ರುದ್ರಪ್ರಯಾಗ (ಉತ್ತರಖಂಡ): ಇಂದು (ಭಾನುವಾರ) ಮುಂಜಾನೆ ಉತ್ತರಾಖಂಡದ ಕೇದಾರನಾಥ ದೇವಾಲಯದ ಬಳಿ ಹೆಲಿಕಾಪ್ಟರ್ ಪತನಗೊಂಡು, ಅದರಲ್ಲಿದ್ದ ಏಳು ಮಂದಿ ಸಾವನ್ನಪ್ಪಿದ್ದಾರೆ.
ರುದ್ರಪ್ರಯಾಗ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ಪಿಟಿಐಗೆ ಈ ಅಪಘಾತವು ಗೌರಿಕುಂಡ್ ಅರಣ್ಯದ ಮೇಲೆ ಸಂಭವಿಸಿದೆ. ಐವರು ಯಾತ್ರಿಕರು, ಪೈಲಟ್ ಮತ್ತು ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯ ಉದ್ಯೋಗಿ ಸಾವನ್ನಪ್ಪಿದ್ದಾರೆ ಎಂದು ಎಂದು ತಿಳಿಸಿದ್ದಾರೆ.
ಹೆಲಿಕಾಪ್ಟರ್ ಬೆಳಿಗ್ಗೆ 5:30 ರ ಸುಮಾರಿಗೆ ಕೇದಾರನಾಥದಿಂದ ಗುಪ್ತಕಾಶಿಗೆ ಹೊರಟು ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು. ಅಪಘಾತದ ಸ್ಥಳವು ಗೌರಿ ಮಾಯ್ ಖಾರ್ಕ್ ಎಂದು ಕರೆಯಲ್ಪಡುವ ಗೌರಿಕುಂಡ್ನಿಂದ ಸುಮಾರು 5 ಕಿ.ಮೀ ದೂರದಲ್ಲಿದೆ. ಆರ್ಯನ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ಗೆ ಸೇರಿದ ಹೆಲಿಕಾಪ್ಟರ್ ಕೇದಾರಘಾಟಿಯ ಗೌರಿಕುಂಡ್ ಮತ್ತು ತ್ರಿಜುಗಿನಾರಾಯಣ್ ನಡುವೆ ಪತನಗೊಂಡು ಬೆಂಕಿ ಹೊತ್ತಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಕೆಟ್ಟ ಹವಾಮಾನದಿಂದಾಗಿ ಗೋಚರತೆ ಇಲ್ಲದಿರುವುದು ಅಪಘಾತಕ್ಕೆ ಕಾರಣ ಮತ್ತು ರಕ್ಷಣಾ ಮತ್ತು ಪರಿಹಾರ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ರಾಜ್ವರ್ ಹೇಳಿದ್ದಾರೆ.
ಹೆಲಿಕಾಪ್ಟರ್ ನಾಪತ್ತೆಯಾಗಿರುವ ಬಗ್ಗೆ ಇಂದು ಬೆಳಿಗ್ಗೆ ಮಾಹಿತಿ ಬಂದಿದ್ದು, ತಕ್ಷಣವೇ ಹುಡುಕಾಟ ಆರಂಭಿಸಲಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಅಧಿಕಾರಿ ಮತ್ತು ಹೆಲಿ ಸೇವೆಯ ನೋಡಲ್ ಅಧಿಕಾರಿ ರಾಹುಲ್ ಚೌಬೆ ತಿಳಿಸಿದ್ದಾರೆ.
ಮೃತರು ಮಹಾರಾಷ್ಟ್ರ, ಗುಜರಾತ್, ಉತ್ತರಾಖಂಡ ಮತ್ತು ಉತ್ತರ ಪ್ರದೇಶದವರು. ಹೆಲಿಕಾಪ್ಟರ್ನಲ್ಲಿದ್ದವರಲ್ಲಿ ಮಹಾರಾಷ್ಟ್ರದ ಶ್ರದ್ಧಾ ರಾಜ್ಕುಮಾರ್ ಜೈಸ್ವಾಲ್ (35), ಮಹಾರಾಷ್ಟ್ರದ ಕಾಶಿ (2), ಗುಜರಾತ್ನ ರಾಜ್ಕುಮಾರ್ ಸುರೇಶ್ ಜೈಸ್ವಾಲ್ (41), ಉತ್ತರಾಖಂಡದ ವಿಕ್ರಮ್ ಸಿಂಗ್ ರಾವತ್, ಉತ್ತರ ಪ್ರದೇಶದ ವಿನೋದ್ ದೇವಿ (66), ಉತ್ತರ ಪ್ರದೇಶದ ತುಷ್ಟಿ ಸಿಂಗ್ (19) ಮತ್ತು ಪೈಲಟ್ ಕ್ಯಾಪ್ಟನ್ ರಾಜ್ವೀರ್ ಸಿಂಗ್ ಚೌಹಾಣ್ ಸೇರಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಎಕ್ಸ್ನಲ್ಲಿ ಪೋಸ್ಟ್ನಲ್ಲಿ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ಇತರ ಸಂಸ್ಥೆಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಹೇಳಿದ್ದಾರೆ.
ಲಂಡನ್ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು ಅಹಮದ್ಬಾದ್ನಲ್ಲಿ ಪತನಗೊಂಡು ವಿಮಾನದಲ್ಲಿದ್ದ 241 ಜನರು ಮತ್ತು ಅದು ಅಪಘಾತಗೊಂಡ ಸ್ಥಳದಲ್ಲಿದ್ದ ಹಲವಾರು ಜನರು ಸಾವನ್ನಪ್ಪಿದ ಕೆಲವು ದಿನಗಳ ನಂತರ ಈ ಹೆಲಿಕಾಪ್ಟರ್ ಅಪಘಾತ ಸಂಭವಿಸಿದೆ. ಇದಕ್ಕೂ ಮೊದಲು, ಮೇ 8ರಂದು, ಗಂಗೋತ್ರಿ ಧಾಮ್ಗೆ ಹೋಗುತ್ತಿದ್ದ ಹೆಲಿಕಾಪ್ಟರ್ ಉತ್ತರಕಾಶಿ ಜಿಲ್ಲೆಯಲ್ಲಿ ಪತನಗೊಂಡು ಆರು ಜನರು ಸಾವನ್ನಪ್ಪಿದರು.
ಜೂನ್ 7ರಂದು ಕೇದಾರನಾಥಕ್ಕೆ ಹೋಗುತ್ತಿದ್ದ ಹೆಲಿಕಾಪ್ಟರ್ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ತಾಂತ್ರಿಕ ದೋಷದಿಂದಾಗಿ ರಸ್ತೆಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಬೇಕಾಯಿತು. ಇದರಲ್ಲಿ ಪೈಲಟ್ ಗಾಯಗೊಂಡಿದ್ದರು. ಆದರೆ ಅದರಲ್ಲಿದ್ದ ಐವರು ಭಕ್ತರನ್ನು ಸುರಕ್ಷಿತವಾಗಿ ರಕ್ಷಿಸಲಾಗಿತ್ತು. ಇತ್ತೀಚಿನ ಅಪಘಾತದ ನಂತರ, ಧಾಮಿ ರಾಜ್ಯದಲ್ಲಿ ಹೆಲಿಕಾಪ್ಟರ್ ಕಾರ್ಯಾಚರಣೆಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿತ್ತು.
ರಾಜ್ಯದಲ್ಲಿ ಹೆಲಿಕಾಪ್ಟರ್ ಸೇವೆಗಳ ಕಾರ್ಯಾಚರಣೆಗೆ ಕಟ್ಟುನಿಟ್ಟಾದ SOP (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಸಿದ್ಧಪಡಿಸಬೇಕು. ಇದರಲ್ಲಿ ಹೆಲಿಕಾಪ್ಟರ್ನ ತಾಂತ್ರಿಕ ಸ್ಥಿತಿಯ ಸಂಪೂರ್ಣ ಪರಿಶೀಲನೆಯನ್ನು ಕಡ್ಡಾಯಗೊಳಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು. ಹೆಲಿಕಾಪ್ಟರ್ ಕಾರ್ಯಾಚರಣೆಗಳ ಮೊದಲು ಹವಾಮಾನ ಸ್ಥಿತಿಯನ್ನು ಸಹ ಪರಿಶೀಲಿಸಬೇಕು. ತಾಂತ್ರಿಕ ತಜ್ಞರ ಸಮಿತಿಯನ್ನು ರಚಿಸಲು ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಲಾಗಿದೆ. ಇದು ಹೆಲಿಕಾಪ್ಟರ್ ಕಾರ್ಯಾಚರಣೆಗಳ ಎಲ್ಲಾ ತಾಂತ್ರಿಕ ಮತ್ತು ಸುರಕ್ಷತಾ ಅಂಶಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ SOP ಅನ್ನು ಸಿದ್ಧಪಡಿಸುತ್ತದೆ.
ಹೆಲಿಕಾಪ್ಟರ್ ಸೇವೆಗಳ ಕಾರ್ಯಾಚರಣೆಯು ಸಂಪೂರ್ಣವಾಗಿ ಸುರಕ್ಷಿತ, ಪಾರದರ್ಶಕ ಮತ್ತು ನಿಗದಿತ ಮಾನದಂಡಗಳ ಪ್ರಕಾರವಾಗಿದೆ ಎಂದು ಈ ಸಮಿತಿ ಖಚಿತಪಡಿಸುತ್ತದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ರಾಜ್ಯದಲ್ಲಿ ಹಿಂದೆ ನಡೆದ ಹೆಲಿಕಾಪ್ಟರ್ ಅಪಘಾತಗಳ ತನಿಖೆಗಾಗಿ ರಚಿಸಲಾದ ಉನ್ನತ ಮಟ್ಟದ ಸಮಿತಿಯು ಹಿಂದಿನ ಹೆಲಿಕಾಪ್ಟರ್ ಅಪಘಾತಗಳ ಪ್ರತಿಯೊಂದು ಅಂಶವನ್ನು ಹಾಗೂ ಇಂದಿನ ಹೆಲಿಕಾಪ್ಟರ್ ಅಪಘಾತದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ತನ್ನ ವರದಿಯನ್ನು ಸಲ್ಲಿಸುವಂತೆ ಧಾಮಿ ನಿರ್ದೇಶಿಸಿದ್ದಾರೆ.
ಈ ಸಮಿತಿಯು ಪ್ರತಿಯೊಂದು ಘಟನೆಯ ಕಾರಣಗಳನ್ನು ಆಳವಾಗಿ ತನಿಖೆ ಮಾಡುತ್ತದೆ ಮತ್ತು ತಪ್ಪಿತಸ್ಥ ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು ಗುರುತಿಸುತ್ತದೆ ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಶಿಫಾರಸು ಮಾಡುತ್ತದೆ. ತೀರ್ಥಯಾತ್ರೆ, ವಿಪತ್ತು ನಿರ್ವಹಣೆ ಮತ್ತು ತುರ್ತು ಸೇವೆಗಳಿಗೆ ರಾಜ್ಯದಲ್ಲಿ ಹೆಲಿ ಸೇವೆಗಳ ಮಹತ್ವ ಅಪಾರವಾಗಿದೆ. ಆದ್ದರಿಂದ ಇವುಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.


