ಒಮ್ಮೆ ಒಂದು ದಿನ ಬೆಳಂಬೆಳಗ್ಗೆ ನನಗೆ ಸಹಜವಾಗಿ ಎಚ್ಚರವಾದಾಗ, ಏನೊ ಒಂದು ಅದ್ಭುತ ನನ್ನ ಗಮನಕ್ಕೆ ಬಂತು. ಹಿಂದಿನ ರಾತ್ರಿ ನಾನು ಮಲಗುವ ಮುಂಚೆ ಐದು ಲೀಟರ್ ನೀರಿನ ಬಾಟಲಿಯ ಮುಚ್ಚಳವನ್ನು ಮುಚ್ಚದೆ ಹಾಗೆ ಇರಿಸಿದ್ದರಿಂದ ಅದರೊಳಗಡೆ ಹಲವು ಡಜನ್ ಇರುವೆಗಳು ಬಿದ್ದುಬಿಟ್ಟಿದ್ದವು. ಪಾಪ! ಪ್ರತಿಯೊಂದೂ ಇರುವೆಗಳು ಸಾವುನೋವಿನಿಂದ ನರಳುತ್ತಾ ತಮ್ಮ ಉಳಿವಿಗಾಗಿ ಹೋರಾಡುತ್ತಾ ಬಾಟಲಿಯೊಳಗಡೆ ಇದ್ದ ನೀರಿನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡು ಸಹಾಯಕ್ಕಾಗಿ ಕೈಚಾಚಿದ್ದವು.
ಮೊದಲು ನನಗೆ ಈ ಇರುವೆಗಳು ಒಂದೊಂದಾಗಿ ನೀರಿನಲ್ಲಿ ಮುಳುಗುತ್ತಾ ಇದ್ದಾವೇನೋ, ಕೆಲವು ಇರುವೆಗಳಂತೂ ಮುಳುಗಿ ಸತ್ತ ಇತರ ಇರುವೆಗಳ ಮೇಲೇರಿ ತಮ್ಮ ಜೀವ ಉಳಿಸಿಕೊಳ್ಳುತ್ತಿದ್ದವೇನೋ ಅಂದುಕೊಂಡೆ.
ಈ ರೀತಿ ಅಂದುಕೊಂಡಿದ್ದು ನಂತರ ನನಗೆ ಅಸಹ್ಯ ತರಿಸಿತು ಮತ್ತು ನಾನು ಇವುಗಳ ತಂಟೆಗೆ ಹೋಗದೆ ಹಾಗೆ ಇದ್ದುಬಿಟ್ಟೆ. ಸುಮಾರು ಎರಡು ಗಂಟೆ ಕಳೆದ ನಂತರ ನನಗೆ ಯಾಕೋ ಏನೋ ಕುತೂಹಲ ಉಂಟಾಯಿತು. ಮತ್ತೆ ನಾನು ಇರುವೆಗಳು ಬಿದ್ದಿದ್ದ ಈ ನೀರಿನ ಬಾಟಲಿಯೊಳಗೆ ಇಣುಕಿ ನೋಡಿದೆ. ಆಗ ನಾನು ಬೆಕ್ಕಸಬೆರಗುಗೊಂಡೆ; ಎಲ್ಲಾ ಇರುವೆಗಳು ಜೀವಂತವಾಗಿದ್ದು ಇದಕ್ಕೆ ಕಾರಣವಾಗಿತ್ತು! ಇಷ್ಟು ಸಮಯದಲ್ಲಿ ಅವುಗಳು ಒಂದಕ್ಕೊಂದು ಭಾರ ಹೊರುತ್ತಾ ನೈಜ ‘ದ್ವೀಪ ಪ್ರದೇಶ’ದಲ್ಲಿ ಪಿರಮಿಡ್ ಅನ್ನು ಕಟ್ಟಿಕೊಂಡಿದ್ದವು. ಅದರಲ್ಲಿ ಕೆಲವು ಇತರ ಇರುವೆಗಳ ಬೆಂಬಲ ಪಡೆದುಕೊಂಡು ಪಾಳೆ ಪ್ರಕಾರ ಕೆಳಗಡೆ ನೀರಿನಲ್ಲಿ ತೇಲುತ್ತಿದ್ದವು.
ನನ್ನ ಉಸಿರು ಬಿಗಿಹಿಡಿದು ಇದನ್ನೆಲ್ಲಾ ನೋಡುತ್ತಾ ಕುಳಿತೆ. ಈ ಇರುವೆಗಳು ಪಿರಮಿಡ್ ಕಟ್ಟಿದಾಗ ಕೆಳಭಾಗದಲ್ಲಿದ್ದಂತಹವು ನಿಜವಾಗಿಯೂ ನೀರಿನಲ್ಲಿ ಮುಳುಗಿದ್ದವು, ಆದರೆ ಕೆಳಗಡೆ ಮುಳುಗಿದ್ದಂತಹ ಇರುವೆಗಳು ಹಾಗೆ ಮುಳುಗಿಕೊಂಡೇ ಇರಲಿಲ್ಲ. ಸ್ವಲ್ಪ ಸಮಯದ ನಂತರ ಮೇಲಿದ್ದ ಇರುವೆಗಳು ತಾವೇ ಸ್ವತಃ ಕೆಳಗಿಳಿಯುತ್ತಿದ್ದವು. ಕಳೆಗೆ ನೀರಿನಲ್ಲಿ ಮುಳುಗಿದ್ದ ಇರುವೆಗಳು ಆತುರಪಡದೆ, ಇತರ ಇರುವೆಗಳನ್ನು ತಳ್ಳದೆ ಮೇಲಕ್ಕೆ ಹೋದವು!
ಯಾವೊಂದು ಇರುವೆಗಳು ಕೂಡ ತಾವು ಮಾತ್ರ ಬದುಕಿ ಉಳಿಯಬೇಕೆಂಬ ಕಡೆ ಪ್ರಯತ್ನ ಹಾಕಲಿಲ್ಲ. ಇದಕ್ಕೆ ಬದಲಾಗಿ, ಪ್ರತಿಯೊಂದು ಇರುವೆಗಳು ಈ ಪಿರಮಿಡ್ಡಿನಲ್ಲಿ ಅತ್ಯಂತ ಕಷ್ಟಕರವಾದ ಸ್ಥಳವಾದ ಕೆಳಭಾಗಕ್ಕೆ ಹೋಗಲು ಪ್ರಯತ್ನಿಸಿದವು. ಒಂದಕ್ಕೊಂದು ಸಹಕರಿಸುತ್ತ ಈ ಪಿರಮಿಡ್ ವ್ಯವಸ್ಥೆಯಲ್ಲಿ ಪಾಲ್ಗೊಂಡಿದ್ದು ನನ್ನ ಹೃದಯಕ್ಕೆ ತಟ್ಟಿತು.
ನಾನು ಇದನ್ನೆಲ್ಲಾ ನೋಡುತ್ತಾ ಬೇರೆ ಏನೋ ಮಾಡಲು ಹೋಗಲಿಲ್ಲ. ಬಾಟಲಿಯ ತುದಿ ಭಾಗದಿಂದ ಬಹಳ ಸುಲಭವಾಗಿ ಒಂದು ಚಮಚವನ್ನು ಒಳ ತೂರಿಸಬಹುದೆಂದು ನನಗೆ ಹೊಳೆಯಿತು ಮತ್ತು ಬಹಳ ಎಚ್ಚರಿಕೆಯಿಂದ ಬಾಟಲಿಯೊಳಗೆ ಚಮಚವನ್ನು ತೂರಿಸಿದೆ. ತಮ್ಮ ಪ್ರಾಣಭಿಕ್ಷೆಗಾಗಿ ಕಾಯುತ್ತಿದ್ದ ಇರುವೆಗಳು ಒಂದಿನಿತು ಬೆದರದೆ ಒಂದೊಂದಾಗಿ ಬಾಟಲಿಯಿಂದ ಹೊರಬರಲು ಪ್ರಾರಂಭಿಸಿದವು.
ಇದೆಲ್ಲವೂ ಸರಾಗವಾಗಿಯೇ ನಡೆಯುತ್ತಿತ್ತು. ಇವುಗಳಲ್ಲಿ ಒಂದು ಇರುವೆ ಬಳಲಿ ಬೆಂಡಾಗಿ, ಮೇಲಕ್ಕೆ ಬರಲಾಗದೆ ಮತ್ತೆ ನೀರಿಗೆ ಬಿತ್ತು ಮತ್ತು ನನ್ನ ಜೀವಮಾನದುದ್ದಕ್ಕೂ ನೆನಪಿಡುವ ಪ್ರಸಂಗವೊಂದು ಅಲ್ಲಿ ನಡೆಯಿತು.
ಬಹುತೇಕ ಹೊರಗೆ ಬಂದು ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದ ಕೊನೆಯ ಇರುವೆ ಇದ್ದಕ್ಕಿದ್ದಂತೆ ಮತ್ತೆ ಪ್ರಾಣಾಪಾಯವಿರುವ ಬಾಟಲಿಯ ನೀರಿನೊಳಕ್ಕೆ ನುಗ್ಗಿತು. ಅದು ಕೆಳಗೆ ಬಂದು, “ತಾಳ್ಮೆಯಿಂದ ಇರು ಸಹೋದರಿ, ನಾನು ನಿನ್ನನ್ನು ಇಲ್ಲಿ ಸಾಯಲು ಬಿಡುವುದಿಲ್ಲ!” ಎಂದು ಹೇಳುವಂತೆ ಭಾಸವಾಯಿತು.
ಅವಳು ನೀರಿನಲ್ಲಿ ಪ್ರೀತಿಯನ್ನು ಬೆರಸಿದಳು. ಮುಳುಗುತ್ತಿದ್ದವಳಿಗೆ ಬಿಗಿಯಾಗಿ ಅಂಟಿಕೊಂಡಳು. ಆದರೆ ಅವಳು ಅವಳನ್ನು ತಾನೇ ಸ್ವತಃ ಹೊರತೆಗೆಯಲು ಸಾಧ್ಯವಾಗಲಿಲ್ಲ. ಇದನ್ನೆಲ್ಲಾ ನೋಡುತ್ತಾ ಇದ್ದ ನಾನು ಮತ್ತೆ ಏನೋ ಮಾಡಲು ಹೋಗಲಿಲ್ಲ, ನಾನು ಚಮಚವನ್ನು ಅವುಗಳ ಹತ್ತಿರಕ್ಕೆ ಹಿಡಿದೆ. ನಂತರ ಈ ಗೆಳತಿಯರಿಬ್ಬರೂ ಜೀವಂತವಾಗಿ ಒಟ್ಟಿಗೆ ಹೊರಬಂದರು.
ಜೀವಕ್ಕೆ ಜೀವ ನೀಡುವ ಸ್ನೇಹ ಮತ್ತು ತ್ಯಾಗದ ಕುರಿತು ಇರುವ ಯಾವುದೇ ಚಲನಚಿತ್ರ ಅಥವಾ ಪುಸ್ತಕಕ್ಕಿಂತ ಹೆಚ್ಚಾಗಿ ಈ ಘಟನೆ ನನ್ನನ್ನು ಮನಕಲಿಕಿತು. ನನ್ನಲ್ಲಿ ಭಾವನೆಗಳ ಬಿರುಗಾಳಿಯೇ ಬೀಸಿತು: ಈ ಇರುವೆಗಳನ್ನು ಅಸೂಕ್ಷ್ಮ ಜೀವಿಗಳೆಂದು ನಾನು ಅಂದುಕೊಂಡಿದ್ದಕ್ಕೆ ನನಗೆ ನಾನು ಖಂಡಿಸಿಕೊಳ್ಳುತ್ತೇನೆ. ನಂತರ ಆ ಒಂದು ಇರುವೆಯ ಪ್ರತಿರೋಧಕ್ಕೆ ಬೆಕ್ಕಸಬೆರಗು ವ್ಯಕ್ತಪಡಿಸುತ್ತೇನೆ; ಅವಳ ಶಿಸ್ತು ಮತ್ತು ಕೆಚ್ಚೆದೆಯ ತ್ಯಾಗಕ್ಕೆ ಒಂದು ಮೆಚ್ಚುಗೆ ಇರಲಿ… ಮತ್ತು ಕೊನೆಯಲ್ಲಿ ನನಗೆ ನಾಚಿಕೆಯಾಗಬೇಕು.
ಇದನ್ನೆಲ್ಲಾ ನೋಡುವಾಗ ಮನುಷ್ಯ ಕುಲಕ್ಕೆ ನಾಚಿಕೆಯಾಗಬೇಕು. ನಮಗೆ ನಮ್ಮಗಳ ಜೀವವೇ ಮುಖ್ಯ. ನಾವು ಒಬ್ಬರಿಗೊಬ್ಬರು ಸ್ಪಂದಿಸುತ್ತಾ ಲಾಭದ ಪ್ರಯೋಜನಗಳನ್ನು ಪಡೆದುಕೊಳ್ಳುವುದಿಲ್ಲ. ಸಮಾಜದಲ್ಲಿ ಸಂಕಷ್ಟಕ್ಕೊಳಪಟ್ಟವರನ್ನು ಮೇಲಕ್ಕೆತ್ತಲು ಪ್ರಯತ್ನ ಪಡುವುದು ಅಪರೂಪ. ಪರಸ್ಪರರಿಗೆ ಸಹಾಯವಾಗುವಂತಹ ಸೇತುವೆಗಳನ್ನು ನಿರ್ಮಿಸುವ ಬದಲು ನಾವು ಗೋಡೆಗಳನ್ನು ಕಟ್ಟುತ್ತಿದ್ದೇವೆ.
ಇರುವೆಗಳು ತುಂಬಾ ಸಣ್ಣ ಜೀವಿಗಳು. ಅವುಗಳೇ ಪರಸ್ಪರ ಸಹಾಯ, ನಿಸ್ವಾರ್ಥ ಗುಣಗಳಿಗೆ ಸಮರ್ಥವಾಗಿದ್ದರೆ, ನಾವು ಮನುಷ್ಯರು ಇತರರ ದುಃಖಕ್ಕೆ ಕಿವುಡರಾಗಿರುವುದು ಏಕೆ?
ಆ ದಿನ ನನಗೆ ಒಂದು ವಿಷಯ ಅರ್ಥವಾಯಿತು: ನಮ್ಮಗಳ ಶಕ್ತಿ ನಾವುಗಳು ಒಗ್ಗೂಡುವುದರಲ್ಲಿದೆ ಮತ್ತು ಯಾರಾದರೂ ಇನ್ನೂ ಸರಿಯಾಗಿ ಬದುಕುವುದು ಹೇಗೆ ಎಂದು ತಿಳಿದಿಲ್ಲದಿದ್ದರೆ, ಅವರು ಇರುವೆಗಳಿಂದ ಪಾಠ ಕಲಿಯಲಿ.
ಇಂಗ್ಲೀಷ್ ಮೂಲ: ಲಲಿತ
ಕನ್ನಡಕ್ಕೆ: ಪೃಥ್ವಿ ಕಣಸೋಗಿ
ಆಹಾರ ಭದ್ರತೆಯ ಖಾತ್ರಿಗಾಗಿ ಕೃಷಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಲಿ


