ಗುರುವಾರ (ಡಿ.4) ನಡೆದ ಸಚಿವ ಸಂಪುಟ ಸಭೆಯಲ್ಲಿ ಅಲೆಮಾರಿಗಳ ಮೀಸಲಾತಿ ಬಗ್ಗೆ ತುಟಿ ಬಿಚ್ಚದ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗಿದ್ದು, ‘ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ’ ‘ಬೆಳಗಾವಿ ಚಲೋ’ ಹೋರಾಟಕ್ಕೆ ಕರೆ ಕೊಟ್ಟಿದೆ.
ಈ ಬಗ್ಗೆ ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ಮುಖಂಡರು, “ಸಚಿವ ಸಂಪುಟ ಸಭೆಯಲ್ಲಿ ಅನೇಕ ವಿಚಾರಗಳ ನಿರ್ಧಾರ ತೆಗೆದುಕೊಂಡಿದೆ. ಆದರೆ, ಒಳ ಮೀಸಲಾತಿ ವಿಚಾರದಲ್ಲಿ ಅಲೆಮಾರಿಗಳ ಕುರಿತು ಯಾವುದೇ ಚರ್ಚೆಯಾಗಲಿ, ತೀರ್ಮಾನವನ್ನು ತೆಗೆದುಕೊಳ್ಳದೆ ಸಚಿವ ಸಂಪುಟ ಮುಕ್ತಾಯಗೊಂಡಿರುವುದು ಅಲೆಮಾರಿಗಳಿಗೆ ಆತಂಕ ಹೆಚ್ಚು ಮಾಡಿದೆ. ಒಳ ಮೀಸಲಾತಿಯ ವಿಷಯದಲ್ಲಿ ಕರ್ನಾಟಕದ 49 ಅಲೆಮಾರಿ ಸಮುದಾಯಗಳಿಗೆ ಮತ್ತು 10 ಸೂಕ್ಷ್ಮ ಪರಿಶಿಷ್ಟ ಜಾತಿಗಳನ್ನು ಪ್ರತ್ಯೇಕವಾಗಿ ಗುರುತಿಸಿ ಈ ಸಮುದಾಯಗಳ ಶೇಕಡ ಒಂದು ಪರ್ಸೆಂಟ್ ಮೀಸಲಾತಿಯನ್ನು ಪ್ರತ್ಯೇಕ ಅಭಿವೃದ್ಧಿ ನಿಗಮ ಮತ್ತು ಅಲೆಮಾರಿಗಳ ಅಭಿವೃದ್ಧಿಯ ವಿಶೇಷ ಪ್ಯಾಕೇಜ್ ಅನ್ನು ನೀಡಬೇಕೆಂದು ನಾವು ಒತ್ತಾಯಿಸಿದ್ದೆವು” ಎಂದರು.
“ಕರ್ನಾಟಕ ಸರ್ಕಾರವು ನಮ್ಮ ಬೇಡಿಕೆಯನ್ನು ಈಡೇರಿಸದ ಕಾರಣಕ್ಕೆ ನಮ್ಮ ಮಹಾ ಒಕ್ಕೂಟವು ಅಕ್ಟೋಬರ್ 2ರಂದು ದೆಹಲಿ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದೆವು. ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ. ಮಹದೇವಪ್ಪ ಅವರು, ಅಲೆಮಾರಿಗಳಿಗೆ ಶೇ.1 ರಷ್ಟು ಪ್ರತ್ಯೇಕ ಮೀಸಲಾತಿ ಮತ್ತು ಅಭಿವೃದ್ಧಿ ನಿಗಮ, ಅಲೆಮಾರಿ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್ ಅನ್ನು ನೀಡಲು ನಮ್ಮ ಸರ್ಕಾರಕ್ಕೆ ತಾತ್ವಿಕ ಒಪ್ಪಿಗೆ ಇದೆ ಎಂದು ಭರವಸೆ ನೀಡುವ ಮೂಲಕ ದೆಹಲಿಯಿಂದ ನಮ್ಮನ್ನು ವಾಪಸ್ಸು ಕರೆಸಿಕೊಂಡಿದ್ದರು. ನಂತರ ಅಕ್ಟೋಬರ್ 31 ರಂದು ಅಲೆಮಾರಿ ಸಮುದಾಯಗಳ ಮುಖಂಡರನ್ನು ಕರೆದ ಮುಖ್ಯಮಂತ್ರಿಗಳು, ಶೇ.1 ರಷ್ಟು ಪ್ರತ್ಯೇಕ ಮೀಸಲಾತಿಯನ್ನು ನೀಡುವ ಭರವಸೆಯನ್ನು ಕೊಟ್ಟು ಮತ್ತು ನಮ್ಮ ಬದ್ಧತೆಯ ಬಗ್ಗೆ ಅನುಮಾನ ಬೇಡವೆಂದು ಸಭೆಯಲ್ಲಿ ತಿಳಿಸಿದ್ದರು. ಅವರ ಮಾತಿಗೆ ಬೆಲೆಕೊಟ್ಟು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಪ್ರತಿಭಟನೆಯನ್ನು ಕೈಬಿಟ್ಟೆವು” ಎಂದು ವಿವರಿಸಿದರು.
“ಕಾನೂನು ತಜ್ಞರು, ಕಾನೂನು ಸಲಹೆಗಾರರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಸಚಿವರು ಒಮ್ಮತದ ನಿರ್ಧಾರಕ್ಕೆ ಬಂದು ಚರ್ಚಿಸಿ ಅಲೆಮಾರಿಗಳಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಕರ್ನಾಟಕ ಸರ್ಕಾರವು ನಮ್ಮ ಜೊತೆ ಯಾವುದೇ ಸಭೆ ಸಮಲೋಚನೆ ಮಾಡದೆ ವಂಚಿಸುತ್ತಾ ಬಂದಿದೆ. ಕೋರ್ಟಿನಲ್ಲಿ ಕೇಸ್ ಇದ್ದರು ಕನಿಷ್ಠ ಅಪಿಡವಿಟ್ ಕೂಡ ಸಲ್ಲಿಸಿಲ್ಲ. ಸರ್ಕಾರ ಅಲೆಮಾರಿ ಸಮುದಾಯಕ್ಕೆ ಕೊಟ್ಟ ಮಾತಿಗೆ ಬದ್ಧವಾಗಿದೆ ಎಂಬ ಅನುಮಾನ ನಮಗೆ ಇದೆ. ಮನಿನ್ನೆ ನಡೆದ ಸಚಿವ ಸಂಪುಟದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಇರುವುದು ನಮ್ಮ ಆತಂಕವನ್ನು ಹೆಚ್ಚಿಸಿದೆ” ಎಂದು ಬೇಸರ ಹೊರಹಾಕಿದರು.
“6-12-2025ರಂದು ಒಳ ಮೀಸಲಾತಿ ಕುರಿತು ತೀರ್ಮಾನ ತೆಗೆದುಕೊಳ್ಳಲು ಮತ್ತೊಂದು ಸಮಾಲೋಚನೆಗಾಗಿ, ಅಧಿಕಾರಿಗಳು ಮತ್ತು ಸಚಿವರುಗಳ ಸಮಾಲೋಚನೆ ಸಭೆಯನ್ನು ಕರೆದಿದ್ದಾರೆ ಎಂದು ತಿಳಿದುಬಂದಿದೆ. ಈ ಸಭೆಯನ್ನು ಸಹ ಅಲೆಮಾರಿಗಳ ಪ್ರತ್ಯೇಕ ಮೀಸಲಾತಿ ಕುರಿತು ಚರ್ಚೆ ಮಾಡುತ್ತಾರೋ ಇಲ್ಲದೆ, ಪರಿಶಿಷ್ಟ ಜಾತಿಯ ಮೀಸಲಾತಿ ಶೇ.15 ಅಥವಾ ಶೇ.17 ಬಗ್ಗೆ ಚರ್ಚೆ ಮಾಡುತ್ತಾರಾ ಎಂಬ ದೊಡ್ಡ ಪ್ರಶ್ನೆ ನಮ್ಮ ಮುಂದಿದೆ. ನಾವು ಈ ವಿಚಾರದಲ್ಲಿ ಸ್ಪಷ್ಟಪಡಿಸ ಬಯಸುವುದೇನೆಂದರೆ, ಶೇ.15 ಮತ್ತೆ ಶೇ.17 ವಿಚಾರ ಕೂಡ ತುಂಬಾ ಗಂಭೀರವಾಗಿದೆ. ಇದೇ ಸಂದರ್ಭದಲ್ಲಿ ಅಲೆಮಾರಿಗಳ ಕುರಿತು ಏನು ನಿಲುವು ತೆಗೆದುಕೊಳ್ಳುತ್ತಾರೆ ಎಂಬುದು ಕೂಡ ನಮಗೆ ಅಷ್ಟೇ ಗಂಭೀರವಾದ ವಿಚಾರವಾಗಿರುತ್ತದೆ” ಎಂದರು.
“ಈ ಸಂದರ್ಭದಲ್ಲಿ ಸರ್ಕಾರವು ಯಾವುದೇ ತೀರ್ಮಾನ ತೆಗೆದುಕೊಂಡರು, ಬಿಲ್ ತಂದರು ಕೂಡ ಅಲೆಮಾರಿಗಳು ಹಾಕಿರುವ ತಡೆಯಾಜ್ಞೆಯನ್ನು ವಾಪಸ್ ತೆಗೆದುಕೊಳ್ಳದಿದ್ದರೆ ಯಾವುದೇ ಒಳಮಿಸಲಾತಿ ಜಾರಿಯಾಗುವುದಿಲ್ಲ. ಅಷ್ಟೇ ಅಲ್ಲದೆ, ಇಡೀ ನೇಮಕಾತಿ ಪ್ರಕ್ರಿಯೆಯು ಜಾರಿಯಾಗುವುದಿಲ್ಲ. ಈಗಾಗಲೇ ಎಲ್ಲವೂ ನಿಂತು ಹೋಗಿವೆ, ಈ ಎಲ್ಲಾ ಪ್ರಕ್ರಿಯೆ ನಡೆಯಬೇಕಾದರೆ ಅಲೆಮಾರಿಗಳ ವಿಚಾರದಲ್ಲಿ ಸರ್ಕಾರ ಒಂದು ತೀರ್ಮಾನಕ್ಕೆ ಬರಲೇಬೇಕಾಗಿದೆ. ಅಲೆಮಾರಿಗಳ ಮೀಸಲಾತಿ ವಿಚಾರದಲ್ಲಿ ಉಡಾಫೆ ಮಾಡಿ ಸರ್ಕಾರವು ಸಂಪೂರ್ಣ ಒಳಮೀಸಲಾತಿ ಮತ್ತು ಇಡೀ ನೇಮಕಾತಿಯನ್ನೇ ಬಿಕ್ಕಟ್ಟಿಗೆ ಸಿಕ್ಕಿಸಿದೆ” ಎಂದು ಹೇಳಿದರು.
ಸರ್ಕಾರ ಅಲೆಮಾರಿಗಳ ಬಗ್ಗೆ ಯಾವುದೇ ರೀತಿಯ ಪ್ರಕ್ರಿಯೆ ಮುಂದುವರಿಸದೆ ಇರುವುದರಿಂದ ಇದನ್ನು ಪ್ರತಿಭಟಿಸಿ ಸರ್ಕಾರದ ಮತ್ತು ಸಮಾಜದ ಗಮನಕ್ಕೆ ಅಲೆಮಾರಿ ಸಮುದಾಯಗಳ ಹಕ್ಕೊತ್ತಾಯವನ್ನು ಮುನ್ನಲೆಗೆ ತರುವುದಕ್ಕೆ ನಾವು “ಬೆಳಗಾವಿ ಚಲೋ”ಗೆ ಕರೆ ಕೊಡುತ್ತಿದ್ದೇವೆ ಎಂದು ಘೋಷಿಸಿದರು.
ನಾವು ಬೆಳಗಾವಿಯಲ್ಲಿ ಅನಿರ್ದಿಷ್ಟ ಅವಧಿ ಹೋರಾಟ ಮುಂದುವರಿಸುತ್ತೇವೆ. ನ್ಯಾಯಾಂಗ ಹೋರಾಟ ಮತ್ತು ಬೀದಿ ಹೋರಾಟ ಎರಡನ್ನೂ ಕೂಡ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಕೂಡ ಅಲೆಮಾರಿಗಳಿಗೆ ಆಗಿರುವಂತಹ ಅನ್ಯಾಯವನ್ನು ಸರಿಪಡಿಸದೆ ಇದ್ದರೆ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ, ವಸಂತಹಂದಿಗೊಂದಿ, ಶಾಂತರಾಜು, ಹನುಮಂತು, ಮಂಡ್ಯ ರಾಜಣ್ಣ, ಶರಣಪ್ಪ, ವೆಂಕಟೇಶ್, ರಾಘವೇಂದ್ರ ಮುಕ್ರಿ, ದುರ್ಗೇಶ ವಿಭೂತಿ, ಸುಭಾಸ ಚವ್ಹಾಣ, ನಾಗಪ್ಪ ಧೂಮಳ್, ಸಂದೀಪ್ ದಾಸರ್ ಇದ್ದರು.


