ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿಯಂತೆಯೇ ದಕ್ಷಿಣ ಕನ್ನಡದ ಮಳಲಿ ಮಸೀದಿ ಸಮೀಕ್ಷೆ ನಡೆಸುವಂತೆ ಕೋರಿ ಹಿಂದೂ ದಾವೆದಾರರು ಹೂಡಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳೂರು ನ್ಯಾಯಾಲಯ ಫೆಬ್ರವರಿ 17ಕ್ಕೆ ಮುಂದೂಡಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಮಸೀದಿ ವಕ್ಫ್ ಆಸ್ತಿ ಎಂಬುದಕ್ಕೆ ಸಂಬಂಧಿಸಿದ ದಾವೆ ಕರ್ನಾಟಕ ಹೈಕೋರ್ಟ್ನಲ್ಲಿದ್ದು, ಈ ಕುರಿತು ಯಾವುದೇ ಆದೇಶವನ್ನು ಹೈಕೋರ್ಟ್ ನೀಡಿಲ್ಲ. ಹೀಗಾಗಿ ಆದೇಶ ದೊರೆತ ನಂತರವಷ್ಟೇ ಮಸೀದಿಯ ಸಮೀಕ್ಷೆ ಕುರಿತಂತೆ ವಾದ ಮಂಡಿಸಲು ಸಾಧ್ಯ ಎಂದು ಮಳಲಿಪೇಟೆ ಜುಮ್ಮಾ ಮಸೀದಿಯನ್ನು ಪ್ರತಿನಿಧಿಸುತ್ತಿರುವ ವಕೀಲ ಎಂ ಪಿ ಶೆಣೈ ಅವರು ವಾದ ಮಂಡಿಸಿದರು.
ಈ ಹಿನ್ನೆಲೆಯಲ್ಲಿ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ನಿಖಿತಾ ಅಕ್ಕಿ ಅವರು ಪ್ರಕರಣವನ್ನು ಮುಂದೂಡಿದ್ದಾರೆ ಎಂದು ವರದಿ ತಿಳಿಸಿದೆ.
ಹಿಂದೂ ಪಕ್ಷಕಾರರ ಪರ ವಾದ ಮಂಡಿಸಿದ ವಕೀಲ ಚಿದಾನಂದ ಎಂ ಕೆದಿಲಾಯ ಅವರು ಮಸೀದಿ ಸಮೀಕ್ಷೆ ನಡೆಸುವ ಸಂಬಂಧ ನ್ಯಾಯಾಲಯ ಅಡ್ವೊಕೇಟ್ ಕಮಿಷನರ್ ಅವರನ್ನು ನೇಮಿಸಬೇಕು ಎಂದು ಕೋರಿದ್ದಾರೆ. ಅಲ್ಲದೆ ಮಸೀದಿ ಇರುವ ಸ್ಥಳದ ಉತ್ಖನನ ಕಾರ್ಯ ನಡೆಯಬೇಕು. ಕೇವಲ ಮೌಖಿಕ ವಾದ ಸಾಲದು. ವರದಿ ದೊರೆತರಷ್ಟೇ ಮಸೀದಿ ಇರುವ ಸ್ಥಳದಲ್ಲಿ ಹಿಂದೂ ದೈವಗಳ ಕುರುಹುಗಳಿವೆಯೇ ಎಂದು ನ್ಯಾಯಾಲಯಕ್ಕೆ ಮಾಹಿತಿ ತಿಳಿಯುತ್ತದೆ ಎಂದಿದ್ದಾರೆ.
ಜ್ಞಾನವಾಪಿಯಂತೆ ಮಳಲಿಪೇಟೆ ಮಸೀದಿಯಲ್ಲಿ ಸಮೀಕ್ಷೆ ನಡೆಸಲು ಅಡ್ವೋಕೇಟ್ ಕಮಿಷನರ್ ನೇಮಕ ಮಾಡುವಂತೆ ಹಿಂದೂಗಳ ಪರವಾಗಿ ಧನಂಜಯ್ ಹಾಗೂ ಇನ್ನಿತರರು ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣದ ಹಿನ್ನೆಲೆ :
ಮಳಲಿ ಮಸೀದಿಯ ಹಳೆಯ ಕಟ್ಟಡ ಕೆಡವಿ ಹೊಸದಾಗಿ ನಿರ್ಮಿಸಲು 2022ರಲ್ಲಿ ಮಸೀದಿ ಸಮಿತಿ ಮುಂದಾಗಿತ್ತು. ದ್ರಾವಿಡ ಶೈಲಿಯ ಹಳೆಯ ಕಡ್ಡದ ಸುತ್ತಲು ಕೆಡವಿ ಮಧ್ಯದ ಭಾಗ ಹಾಗೆಯೇ ಬಿಟ್ಟಿತ್ತು. ಮಸೀದಿಯ ಮೇಲ್ಚಾವಣಿ ದೇಗುಲ ಶೈಲಿಯಲ್ಲಿರುವುದನ್ನು ಕಂಡ ಹಿಂದುತ್ವ ಸಂಘಟನೆ ಮುಖಂಡರು ಮಸೀದಿಯ ಒಳಗೆ ಶಿವನ ಸನ್ನಿಧಾನ ಇರುವುದರಿಂದ ದುರಸ್ತಿ ಕಾಮಗಾರಿ ಸ್ಥಗಿತಗೊಳಿಸಿ ಸಮೀಕ್ಷೆ ನಡೆಸಬೇಕು ಎಂದು ಕೋರಿ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಆದರೆ, ಮಳಲಿ ಮಸೀದಿ ವಕ್ಫ್ ಮಂಡಳಿಗೆ ಸೇರಿದ ಆಸ್ತಿಯಾಗಿದೆ ಎಂದು ಮಸೀದಿ ಸಮಿತಿ ಹೈಕೋರ್ಟ್ ಮೆಟ್ಟಿಲೇರಿತ್ತು. ವಾದ ಆಲಿಸಿದ್ದ ಹೈಕೋರ್ಟ್, ಅರ್ಜಿಯನ್ನು ಜಿಲ್ಲಾ ನ್ಯಾಯಾಲಯವೇ ವಿಚಾರಣೆ ನಡೆಸಬೇಕೆಂದು ಜ. 31ರಂದು ಸೂಚಿಸಿತ್ತು.
ಇದನ್ನೂ ಓದಿ : ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಅವ್ಯವಹಾರ ಆರೋಪ: ಸಿಐಡಿ ತನಿಖೆಗೆ ಸಿಎಂ ಆದೇಶ