ಪೊಲೀಸ್ ಪೇದೆಯೊಬ್ಬರ ಅಮಾನತು ಹಿಂಪಡೆಯಲು ನೀಡಿದ ಗಡುವು ಅಂತ್ಯಗೊಂಡಿರುವುದರಿಂದ ಚುರಾಚಂದ್ಪುರ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳನ್ನು ಇಂದಿನಿಂದ ಬಲವಂತವಾಗಿ ಬಂದ್ ಮಾಡಲಾಗುವುದು ಎಂದು ಸಂಘರ್ಷ ಪೀಡಿತ ಮಣಿಪುರದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್ಎಫ್) ಹೇಳಿಕೊಂಡಿದೆ.
ರಾಜ್ಯ ಗೃಹ ಇಲಾಖೆಯು ಎಲ್ಲಾ ಉದ್ಯೋಗಿಗಳಿಗೆ ಕುಕಿ ಸಂಘಟನೆಯ ಆದೇಶವನ್ನು ಅನುಸರಿಸದಂತೆ ಕೇಳಿಕೊಂಡಿದೆ. ಕರ್ತವ್ಯಗಳಿಗೆ ಹಾಜರಾಗದವರ ವಿರುದ್ಧ “ನೋ ವರ್ಕ್ ನೋ ಪೇ” ಮಾನದಂಡಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದೆ.
ITLF ಅಧ್ಯಕ್ಷ ಪಗಿನ್ ಹಾಕಿಪ್ ಮತ್ತು ಕಾರ್ಯದರ್ಶಿ ಹ್ಯೂಮನ್ ಟಾಂಬಿಂಗ್ ಈ ಕುರಿತು ಹೇಳಿಕೆಯನ್ನು ನೀಡಿದ್ದು, ಚುರಾಚಂದ್ಪುರ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಕಚೇರಿಗೆ ಹೋಗದಂತೆ ಕೇಳಿಕೊಂಡಿದ್ದಾರೆ. ಕಚೇರಿಯಲ್ಲಿ ಯಾರಾದರೂ ಕಂಡರೆ, ಏನಾದರೂ ಅನಾಹುತ ಸಂಭವಿಸಿದಲ್ಲಿ ಅವರೇ ಹೊಣೆಗಾರರು ಎಂದು ಹೇಳಿಕೊಂಡಿದ್ದರು.
ಕುಕಿ ಸಮುದಾಯಕ್ಕೆ ಸೇರಿದ ಕಾನ್ಸ್ಟೆಬಲ್ ಸಿಯಾಮ್ಲಾಲ್, ಶಸ್ತ್ರಧಾರಿ ಕುಕಿ ವ್ಯಕ್ತಿಯೊಂದಿಗೆ ಪೋಟೋ ತೆಗೆಸಿಕೊಂಡಿದ್ದರು ಎನ್ನಲಾಗಿದ್ದು, ಈ ಕಾರಣಕ್ಕೆ ಸಿಯಾಮ್ಲಾಲ್ ಅವರನ್ನು ಅಮಾನತು ಮಾಡಲಾಗಿತ್ತು. ಇದನ್ನು ಖಂಡಿಸಿ ಕುಕಿ ಸಮುದಾಯದವರು ಗುರುವಾರ ನಡೆಸಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಈ ವೇಳೆ ಇಬ್ಬರ ಹತ್ಯೆ ನಡೆದಿದೆ. ಇಬ್ಬರು ಕುಕಿಗಳ ಹತ್ಯೆಗೆ ಅವರನ್ನು ಹೊಣೆಗಾರರನ್ನಾಗಿ ಮಾಡಿ ಚುರಚಂದ್ಪುರವನ್ನು ತೊರೆಯಲು ಉಪ ಆಯುಕ್ತ ಎಸ್ ಧರುಣ್ ಕುಮಾರ್ ಮತ್ತು ಎಸ್ಪಿ ಶಿವಾನಂದ್ ಸುರ್ವೆ ಅವರಿಗೆ ಐಟಿಎಲ್ಎಫ್ ಶುಕ್ರವಾರ 24 ಗಂಟೆಗಳ ಗಡುವನ್ನು ನೀಡಿದೆ. ಪೇದೆಯನ್ನು ಅಮಾನತುಗೊಳಿಸಿದ ಆದೇಶ ಹಿಂಪಡೆಯದ ಕಾರಣ ಗುಂಪು ಡಿಸಿ ಮತ್ತು ಎಸ್ಪಿ ಕಚೇರಿಗೆ ನುಗ್ಗಿ ಬೆಂಕಿ ಹಚ್ಚಿತ್ತು.
ಸಶಸ್ತ್ರ ಮೈತೈ ಗುಂಪುಗಳೊಂದಿಗೆ ಛಾಯಾಚಿತ್ರಗಳನ್ನು ತೆಗೆಸಿಕೊಂಡಿರುವ ಅರಾಂಬೈ ಟೆಂಗೋಲ್ನಂತಹ ಮೈತೈ ಪೊಲೀಸ್ ಸಿಬ್ಬಂದಿ ವಿರುದ್ಧ ರಾಜ್ಯ ಸರ್ಕಾರವು ಕ್ರಮ ಕೈಗೊಂಡಿಲ್ಲ ಎಂದು ITLF ಆರೋಪಿಸಿದೆ. ಈ ಹಿಂದೆ ಘೋಷಿಸಿದಂತೆ, ಲಂಕಾ ಜಿಲ್ಲೆಯ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳನ್ನು ಸೋಮವಾರ ಮುಚ್ಚಲಾಗುವುದು ಎಂದು ಐಟಿಎಲ್ಎಫ್ ಹೇಳಿಕೆ ತಿಳಿಸಿದೆ. ಕುಕಿ ಗುಂಪುಗಳು ಚುರಾಚಂದ್ಪುರವನ್ನು ಲಮ್ಕಾ ಎಂದು ಮರುನಾಮಕರಣ ಮಾಡಿದ್ದಾರೆ. ಇದಲ್ಲದೆ ಹಣಕಾಸು, ವೈದ್ಯಕೀಯ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಬಂದ್ನಿಂದ ವಿನಾಯಿತಿ ನೀಡಲಾಗುವುದು ಎಂದು ITLF ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್, ಕಾನೂನು ಜಾರಿ ಸಂಸ್ಥೆಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆಗಳ ಬಗ್ಗೆ ಕಠಿಣವಾಗಿ ವ್ಯವಹರಿಸಲಾಗುವುದು ಮತ್ತು ರಾಜ್ಯ ಸರ್ಕಾರವು ಮೂಕ ಪ್ರೇಕ್ಷಕರಾಗಿ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.
ಈ ಮಧ್ಯೆ, ಮಣಿಪುರದಲ್ಲಿ ನೆಲೆಸಿರುವ ಮ್ಯಾನ್ಮಾರ್ನಿಂದ ಬಂದ ಅಕ್ರಮ ಕುಕಿ ವಲಸಿಗರನ್ನು ರಕ್ಷಿಸಲು ಮತದಾರರ ಪಟ್ಟಿಯಂತಹ ದಾಖಲೆಗಳನ್ನು ನಾಶಪಡಿಸುವುದು ಕುಕಿಗಳ “ಹಿಡನ್ ಅಜೆಂಡಾ” ಎಂದು ಮೈತೈ ಸಂಘಟನೆ COCOMI ಹೇಳಿಕೊಂಡಿದೆ.
ಡಿಸಿ ಮತ್ತು ಎಸ್ಪಿ ಕಟ್ಟಡಗಳನ್ನು ಧ್ವಂಸದ ಹಿನ್ನೆಲೆ ಮಣಿಪುರ ಸರ್ಕಾರ ಭಾನುವಾರ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ. ತ್ರಿವರ್ಣ ಧ್ವಜವನ್ನು ಡಿಸಿ ಕಚೇರಿ ಕಟ್ಟಡದಿಂದ ಅನಧಿಕೃತವಾಗಿ ಹಾರಿಸಲಾಯಿತು ಮತ್ತು ವಿಧ್ವಂಸಕ ಕೃತ್ಯಗಳು, ಅಗ್ನಿಸ್ಪರ್ಶ ಸಂದರ್ಭದಲ್ಲಿ ಅವಮಾನಿಸಲಾಯಿತು. ಜಿಲ್ಲಾಧಿಕಾರಿ ಧರುಣ್ ಕುಮಾರ್ ಜೀವ ಮತ್ತು ಆಸ್ತಿ ನಷ್ಟಕ್ಕೆ ಕಾರಣವಾದ ಸಂದರ್ಭಗಳ ಬಗ್ಗೆ ತನಿಖೆ ನಡೆಸಲಿದ್ದಾರೆ ಎಂದು ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ರಂಜನ್ ಯುಮ್ನಮ್ ಹೇಳಿದ್ದಾರೆ.
ಇದನ್ನು ಓದಿ: ಹಲ್ದ್ವಾನಿ ಹಿಂಸಾಚಾರ: ಲೋಪಗಳನ್ನು ಬಿಚ್ಚಿಟ್ಟ ಸತ್ಯಶೋಧನಾ ವರದಿ…