ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಎನ್ಡಿಎ ಮೈತ್ರಿ ಮತ್ತೆ ಅಧಿಕಾರ ಹಿಡಿಯುವುದು ಬಹುತೇಕ ನಿಚ್ಚಳವೆನಿಸಿದೆ. ಬಿಜೆಪಿ-ಜೆಡಿಯು ಸೇರಿದಂತೆ ಎನ್ಡಿಎ ಮೈತ್ರಿಯು ಬಹುಮತಕ್ಕೆ ಬೇಕಾಗಿರುವ ಮ್ಯಾಜಿಕ್ ಸಂಖ್ಯೆಯನ್ನು ದಾಟಿ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ‘ಪ್ರಾಥಮಿಕ ಟ್ರೆಂಡ್ ಪ್ರಕಾರ ಬಿಹಾರದ ಜನರಿಗಿಂತ ಜ್ಞಾನೇಶ್ ಕುಮಾರ್ ಮುನ್ನಡೆ ಸಾಧಿಸಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿರುವ ವಿಡಿಯೊ ‘ಎಎನ್ಐ’ ಸುದ್ದಿ ಸಂಸ್ಥೆ ‘ಎಕ್ಸ್’ನಲ್ಲಿ ಹಂಚಿಕೊಂಡಿದೆ.
‘ಇದು ಕಾಂಗ್ರೆಸ್, ಬಿಜೆಪಿ, ಆರ್ಜೆಡಿ ಹಾಗೂ ಜೆಡಿಯು ನಡುವಿನ ಹೋರಾಟವಲ್ಲ. ಇದು ಭಾರತದ ನಾಗರಿಕರು ಹಾಗೂ ಜ್ಞಾನೇಶ್ ಕುಮಾರ್ ನಡುವೆ ನಡೆಯುತ್ತಿರುವ ನೇರ ಹೋರಾಟ. ಯಾರು ಗೆಲ್ಲುತ್ತಾರೋ ನೋಡೋಣ’ ಎಂದು ಹೇಳಿದ್ದಾರೆ.
‘ಬಿಹಾರದ ಜನರನ್ನು ಕಡಿಮೆ ಅಂದಾಜು ಮಾಡಲಾಗುವುದಿಲ್ಲ. ಅವರು ಧೈರ್ಯ ತೋರಿಸಿದ್ದಾರೆ. ಎಸ್ಐಆರ್ ಹೊರತಾಗಿಯೂ ಅವರು ದಿಟ್ಟತನ ಪ್ರದರ್ಶಿಸಿದ್ದಾರೆ. ಜ್ಞಾನೇಶ್ ಕುಮಾರ್ ಎಷ್ಟು ಪರಿಣಾಮಕಾರಿಯಾಗಿದ್ದಾರೆ ಎನ್ನುವುದನ್ನು ಮುಂದೆ ತಿಳಿಯಲಿದೆ’ ಎಂದು ಅವರು ಹೇಳಿದ್ದಾರೆ.


