Homeಮುಖಪುಟಇಲ್ಲೊಂದು ಓದು ಕ್ರಾಂತಿ: ಓದಿನ ಮೂಲಕ ವಿಚಾರಪರ ತಿಳುವಳಿಕೆಯ ಬೆನ್ನು ಬಿದ್ದಿರುವ ಬಳಗ

ಇಲ್ಲೊಂದು ಓದು ಕ್ರಾಂತಿ: ಓದಿನ ಮೂಲಕ ವಿಚಾರಪರ ತಿಳುವಳಿಕೆಯ ಬೆನ್ನು ಬಿದ್ದಿರುವ ಬಳಗ

ಕರಾವಳಿಯ ಮೂಲ ನಿವಾಸಿಗಳಾದ ಕೊರಗರ ಪರಿಸ್ಥಿತಿಯನ್ನು ನಮಗೆ ತಿಳಿಸುವ ಚೋಮನ ದುಡಿ, ವಿಭಜನೆಯಿಂದ ಆದ ದೇಶಕ್ಕಾದ ಗಾಯವನ್ನು ತಿಳಿಸುವ ವಿಭಜನೆಯ ಕತೆಗಳು, ಗಿರೀಶ್ ಕಾರ್ನಾಡರ ನಾಟಕ ಇವೆಲ್ಲವೂ ಮನುಷ್ಯರನ್ನು ಹೆಚ್ಚು ಮನುಷ್ಯರನ್ನಾಗಿಸುತ್ತಾ ಹೋಗುವ ಪುಸ್ತಕಗಳೇ ಆಗಿವೆ.

- Advertisement -
- Advertisement -

‘ಕೋಶ ಓದು ದೇಶ ಸುತ್ತು’ ನಮ್ಮ ಜನಪದ ನುಡಿಗಟ್ಟು. ಒಂದು ಒಳ್ಳೆಯ ಓದು ನಮ್ಮನ್ನು ಮನುಷ್ಯರನ್ನಾಗಿ ಮಾಡುತ್ತದೆ. ಈಗಿನ ತಲೆಮಾರು ಓದುತ್ತಿಲ್ಲ ಎಂದು ಅನೇಕರ ದೂರುಗಳಿವೆ. ಇದರಾಚೆಗೂ ಇಂತಹ ಸಾರ್ವತ್ರಿಕ ಅಭಿಪ್ರಾಯವನ್ನು ಬದಲಾಯಿಸಬೇಕು ಹಾಗೂ ಯುವಜನರನ್ನು ಓದಿನ ಕಡೆಗೆ ಸೆಳೆಯಬೇಕು ಎಂದು “ಕೋಶ ಓದು ದೇಶ ನೋಡು” ಎಂಬ ಉತ್ಸಾಹಿ ತಂಡ ಕಳೆದ ನಾಲ್ಕು ವರ್ಷದಿಂದ ಓದು ಅಭಿಯಾನ ನಡೆಸುತ್ತಿದೆ.

ತಂಡದ ನಾಲ್ಕನೇ ವರ್ಷದ ಕಾರ್ಯಕ್ರಮವಾದರೂ ಇದು ಐದನೇ ಅಭಿಯಾನವಾಗಿದೆ. ಮೊದಲಿಗೆ ನಿರಂಜನರ ‘ಚಿರಸ್ಮರಣೆ’ಯಿಂದ ಪ್ರಾರಂಭವಾಗಿ ಈಗ ಪೂರ್ಣ ಚಂದ್ರ ತೇಜಸ್ವಿಯ ಪುಸ್ತಕಗಳನ್ನು ಅದರಲ್ಲೂ ವಿಶೇಷವಾಗಿ ತೇಜಸ್ವಿಯ ‘ಚಿದಂಬರ ರಹಸ್ಯ’, ‘ಕರ್ವಾಲೋ’, ‘ಜುಗಾರಿ ಕ್ರಾಸ್’ ಮತ್ತು ‘ಕಿರಗೂರಿನ ಗಯ್ಯಾಳಿ’ಗಳನ್ನು ಎತ್ತಿಕೊಂಡಿದೆ. ಇದರ ನಡುವೆ ಶಿವರಾಮ ಕಾರಂತರ ’ಚೋಮನ ದುಡಿ’, ದೇಶದ ವಿಭಜನೆ ನಡೆದಾಗ ದೇಶದಲ್ಲಿ ನಡೆದ ಕೋಮುವಿಭಜನೆಯನ್ನು ಚಿತ್ರಿಸುವ ಖುಷ್ವಂತ್ ಸಿಂಗ್ ಅವರ ‘ಟ್ರೈನ್ ಟು ಪಾಕಿಸ್ತಾನ್’, ಭೀಷ್ಮ ಸಹಾನಿಯವರ ‘ತಮಸ್’, ಸ್ವತಃ ದೇಶ ವಿಭಜನೆಯ ಸಂತ್ರಸ್ತರಾದ ಮಾಂಟೋ ಅವರ ಕತೆಗಳು, ಜತೆಗೆ ಕಳೆದ ವರ್ಷ ಗಿರೀಶ್ ಕಾರ್ನಾಡರ ಪುಸ್ತಕಗಳಾದ ‘ತುಘಲಕ್’, ‘ತಲೆದಂಡ’, ‘ಟೀಪೂ ಕಂಡ ಕನಸು’, ‘ಆಡಾಡತ ಆಯುಷ್ಯ’ ಮುಂತಾದ ಪುಸ್ತಕಗಳನ್ನು ಈ ತಂಡ ಎತ್ತಿಕೊಂಡಿತ್ತು.

ಓದುವುದು ಎಂದರೆ ಪ್ರಸ್ತುತ ಕಾಲಘಟ್ಟದ ಸಮಸ್ಯೆಗಳಿಗೆ, ಸವಾಲುಗಳಿಗೆ ಪರಿಹಾರವಾಗಿ ಹಾಗೂ ಗತಕಾಲದಲ್ಲಿ ನಡೆದ ತಪ್ಪುಗಳು ಪುನಃ ನಡೆಯದಂತೆ ಎಚ್ಚರಿಸುವ ಪುಸ್ತಕಗಳನ್ನೇ ತಂಡವು ಎತ್ತಿಕೊಳ್ಳುತ್ತದೆ. ಅದಕ್ಕಾಗಿಯೆ ಅಭಿಯಾನವು ಪ್ರಾರಂಭದ ಓದಿನಲ್ಲಿ “ಹೊಸಕಾಲದ ಸವಾಲುಗಳಿಗೆ ಗತಕಾಲದ ಸ್ಫೂರ್ತಿ” ಎಂಬ ವಾಕ್ಯವನ್ನು ಘೋಷವಾಕ್ಯವನ್ನಾಗಿ ಮಾಡಿತ್ತು. ಅದರಂತೆ ಪುಸ್ತಕವನ್ನೂ ಅದಕ್ಕೆ ತಕ್ಕಂತೆ ಆಯ್ಕೆ ಮಾಡಿತ್ತು. ಸ್ವಾತಂತ್ಯ್ರ ಹೋರಾಟದ ಸಮಯದಲ್ಲಿ ಬ್ರಿಟಿಷರೊಂದಿಗೆ ಹಾಗೂ ಭೂಮಾಲಿಕರೊಂದಿಗೆ ತಮ್ಮ ಹಕ್ಕುಗಳಿಗಾಗಿ ಹೋರಾಡಿದ ತುಳುನಾಡಿನ ರೈತರ ಕತೆಗಳನ್ನು ಹೇಳುವ ನಿರಂಜನರ ಚಿರಸ್ಮರಣೆ ಆ ಹೊತ್ತಿಗೆ ಸರಿಯಾದ ಆಯ್ಕೆಯಾಗಿತ್ತು. ಕೋಮುವಾದಿಗಳ ರಾಜಧಾನಿ ಎಂದು ಕರೆಯಲ್ಪಡುವ ಮಂಗಳೂರಿನಲ್ಲಿ ಕ್ರಾಂತಿಯ ಧ್ವನಿ ಮೊಳಗಿಸಿದ ಹೋರಾಟದ ಕತೆಯದು. ಪ್ರಸ್ತುತ ಕೇರಳಕ್ಕೆ ಸೇರಿರುವ ಕಯ್ಯೂರಿನಲ್ಲಿ ಮಣ್ಣಿನ ಮಕ್ಕಳು ತಮ್ಮ ಸ್ವಾತಂತ್ರಕ್ಕಾಗಿ ಹೇಗೆ ಒಗ್ಗಟ್ಟಾಗಿ ಹೋರಾಡಿದರು ಮತ್ತು ಹೇಗೆ ಸೌಹಾರ್ದದಿಂದಿದ್ದರು ಎಂಬ ಉದಾತ್ತ ಧ್ಯೇಯಗಳನ್ನು ಕಟ್ಟಿ ಕೊಡುವ ಪುಸ್ತಕವದು.

ಇದರನಂತರ ಎತ್ತಿಕೊಂಡ ಪುಸ್ತಕಗಳು ಕೂಡಾ ಓದುಗರನ್ನು ಮನುಷ್ಯತ್ವದ ಕಡೆಗೆ ತುಡಿಯುವಂತೆ ಪ್ರೇರೇಪಿಸುವಂತಾಗಿದ್ದವು. ದಲಿತರ ನೋವುನಲಿವನ್ನು ಕಟ್ಟಿಕೊಡುವ ಅಥವಾ ಕರಾವಳಿಯ ಮೂಲ ನಿವಾಸಿಗಳಾದ ಕೊರಗರ ಪರಿಸ್ಥಿತಿಯನ್ನು ನಮಗೆ ತಿಳಿಸುವ ಚೋಮನ ದುಡಿ, ವಿಭಜನೆಯಿಂದ ಆದ ದೇಶಕ್ಕಾದ ಗಾಯವನ್ನು ತಿಳಿಸುವ ವಿಭಜನೆಯ ಕತೆಗಳು, ಗಿರೀಶ್ ಕಾರ್ನಾಡರ ನಾಟಕ ಇವೆಲ್ಲವೂ ಮನುಷ್ಯರನ್ನು ಹೆಚ್ಚು ಮನುಷ್ಯರನ್ನಾಗಿಸುತ್ತಾ ಹೋಗುವ ಪುಸ್ತಕಗಳೇ ಆಗಿವೆ.

“ನಮ್ಮ ಸಂಪರ್ಕದಲ್ಲಿ ಇರುವ ಹುಡುಗರು ಕೇರಳದಲ್ಲಿರುವ ’ಕಯ್ಯೂರು’ಗೆ ಹೋಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸುತ್ತಿದ್ದರು. ಇದಕ್ಕಾಗಿ, ಈಗಿನ ಯುವಜನರು ಪುಸ್ತಕಗಳನ್ನು ಓದುವುದಿಲ್ಲ ಎಂಬ ಸಾರ್ವತ್ರಿಕ ಅಭಿಪ್ರಾಯವನ್ನು ಮುರಿಯಲು ನಾವೊಂದು ಯೋಜನೆಯನ್ನು ಹಾಕಿಕೊಂಡೆವು. ಕಯ್ಯೂರಿನ ಬಗ್ಗೆ ಕತೆಯಿರುವ ನಿರಂಜನರ ’ಚಿರಸ್ಮರಣೆ’ ಓದಿ ನಂತರ ಅಲ್ಲಿಗೆ ಹೋಗುವುದು. ಜೊತೆಗೆ ಇನ್ನಷ್ಟು ಯುವ ಜನರಿಗೆ ಸ್ಪೂರ್ತಿಯಾಗುವಂತೆ ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳಲು ತೀರ್ಮಾನಿಸಿ ಓದು ಅಭಿಯಾನವನ್ನು ಪ್ರಾರಂಭಿಸಿದೆವು. ನಮ್ಮ ಮೊದಲ ಪ್ರಯತ್ನ ನಿರೀಕ್ಷಗೂ ಮೀರಿ ಯಶಸ್ವಿಯಾಯಿತು, ಎಲ್ಲಿಯವರೆಗೆಂದರೆ ಪುಸ್ತಕದ ಅಂಗಡಿಯಲ್ಲಿ ಈ ಪುಸ್ತಕ ಖಾಲಿಯಾಗಿ ನವಕರ್ನಾಟಕ ಪ್ರಕಾಶನ ಪುಸ್ತಕವನ್ನು ಮರುಮುದ್ರಣ ಮಾಡುವಷ್ಟರ ಮಟ್ಟಿಗೆ ಇದು ಯಶಸ್ವಿಯಾಯಿತು. ಈ ಯಶಸ್ಸು ನಮ್ಮನ್ನು ಇನ್ನಷ್ಟು ಅಭಿಯಾನಗಳಿಗೆ ಪ್ರೇರೇಪಿಸಿತು” ಎನ್ನುತ್ತಾರೆ ತಂಡದ ಸಂಯೋಜಕರಲ್ಲೊಬ್ಬರಾದ ಮುನೀರ್ ಕಾಟಿಪಳ್ಳ.

ತಂಡದಲ್ಲಿ ಆರಂಭದಿಂದಲೂ ಭಾಗವಹಿಸುತ್ತಾ ತಂಡದ ಭಾಗವಾಗಿ ಇದ್ದ ಲೇಖಕಿ ಚೇತನ ತೀರ್ಥಹಳ್ಳಿ “ಓದಿನಿಂದ ಹೇಗೆ ನಾವು ಬದಲಾಗಬಹುದು. ಓದಿನಿಂದ ನಾವು ಪಡೆಯುವುದೇನು. ಒಂದು ಓದು ನಮ್ಮ ದೃಷ್ಟಿಕೋನವನ್ನು ಹೇಗೆ ಬದಲಾಯಿಸುತ್ತದೆ. ಓದಿದವುಗಳನ್ನು ಹೇಗೆ ಕನ್ನಡಿಯ ತರ ಇಟ್ಟುಕೊಂಡು ನೋಡಬಹುದು ಮುಂತಾದವುಗಳ ಅಭ್ಯಾಸ ಕೂಡಾ ಈ ಅಭಿಯಾನದ ಹಿಂದೆ ಇದೆ” ಎನ್ನುತ್ತಾರೆ.

ಈ ಹಿಂದೆ ನಮ್ಮ ನಾಡಿನಲ್ಲಿ ನಡೆದ ಭಾಷಾ ಚಳವಳಿ, ದಲಿತ ಬಂಡಾಯ, ರೈತ ಹೋರಾಟ ಹಾಗೂ ಕಾರ್ಮಿಕ ಚಳವಳಿಗಳ ಹಿಂದೆ ಪುಸ್ತಕದ ಓದಿನ ದಟ್ಟ ಪ್ರಭಾವವಿದೆ. ಪ್ರಸ್ತುತ ಐದನೇ ಅಭಿಯಾನ ತೇಜಸ್ವಿಯ ಓದಿನ ಮೂಲಕ ನಡೆಯುತ್ತಿದೆ. ತಂಡವು ವಾಟ್ಸಪ್‍ನಲ್ಲಿ ಮೂರಕ್ಕಿಂತ ಹೆಚ್ಚಿನ ಗ್ರೂಪನ್ನು ಇದಕ್ಕಾಗಿ ಕಟ್ಟಿಕೊಂಡಿದೆ. ಈ ಗ್ರೂಪಿನಲ್ಲಿ ಓದಿನ ಬಗ್ಗೆಗಿನ ಚರ್ಚೆ, ವಿಚಾರ ವಿನಿಮಯ ಮುಂತಾದವುಗಳನ್ನು ಮಾಡುತ್ತಿದೆ. ಎಲ್ಲರೂ ಒಂದು ನಿರ್ದಿಷ್ಟ ಸಮಯದಲ್ಲಿ ಅವರವರ ಸ್ಥಳಗಳಲ್ಲೇ ಓದಿ ಕೊನೆಯ ಎರಡು ದಿನದಂದು ತಂಡ ಒಟ್ಟು ಸೇರುತ್ತದೆ. ಈ ಎರಡು ದಿನ ಸಡೆಯುವ ಸಮಾರೋಪ ಸಮಾರಂಭದಲ್ಲಿ ನಾಡಿನ ಹಿರಿಯ ಸಾಹಿತಿಗಳನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಕರೆದು ಅವರೊಂದಿಗೆ ತಮ್ಮ ಓದಿನ ಬಗೆಗಿನ ತಿಳಿವನ್ನು ವಿಸ್ತರಿಸಲು ಸಂವಾದ ನಡೆಸಲಾಗುತ್ತದೆ. ಇಷ್ಟೇ  ಅಲ್ಲದೆ ಗುಂಪು ಚರ್ಚೆ, ಹರಟೆ, ಸುತ್ತಾಟ, ಹಾಡು, ನಾಟಕ ಇತ್ಯಾದಿ ಕಾರ್ಯಕ್ರಮಗಳೂ ಇರುತ್ತದೆ. ”ಒಂದು ವೇಳೆ ಕೊರೊನಾ ಇಲ್ಲವೆಂದಿದ್ದರೆ ಈ ಆಗಸ್ಟ್ ತಿಂಗಳಲ್ಲಿ ಇದರ ಸಮಾರೋಪ ಸಮಾರಂಭ ನಡೆಯುತ್ತಿತ್ತು. ಎಲ್ಲವು ಸರಿಯಾದರೆ ಸೆಪ್ಟೆಂಬರ್ ತಿಂಗಳಲ್ಲಿ ಸಮಾರೋಪ ನಡೆಯುತ್ತದೆ.” ಎಂದು ಮುನೀರ್ ಕಾಟಿಪಳ್ಳ ಹೇಳುತ್ತಾರೆ.

ಅಭಿಯಾನ ನಡೆಯುತ್ತಿದೆ ಹಾಗೆಯೆ ತಂಡವು ದಲಿತ ಲೇಖಕರನ್ನು ಓದಿಗೆ ಎತ್ತಿಕೊಳ್ಳುತ್ತಿಲ್ಲ ಎಂಬ ಬಗ್ಗೆ ಹಲವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸುತ್ತಾ ತಂಡದ ಸಹಸಂಚಾಲಕರಲ್ಲೊಬ್ಬರಾದ ಡಾ. ನವೀನ್ ಮಂಡಗದ್ದೆ, ಲೇಖಕನ ಜಾತಿ ಹಿನ್ನೆಲೆಯಲ್ಲಿ ನಾವು ಪುಸ್ತಕಗಳನ್ನು ಎತ್ತಿಕೊಳ್ಳುವುದಿಲ್ಲ, ನಮಗೆ ವಿಷಯಗಳು ಮುಖ್ಯವಾಗಿವೆ. ಈವರೆಗೆ ನಡೆದ ಯಾವ ಅಭಿಯಾನ ಕೂಡಾ ಬರಹಗಾರನ ಜಾತಿಯ ಹಿನ್ನೆಲೆಯಲ್ಲಿ ನಡೆದೇ ಇಲ್ಲ. ನಮಗೆ ದಲಿತ ಲೇಖಕರ ಬಗ್ಗೆ ಅಥವಾ ಅವರ ಬರಹಗಳ ಬಗ್ಗೆ ನಿರ್ಲಕ್ಷ್ಯವಿಲ್ಲ, ಮುಂದಿನ ದಿನಗಳಲ್ಲಿ ವಿಷಯಾಧಾರಿತವಾಗಿ ದಲಿತ ಲೇಖಕರ ಬರಹಗಳನ್ನು ಚರ್ಚೆಗೆ ಎತ್ತಿಕೊಳ್ಳುವ ನಂಬಿಕೆ ಇದ್ದೇ ಇದೆ ಎಂದು ಹೇಳುತ್ತಾರೆ.

“ಈ ಪ್ರಶ್ನೆಗಳು ತಪ್ಪು ಎಂದಲ್ಲ, ಎಲ್ಲವು ನ್ಯಾಯಯುತವಾದವುಗಳೆ. ಆದರೆ ನಮಗೆ ವಿಷಯಗಳು ಮುಖ್ಯ ಹಾಗೆಂದು ಲೇಖಕನನ್ನು ಗುರುತಿಸಿಕೊಂಡು ಓದು ಅಭಿಯಾನ ಮಾಡಿಲ್ಲವೆಂದಲ್ಲ. ಕಳೆದ ವರ್ಷ ಗಿರೀಶ್ ಕಾರ್ನಾಡರು ನಿಧನರಾದಾಗ ನಡೆದ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಲೇಖಕನಿಗೆ ಮಹತ್ವ ಕೊಟ್ಟು ಅಭಿಯಾನ ನಡೆಸಿದ್ದೇವೆ ಆದರೆ ಅವರ ಬರಹಗಳೇನು ಸಣ್ಣ ವಿಷಯವಲ್ಲ. ಬಸವಣ್ಣನ ತಲೆದಂಡ, ತುಘಲಕ್ ಇವೆಲ್ಲವು ಮಹತ್ವದ ಕೃತಿಗಳೆ. ಅದರಾಚೆಗೂ ನಮ್ಮ ಈವರೆಗಿನ ಓದು ಅಭಿಯಾನ ದಲಿತ, ಭೂಹೀನ, ಕೃಷಿ ಕೂಲಿ ಕಾರ್ಮಿಕರ, ಅಲ್ಪಸಂಖ್ಯಾತರ ಮುಂತಾದ ತಳ ಸಮುದಾಯದ ಬದುಕು ಬವಣೆಗಳ ಕುರಿತೆ ಆಗಿದೆ. ನಿರಂಜನರ ಚಿರಸ್ಮರಣೆ ಭೂಹೀನರ ಬಗ್ಗೆ ಪ್ರಶ್ನೆಗಳೆತ್ತಿದ ಪುಸ್ತಕ. ಸ್ವಾತಂತ್ರ್ಯ ಹೋರಾಟವೆಂದರೆ ಮೇಲ್ವರ್ಗದವರದ್ದು ಎಂಬ ಅಭಿಪ್ರಾಯವಿತ್ತು. ಆದರೆ ಕರಾವಳಿಯಲ್ಲಿ ಸ್ವಾತಂತ್ರಕ್ಕಾಗಿ ಪ್ರಾಣತ್ಯಾಗ ಮಾಡಿದವರು ತಳಸಮುದಾಯದವರೆ ಇದ್ದಿದ್ದು. ಇವುಗಳೆಲ್ಲವು ನಮ್ಮ ವಿಷಯಗಳಾಗಿದೆ. ಚೋಮನದುಡಿ ಕೂಡಾ ದಲಿತರ ಬದುಕು ಬವಣೆಗಳನ್ನು ಕಟ್ಟಿಕೊಡುವ ಪುಸ್ತಕವೆ ಆಗಿದೆ” ಎಂದು ಮುನೀರ್ ಕಾಟಿಪಳ್ಳ ಹೇಳುತ್ತಾರೆ.

ಒಟ್ಟಿನಲ್ಲಿ ಪ್ರಸ್ತುತ ನಡೆಯುತ್ತಿರುವ ಈ ಐದನೇ ಓದು ಹಬ್ಬ ಕೊರೊನಾದಿಂದ ಒಂದಷ್ಟು ದಿನಗಳು ತಡವಾಗಿ ನಡೆದರೂ, ಆ ಸಮಯದಲ್ಲಿ ಇನ್ನೊಂದಷ್ಟು ಹೆಚ್ಚು ಪುಸ್ತಕಗಳನ್ನು ಓದಿ ಅಭಿಯಾನವನ್ನು ಯಶಸ್ವಿಯಾಗಿ ಮುಗಿಸಲಿ ಎಂದು ಆಶಿಸೋಣ.


ಇದನ್ನು ಓದಿ: ಶಾಲೆಗಳು ಸಮಾಜ ಒಡೆಯುತ್ತಿವೆ: ಶಿಕ್ಷಣ ವ್ಯವಸ್ಥೆಯನ್ನು ತಲೆಕೆಳಗು ಮಾಡಬೇಕಿದೆ- ಇವಾನ್ ಡೊಮಿನಿಕ್ ಇಲ್ಲಿಯಚ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...