ಆಕಾಶದಲ್ಲಿ ಮೋಡಗಳು ಸ್ವಚ್ಛಂದವಾಗಿ ತೇಲಾಡುವಾಗ ಅದರ ಮೇಲೊಮ್ಮೆ ಕೂರಬೇಕೆಂದು ಯಾರಿಗೆ ತಾನೇ ಅನಿಸುವುದಿಲ್ಲ. ಅಂತ ಬಯಕೆ ನಿಮಗೇನಾದರೂ ಬಂದಿದ್ದಲ್ಲಿ ಅದನ್ನು ನನಸಾಗಿಸುವ ಅವಕಾಶ ಈ ತಿಂಗಳಲ್ಲಿ ಲಭ್ಯವಿದೆ. ಅದಕ್ಕೆ ನೀವು ಮಾಡಬೇಕಾದದ್ದು ಇಷ್ಟೇ.. ಬೆಂಗಳೂರಿನಿಂದ ಹೊರಡುವುದಿದ್ದರೆ ಅರ್ಧದಿನ ಸಮಯ ಹೊಂದಿಸಿಕೊಳ್ಳುವುದು.
ಈ ಚಳಿಗಾಲದಲ್ಲಿ ಬೆಳ್ಳಂಬೆಳಿಗ್ಗೆಯೇ ಬೈಕ್ ಅಥವಾ ಕಾರ್ ಹತ್ತಿ ಹೊರಟರೆ ನಂದಿಬೆಟ್ಟಕ್ಕೆ ಕೇವಲ ಒಂದೂವರೆ ಗಂಟೆಗಳ (63 ಕಿ.ಮೀ) ಪ್ರಯಾಣ. ನಾನು ಸೆಪ್ಟಂಬರ್ 8 ರಂದು ನನ್ನ ಬೈಕ್ ಹತ್ತಿ ಹೊರಟೆ. ಯಲಹಂಕ ಮೇಲಿಂದ ಪ್ರಯಾಣ ಬೆಳೆಸಿ ದೇವನಹಳ್ಳಿ ದಾಟಿದೊಡನೆ ಎಡಕ್ಕೆ ತಿರುಗಿದರೆ ನಿಮಗೆ ನಂದಿ ಬೆಟ್ಟ ಕಾಣಸಿಗುತ್ತದೆ. ರಸ್ತೆಯ ಎರಡೂ ಬದಿಗೂ ಹಸಿರು ಮರಗಳು ನಿಮ್ಮನ್ನು ಸ್ವಾಗತಿಸುತ್ತವೆ. ಹೋಗುವ ರಸ್ತೆಯೇ ಚೆಂದ.
ಈ ಮೊದಲು ಬೆಳಿಗ್ಗೆ 5-6 ಗಂಟೆಗೇ ನಂದಿಬೆಟ್ಟಕ್ಕೆ ಪ್ರವೇಶವಿರುತ್ತಿತ್ತು. ಸುತ್ತಲು ಕಾವಳ ಮುತ್ತಿ 15-20 ಅಡಿ ದೂರದವರೆಗೆ ಮಾತ್ರ ಕಾಣುವಂತೆ ಮಂಜು ಆವರಿಸುತ್ತಿತ್ತು. ಆನಂತರ ನೀವು ಬೆಟ್ಟದ ತುದಿಯಲ್ಲಿ ಕುಳಿತು ಸೂರ್ಯೋದಯವನ್ನು ಕಣ್ತುಂಬಿಕೊಳ್ಳಬಹುದಿತ್ತು. ಇನ್ನು ದಿನವಿಡೀ ಆ ದಟ್ಟ ಕಾನನದಲ್ಲಿ ಸುತ್ತಾಡಿ, ವಿರಮಿಸಿ, ಹೊಟ್ಟೆ ತುಂಬ ಊಟ ಮಾಡಿ ಸಂಜೆಗೆ ಸೂರ್ಯಾಸ್ತವನ್ನು ನೋಡಿ ವಾಪಸ್ ಬರಬಹುದಿತ್ತು. ಇವೆಲ್ಲವೂ ಅದ್ಭುತ ಅನುಭವ. ಆದರೆ ಈಗ ಕೊರೊನಾ ಸಾಂಕ್ರಾಮಿಕದ ಕಾರಣಕ್ಕೆ ಆ ಅನುಭವಕ್ಕೆ ಅಡ್ಡಿಯಾಗಿದೆ. ಈಗ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾತ್ರ ನಂದಿ ಬೆಟ್ಟಕ್ಕೆ ಪ್ರವೇಶಾವಕಾಶವಿದೆ.
ಆದರೂ ನೀವು ಮೇಘಗಳ ಜೊತೆಗೆ ನಿಂತು ಅವುಗಳ ಹಿಂಡನ್ನು ನೋಡಲು ಈಗಲೂ ಸಾಧ್ಯವಿದೆ. ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ನೀವು ನಂದಿ ಬೆಟ್ಟದ ಮೇಲಿದ್ದರೆ ನಿಮ್ಮ ಕೆಳಗೆ ಮೋಡಗಳ ಹಿಂಡು ಚಲಿಸುವುದು ಗೋಚರಿಸುತ್ತದೆ. ಆ ಮೋಡಗಳ ಸಾಲು ಬಂದು ಬೆಟ್ಟಕ್ಕೆ ಢಿಕ್ಕಿ ಹೊಡೆದು ಮಾಯವಾಗುತ್ತವೆ. ಸಾಮಾನ್ಯವಾಗಿ ಎತ್ತರದ ಎಲ್ಲಾ ಗಿರಿ ಶಿಖರಗಳಲ್ಲಿಯೂ, ಚಳಿಗಾಲದಲ್ಲಿ ಈ ದೃಶ್ಯ ಸಾಮಾನ್ಯ. ಆದರೆ ಮುಳ್ಳಯ್ಯನಗಿರಿ, ಬಾಬಾಬುಡನ್ಗಿರಿ ಥರದ ಬಹಳ ಎತ್ತರದ ಬೆಟ್ಟಗಳಲ್ಲಿ ನಮ್ಮ ಸುತ್ತಲೂ ಮಂಜು ತುಂಬಿ ಏನನ್ನೂ ನೋಡಲು ಸಾಧ್ಯವಾಗುವುದಿಲ್ಲ.
ಇದನ್ನೂ ನೋಡಿ: Exploring Nandi Hills ಮೊಗೆದಷ್ಟು ನೀರು ನಂದಿ ಬೆಟ್ಟ.. ನಂದಿ ಬೆಟ್ಟಕ್ಕೆ ಬೈಕ್ ರೈಡಿಂಗ್
ಚಿಕ್ಕಬಳ್ಳಾಪುರ ಜಿಲ್ಲಾವ್ಯಾಪ್ತಿಗೆ ಬರುವ, ಚಿಕ್ಕಬಳ್ಳಾಪುರದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ನಂದಿ ಬೆಟ್ಟದಲ್ಲಿ ನೀವು ಎಷ್ಟು ಹೊತ್ತು ಇದ್ದರೂ ಬೇಸರಿಸದೆ ನೋಡಬಹುದಾದ ಸ್ಥಳಗಳಿವೆ. ನಂದಿ ಬೆಟ್ಟ ಸಮುದ್ರ ಮಟ್ಟದಿಂದ 5841 ಅಡಿ ಎತ್ತರದಲ್ಲಿರುವ ಗಿರಿ ಶಿಖರ. ಚೋಳರ ಕಾಲದಲ್ಲಿ ಇಲ್ಲಿ ಕೋಟೆಗಳನ್ನು, ದೇವಾಲಯಗಳನ್ನು ಕಟ್ಟಲಾಯಿತು. ನಂತರ ಟಿಪ್ಪು ಸುಲ್ತಾನನ ಕಾಲದಲ್ಲಿ ಅವನ್ನು ಮತ್ತಷ್ಟು ಭದ್ರಪಡಿಸಲಾಯಿತು ಎಂದು ಇತಿಹಾಸ ಹೇಳುತ್ತದೆ.
ಆಧುನಿಕತೆ ಮತ್ತು ಮುನ್ನೋಟಕ್ಕೆ ಹೆಸರಾಗಿದ್ದ ಟಿಪ್ಪು ಸುಲ್ತಾನ್ ಇಲ್ಲೊಂದು ಬೇಸಿಗೆ ಅರಮನೆ ಕಟ್ಟಿಸಿದ್ದಾರೆ. 1791ರಲ್ಲಿ ಟಿಪ್ಪು ಮತ್ತು ಬ್ರಿಟಿಷರ ನಡುವೆ ನಡೆದ ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸೋಲನ್ನಪ್ಪಿದ ಬಳಿಕ ಇದು ಬ್ರಿಟಿಷರ ಕೈವಶವಾಯಿತು. ನಂತರ ಹಲವು ಬ್ರಿಟಿಷ್ ಅಧಿಕಾರಿಗಳು ಇಲ್ಲಿ ತಂಗುತ್ತಿದ್ದರು ಎನ್ನಲಾಗಿದೆ. ಆದರೆ ಇಂದು ಟಿಪ್ಪುವಿನ ಆ ಬೇಸಿಗೆ ಅರಮನೆ ಸರಿಯಾದ ಮೇಲ್ವೀಚಾರಣೆ ಮತ್ತು ನಿರ್ವಹಣೆ ಇಲ್ಲದ ಕಾರಣ ಅನಾಥವಾಗಿ ಬಿದ್ದಿದೆ. ಐತಿಹಾಸಿಕ ಮಹತ್ವ ಹೊಂದಿದ್ದ ಈ ಪಾರಂಪರಿಕ ತಾಣ ಪಾಳುಬಿದ್ದ ಮನೆಯ ರೀತಿ ಕಾಣುತ್ತಿದೆ. ಇನ್ನು ಟಿಪ್ಪು ಸುಲ್ತಾನ್ ಕಾಲದಲ್ಲಿ ಅಪರಾಧಿಗಳನ್ನು ಶಿಕ್ಷಿಸುವುದಕ್ಕಾಗಿ ಬಳಸುತ್ತಿದ್ದ ಟಿಪ್ಪು ಡ್ರಾಪ್ ಎಂಬ ದುರ್ಗಮ ಸ್ಥಳ ಇಂದು ಪ್ರವಾಸಿಸ್ಥಳವಾಗಿ ಬದಲಾವಣೆಯಾಗಿದೆ. ಇಲ್ಲಿಂದ ಕಡಿದಾದ ಆಳವನ್ನು ನೋಡಬಹುದು. ಬಂಡೆ ಮೇಲೆ ಕುಳಿತು ಮೋಡಗಳ ಹಿಂಡನ್ನು, ಅದರ ನೆರಳನ್ನು ಕಾಣಬಹುದು. ಸಂಜೆಯಾಗುತ್ತಿದ್ದಂತೆ ಸೂರ್ಯಾಸ್ತವನ್ನು ನೋಡಲು ಪ್ರಶಸ್ತವಾದ ಜಾಗ ಇದು.

ಯೋಗ ನಂದೀಶ್ವರ ಸ್ವಾಮಿ ದೇವಾಲಯ, ಗವಿ ವೀರಭದ್ರಸ್ವಾಮಿ ದೇವಾಲಯ, ನೆಲ್ಲಿಕಾಯಿ ಬಸವಣ್ಣ ದೇವಾಲಯ ಸೇರಿ ಹಲವು ದೇವಾಲಯಗಳು ಬೆಟ್ಟದಲ್ಲಿವೆ. ನಂದಿ ಬೆಟ್ಟದಲ್ಲಿನ ಇತರ ಆಕರ್ಷಣೆಯೆಂದರೆ ಬೆಟ್ಟದ ಮೇಲಿಂದ ಸುತ್ತಲಿನ ವಿಹಂಗಮ ನೋಟ. ನೋಡಲು ಹಲವು ವ್ಯೂ ಪಾಯಿಂಟ್ಗಳು ಇಲ್ಲಿವೆ. ತೋಟಗಾರಿಕೆ ಇಲಾಖೆಯ ಕೈತೋಟಗಳು, ದೊಡ್ಡ ದೊಡ್ಡ ಮರಗಳು ಇಲ್ಲಿವೆ. ಇಲ್ಲಿ ಹುಟ್ಟುವ ಪಾಲರ್ ಮತ್ತು ಅರ್ಕಾವತಿ ನದಿಮೂಲಗಳ ವೀಕ್ಷಣೆ ಮುದನೀಡುತ್ತವೆ.
ದೂರದ ಊರಿಂದ ಬರುವವರು ರಾತ್ರಿಯೇ ಬಂದು ಇಲ್ಲಿ ಉಳಿದು ಬೆಳಿಗ್ಗೆ ಬೆಟ್ಟಕ್ಕೆ ಬರಬಹುದು. ಬೆಟ್ಟದ ತಪ್ಪಲಿನಲ್ಲಿ ಪ್ರವಾಸಿಮಂದಿರ ಮತ್ತು ಹೋಟೆಲ್ಗಳಿವೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ವೆಜ್ ಮತ್ತು ನಾನ್ವೆಜ್ ಹೋಟೆಲ್ ಒಂದನ್ನು ತೆರೆದಿದೆ. ಇದು ಪ್ಲಾಸ್ಟಿಕ್ ನಿಷೇಧ ವಲಯವಾಗಿದ್ದು ಹೊರಗಿನಿಂದ ನೀರು, ತಿಂಡಿ ತರಲು ಅವಕಾಶವಿಲ್ಲ. ನಂದಿ ಬೆಟ್ಟದಲ್ಲಿಯೇ ತಿಂಡಿ ತಿನಿಸುಗಳು ಲಭ್ಯವಿದ್ದು ಕೋತಿಗಳ ಸಂಖ್ಯೆ ಹೆಚ್ಚಿರುವುದರಿಂದ ನೀವು ತಿಂದು ಅವುಗಳಿಗೂ ಕೊಡಬಹುದು. ಕೋತಿಗಳ ಸಂಗಡ ಸಣ್ಣ ಮಕ್ಕಳಿಗೆ ಹಬ್ಬವಾಗುವುದಂತೂ ನಿಜ.
ನಂದಿಬೆಟ್ಟದ ಪಕ್ಕದಲ್ಲಿಯೇ ಸ್ಕಂದಗಿರಿ ಮತ್ತು ಚನ್ನಗಿರಿ ಎಂಬ ಇನ್ನೆರಡು ಸುಂದರ ಬೆಟ್ಟಗಳಿವೆ. ಚಿಕ್ಕಬಳ್ಳಾಪುರಕ್ಕೆ ಹೋಗುವ ದಾರಿಯಲ್ಲಿ ಭೋಗ ನಂದೀಶ್ವರ ದೇವಾಲಯವಿದೆ. ಒಟ್ಟಿನಲ್ಲಿ ಅರ್ಧದಿನ ಅಥವಾ ದಿನವಿಡೀ ಕಳೆಯಲು ಇದು ಪ್ರಶಸ್ತ ಸ್ಥಳವಾಗಿದೆ.


