Homeಬಹುಜನ ಭಾರತಬಹುಜನ ಭಾರತ: ನಾಯಕತ್ವದ ಪರೀಕ್ಷೆಯಲ್ಲಿ ನಪಾಸು-ಇಳಿ ಎಣಿಕೆಯ ಆರಂಭವೇ?

ಬಹುಜನ ಭಾರತ: ನಾಯಕತ್ವದ ಪರೀಕ್ಷೆಯಲ್ಲಿ ನಪಾಸು-ಇಳಿ ಎಣಿಕೆಯ ಆರಂಭವೇ?

- Advertisement -
- Advertisement -

ದೇಶಕ್ಕೆ ದೇಶವೇ ಒಂದು ಸಾಮೂಹಿಕ ಸ್ಮಶಾನದ ರೂಪ ತಳೆದಿದೆಯೇನೋ ಎಂಬ ಭೀಭತ್ಸ, ಭಾರತದ ಉದ್ದಗಲಕ್ಕೆ ಕವಿದಿದೆ. ಸಾವು ಕೇಕೆಯೇ ಕಿವಿಯ ಮೇಲೆ ಅಪ್ಪಳಿಸಿದೆ. ಮಸಣಮೌನದ ಸದ್ದು ಜನಜೀವನವನ್ನು ದಿಕ್ಕೆಡಿಸಿದೆ. ಹೆಗಲ ಮೇಲೆ ಕೈ ಇರಿಸಿ ಸಾಂತ್ವನ ಹೇಳುವ, ಸಂಕಟ ಹಂಚಿಕೊಳ್ಳುವ ನಾಯಕತ್ವ ನಾಪತ್ತೆಯಾಗಿದೆ. ದೈತ್ಯ ಸಂಕಟದ ಈ ಸನ್ನಿವೇಶದಲ್ಲಿ ’ಸೂಪರ್ ಮ್ಯಾನ್’ ವರ್ಚಸ್ಸಿನ ಪ್ರಧಾನಿಯವರ ನಿಷ್ಕ್ರಿಯತೆ, ಸಂವೇದನಾಶೂನ್ಯತೆ ಕಣ್ಣಿಗೆ, ಕರುಳಿಗೆ ರಾಚುವಂತಿದೆ. ಕೋವಿಡ್ ಒಡ್ಡಿರುವ ನಾಯಕತ್ವದ ಅಗ್ನಿಪರೀಕ್ಷೆಯಲ್ಲಿ ಅವರು ಶೋಚನೀಯವಾಗಿ ಸೋತಿದ್ದಾರೆ. ಕೋವಿಡ್ ಸೋಲು ಮತ್ತು ಪಶ್ಚಿಮ ಬಂಗಾಳದ ಚುನಾವಣಾ ಸೋಲು ಒಂದರೊಡನೊಂದು ಬೆರೆತಿವೆ. ಪ್ರಚಂಡ ನಾಯಕನ ಪ್ರಭಾವಳಿಯನ್ನು ಬಲುವೇಗವಾಗಿ ಅಳಿಸಿ ಹಾಕತೊಡಗಿವೆ. ಅಂತಾರಾಷ್ಟ್ರೀಯವಾಗಿಯೂ ಅವರು ತೀವ್ರ ಟೀಕೆ ಎದುರಿಸತೊಡಗಿದ್ದಾರೆ. ದೇಶದೊಳಗೆ ಅವರ ಕುರಿತು ಭುಗಿಲೆದ್ದು ಕವಿದಿದ್ದ ಕುರುಡು ಅಭಿಮಾನದ ಪೊರೆಯೂ ಸರಿಯುವ ಸೂಚನೆಗಳು ದೂರ ದಿಗಂತದಲ್ಲಿ ಗೋಚರಿಸತೊಡಗಿವೆ. ಮೂರನೆಯ ಅವಧಿಗೆ ಮತ್ತೆ ಗೆದ್ದು ಬರುತ್ತಾರೆ ಎಂಬ ಭಾವನೆ ಕರಗತೊಡಗಿದೆ. ಮುಂಬರುವ ಚುನಾವಣೆಗಳು ಅವರ ಪಾಲಿಗೆ ಏರು ಹಾದಿಯ ಪಯಣ ಆಗಲಿವೆ. ಈ ಸವಾಲನ್ನು ಮೋದಿ-ಶಾ ಜೋಡಿ ಹೇಗೆ ಎದುರಿಸೀತು ಎಂದು ಕಾದು ನೋಡಬೇಕಿದೆ.

ಪ್ರತಿಪಕ್ಷಗಳನ್ನು ಸಮಾಧಿ ಮಾಡಿ ಏಕಚಕ್ರಾಧಿಪತ್ಯ ಕಟ್ಟುವ ಬಿಜೆಪಿ ಕನಸು ಭಗ್ನಗೊಂಡಿದೆ. ಜನಸಮುದಾಯಗಳನ್ನು ಕೋಮು ಧೃವೀಕರಣದ ದಳ್ಳುರಿಗೆ ನೂಕಿ ಕೈಕಾಯಿಸಿಕೊಳ್ಳುವ ಪ್ರಯತ್ನಗಳು ಪ್ರತಿ ಸಲವೂ ಫಲ ನೀಡುವುದಿಲ್ಲ ಎಂಬ ವಾಸ್ತವ ರುಜುವಾತಾಗಿದೆ. ದುರಹಂಕಾರದಿಂದ ವರ್ತಿಸಿದ ದಾದಾ ಮೋದಿ ಪಕ್ಷದ ದವಡೆಯನ್ನೇ ಜಜ್ಜಿದ್ದಾರೆ ಮಮತಾ ದೀದಿ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಸೋಲನ್ನು ಜನತಂತ್ರದ ಘನ ಗೆಲುವು ಎಂದೇ ಗುರುತಿಸಬೇಕಿದೆ.

ದೇಶ ಮತ್ತೊಂದು ಅಘೋಷಿತ ಸರ್ವಾಧಿಕಾರದ ಅಂಚಿಗೆ ಬಂದು ನಿಂತಿರುವಾಗ, ಜನತಾಂತ್ರಿಕ ಮೌಲ್ಯಗಳು ಮತ್ತು ವ್ಯಕ್ತಿಸ್ವಾತಂತ್ರ್ಯಗಳು ಇಳಿಜಾರಿನ ಹಾದಿ ಹಿಡಿದಿರುವಾಗ, ಮುಂಬರುವ ದಿನಗಳು ಮತ್ತಷ್ಟು ದುರ್ಭರ ಆಗುವ ಸೂಚನೆಗಳು ಗೋಚರಿಸಿರುವಾಗ ಬಂಗಾಳ ಚಿಮ್ಮಿಸಿರುವ ಈ ಫಲಿತಾಂಶ ಜನತಾಂತ್ರಿಕ ಮೌಲ್ಯಗಳ ಪಾಲಿಗೆ ಅತ್ಯಂತ ಆಶಾದಾಯಕ.

ಪಶ್ಚಿಮ ಬಂಗಾಳದ ಗಡಿಗಳನ್ನು ಜಿಗಿದು ಭಾರತದ ಉದ್ದಗಲಕ್ಕೆ ಸದ್ದು ಮಾಡಿರುವ ಗೆಲುವು ಇದು. ಮೋದಿ ಮತ್ತು ಅಮಿತ್ ಶಾ ಅವರನ್ನು ಸೋಲಿಸುವುದು ಸಾಧ್ಯ ಎಂಬುದನ್ನು ತೋರಿರುವ ಗೆಲುವು.
ಬಂಗಾಳವನ್ನು ಗೆಲ್ಲಲು ಮೋದಿ-ಅಮಿತ್ ಶಾ ಅವರು ಹೆಣೆಯದಿರುವ ತಂತ್ರಗಳಿಲ್ಲ, ಹೂಡದಿರುವ ವ್ಯೂಹಗಳಿಲ್ಲ. ಆದರೂ ಈ ದೈತ್ಯಶಕ್ತಿಯ ಘಾತಕ ದಾಳಿಯನ್ನು ಎದುರಿಸಿದ ಮಮತಾ ಗಟ್ಟಿ ಗುಂಡಿಗೆಯ ಹೆಣ್ಣುಮಗಳು. ಎರಡು ಅವಧಿಗಳಿಂದ ಮುಖ್ಯಮಂತ್ರಿ. ಮೂರನೆಯ ಅವಧಿಗೆ ಆಡಳಿತವಿರೋಧಿ ಭಾವನೆಯನ್ನು ಮೆಟ್ಟಿ ಗೆಲ್ಲುವುದು ಸುಲಭವಿರಲಿಲ್ಲ. 34ವರ್ಷಗಳ ಕಾಲ ಸತತವಾಗಿ ಅಧಿಕಾರ ಹಿಡಿದಿಟಿದ್ದ ಎಡರಂಗ ಸರ್ಕಾರವನ್ನು ಅವರು 2011ರಲ್ಲಿ ಸೋಲಿಸಿದ್ದು ಐತಿಹಾಸಿಕ ಹೌದು. ಅದನ್ನೂ ಮೀರಿಸಿದ ಚರಿತ್ರಾರ್ಹ ವಿಜಯ ಈಗಿನದು. ಈ ಗೆಲುವಿನಲ್ಲಿ ಕಾಂಗ್ರೆಸ್ ಮತ್ತು ಎಡರಂಗದ ಘೋರ ಸೋಲೂ ಅಡಗಿದೆ.

ಸತತ ಮೂರನೆಯ ಗೆಲುವು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶವನ್ನೂ ಮಮತಾ ಅವರಿಗೆ ಒದಗಿಸಿದೆ.

2011ರಲ್ಲಿ ಇದೇ ಮಮತಾ ಅವರ ಕೈಯಲ್ಲಿ ಎಡರಂಗ ಘೋರ ಪರಾಭವ ಎದುರಿಸಿತು. ಹತ್ತು ವರ್ಷಗಳ ನಂತರವೂ ಮೇಲೆದ್ದಿಲ್ಲ. ಬದಲಾಗಿ ಮತ್ತಷ್ಟು ಹೊಸ ಆಳದ ಪಾತಾಳಕ್ಕೆ ಕುಸಿದಿದೆ. ಸಾವರಿಕೆಯ ಸೂಚನೆಗಳು ಈಗಲೂ ಇಲ್ಲ. ಈ ಇತಿಹಾಸದಿಂದ ಮಮತಾ ಕಲಿಯಬೇಕಿರುವ ಪಾಠಗಳು ಬಹಳಷ್ಟಿವೆ. ತಮ್ಮ ಪಕ್ಷವನ್ನು ದುರಹಂಕಾರ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸರ್ವಾಧಿಕಾರಿ ಧೋರಣೆ, ಹಿಂಸಾಚಾರದಿಂದ ಹೊರಗೆಳೆಯಬೇಕಿದೆ. 2011ರ ನಂತರ ಎಡರಂಗವನ್ನು ಪ್ರತೀಕಾರದ ಕಿಚ್ಚಿನಲ್ಲಿ ಬೇಯಿಸಿದ ತಪ್ಪನ್ನು ಅವರು ಇದೀಗ ಬಿಜೆಪಿಯ ವಿರುದ್ಧ ಮಾಡಕೂಡದು. ಅದಕ್ಕೆ ಬದಲಾಗಿ ಬಿಜೆಪಿ ಗಳಿಸಿಕೊಂಡಿರುವ ಬೆಂಬಲ ನೆಲೆಯನ್ನು ತಮ್ಮತ್ತ ತಿರುಗಿಸಿಕೊಳ್ಳುವ ರಚನಾತ್ಮಕ ರಾಜಕಾರಣ ಮಾಡಬೇಕಿದೆ.

2003ರಲ್ಲಿ ನಡೆದಿದ್ದ ಪಂಚಾಯತಿ ಚುನಾವಣೆಗಳಲ್ಲಿ ಶೇ.11ರಷ್ಟು ಸೀಟುಗಳನ್ನು ಎದುರಾಳಿ ಹುರಿಯಾಳುಗಳೇ ಇಲ್ಲದೆ ಗೆದ್ದಿತ್ತು ಅಂದಿನ ಎಡರಂಗ. ಈ ದಾಖಲೆಯನ್ನು ಮಮತಾ ಬ್ಯಾನರ್ಜಿ 2018ರಲ್ಲಿ ಭರ್ಜರಿಯಾಗಿ ಮುರಿದರು. ಎದುರಾಳಿ ಅಭ್ಯರ್ಥಿಗಳೇ ಇಲ್ಲದೆ ಮಮತಾ ಅವರ ತೃಣಮೂಲ ಗೆದ್ದ ಪಂಚಾಯತಿ ಸೀಟುಗಳ ಪ್ರಮಾಣ ಶೇ.30!

ಇದು ಜನತಂತ್ರದ ಅಣಕವೇ ವಿನಾ ಸಾಧನೆಯಲ್ಲ. ಎಡರಂಗ ಶೇ.11ರಷ್ಟು ಸೀಟುಗಳನ್ನು ಎದುರಾಳಿಗಳಿಲ್ಲದೆ ಗೆದ್ದದ್ದಾಗಲಿ, ತೃಣಮೂಲ ಈ ದಾಖಲೆಯನ್ನು ಶೇ.30ಕ್ಕೆ ಮುಟ್ಟಿಸಿದ್ದಾಗಲಿ ತಲೆತಗ್ಗಿಸಬೇಕಾದ ವರ್ತನೆಗಳೇ ವಿನಾ ಎದೆ ತಟ್ಟಿ ಹೇಳಿಕೊಳ್ಳುವ ನಡೆಗಳಲ್ಲ. ಎದುರಾಳಿಗಳು ತಮ್ಮ ನಾಮಕರಣಗಳನ್ನು ಸಲ್ಲಿಸಲೂ ಹೆದರುವ ಭಯೋತ್ಪಾದಕ ಪರಿಸ್ಥಿತಿ ನೆಲೆಸಿದ್ದರ ದ್ಯೋತಕವಿದು. ಈ ಜನತಂತ್ರ ವಿರೋಧೀ ವಿಕೃತಿಯನ್ನು ತಮ್ಮ ಮೂರನೆಯ ಅವಧಿಯಲ್ಲಿ ಮಮತಾ ಅವರು ನಿವಾರಿಸಬೇಕು.

ಏಕವ್ಯಕ್ತಿ ಕೇಂದ್ರಿತ ರಾಜಕೀಯ ಪಕ್ಷಗಳ ನಿರ್ದಿಷ್ಟ ಆಧಾರಸ್ತಂಭ ಕುಸಿದರೆ ತಾವೂ ಕುಸಿದು ಹೋಗುತ್ತವೆ. ಜಯಲಲಿತಾ ಅವರ ಅಣ್ಣಾ ಡಿ.ಎಂ.ಕೆ. ಈ ಮಿತಿಯನ್ನು ದಾಟಿರುವುದು ಒಳ್ಳೆಯ ಸೂಚನೆ. ಆದರೆ ಮಮತಾ ಮತ್ತು ಮಾಯಾವತಿ ಅವರ ಪಕ್ಷಗಳೂ ಈ ನ್ಯೂನತೆಯನ್ನು ತಾವಾಗಿಯೇ ನಿವಾರಿಸಿಕೊಳ್ಳುತ್ತವೆ ಎಂದು ನಿರೀಕ್ಷಿಸಲು ಬರುವುದಿಲ್ಲ. ಮಮತಾ ಅವರು ತಮ್ಮ ಪಕ್ಷದಲ್ಲಿ ಎರಡನೆಯ ಪಂಕ್ತಿಯ ನಾಯಕತ್ವವನ್ನು ಬೆಳೆಸುವ ತುರ್ತು ಅಗತ್ಯವಿದೆ.

ವಿಧಾನಸಭಾ ಚುನಾವಣೆಗಳನ್ನು ಸತತ ಮೂರು ನಾಲ್ಕು ಬಾರಿ ಗೆದ್ದ ಮುಖ್ಯಮಂತ್ರಿಗಳಿಗೆ ಪ್ರಧಾನಿಯಾಗುವ ಹೆಬ್ಬಯಕೆ ಕಾಡುವುದು ಸ್ವಾಭಾವಿಕ. ಆದರೆ ಕಾಲ ಪಕ್ವವಾಗದೆ ಈ ದಿಸೆಯಲ್ಲಿ ಹೆಜ್ಜೆ ಇರಿಸುವುದು ಅನಾಹುತಕಾರಿ. ಬಂಗಾಳಕ್ಕೆ ಮಮತಾ ಅವರ ಅಗತ್ಯ ಇನ್ನೂ ಇದೆ. ಬಂಗಾಳವನ್ನು ಅವರು ಸಹಬಾಳುವೆಯ ಸಮೃದ್ಧಿಯ ಸೀಮೆಯಾಗಿ ಅರಳಿಸಿದ ನಂತರವೇ ಅವರು ದಿಲ್ಲಿ ಗದ್ದುಗೆಯ ಆಲೋಚನೆ ಮಾಡುವುದು ಉತ್ತಮ.

ಹೌದು. 1996ರಲ್ಲಿ ಪ್ರಧಾನಿ ಹುದ್ದೆ ಬಂಗಾಳದ ಕದ ಬಡಿದಿತ್ತು. ಅಂದಿನ ಎಡರಂಗದ ಮುಖ್ಯಮಂತ್ರಿ ಜ್ಯೋತಿಬಸು ಅವರಿಗೆ ಈ ಹುದ್ದೆ ಒಲಿದಿತ್ತು. ಆದರೆ ಸಿಪಿಐ (ಎಂ) ಈ ಆಹ್ವಾನವನ್ನು ದೂರ ತಳ್ಳಿತ್ತು. ಕಾಲಾನುಕ್ರಮದಲ್ಲಿ ಈ ತಪ್ಪಿನ ಅರಿವಾಗಿತ್ತು. ಜ್ಯೋತಿ ಬಸು ಅವರಿಗೆ ತಪ್ಪಿ ಹೋದ ಹುದ್ದೆ ಕನ್ನಡಿಗ ಎಚ್.ಡಿ.ದೇವೇಗೌಡ ಅವರ ಪಾಲಾಗಿತ್ತು. ದೇಶದ ಪ್ರತಿಪಕ್ಷಗಳು ಇದೀಗ ಮಮತಾ ಬ್ಯಾನರ್ಜಿ ಅವರನ್ನು ತಮ್ಮ ನಾಯಕಿಯಾಗಿ ಅಂಗೀಕರಿಸುವ ಸೂಚನೆಗಳಿವೆ. ಆದರೆ ಸಿಟ್ಟು ಸೆಡವು, ಸರ್ವಾಧಿಕಾರಿ ಪ್ರವೃತ್ತಿಯ ದೌರ್ಬಲ್ಯದಿಂದ ಮಮತಾ ಈಗಲೂ ಮುಕ್ತವಾಗಿಲ್ಲ. ರಾಜಕೀಯ ಪಕ್ಷಗಳ ಒಕ್ಕೂಟದ ನೇತೃತ್ವ ವಹಿಸುವ ನಾಯಕ-ನಾಯಕಿಗೆ ಒಂದು ಹಂತದ ಪ್ರಬುದ್ಧತೆ, ಪರಿಪಕ್ವತೆ ಇರಬೇಕಾಗುತ್ತದೆ. ಮಮತಾ ಇವುಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ಮನಸು ಮಾಡಿದರೆ ಅವರಿಗೆ ಇದು ಅಸಾಧ್ಯ ಆಗಲಾರದು. ಆದರೆ ದುಡುಕಿಗೆ ಮತ್ತು ಅಪಕ್ವ ವಿಫಲ ಪ್ರಯೋಗಗಳಿಗೆ ಇದು ಸಮಯವಲ್ಲ.


ಇದನ್ನೂ ಓದಿ: ಬಹುಜನ ಭಾರತ: ಬಹುತ್ವ ಭಿನ್ನಮತ ಸಹನೆ ಸಹಬಾಳುವೆಯ ಆಮ್ಲಜನಕವೂ ಬಲು ವೇಗದಲ್ಲಿ ಬರಿದಾಗುತ್ತಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ಡಿಜಿಟಲ್ ಬಂಧನದಿಂದ ಪೋಷಕರನ್ನು ರಕ್ಷಿಸಿದ 8ನೇ ತರಗತಿ ವಿದ್ಯಾರ್ಥಿ

ಸುಮಾರು 10 ಗಂಟೆಗಳ ಕಾಲ ವೀಡಿಯೊ ಕರೆ ಮೂಲಕ ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದ ತನ್ನ ಹೆತ್ತವರು ಹಣ ಕಳೆದುಕೊಳ್ಳದಂತೆ 8ನೇ ತರಗತಿಯ ಬಾಲಕನೊಬ್ಬ ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ...

ಅಸ್ಸಾಂ: ಪವನ್ ಖೇರಾ ವಿರುದ್ಧದ ಪ್ರಕರಣದಲ್ಲಿ ಒಂದು ವಾರದ ನಿರೀಕ್ಷಣ ಜಾಮೀನು ನೀಡಿದ ತೆಲಂಗಾಣ ಹೈಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಸಲ್ಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಒಂದು ವಾರದ...

ನಿವಾಸದಲ್ಲಿ ನಗದು ಪತ್ತೆ ಪ್ರಕರಣದಲ್ಲಿ ಸಿಲುಕಿದ್ದ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ

ತಮ್ಮ ನಿವಾಸದಲ್ಲಿ ನಗದು ಪತ್ತೆ ಆರೋಪದ ಕೇಂದ್ರಬಿಂದುವಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕಳೆದ ವರ್ಷ ಏಪ್ರಿಲ್ 5...

ಆಂಧ್ರಪ್ರದೇಶ: ಬೇಸಿಗೆ ವಿಹಾರಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಮುಳುಗಿ ಸಾವು 

ಅನಂತಗಿರಿ: ಬೇಸಿಗೆ ವಿಹಾಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಜಲಪಾತಕ್ಕೆ ಇಳಿದು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲೂರಿ ಸೀತಾರಾಮರಾಜು ಮೂಲಗುಮ್ಮಿ ಗ್ರಾಮದಲ್ಲಿ ನಾಲ್ವರು...

ಶಬರಿಮಲೆ ತುಪ್ಪ ಮಾರಾಟ ಹಗರಣ: ತನಿಖೆ ಪೂರ್ಣಗೊಳಿಸಲು ವಿಎಸಿಬಿಗೆ 30 ದಿನ ಕಾಲಾವಕಾಶ ನೀಡಿದ ಕೇರಳ ಹೈಕೋರ್ಟ್ 

ಕೊಚ್ಚಿ: ಶಬರಿಮಲೆಯ ಅಯ್ಯಪ್ಪ ದೇಗುಲದಲ್ಲಿ ಭಕ್ತರಿಗೆ ಮಾರಾಟವಾಗುವ ಪವಿತ್ರ ನೈವೇದ್ಯ 'ಆದಿಯ ಸಿಷ್ಟಂ ತುಪ್ಪ' ಮಾರಾಟಕ್ಕೆ ಸಂಬಂಧಿಸಿದಂತೆ ಟಿಡಿಬಿ ನೌಕರರು ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದ ತನಿಖೆಯನ್ನು ಪೂರ್ಣಗೊಳಿಸಲು ಕೇರಳ ಹೈಕೋರ್ಟ್ ಜಾಗೃತ...

ಧಾರ್ಮಿಕ ಆಚರಣೆ ಹೆಸರಿನಲ್ಲಿ ನರ್ಮದಾ ನದಿಗೆ 11,000 ಲೀಟರ್ ಹಾಲು ಸುರಿದ ಭಕ್ತರು

ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯ ನರ್ಮದಾ ನದಿ ದಂಡೆಯಲ್ಲಿ ಬುಧವಾರ ನಡೆದ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ 11,000 ಲೀಟರ್ ಹಾಲು ನರ್ಮದಾ ನದಿಗೆ ಸುರಿಯಲಾಗಿದ್ದು, ಇದು ನಂಬಿಕೆ ಮತ್ತು ಪರಿಸರ ಹಾನಿಯ ಕುರಿತು ಚರ್ಚೆಗೆ...

ಪಶ್ಚಿಮ ಬಂಗಾಳ: ಹುಮಾಯೂನ್ ಕಬೀರ್ ಪಕ್ಷದೊಂದಿಗಿನ ಮೈತ್ರಿ ಹಿಂತೆಗೆದುಕೊಂಡ ಎಐಎಂಐಎಂ; ಸ್ವತಂತ್ರ ಸ್ಪರ್ಧೆ ಘೋಷಣೆ

ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಹುಮಾಯೂನ್ ಕಬೀರ್ ನೇತೃತ್ವದ ಪಕ್ಷದೊಂದಿಗಿನ ಮೈತ್ರಿಯಿಂದ ಹಿಂದೆ ಸರಿಯುತ್ತಿರುವುದಾಗಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಘೋಷಿಸಿದೆ. ಕಬೀರ್ ಅವರ ಹೇಳಿಕೆಗಳು ಮತ್ತು ಬಹಿರಂಗಪಡಿಸುವಿಕೆಗಳು "ಮುಸ್ಲಿಮರ ಸಮಗ್ರತೆ"ಯ ಬಗ್ಗೆ...

ಏಕನಾಥ್ ಶಿಂಧೆ ಕುರಿತ ಹೇಳಿಕೆ ವಿವಾದ; ‘ಕ್ಷಮೆಯಾಚಿಸುವುದಿಲ್ಲ’ ಎಂದ ಕುನಾಲ್ ಕಮ್ರಾ

ಕೋಮುವಾದಿ ರಾಜಕಾರಣವನ್ನು ವಿರೋಧಿಸುತ್ತಾ ಬಲಪಂಥೀಯ ರಾಜಕೀಯವನ್ನು ವಿಡಂಬನೆ ಮಾಡುವ ಭಾರತದ ಖ್ಯಾತ 'ಸ್ಟಾಂಡಪ್‌ ಕಾಮಿಡಿಯನ್' ಕುನಾಲ್ ಕಮ್ರಾ ಗುರುವಾರ ಮಹಾರಾಷ್ಟ್ರ ಶಾಸಕಾಂಗ ಸಮಿತಿಯ ಮುಂದೆ ಹಾಜರಾದರು. "ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆಯನ್ನು ಗುರಿಯಾಗಿಸಿಕೊಂಡು...

ಪಶ್ಚಿಮ ಏಷ್ಯಾ ಬಿಕ್ಕಟ್ಟು| ’10 ಅಂಶಗಳ ಪ್ರಸ್ತಾವನೆಯ ಮೂರು ಷರತ್ತುಗಳನ್ನು ಉಲ್ಲಂಘಿಸಲಾಗಿದೆ’: ‘ಕದನ ವಿರಾಮ’ದ ಮರುದಿನ ಇರಾನ್ ಹೇಳಿಕೆ

ಮಂಗಳವಾರ ಒಪ್ಪಿಕೊಂಡ ಕದನ ವಿರಾಮದ ನಿಯಮಗಳನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಎಂ.ಬಿ ಗಾಲಿಬಾಫ್ ಬುಧವಾರ ಆರೋಪಿಸಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ  X ನಲ್ಲಿ ಈಬರೆದಿರುವ ಗಾಲಿಬಾಫ್, ಅಮೆರಿಕದ ಬಗ್ಗೆ...

ಬಂಗಾಳ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಆರ್‌ಜಿ-ಕರ್ ಸಂತ್ರಸ್ತೆ ತಾಯಿ

ಕರ್ತವ್ಯದಲ್ಲಿರುವಾಗಲೇ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ಆರ್‌ಜಿಕರ್ ಆಸ್ಪತ್ರೆಯ ವೈದ್ಯೆಯ ತಾಯಿ ರತ್ನಾ ದೇಬ್ನಾಥ್ ಅವರು ಪಾಣಿಹತಿಯ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಅವರೊಂದಿಗೆ ಬಿಜೆಪಿಯ ಹಿರಿಯ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ...