ರೈತ ಸಂಘಗಳ ನೇತೃತ್ವದಲ್ಲಿ ಉತ್ತರ ಪ್ರದೇಶದ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ 140ಕ್ಕೂ ಹೆಚ್ಚು ಹಳ್ಳಿಗಳ ರೈತರು ಗುರುವಾರ (ಫೆ.8) ಸಂಸತ್ತಿನತ್ತ ಪಾದಯಾತ್ರೆಯಲ್ಲಿ ಆಗಮಿಸಿದ್ದು, ಭೂಸ್ವಾಧೀನಕ್ಕೆ ಸಂಬಂಧಿಸಿದ ತಮ್ಮ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿದ್ದಾರೆ.
ಸದ್ಯ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ನಾಲ್ಕು ಪ್ರತಿಭಟನೆಗಳು ನಡೆಯುತ್ತಿವೆ. ಜೈ ಜವಾನ್ ಜೈ ಕಿಸಾನ್ ಸಂಘಟನೆಯಿಂದ ಅನ್ಸಾಲ್ ಬಿಲ್ಡರ್ಗಳ ವಿರುದ್ಧ, ಅಖಿಲ ಭಾರತ ಕಿಸಾನ್ ಸಭಾದಿಂದ ಗ್ರೇಟರ್ ನೋಯ್ಡಾ ಪ್ರಾಧಿಕಾರದ ವಿರುದ್ದ, ಭಾರತೀಯ ಕಿಸಾನ್ ಪರಿಷತ್ನಿಂದ ನೋಯ್ಡಾ ಸೆಕ್ಟರ್ 24 ರಲ್ಲಿ ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್ಟಿಪಿಸಿ) ಪ್ರಧಾನ ಕಚೇರಿಯಲ್ಲಿ ಮತ್ತು ಸೆಕ್ಟರ್ 6 ರಲ್ಲಿ ನೋಯ್ಡಾ ಪ್ರಾಧಿಕಾರದ ವಿರುದ್ದ ಹೋರಾಟ ಹಮ್ಮಿಕೊಳ್ಳಲಾಗಿದೆ.
ಈ ಎಲ್ಲಾ ಸಂಘಟನೆಗಳು ಬುಧವಾರ ಗ್ರೇಟರ್ ನೋಯ್ಡಾ ಪ್ರಾಧಿಕಾರದ ಕಚೇರಿಯಲ್ಲಿ ಮಹಾಪಂಚಾಯತ್ ಕರೆದಿತ್ತು. ತಮ್ಮ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸುವಂತೆ ಒತ್ತಾಯಿಸಿ ಗುರುವಾರ ಸಂಸತ್ತಿಗೆ ಮೆರವಣಿಗೆ ನಡೆಸಲು ತೀರ್ಮಾನಿಸಿತ್ತು.
ಸಂಸತ್ತಿನತ್ತ ಆಗಮಿಸುತ್ತಿದ್ದ ರೈತರನ್ನು ನೋಯ್ಡಾದ ಮಹಾಮಾಯ ಫ್ರೈಓವರ್ ಬಳಿ ಪೊಲೀಸರು ತಡೆದಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ.
VIDEO | Hundreds of protesting farmers stopped by police near Mahamaya Flyover in Noida as they try to march to the Parliament.
Farmer groups in Noida and Greater Noida have been protesting since December 2023, demanding increased compensation and developed plots for the land… pic.twitter.com/FcSN2etfyH
— Press Trust of India (@PTI_News) February 8, 2024
ರೈತರ ಎರಡು ಪ್ರಮುಖ ಬೇಡಿಕೆಗಳಿವೆ. ಮೊದಲನೆಯದಾಗಿ, ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಸ್ವಾಧೀನಪಡಿಸಿಕೊಂಡಿರುವ ತಮ್ಮ ಭೂಮಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಅಭಿವೃದ್ಧಿಪಡಿಸಿದ ಭೂಮಿಯಲ್ಲಿ ತಮ್ಮ ಕುಟುಂಬಗಳಿಗೆ ವಸತಿ ಪ್ಲಾಟ್ಗಳ ಶೇ10ರಷ್ಟು ಭಾಗ ನೀಡಬೇಕು ಎಂಬುವುದು.
ಸರ್ಕಾರ ಅಗತ್ಯಕ್ಕಿಂತ ಹೆಚ್ಚಿನ ಭೂಮಿಯನ್ನು ನಮ್ಮಿಂದ ಸ್ವಾಧೀನಪಡಿಸಿಕೊಂಡಿದ್ದು, ಭೂರಹಿತರನ್ನಾಗಿ ಮಾಡಿದೆ. ಸರ್ಕಾರ ನಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅಭಿವೃದ್ಧಿಯ ಬಗ್ಗೆ ಹೆಮ್ಮೆಪಡುತ್ತಿದೆ. ಆದರೆ, ನಮ್ಮ ಕುಟುಂಬಗಳು ಮತ್ತು ಮುಂದಿನ ಪೀಳಿಗೆಗಳು ಹೇಗೆ ಬದುಕಬೇಕು? ಎಂದು ರೈತರು ಪ್ರಶ್ನಿಸಿದ್ದಾರೆ.
ಪ್ರಸ್ತುತ, ನೋಯ್ಡಾ ಪ್ರಾಧಿಕಾರವು ರೈತರಿಗೆ ಒಟ್ಟು ಸ್ವಾಧೀನಪಡಿಸಿಕೊಂಡ ಭೂಮಿಯ ಶೇ 5ರಷ್ಟು ಪರಿಹಾರ ನೀಡಿದೆ. ಅದು ಸಾಕಾಗುವುದಿಲ್ಲ ಎಂದು ರೈತರು ಹೇಳಿದ್ದಾರೆ. ಗ್ರೇಟರ್ ನೋಯ್ಡಾ ಪ್ರಾಧಿಕಾರವು ಅವರಿಗೆ ಅಭಿವೃದ್ಧಿಪಡಿಸಿದ ಪ್ಲಾಟ್ನಲ್ಲಿ ಶೇ. 6ರಷ್ಟು ಪಾಲು ನೀಡಬೇಕು. ಯಮುನಾ ಎಕ್ಸ್ ಪ್ರೆಸ್ ವೇ ಪ್ರಾಧಿಕಾರವು ಭೂ ಸ್ವಾಧೀನ ಪರಿಹಾರವಾಗಿ ಶೇ. 7ರಷ್ಟು ನೀಡಬೇಕು.
ಇವಿಷ್ಟೇ ಅಲ್ಲದೆ, ರೈತರು ಹೆಚ್ಚುವರಿ ವಿತ್ತೀಯ ಪರಿಹಾರವನ್ನು ಬಯಸುತ್ತಿದ್ದಾರೆ. ವಿವಿಧ ಯೋಜನೆಗಳಿಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ ಮಾರುಕಟ್ಟೆ ದರಗಳ ಆಧಾರದ ಮೇಲೆ ಪರಿಹಾರ ನೀಡಬೇಕು. ಹಲವು ವರ್ಷಗಳ ಹಿಂದೆ ಅಗ್ಗದ ದರದಲ್ಲಿ ತಮ್ಮ ಜಮೀನು ಸ್ವಾಧೀನಪಡಿಸಿಕೊಂಡಿದ್ದು, ಅದರ ಪರಿಣಾಮ ಈಗಲೂ ಸಂಕಷ್ಟಕ್ಕೆ ಸಿಲುಕಿರುವುದಾಗಿ ರೈತರು ಹೇಳಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ರೈತರು ತಮ್ಮ ಕುಟುಂಬಗಳಿಗೆ ಉದ್ಯೋಗ ಮತ್ತು ವೈದ್ಯಕೀಯ ಸೌಲಭ್ಯಗಳಿಗಾಗಿ ಒತ್ತಾಯಿಸುತ್ತಿದ್ದಾರೆ. ಪ್ರಾಧಿಕಾರದ ಅಧಿಕಾರಿಗಳು ರೈತ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲಾಗುವುದು ಎಂದಿದ್ದಾರೆ.
ಇದನ್ನೂ ಓದಿ : ತೆರಿಗೆ ಪಾಲಿನಲ್ಲಿ ಕೇಂದ್ರದ ಅನ್ಯಾಯ ಖಂಡಿಸಿ ದೆಹಲಿಯಲ್ಲಿ ಕೇರಳ ಸರಕಾರದಿಂದ ಪ್ರತಿಭಟನೆ