ತಮ್ಮ ಖಾಸಗಿ ಜಮೀನಿಗೆ ನುಗು ವನ್ಯಜೀವಿ ಅಭಯಾರಣ್ಯದ ಮೂಲಕ ತೆರಳಲು ಇಂಧನ ಸಚಿವ ಕೆ.ಜೆ ಜಾರ್ಜ್ ಅವರ ಮಗನಿಗೆ ಅನುಮತಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಮೈಸೂರು ಜಿಲ್ಲೆ ಎಚ್.ಡಿ ಕೋಟೆ ತಾಲೂಕಿನ ಸರಗೂರು ಹೋಬಳಿಯ ಶಂಬುಗೌಡನಹಳ್ಳಿ ಮತ್ತು ಲಕ್ಕಸೋಗೆ ಗ್ರಾಮಗಳಲ್ಲಿರುವ ತಮ್ಮ ಖಾಸಗಿ ಜಮೀನಿಗೆ ನುಗು ವನ್ಯಜೀವಿ ಅಭಯಾರಣ್ಯದಲ್ಲಿನ ರಸ್ತೆ ಮಾರ್ಗದ ಮೂಲಕ ಹಗಲು-ರಾತ್ರಿ ಓಡಾಡಲು ಅವಕಾಶ ನೀಡುವಂತೆ ಸಚಿವ ಜಾರ್ಜ್ ಅವರ ಮಗ ರಾಣಾ ಜಾರ್ಜ್ ನ್ಯಾಯಾಲಯವನ್ನು ಕೋರಿದ್ದರು.
ನುಗು ಅಭಯಾರಣ್ಯದಲ್ಲಿ ಹಾದು ಹೋಗುವ ರಸ್ತೆಯನ್ನು ಬಳಸದಂತೆ ನಿರ್ಬಂಧಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) 2024ರ ಮಾಚ್೯ 1ರಂದು ಹೊರಡಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ರದ್ದುಗೊಳಿಸಿದ್ದು, ರಾಣಾ ಜಾಜ್೯ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದೆ.
ತಮ್ಮ ಜಮೀನಿಗೆ ತೆರಳುವಾಗ ವನ್ಯಜೀವಿ ತಾಣದಲ್ಲಿನ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಯಾವುದೇ ಹಾನಿ ಮಾಡದಂತೆ ಇದೇ ವೇಳೆ ರಾಣಾ ಅವರಿಗೆ ಸೂಚಿಸಿದೆ.
“2024ರ ಮಾಚ್೯ 1ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೊರಡಿಸಿರುವ ಆದೇಶವು ರಾಣಾ ಜಾರ್ಜ್ ವಿರುದ್ಧ ಇರುವುದರಿಂದ ಅದನ್ನು ವಜಾ ಮಾಡಲಾಗಿದೆ. ರಾಣಾ ಅವರು ಯಾವುದೇ ಅಡ್ಡಿ ಇಲ್ಲದೇ ಅವರ ಆಸ್ತಿಗೆ ತೆರಳಲು ಕಾನೂನಿನ ಅನ್ವಯ ಅನುಕೂಲ ಮಾಡಿಕೊಡಬೇಕು. ಅಲ್ಲಿ ಓಡಾಡುವಾಗ ಅವರು ಭೌತಿಕವಾಗಿ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಹಾನಿ ಉಂಟು ಮಾಡಬಾರದು” ಎಂದು ನ್ಯಾಯಾಲಯ ನಿರ್ದೇಶಿಸಿರುವುದಾಗಿ barandbench.com ವರದಿ ಮಾಡಿದೆ.
ತಾನು ಶಂಬುಗೌಡನಹಳ್ಳಿ ಮತ್ತು ಲಕ್ಕಸೋಗೆಯಲ್ಲಿನ ಸರ್ವೇ ನಂಬರ್ 1, 2, 3, 26, 32 ಮತ್ತು 33ರ ಭೂಮಿಯ ಮಾಲೀಕತ್ವವನ್ನು ಹೊಂದಿದ್ದು, ಇದು ನುಗು ಅಭಯಾರಣ್ಯದ ವ್ಯಾಪ್ತಿಯಲ್ಲಿದೆ. ಈ ಆಸ್ತಿಯನ್ನು ತಾನು ವೈಯಕ್ತಿಕ ಬಳಕೆ ಮಾಡುತ್ತಿದ್ದು, ಇಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ನಡೆಸುತ್ತಿಲ್ಲ. ಇಡೀ ಪ್ರದೇಶ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿದೆ ಎಂಬ ಅರಿವಿದೆ ಎಂದು ರಾಣಾ ನ್ಯಾಯಾಲಯಕ್ಕೆ ವಿವರಿಸಿದ್ದರು ಎಂದು ವರದಿ ತಿಳಿಸಿದೆ.
ಖಾಸಗಿ ಭೂಮಿ ಮಾಲೀಕರಿಗೆ ತಮ್ಮ ಜಮೀನಿಗೆ ತೆರಳಲು ಜಾಗವಿಲ್ಲದಿದ್ದಾಗ ಸಾರ್ವಜನಿಕ ಜಾಗವನ್ನು ಬಳಕೆ ಮಾಡಲು ಅನುಮತಿಸಬೇಕು ಎಂಬುದು ಸ್ಥಾಪಿತ ಕಾನೂನು. ಹಾಲಿ ಪ್ರಕರಣದಲ್ಲಿ ರಾಣಾ ಜಾರ್ಜ್ ಅವರ ಜಮೀನು ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಈ ಜಮೀನಿಗೆ ತೆರಳಲು ಮಣ್ಣಿನ ರಸ್ತೆಯನ್ನೇ ಆಶ್ರಯಿಸಬೇಕಿದ್ದು, ಅದು ಅರಣ್ಯ ಇಲಾಖೆಯ ವಶದಲ್ಲಿದೆ. ರಾಣಾ ಅವರ ಜಮೀನಿಗೆ ತೆರಳಲು ಇನ್ನೊಂದು ರಸ್ತೆ ಇದ್ದು, ಮಾನ್ಸೂನ್ ಅಥವಾ ನುಗು ಜಲಾಶಯದಲ್ಲಿ ನೀರಿನ ಮಟ್ಟ 100 ಅಡಿಗಿಂತ ಹೆಚ್ಚಾದಾಗ ಅಲ್ಲಿ ಓಡಾಡಲು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ರಾಣಾ ಅವರಿಗೆ ಅರಣ್ಯ ಇಲಾಖೆಯ ದಾರಿ ಬಳಸದೇ ವಿಧಿಯಿಲ್ಲದಂತಾಗಿದೆ ಎಂದು ರಾಣಾ ಅವರ ಅರ್ಜಿಯಲ್ಲಿ ವಾದಿಸಲಾಗಿತ್ತು.
ಅಭಯಾರಣ್ಯದ ವ್ಯಾಪ್ತಿಯಲ್ಲಿ ಭೂಮಿ ಹೊಂದಿರುವವರಿಗೆ ಓಡಾಡಲು ವನ್ಯಜೀವಿ ಸಂರಕ್ಷಣಾ ಕಾಯಿದೆ ಸೆಕ್ಷನ್ 27(1)(ಸಿ) ಅಡಿ ವಿನಾಯಿತಿ ಇದೆ. ಈಗ ಅರಣ್ಯ ಇಲಾಖೆಯು ರಾಣಾ ಅವರನ್ನು ತಮ್ಮ ಜಮೀನಿಗೆ ಸಂಜೆ 6ರಿಂದ ಬೆಳಿಗಿನ ಜಾವ 6 ಗಂಟೆಯವರೆಗೆ ಅರಣ್ಯ ಇಲಾಖೆಯ ರಸ್ತೆಯಲ್ಲಿ ಓಡಾಡಲು ಕಾನೂನುಬಾಹಿರವಾಗಿ ನಿರ್ಬಂಧಿಸುವ ಮೂಲಕ ಕಿರುಕುಳ ನೀಡುತ್ತಿದೆ. ಅರಣ್ಯ ಇಲಾಖೆಯ ರಸ್ತೆಯನ್ನು ಬಳಕೆ ಮಾಡುವುದಕ್ಕೆ ಸಾರ್ವಜನಿಕರು ಆಕ್ಷೇಪಿಸಿರುವ ಸುದ್ದಿಯು ಮಾಧ್ಯಮಗಳಲ್ಲಿ ಪ್ರಕಟವಾಗಿರುವುದನ್ನು ಆಧರಿಸಿ ಹೆಡಿಯಾಲ ವಲಯದ ಸಹಾಯಕ ಅರಣ್ಯಾ ಸಂರಕ್ಷಣಾಧಿಕಾರಿಯು ಓಡಾಟಕ್ಕೆ ನಿರ್ಬಂಧಿಸಿದ್ದಾರೆ ಎಂದು ವಿವರಿಸಲಾಗಿದೆ. ಹೀಗಾಗಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ರದ್ದುಪಡಿಸಿ, ದಿನದ 24 ತಾಸು ತಮ್ಮ ಜಮೀನಿಗೆ ಓಡಾಲು ಅನುಮತಿಸಬೇಕು ಎಂದು ರಾಣಾ ಜಾರ್ಜ್ ಕೋರಿದ್ದರು.
ದಕ್ಷಿಣ ಕನ್ನಡ | ಸಂಘಪರಿವಾರದ ದುಷ್ಕರ್ಮಿಗಳ ಸಹಿತ 36 ಜನರ ಗಡೀಪಾರಿಗೆ ಮುಂದಾದ ಪೊಲೀಸ್ ಇಲಾಖೆ: ಪಟ್ಟಿ ಬಿಡುಗಡೆ


