Homeಕರ್ನಾಟಕನೀಟ್‌ ವಿರುದ್ಧ ಎಚ್‌ಡಿಕೆ ಸರಣಿ ಟ್ವೀಟ್‌; ನಂತರ ಡಿಲೀಟ್‌- ಕಾರಣ ಸ್ವಾರಸ್ಯಕರ!

ನೀಟ್‌ ವಿರುದ್ಧ ಎಚ್‌ಡಿಕೆ ಸರಣಿ ಟ್ವೀಟ್‌; ನಂತರ ಡಿಲೀಟ್‌- ಕಾರಣ ಸ್ವಾರಸ್ಯಕರ!

- Advertisement -
- Advertisement -

“ನಮ್ಮ ಮಕ್ಕಳ ಜೀವದ ಜತೆ ಚೆಲ್ಲಾಟ ಆಡುತ್ತಿರುವ ನೀಟ್ ಪರೀಕ್ಷೆ ಬಗ್ಗೆ ನಾವು ಮರು ಆಲೋಚನೆ ಮಾಡಬೇಕಿದೆ. ಈಗಾಗಲೇ ತಮಿಳುನಾಡು ಸರಕಾರ ನೀಟ್ ವಿರುದ್ಧ ನಿರ್ಣಯ ಕೈಗೊಂಡಿದೆ. ನಮ್ಮ ಸರಕಾರವೂ ಇಂತಹ ನಿಲುವಿಗೆ ಬರಲಿ. ರಾಜ್ಯದಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಸಂಕಲ್ಪ ಅವರ ಹಾದಿ ಹಿಡಿಯುವುದನ್ನು ತಪ್ಪಿಸಬೇಕು” ಎಂದು ಆಶಯ ವ್ಯಕ್ತಪಡಿಸಿ ಸರಣಿ ಟ್ವೀಟ್ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಟ್ವೀಟ್‌ಗಳನ್ನು ಡಿಲೀಟ್ ಮಾಡಿದ್ದಾರೆ.

“ಸೊರಬ ತಾಲ್ಲೂಕಿನ ಚೆನ್ನಪಟ್ಟಣ ಗ್ರಾಮದ ಸಂಕಲ್ಪ ಎಂಬ ವಿದ್ಯಾರ್ಥಿನಿ ಸಾವಿಗೆ ಶರಣಾಗಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಹೀಗೆ ಜೀವವನ್ನು ಕೊನೆ ಮಾಡಿಕೊಂಡ ಆ ಯುವತಿಯ ದುರ್ಮರಣ ಎಲ್ಲರಿಗೂ ಪಾಠ ಆಗಬೇಕಿದೆ” ಎಂದು ‘ವಿಜಯವಾಣಿ’ಯಲ್ಲಿ ಪ್ರಕಟವಾದ ಸುದ್ದಿಯನ್ನು ಅವರು ಹಂಚಿಕೊಂಡಿದ್ದರು.

“ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕು ಹಾಗೂ ಉನ್ನತ ಶಿಕ್ಷಣ ಬಡ, ಸಾಮಾನ್ಯ ಮಕ್ಕಳಿಗೂ ಸಿಗಬೇಕು ಎನ್ನುವ ಕಾಳಜಿಯ ಜತೆಗೆ, ಯಾರೇ ವಿದ್ಯಾರ್ಥಿಗಳು ಸೀಟು ಸಿಗಲಿಲ್ಲ ಎನ್ನುವ ಕಾರಣಕ್ಕೆ ಸಂಕಲ್ಪ ಅವರಂತೆ ಬದುಕನ್ನು ಕೊನೆ ಮಾಡಿಕೊಳ್ಳಬಾರದು” ಎಂದು ಹೇಳಿದ್ದರು.

“ಅವಕಾಶಗಳು ಆಕಾಶದಷ್ಟು ಇವೆ. ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಮಾರ್ಗಗಳು ಕೂಡ ಇವೆ. ದೃಢಸಂಕಲ್ಪದೊಂದಿಗೆ ಭವಿಷ್ಯ ಕಂಡುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಂಕಲ್ಪ ಅವರಂತೆ ಜೀವ ತೆಗೆದುಕೊಳ್ಳಬಾರದು. ಇದು ನನ್ನ ಕಳಕಳಿಯ ಮನವಿ” ಎಂದು ಕೋರಿದ್ದರು.

“ನಮ್ಮ ಮಕ್ಕಳ ಜೀವದ ಜತೆ ಚೆಲ್ಲಾಟ ಆಡುತ್ತಿರುವ ನೀಟ್ ಪರೀಕ್ಷೆ ಬಗ್ಗೆ ನಾವು ಮರು ಆಲೋಚನೆ ಮಾಡಬೇಕಿದೆ. ಈಗಾಗಲೇ ತಮಿಳುನಾಡು ಸರಕಾರ ನೀಟ್ ವಿರುದ್ಧ ನಿರ್ಣಯ ಕೈಗೊಂಡಿದೆ. ನಮ್ಮ ಸರಕಾರವೂ ಇಂತಹ ನಿಲುವಿಗೆ ಬರಲಿ.  ರಾಜ್ಯದಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಸಂಕಲ್ಪ ಅವರ ಹಾದಿ ಹಿಡಿಯುವುದನ್ನು ತಪ್ಪಿಸಬೇಕು” ಎಂದು ಆಗ್ರಹಿಸಿದ್ದರು.


ಇದನ್ನೂ ಓದಿರಿ: ವಿವಾಹೇತರ ಸಂಬಂಧ ಆರೋಪ; ಮಹಿಳೆಯನ್ನು ಕಂಬಕ್ಕೆ ಕಟ್ಟಿ ಚಿತ್ರಹಿಂಸೆ- ವಿಡಿಯೊ ವೈರಲ್‌, ಪ್ರಕರಣ ದಾಖಲು


ನೀಟ್‌ ವಿರುದ್ಧ ಕುಮಾರಸ್ವಾಮಿಯವರು ಎತ್ತಿದ ಮಹತ್ವದ ಚರ್ಚೆಗೆ ಸಂಬಂಧಿಸಿದಂತೆ ವಿಜಯಕರ್ನಾಟಕ ವೆಬ್‌ಸೈಟ್‌ನಲ್ಲಿ ವರದಿ ಕೂಡ ಆಗಿದೆ. “ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದರೂ ವೈದ್ಯೆಯಾಗುವ ಬಯಕೆಗೆ ತಕ್ಕಂತೆ ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್ ಸೀಟು ಪಡೆದುಕೊಳ್ಳಲು ಸಾಧ್ಯವಾಗದ ಕಾರಣಕ್ಕೆ ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಕನ್ನಡಿಗರನ್ನು ಅವಕಾಶ ವಂಚಿತರನ್ನಾಗಿ ಮಾಡುತ್ತಿರುವ ನೀಟ್‌ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಸರಣಿ ಟ್ವೀಟ್‌ಗಳನ್ನು ಮಾಡಿ, ಘಟನೆ ಬಗ್ಗೆ ಬೇಸರ ಹೊರಹಾಕಿದ್ದಾರೆ” ಎಂದು ವರದಿ ಹೇಳಿದೆ.

ನೀಟ್ ವಿರುದ್ಧ ದನಿ ಎತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಸಂಗತಿ. ನೀಟ್‌ ಬಡ, ಮಧ್ಯಮ ವರ್ಗದ ಪ್ರತಿಭೆಗಳನ್ನು ಆತಂಕಕ್ಕೆ ತಳ್ಳುತ್ತಿರುವುದು ನಿಜ. ಹೀಗಾಗಿಯೇ ತಮಿಳುನಾಡು ಸರ್ಕಾರ ಮಹತ್ವದ ನಿರ್ಣಯವನ್ನು ಕೈಗೊಂಡಿರುವುದಕ್ಕೆ ಪ್ರಜ್ಞಾವಂತ ವಲಯದಿಂದ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ. ಇಷ್ಟೊಂದು ಮಹತ್ವದ ಸಂಗತಿಯ ಕುರಿತು ಟ್ವೀಟ್ ಮಾಡಿದ ಕುಮಾರಸ್ವಾಮಿಯವರು ಡಿಲೀಟ್ ಮಾಡುವ ಪ್ರಮೇಯವೇನಿತ್ತು ಎಂಬ ಅನುಮಾನಗಳು ಮೂಡುತ್ತವೆ.

ಈ ಕುರಿತು ಫ್ಯಾಕ್ಟ್‌ ಚೆಕ್‌ ಮಾಡಿದಾಗ, ಕುಮಾರಸ್ವಾಮಿಯವರು ಹಂಚಿಕೊಂಡಿದ್ದ ಸುದ್ದಿಯು 2020ನೇ ಇಸವಿಯದ್ದಾಗಿದ್ದು, ಹೀಗಾಗಿ ಅವರು ಟ್ವೀಟ್‌ಗಳನ್ನು ಅಳಿಸಿ ಹಾಕಿದ್ದಾರೆಂದು ಭಾವಿಸಬಹುದಾಗಿದೆ.

ಕುಮಾರಸ್ವಾಮಿಯವರು ಹಂಚಿಕೊಂಡಿರುವ ಸುದ್ದಿ ತುಣುಕು ‘ವಿಜಯವಾಣಿ’ ವೆಬ್‌ಸೈಟ್‌ದಾಗಿತ್ತು. ವಾಟ್ಸ್‌ಆಪ್‌ನಲ್ಲಿ ಬಂದ ಟ್ವಿಟರ್‌ ಲಿಂಕ್‌ನಲ್ಲಿ ಕುಮಾರಸ್ವಾಮಿಯವರು ಹಂಚಿಕೊಂಡಿರುವ ಸುದ್ದಿಯ ಸಾಲುಗಳನ್ನು ಗುರುತಿಸಬಹುದು.

“ಸಂಕಲ್ಪಗೆ 5ನೇ ತರಗತಿಯಲ್ಲಿದ್ದಾಗ ಹೃದಯಾಘಾತವಾಗಿ ಶಸ್ತ್ರಚಿಕಿತ್ಸೆಗೊಳಗಾಗಿ ಚೇತರಿಸಿಕೊಂಡಿದ್ದಳು. ಅಂದಿನಿಂದ ಡಾಕ್ಟರ್‌ ಆಗಬೇಕು ಎಂದು ಕನಸು ಕಟ್ಟಿಕೊಂಡಿದ್ದಳು. ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ್ದರೂ ನೀಟ್‌ನಲ್ಲಿ ನಿರೀಕ್ಷಿತ ಅಂಕ ಗಳಿಸಲಾಗದ ಕಾರಣ ಸರ್ಕಾರಿ ಕೋಟಾದಲ್ಲಿ ಸೀಟು ಸಿಕ್ಕಿರಲಿಲ್ಲ..” ಎಂದು ಇರುವುದನ್ನು ಗಮನಿಸಬಹುದು.

ವಿಜಯವಾಣಿ ಸುದ್ದಿ ಜಾಲತಾಣದಲ್ಲಿ ಸುದ್ದಿಯನ್ನು ಹುಡುಕಿದಾಗ, ಈ ಮೇಲಿನ ಸಾಲುಗಳಿರುವ ಸುದ್ದಿಯು ಪತ್ತೆಯಾಯಿತು. “ಡಾಕ್ಟರ್‌ ಕನಸು ಕಟ್ಟಿದ್ದ ಯುವತಿ ಆತ್ಮಹತ್ಯೆ; ಶೇ. 96 ಅಂಕ ತೆಗೆದರೂ ಸಿಗದ ಸರ್ಕಾರಿ ಸೀಟು!’ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟವಾಗಿದೆ. ಸುದ್ದಿ ಪ್ರಕಟವಾದ ದಿನಾಂಕವನ್ನು ಪರಿಶೀಲಿಸಿದಾಗ, 2020ರ ಡಿಸೆಂಬರ್‌‌ 28 ಎಂದಿರುವುದನ್ನು ಗಮನಿಸಬಹುದು.

ಹಳೆಯ ಸುದ್ದಿ ಎಂದು ಗಮನಿಸದೆ ನೀಟ್ ರದ್ದು ಪ್ರಸ್ತಾಪವನ್ನು ಮಾಡಿದ್ದರಿಂದ ಕುಮಾರಸ್ವಾಮಿಯವರು ಸರಣಿ ಟ್ವೀಟ್‌ಗಳನ್ನು ಡಿಲೀಟ್ ಮಾಡಿರಬಹುದು ಎಂದು ಊಹಿಸಬಹುದು. ಆದರೆ ನೀಟ್ ವಿರುದ್ಧ ಕುಮಾರಸ್ವಾಮಿಯವರು ಎತ್ತಿರುವ ಪ್ರಶ್ನೆ ಮಹತ್ವದ್ದು. ನೀಟ್‌ ಶೈಕ್ಷಣಿಕ ವ್ಯವಸ್ಥೆಗೆ ಅಪಾಯಕಾರಿ. ಯುವತಿಯ ಆತ್ಮಹತ್ಯೆ ಹಳೆಯ ಸುದ್ದಿ ಎಂಬುದನ್ನು ಬಿಟ್ಟರೆ, ನೀಟ್‌ ಬಡ ಮಧ್ಯಮ ವಿದ್ಯಾರ್ಥಿಗಳ ಕತ್ತು ಹಿಸುಕುತ್ತಿರುವುದು ಸುಳ್ಳಲ್ಲ. ಅದರ ವಿರುದ್ಧ ಕರ್ನಾಟಕ ಸರ್ಕಾರ ತಮಿಳುನಾಡು ಸರ್ಕಾರದಂತೆಯೇ ನಿರ್ಣಯ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುವುದು ಮಹತ್ವದ್ದಾಗಿದೆ.


ಇದನ್ನೂ ಓದಿರಿ: ಫ್ಯಾಕ್ಟ್‌‌ಚೆಕ್: ಕೇರಳಲ್ಲಿ RSS ಕಾರ್ಯಕರ್ತನನ್ನು ಕೊಲ್ಲುತ್ತಿರುವ ವಿಡಿಯೊ ಎಂದು ಸುಳ್ಳು ಹರಡಲಾಗುತ್ತಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...