ಬಿಜೆಪಿ ಆಡಳಿತದ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಮರ್ಯಮ್ ಮಸೀದಿ ಮತ್ತು ಅಬ್ದುಲ್ ರಝಾಕ್ ಝಕರಿಯಾ ಮದರಸಾವನ್ನು ಧ್ವಂಸಗೊಳಿಸಿದ ನಂತರ ಉದ್ವಿಗ್ನತೆ ಉಂಟಾಗಿ ಒಂದು ವಾರ ಕಳೆದಿದೆ. ಇದೀಗ ಈ ಕುರಿತ ಸತ್ಯಶೋಧನಾ ವರದಿಯು ಹಿಂಸಾಚಾರ ಹೇಗೆ ಭುಗಿಲೆದ್ದಿತು ಮತ್ತು ನಡೆದ ಲೋಪಗಳ ಬಗ್ಗೆ ಬೆಳಕು ಚೆಲ್ಲಿದೆ.
ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR) ‘Bulldozing Peace: State Violence and Apathy in Muslim Settlements of Haldwani’ (ಬುಲ್ಡೋಜಿಂಗ್ ಪೀಸ್: ಹ ಸ್ಟೇಟ್ ವಯಲೆನ್ಸ್ ಆ್ಯಂಡ್ ಅಪಾಥಿ ಇನ್ ಮುಸ್ಲಿಂ ಸೆಟ್ಲಮೆಂಟ್ಸ್ ಆಫ್ ಹಲ್ದ್ವಾನಿ)’ ಎಂಬ ಶೀರ್ಷಿಕೆಯಡಿಯಲ್ಲಿ ಸತ್ಯಶೋಧನಾ ವರದಿಯನ್ನು ಬಿಡುಗಡೆ ಮಾಡಿದೆ.
ಸತ್ಯಶೋಧನಾ ತಂಡದಲ್ಲಿ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ನ ನದೀಮ್ ಖಾನ್ ಮತ್ತು ಮೊಹಮ್ಮದ್ ಮೊಬಾಶ್ಶಿರ್ ಅನೀಕ್, ಕರವಾನ್-ಎ-ಮೊಹಬ್ಬತ್ನ ಹರ್ಷ್ ಮಂದರ್, ನವಶರಣ್ ಸಿಂಗ್, ಅಶೋಕ್ ಶರ್ಮಾ, ಕುಮಾರ್ ನಿಖಿಲ್ ಮತ್ತು ನಾಗರಿಕ ಹಕ್ಕುಗಳ ಕಾರ್ಯಕರ್ತ ಜಾಹಿದ್ ಖಾದ್ರಿ ಇದ್ದರು.
ಹಲ್ದ್ವಾನಿ ಹಿಂಸಾಚಾರದಲ್ಲಿ ಚಾಲಕ ಫಹೀಮ್ ಹಾದಿ ಮತ್ತು ತಂದೆ-ಮಗ ಮೊಹಮ್ಮದ್ ಜಾಹಿದ್ ಮತ್ತು ಅನಾಸ್ ಸೇರಿದಂತೆ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಸುಮಾರು 300 ಮನೆಗಳು ಪೊಲೀಸ್ ದಬ್ಬಾಳಿಕೆಯನ್ನು ಎದುರಿಸಿದವು, ಪೊಲೀಸರು ಮುಸ್ಲಿಮರ ಮನೆಗಳಿಗೆ ನುಗ್ಗಿ ವಸ್ತುಗಳನ್ನು ಹಾನಿಗೊಳಿಸಿದ್ದಾರೆ, ಮನೆಯಲ್ಲಿದ್ದವರ ಮೇಲೆ ದೌರ್ಜನ್ಯ ನಡೆಸಿದ್ದಾರೆ, ಹಲವರನ್ನು ಬಂಧಿಸಿದ್ದಾರೆ.
ದಿ ಕ್ವಿಂಟ್ ವರದಿಯ ಪ್ರಕಾರ, ಅಧಿಕೃತ ಮಾಹಿತಿಯಲ್ಲಿ ಕೇವಲ 30-36 ಜನರನ್ನು ಮಾತ್ರ ಬಂಧಿಸಲಾಗಿದೆ ಎಂದು ಹೇಳುತ್ತದೆ, ಆದರೆ ಸತ್ಯವು ವಿಭಿನ್ನವಾಗಿದೆ. ಪೊಲೀಸರು ಚಿತ್ರಹಿಂಸೆ ಕೊಠಡಿಗಳನ್ನು ಹೋಲುವ ರೀತಿಯ ಬಂಧನ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ, ಅಲ್ಲಿ ವಿವಿಧ ಕಾರಣಗಳಿಗಾಗಿ ಬೇರೆ ನಗರಗಳಿಂದ ಬಂಧಿತರಿದ್ದರು ಎಂದು ವರದಿಯು ಉಲ್ಲೇಖಿಸಿದೆ.
ಪ್ರೆಸ್ ಕ್ಲಬ್ ಆಫ್ ಇಂಡಿಯಾದ ಜೊತೆ ಮಾತನಾಡಿದ ನದೀಮ್ ಖಾನ್, ಬಂಧನಕ್ಕಿಂತ ಹೆಚ್ಚು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಸ್ಥಳೀಯ ಮೂಲಗಳ ಪ್ರಕಾರ 15 ಕಿ.ಮೀ. ದೂರದಲ್ಲಿರುವ ಶಾಲೆಯೊಂದನ್ನು ಬಂಧನ ಕೇಂದ್ರವಾಗಿ ಬಳಸಲಾಗಿತ್ತು. ಹಿಂಸಾಚಾರದಲ್ಲಿ 5,000ಕ್ಕೂ ಅಧಿಕ ಜನರು ಭಾಗಿಯಾಗಿದ್ದಾರೆ ಎಂದು ಸ್ಥಳೀಯರು ನಮಗೆ ತಿಳಿಸಿದ್ದಾರೆ. ಆದರೆ ವೀಡಿಯೊ ಮಾದರಿಗಳು ಅವರಿಗೆ ಹೋಲಿಕೆ ಮಾಡಲು ಸಾಧ್ಯವಾಗಿಲ್ಲ. ಯಾಕೆಂದರೆ ಆರೋಪಿಗಳು ಸ್ಥಳೀಯರು ಅಲ್ಲದಿರಬಹುದು ಎಂದು ಹೇಳಿದ್ದಾರೆ.
ದಿ ಕ್ವಿಂಟ್ನೊಂದಿಗೆ ಮಾತನಾಡಿದ ಹಲ್ದ್ವಾನಿ ಪೊಲೀಸರ ಸಾರ್ವಜನಿಕ ಸಂಪರ್ಕ ಅಧಿಕಾರಿ ದಿನೇಶ್ ಜೋಶಿ, ಬಂಧನ ಕೇಂದ್ರ ಸ್ಥಾಪಿಸಿರುವ ಕುರಿತ ಆರೋಪಗಳನ್ನು ನಿರಾಕರಿಸಿದ್ದಾರೆ. ಇಲ್ಲಿ ಅಂತಹ ಯಾವುದೇ ಬಂಧನ ಕೇಂದ್ರವಿಲ್ಲ. ಶಾಲೆಯು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಬೋರ್ಡ್ ಪರೀಕ್ಷೆಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.
ತಂಡದ ವರದಿಯ ಪ್ರಕಾದ, ಹಲ್ದ್ವಾನಿ ಘಟನೆಯು ಉತ್ತರಾಖಂಡವನ್ನು ದೇವಭೂಮಿಯಾಗಿ ಅಂದರೆ ಹಿಂದೂಗಳ ಪವಿತ್ರ ಭೂಮಿಯಾಗಿ ರಚಿಸುವ ಕಲ್ಪನೆಯೊಂದಿಗೆ ಆಳವಾಗಿ ಸಂಬಂಧ ಹೊಂದಿದೆ, ಅದು ಇತರ ಧಾರ್ಮಿಕ ಅಲ್ಪಸಂಖ್ಯಾತರಿಗೆ ಅಲ್ಲಿ ಅವಕಾಶವನ್ನು ನಿರಾಕರಿಸುತ್ತದೆ. ಅರಣ್ಯ ಭೂಮಿಯಲ್ಲಿ ಅನಧಿಕೃತ ಹಿಂದೂ ಧಾರ್ಮಿಕ ರಚನೆಗಳ ಬಗ್ಗೆ ಮೌನವಾಗಿರುವ ಉತ್ತರಖಂಡ ಸರಕಾರ, ರಾಜ್ಯದಲ್ಲಿ 3000 ಮಜಾರ್ಗಳನ್ನು ಅಕ್ರಮದ ಹಣೆಪಟ್ಟಿಯಲ್ಲಿ ಧ್ವಂಸ ಮಾಡಿ ತಮ್ಮ ಸರ್ಕಾರದ ಸಾಧನೆ ಎಂದು ಘೋಷಿಸಿದ ಮುಖ್ಯಮಂತ್ರಿಯ ಹೇಳಿಕೆಯು ಇದನ್ನು ಪ್ರತಿನಿಧಿಸುತ್ತದೆ ಎಂದು ವರದಿಯು ಉಲ್ಲೇಖಿಸಿದೆ.
ಸಾವಿನ ಸಂಖ್ಯೆಯಿಂದ ಹಿಡಿದು ಕಂಡಲ್ಲಿ ಗುಂಡು ಆದೇಶದವರೆಗಿನ ನಡೆಯು ಸಂಶಯಾಸ್ಪದವಾಗಿದೆ. ಹಿಂಸಾಚಾರವು 7 ವ್ಯಕ್ತಿಗಳ ಸಾವಿಗೆ ಕಾರಣವಾಯಿತು. ಇದುವರೆಗೆ 31 ಜನರನ್ನು ಬಂಧಿಸಲಾಗಿದೆ ಮತ್ತು 90ಕ್ಕೂ ಹೆಚ್ಚು ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. 5,000 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸಾವಿನ ಸಂಖ್ಯೆ 20ಕ್ಕಿಂತ ಹೆಚ್ಚಿದೆ ಎಂದು ಸ್ಥಳೀಯರು ಹೇಳಿಕೊಳ್ಳುತ್ತಾರೆ ಎಂದು ವರದಿಯು ಉಲ್ಲೇಖಿಸಿದೆ.
ಹಿಂಸಾಚಾರದ ಕುರಿತು ಮಾತನಾಡಿದ ನದೀಮ್, ಘಟನೆಯನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿದೆ, ಸಮಿತಿಯ ಸದಸ್ಯರು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿರುತ್ತಾರೆ. ಪೊಲೀಸ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಿಂಸಾಚಾರದ ವೇಳೆ ತೆಗೆದುಕೊಂಡ ಕ್ರಮಗಳನ್ನು ತನಿಖೆ ಮಾಡುತ್ತಾರೆ ಎಂದು ಹೇಳಿದ್ದಾರೆ.
ಲವ್ ಜಿಹಾದ್, ಭೂಮಿ ಜಿಹಾದ್, ವ್ಯಾಪಾರಿ ಜಿಹಾದ್ ಹಾಗೂ ಮಝಾರ್ ಜಿಹಾದ್ನಂತಹ ಆಧಾರವಿಲ್ಲದ ಪ್ರತಿಪಾದನೆಗಳು ಹಾಗೂ ಅಲ್ಪಸಂಖ್ಯಾತರ ಮೇಲಿನ ಆರ್ಥಿಕ ಹಾಗೂ ಸಾಮಾಜಿಕ ಬಹಿಷ್ಕಾರದ ಕರೆಗಳು ಅಶಾಂತಿ ಉಲ್ಬಣಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಸತ್ಯಶೋಧನಾ ವರದಿ ಹೇಳಿದೆ. ಸ್ಥಳೀಯ ಮುಸ್ಲಿಂ ಮಹಿಳೆಯರು ತೋರಿದ ಪ್ರತಿರೋಧವನ್ನು ಪೊಲೀಸರು ಪ್ರಶ್ನಿಸಿದ್ದಾರೆ, ಆದರೆ ಇದು ಇದ್ದಕ್ಕಿದ್ದಂತೆ ಅಲ್ಲ. ನಗರದಲ್ಲಿ ಸಿಎಎ ವಿರೋಧಿ ಆಂದೋಲನದ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯರು ಕೂಡ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅವರಿಗೂ ತಪ್ಪಾಗಿ ಥಳಿಸಲಾಗಿದೆ ಎಂದು ನದೀಮ್ ಹೇಳಿದ್ದಾರೆ.
ಉದ್ಭವಿಸಿದ ಪ್ರಶ್ನೆ:
ಫೆಬ್ರುವರಿ 8ರಂದು ಮಸೀದಿ-ಮದರಸ ಕೆಡವುವ ಮುನ್ನ ಸಮುದಾಯದ ಮುಖಂಡರನ್ನು ಮಾತುಕತೆಗೆ ಕರೆಯಲಾಗಿತ್ತು ಆದರೆ ಸ್ವಿಚ್ ಆಫ್ ಆಗಿದ್ದರಿಂದ ಅವರ ಫೋನ್ ಸಂಪರ್ಕಕ್ಕೆ ಬರಲಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಆದರೆ, ಮುಸ್ಲಿಂ ಧರ್ಮಗುರುಗಳು ಮತ್ತು ಮುಖಂಡರು ಈ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. 80 ವ್ಯಕ್ತಿಗಳು ಒಂದೇ ಸಮಯದಲ್ಲಿ ತಮ್ಮ ಫೋನ್ಗಳನ್ನು ಆಫ್ ಮಾಡುವುದು ಹೇಗೆ ಸಾಧ್ಯ? ತಮ್ಮ ಹೇಳಿಕೆ ಬಗ್ಗೆ ಸಾಬೀತುಪಡಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಆಗ್ರಹಿಸಿದ್ದಾರೆ.
ಫೆಬ್ರವರಿ 14ರಂದು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯಲಿದ್ದರೂ ಮಸೀದಿ ಮತ್ತು ಮದರಸಾವನ್ನು ಕೆಡವಲು ಆಡಳಿತವು ಏಕೆ ಆತುರ ತೋರಿತು?
ಮುಸ್ಲಿಮ್ ಸಮುದಾಯವು ಮಸೀದಿ ಸೀಲಿಂಗ್ ಸಮಯದಲ್ಲಿ ಸಹಕರಿಸಿದಾಗ ಎರಡನೇ ಬಾರಿಗೆ ಅವರನ್ನು ಏಕೆ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ?
ಮುನ್ಸಿಪಲ್ ಕಮಿಷನರ್ ಪಂಕಜ್ ಉಪಾಧ್ಯಾಯ ಅವರಂತಹ ಆಕ್ಷೇಪಾರ್ಹ ವ್ಯಕ್ತಿಯನ್ನು ಮತ್ತೊಂದು ಕಚೇರಿಗೆ ವರ್ಗಾಯಿಸಿದ್ದರೂ ಈ ಸಂದರ್ಭಗಳನ್ನು ನಿರ್ವಹಿಸಲು ಅವರಿಗೆ ಏಕೆ ಅನುಮತಿಸಲಾಗಿದೆ?
ಉತ್ತರಾಂಚಲದ ದೀಪ್ನ ಪತ್ರಕರ್ತ ಸಲೀಂ ಖಾನ್ ಅವರ ಮನೆಗೆ ಪೊಲೀಸರು ನುಗ್ಗಿದ್ದಾರೆ. ಅವರ ಪತ್ನಿ ಮಕ್ಕಳು ಮೇಲೆ ಹಲ್ಲೆ ನಡೆಸಿದ್ದಾರೆ. ಕರ್ಫ್ಯ್ಯೂ ಹಾಗೂ ಕಂಡಲ್ಲಿ ಗುಂಡು ಹಾರಿಸುವ ಆದೇಶ ಜಾರಿಯಲ್ಲಿರುವಾಗ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ಸರಕಾರ ಹೇಗೆ ಹೇಳಿತು?
ಅಚ್ಚರಿ ಎಂದರೆ ಮುಸ್ಲಿಂ ಮನೆಯೊಂದರಲ್ಲಿ ವಿವಾಹ ಸಮಾರಂಭದ ಮೇಲೆ ದಾಳಿ ನಡೆಸಿದ ಗುಂಪು ಪೊಲೀಸ್ ಠಾಣೆಯ ಮೇಲೂ ದಾಳಿ ನಡೆಸಿದೆ. ಸ್ಥಳೀಯರು ಹಾಗೂ ಪೊಲೀಸರಿಗೆ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಇದು ದಾಳಿಕೋರರು ಹೊರಗಿನವರು ಎಂದು ಸೂಚಿಸುತ್ತದೆ. ಗುಂಪು ಅಥವಾ ದಾಳಿಕೋರರು ಅಲ್ಪಸಂಖ್ಯಾತರು ಆಗಿದ್ದರೆ, ಅವರು ಅಲ್ಪಸಂಖ್ಯಾತರ ಮೇಲೆಯೇ ಯಾಕೆ ದಾಳಿ ನಡೆಸುತ್ತಿದ್ದರು?
ಇದಲ್ಲದೆ ಹಿಂಸಾಚಾರದ ಸಮಯದಲ್ಲಿ ಎರಡು ಗಂಟೆಗಳಲ್ಲಿ ಸುಮಾರು 1,000-2,000 ಸುತ್ತುಗಳಷ್ಟು ಗುಂಡು ಹಾರಿಸುವುದರೊಂದಿಗೆ ವಿವಿಧ ನಗರ ಪ್ರದೇಶಗಳಲ್ಲಿ ನಿರಂತರ ಪೊಲೀಸ್ ಫೈರಿಂಗ್ ಮಾಡಲಾಗಿದೆ. ಆದರೆ ಮಾಧ್ಯಮಗಳು ಕೇವಲ 350 ಸುತ್ತು ಗುಂಡು ಹಾರಿಸಿವೆ ಎಂದು ಹೇಳಿಕೊಂಡಿದೆ ಎಂದು ವರದಿಯು ಉಲ್ಲೇಖಿಸಿದೆ.
ಇದನ್ನು ಓದಿ: ಬಿಜೆಪಿಯ ಅನ್ವರ್ಥನಾಮ ‘ಸುಳ್ಳಿನ ಪಕ್ಷ’; ಅವರಿಗೆ ಪಾಠ ಕಲಿಸಲು ಕಾಂಗ್ರೆಸ್ ಬೆಂಬಲಿಸಿ: ಸಿದ್ದರಾಮಯ್ಯ


