾತ್ಮಕ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಜೊತೆಗೆ ಎಂಎಸ್ಪಿಗೆ ಕಾನೂನು ಖಾತರಿ ಕೇಳುತ್ತಿದ್ದಾರೆ.
ರೈತರು ತಮ್ಮ ಆಂದೋಲನಕ್ಕೆ ರಾಷ್ಟ್ರವ್ಯಾಪಿ ಬೆಂಬಲವನ್ನು ಪ್ರದರ್ಶಿಸುವುದರೊಂದಿಗೆ ತಮ್ಮ ಪ್ರತಿಭಟನೆಯನ್ನು ವಿಸ್ತರಿಸುತ್ತಿದ್ದಾರೆ.
ಇದನ್ನೂ ಓದಿ: ಪಗಡಿ ಸಂಭಲ್ ದಿನ: ಸಿಂಘು ಗಡಿಗೆ ಹುತಾತ್ಮ ಭಗತ್ ಸಿಂಗ್ ಸಂಬಂಧಿಕರ ಭೇಟಿ, ರೈತ ಹೋರಾಟಕ್ಕೆ ಬೆಂಬಲ