Homeಮುಖಪುಟಕೇಂದ್ರದ ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ತಮಿಳುನಾಡು, ಕೇರಳ; ದನಿಗೂಡಿಸಿದ ಬಂಗಾಳ

ಕೇಂದ್ರದ ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ತಮಿಳುನಾಡು, ಕೇರಳ; ದನಿಗೂಡಿಸಿದ ಬಂಗಾಳ

- Advertisement -
- Advertisement -

ವೈವಿಧ್ಯತೆ ಮತ್ತು ಬಹುತ್ವ ಭಾರತದ ಜೀವಾಳ. ಇಲ್ಲಿ ಏಕಸಂಸ್ಕೃತಿ, ಏಕ ಭಾಷೆಗೆ ಮಹತ್ವ ಕೊಡುವುದು ಪ್ರಾಯೋಗಿಕವಲ್ಲ. ಹಾಗಾಗಿಯೇ ಹಿಂದಿ ಹೇರಿಕೆಯ ವಿರುದ್ಧ ಹಲವಾರು ಹೋರಾಟಗಳನ್ನು ದೇಶ ಕಂಡಿದೆ. ಈಗ ಮತ್ತೊಮ್ಮೆ ಹಿಂದಿ ಹೇರಿಕೆಯ ವಿಚಾರ ಮುನ್ನಲೆಗೆ ಬಂದಿದೆ. ಪ್ರತಿವರ್ಷ ಹಿಂದಿ ದಿವಸ್ ಆಚರಣೆ ಬಂದಾಗ ಅಥವಾ ಹಿಂದಿ ರಾಷ್ಟ್ರಭಾಷೆ ಎಂಬ ಸುಳ್ಳನ್ನು ಬಿಜೆಪಿ ಮುಖಂಡರು ಪುನರುಚ್ಚರಿಸಿದಾಗ ದಕ್ಷಿಣದ ರಾಜ್ಯಗಳು ಅದನ್ನು ವಿರೋಧಿಸುತ್ತಿದ್ದವು. ಬೃಹತ್ ಚರ್ಚೆ ವಾಗ್ವಾದ ನಡೆಯುತ್ತಿತ್ತು. ಹಿಂದಿ ನಾಮಫಲಕಗಳಿಗೆ ಮಸಿ ಬಳಿಯಲಾಗುತ್ತಿತ್ತು. ಆನಂತರ ಯಥಾಸ್ಥಿತಿಗೆ ಮರಳುತ್ತಿತ್ತು. ಆದರೆ ಈ ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಅಧಿಕೃತ ಭಾಷೆಗಳ ಸಂಸದೀಯ ಸ್ಥಾಯಿ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಹಿಂದಿಗೆ ಇನ್ನಿಲ್ಲದ ಪ್ರಾಧಾನ್ಯತೆ ನೀಡಲಾಗಿದೆ; ಈ ನಿಟ್ಟಿನಲ್ಲಿ ಪ್ರಾದೇಶಿಕ ಭಾಷೆಗಳ ಮೇಲೆ ಹಾಗೂ ಭಾರತದ ಒಕ್ಕೂಟ ತತ್ವದ ಮೇಲೆ ತೀವ್ರ ದಾಳಿ ಮಾಡಲಾಗಿದೆ ಎಂದು ದಕ್ಷಿಣದ ರಾಜ್ಯಗಳು ಆರೋಪಿಸಿವೆ. ಮುಖ್ಯವಾಗಿ ಹಿಂದಿ ಹೇರಿಕೆಯ ವಿರುದ್ಧ ಕೇರಳ ಮತ್ತು ತಮಿಳುನಾಡು ರಾಜ್ಯಗಳು ಆರಂಭಿಸಿರುವ ಹೋರಾಟಕ್ಕೆ, ತೆಲಂಗಾಣ, ಪಶ್ಚಿಮ ಬಂಗಾಳ ರಾಜ್ಯದ ಜನರು ಸಹ ದನಿಗೂಡಿಸಿರುವುದು ವಿಶೇ?ಷವಾಗಿದೆ.

ಅಮಿತ್ ಶಾ ವರದಿಯಲ್ಲೇನಿದೆ?

ಹಿಂದಿ ಭಾಷಿಕ ರಾಜ್ಯಗಳಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳು, ಕೇಂದ್ರೀಯ ವಿದ್ಯಾಲಯಗಳು, ಐಐಟಿ, ಐಐಎಂ, ಏಮ್ಸ್ ತರಹದ ಎಲ್ಲಾ ತಾಂತ್ರಿಕ ಮತ್ತು ತಾಂತ್ರಿಕೇತರ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಮಾಧ್ಯಮವು ಕಡ್ಡಾಯವಾಗಿ ಇಂಗ್ಲಿಷ್‌ಗೆ ಬದಲಾಗಿ ಹಿಂದಿಯಾಗಬೇಕು. ಇತರ ರಾಜ್ಯಗಳಲ್ಲಿ ಬೋಧನಾ ಮಾಧ್ಯಮವು ಸ್ಥಳೀಯ ಭಾಷೆಯಾಗಿರಬೇಕು. ಇದಲ್ಲದೆ ಕೇಂದ್ರೀಯ ಹುದ್ದೆಗಳ ಸಿಬ್ಬಂದಿಗಳಲ್ಲಿ ಹಿಂದಿಯ ಅಗತ್ಯ ಜ್ಞಾನವನ್ನು ಖಚಿತಪಡಿಸಿಕೊಳ್ಳಬೇಕು. ಅದಕ್ಕಾಗಿ ನೇಮಕಾತಿ ಪರೀಕ್ಷೆಗಳನ್ನು ಇಂಗ್ಲಿಷ್ ಬದಲಿಗೆ ಹಿಂದಿಯಲ್ಲಿ ನಡೆಸಬೇಕು. ಇಸ್ರೋ, ಡಿಆರ್‌ಡಿಓನಂತಹ ಸಂಸ್ಥೆಗಳು ಸಹ ಹಿಂದಿಯನ್ನೆ ಬಳಸಬೇಕು ಎಂಬ 112 ಶಿಫಾರಸ್ಸುಗಳನ್ನು ಅಮಿತ್ ಶಾ ನೇತೃತ್ವದ ಸಮಿತಿ ನೀಡಿದೆ.

ಅಮಿತ್ ಶಾ

ಅಮಿತ್ ಶಾ ನೇತೃತ್ವದ ಸಮಿತಿಯು ತನ್ನ 11ನೇ ವರದಿಯಲ್ಲಿ ಸಲ್ಲಿಸಿರುವ ಶಿಫಾರಸ್ಸುಗಳು ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿವೆ. ಕೇರಳ ಮತ್ತು ತಮಿಳುನಾಡು ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಈ ಸಮಿತಿಯ ಶಿಫಾರಸ್ಸುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಕರ್ನಾಟಕದ ವಿರೋಧ ಪಕ್ಷಗಳು ಈ ಹಿಂದಿ ಹೇರಿಕೆಯನ್ನು ವಿರೋಧಿಸಿವೆ. ಪಶ್ಚಿಮ ಬಂಗಾಳದಲ್ಲಿಯೂ ಪ್ರತಿಭಟನೆ ನಡೆದಿದೆ. ಪಶ್ಚಿಮ ಬಂಗಾಳದ ಪ್ರತಿಭಟನೆಯಲ್ಲಿ ಕರ್ನಾಟಕದ ಮೇರು ಸಾಹಿತಿ ಕುವೆಂಪು ಮತ್ತು ತಮಿಳುನಾಡಿನ ಹೋರಾಟಗಾರ ಅಣ್ಣಾ ದೊರೈರವರ ಫೋಟೋಗಳನ್ನು ಹಿಡಿದಿದ್ದು ಕೂಡ ಮಾರ್ದನಿಸಿತ್ತು.

ಶಿಫಾರಸ್ಸುಗಳ ವಿರುದ್ಧ ನಿರ್ಣಯ ಕೈಗೊಂಡ ತಮಿಳುನಾಡು ಸರ್ಕಾರ

ಅಮಿತ್ ಶಾ ನೇತೃತ್ವದ ವರದಿಯು ತಮಿಳು ಭಾಷಿಕರು ಸೇರಿದಂತೆ ಇತರ ಭಾಷೆಗಳನ್ನಾಡುವ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ; ಹಾಗಾಗಿ ರಾಷ್ಟ್ರಪತಿಗಳು ವರದಿಯ ಶಿಫಾರಸ್ಸುಗಳನ್ನು ಅಂಗೀಕರಿಸಬಾರದು ಎಂದು ತಮಿಳುನಾಡು ವಿಧಾನಸಭೆಯಲ್ಲಿ ಆಡಳಿತಾರೂಢ ಡಿ.ಎಂ.ಕೆ ಪಕ್ಷವು ನಿರ್ಣಯ ಮಂಡಿಸಿದ್ದು, ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದ ನಂತರ ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ.

ಇದನ್ನೂ ಓದಿ: ಬೋಧನಾ ಮಾಧ್ಯಮವಾಗಿ ಹಿಂದಿ ಹೇರಿಕೆ ವಿರೋಧಿಸಿ ತಮಿಳುನಾಡಿನಾದ್ಯಂತ ಪ್ರತಿಭಟನೆ

ಭಾಷೆ ತಮಿಳರ ಜೀವನಾಡಿ. ಹಿಂದಿಯ ಯಾಜಮಾನ್ಯ ಆಳ್ವಿಕೆಯನ್ನು ನಾವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಗುಡುಗಿದ್ದಾರೆ. “ಹಿಂದಿ ಹೇರಿಕೆ ಮಾಡುವ ಕೇಂದ್ರ ಸರ್ಕಾರದ ಪ್ರಯತ್ನಗಳು ಅಪ್ರಾಯೋಗಿಕವಾಗಿವೆ ಮತ್ತು ವಿಭಜಕ ಕ್ರಮಗಳಾಗಿವೆ. ದೇಶದಲ್ಲಿ ಹಿಂದಿ ಮಾತನಾಡದ ಜನರೆ ಬಹುಸಂಖ್ಯಾತರಾಗಿದ್ದಾರೆ. ಹೀಗಿರುವಾಗ ಹಿಂದಿಗೆ ಅನಗತ್ಯವಾಗಿ ಮಹತ್ವ ನೀಡುವುದರಿಂದ ಹಿಂದಿ ಬಾರದ ಜನರನ್ನು ಅವಮಾನಿಸುವುದಲ್ಲದೆ ಅವರನ್ನು ತೀವ್ರ ಅನಾನುಕೂಲಕರ ಪರಿಸ್ಥಿತಿಗೆ ತಳ್ಳಲಾಗುತ್ತಿದೆ” ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಸಿಎಂ ಸ್ಟಾಲಿನ್

“ಈ ವರದಿ ಜಾರಿಯಾದರೆ ಅದು ಭಾರತದ ಆತ್ಮದ ಮೇಲಿನ ನೇರ ದಾಳಿಯಾಗಿದೆ. ಇದರಿಂದ ಹಿಂದಿಯೇತರ ಭಾಷಿಕ ಜನರು ತಮ್ಮ ನೆಲದಲ್ಲಿಯೇ ತಾವು ಎರಡನೇ ದರ್ಜೆಯ ಪ್ರಜೆಗಳಾಗಿ ಬದುಕಬೇಕಾದ ಪರಿಸ್ಥಿತಿ ಬರುತ್ತದೆ. ಇದೊಂದು ಭಾಷಾ ಯುದ್ಧಕ್ಕೆ ಕಾರಣವಾಗುತ್ತದೆ. ಹಾಗಾಗಿ ಹಿಂದಿ ಹೇರಿಕೆ ಬದಲು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಮಾನ್ಯಗೊಂಡಿರುವ ಎಲ್ಲಾ 22 ಭಾಷೆಗಳನ್ನು ಸಮಾನವಾಗಿ ನೋಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಕೇರಳದ ಕಳವಳ

“ದೇಶದಲ್ಲಿ ಹಲವು ಭಾಷೆಗಳಿವೆ. ಹಾಗಾಗಿ ಒಂದೇ ಭಾಷೆಯನ್ನು ದೇಶದ ಭಾಷೆ ಎಂದು ಕರೆಯಲಾಗದ ಕಾರಣ ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ಹಿಂದಿಯನ್ನು ಮುಖ್ಯ ಬೋಧನಾ ಭಾಷೆಯಾಗಿ ಹೇರಲು ಸಾಧ್ಯವಿಲ್ಲ” ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಪಿಣರಾಯಿ ವಿಜಯನ್

ನಮ್ಮ ದೇಶದಲ್ಲಿ ಸರ್ಕಾರಿ ಉದ್ಯೋಗಗಳು ಕಡಿಮೆ ಇವೆ. ಇಂತಹ ಸಂದರ್ಭದಲ್ಲಿ ಇಂಗ್ಲಿಷ್ ಬದಲಿಗೆ ಹಿಂದಿಯಲ್ಲಿ ಪರೀಕ್ಷೆ ನಡೆಸುವುದರಿಂದ ದಕ್ಷಿಣದ ಯುವಜನರು ಮತ್ತಷ್ಟು ಉದ್ಯೋಗವಂಚಿತರಾಗುತ್ತಾರೆ. ಹಾಗಾಗಿ ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ನಿಗದಿಪಡಿಸಿದ ಎಲ್ಲಾ ಭಾಷೆಗಳಲ್ಲಿ ಪರೀಕ್ಷೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಶಿಫಾರಸ್ಸುಗಳು ಅಸಂವಿಧಾನಿಕ – ತೆಲಂಗಾಣ ಸಚಿವ

ಈ ಶಿಫಾರಸ್ಸುಗಳನ್ನು ತೆಲಂಗಾಣದ ಸಚಿವ ಮತ್ತು ಟಿಆರ್‌ಎಸ್ ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ ರಾಮರಾವ್ ಅಸಂವಿಧಾನಿಕ ಎಂದು ಕರೆದಿದ್ದು ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ. “ಇತರ ಅಧಿಕೃತ ಭಾಷೆಗಳಂತೆ ಹಿಂದಿಯೂ ಮತ್ತೊಂದು ಭಾಷೆಯೇ ಹೊರತು ರಾಷ್ಟ್ರಭಾಷೆಯಲ್ಲ. ನಮ್ಮ ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ 22 ಭಾಷೆಗಳನ್ನು ಅಂಗೀಕರಿಸಲಾಗಿದೆ. ಬಹುರಾಷ್ಟ್ರೀಯ

ಕೆ.ಟಿ ರಾಮರಾವ್

ಕಂಪೆನಿಗಳಲ್ಲಿ ಸಿಇಒದಂತಹ ಹುದ್ದೆಗಳಿಗೇರಿದ ಹಲವರು ಆಂಗ್ಲ ಭಾಷಾ ಮಾಧ್ಯಮದಲ್ಲಿ ಓದಿದವರಾಗಿದ್ದಾರೆ. ಆದರೆ ಬಿಜೆಪಿಯು ಹಿಂದಿ ಹೇರುವ ಮೂಲಕ ಯುವಜನರ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದೆ. ಸ್ಥಳೀಯ ಭಾಷೆಗಳಲ್ಲಿ ಪರೀಕ್ಷೆ ನಡೆಸುವಂತೆ ನಾವು ಒತ್ತಾಯಿಸಿದ್ದೆವು. ಆದರೆ ಈಗಲೂ ಕೇಂದ್ರ ಸರ್ಕಾರ ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ನಡೆಸುತ್ತಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ವಿರೋಧ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್ ವಿರೋಧ

ಹಿಂದಿ ಹೇರಿಕೆಯ ವಿಚಾರದಲ್ಲಿ ಕರ್ನಾಟಕವು ಉಳಿದ ದಕ್ಷಿಣದ ರಾಜ್ಯಗಳಿಗಿಂತ ಭಿನ್ನ ಸ್ಥಾನದಲ್ಲಿದೆ. ಏಕೆಂದರೆ ಇಲ್ಲಿ ಬಿಜೆಪಿ ಆಡಳಿತವಿರುವ ಕಾರಣಕ್ಕೆ ಸರ್ಕಾರ ಹಿಂದಿ ಹೇರಿಕೆಯನ್ನು ಜಾರಿಗೊಳಿಸಲು ಉತ್ಸುಕವಾಗಿದೆ. ಹಿಂದಿ ರಾಷ್ಟ್ರಭಾಷೆ, ಹಿಂದಿ ಕಲಿಯಬೇಕು ಎಂದು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಾರೆ. ಆದರೆ ಕನ್ನಡಿಗರು ಮತ್ತು ವಿರೋಧ ಪಕ್ಷಗಳು ಸದಾ ಹಿಂದಿ ಹೇರಿಕೆಯನ್ನು ವಿರೋಧಿಸಿವೆ. ಜೆಡಿಎಸ್‌ನಾಯಕ, ಅಮಿತ್ ಶಾ ನೇತೃತ್ವದ ವರದಿಯನ್ನು ಮಾಜಿ ಸಿಎಂ ಕುಮಾರಸ್ವಾಮಿಯವರು ತೀವ್ರವಾಗಿ ಖಂಡಿಸಿದ್ದಾರೆ. “ವರದಿಯು ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಅಸ್ತಿತ್ವಕ್ಕೆ ಕುತ್ತು ತರುತ್ತಿದೆ. ಒಂದು ದೇಶ-ಒಂದು ಧರ್ಮ- ಒಂದು ಭಾಷೆ ಎಂಬ ಘೋಷಣೆಯ ಮೂಲಕ ದೇಶದ ಒಕ್ಕೂಟ ವ್ಯವಸ್ಥೆಯನ್ನು ಧ್ವಂಸಗೊಳಿಸಲಾಗುತ್ತಿದೆ. ಬಹುತ್ವದ ದೇಶವನ್ನು ಹಿಂದಿಸ್ತಾನ ಮಾಡಲಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.

ಎಚ್‌ ಡಿ ಕುಮಾರಸ್ವಾಮಿ

“ದೇಶದಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ತೀರಾ ಕಡಿಮೆಯಿದೆ. ತ್ರಿಭಾಷಾ ಸೂತ್ರವನ್ನು ಒಪ್ಪಲು ಸಾಧ್ಯವಿಲ್ಲ. ಆರ್ಯ ಸಂಸ್ಕೃತಿಯ ತುಷ್ಟೀಕರಣವನ್ನು ನಾವು ಒಪ್ಪುವುದಿಲ್ಲ. ಸ್ಥಳೀಯ ಭಾಷೆಗಳನ್ನು ಪೋಷಿಸುತ್ತೇವೆ ಎಂದು ಹೇಳುವ ಬಿಜೆಪಿ ವಾಸ್ತವದಲ್ಲಿ ಅವುಗಳನ್ನು ತುಳಿಯುತ್ತಿದೆ” ಎಂದು ಕುಮಾರಸ್ವಾಮಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂಗಾಳದಲ್ಲಿ ಮಾರ್ದನಿಸಿದ ಹಿಂದಿ ಹೇರಿಕೆ ವಿರುದ್ಧದ ದನಿ

ಸಾಮಾನ್ಯವಾಗಿ ದಕ್ಷಿಣದ ರಾಜ್ಯಗಳು ಮಾತ್ರವೇ ಹಿಂದಿ ಹೇರಿಕೆ ವಿರೋಧಿಸುತ್ತವೆ, ಉಳಿದ ರಾಜ್ಯಗಳಿಗೆ ಹಿಂದಿ ಹೇರಿಕೆಯಿಂದ ಯಾವುದೇ ಸಮಸ್ಯೆಯಿಲ್ಲ ಎನ್ನಲಾಗುತ್ತದೆ. ಆದರೆ ವಾಸ್ತವ ಸ್ಥಿತಿ ಅದಕ್ಕೆ ವಿರುದ್ಧವಾಗಿದೆ. ಉತ್ತರ ಭಾರತದ ಬಹುತೇಕರ ಮಾತೃಭಾಷೆ ಹಿಂದಿ ಅಲ್ಲ. ಭೋಜಪುರಿ, ಅವಧಿ, ಹರಿಯಾಣ್ವಿ, ಮಗಧಿ, ಮೈಥಿಲಿ, ಬಿಹಾರಿ, ಚಾದ್ರಿ, ಪಹಾಡಿ, ಗಢವಾಲಿ, ಡೋಗ್ರಿ, ಆಂಗಿಕ, ಬುಂದೇಲಿ, ರಾಜಸ್ತಾನಿ, ಛತ್ತೀಸಗಢೀ, ಬ್ರಜಭಾಷಾ ಹಾಗೂ ಖಡೀಬೋಲಿಯಂತಹ ಪ್ರಾದೇಶಿಕ ಭಾಷೆಗಳು ತಮ್ಮ ಸ್ಥಾನಮಾನ ಕಳೆದುಕೊಂಡಿವೆ. ಅವಧಿ ಮತ್ತು ಬೋಜ್‌ಪುರಿ ಭಾಷೆಗಳನ್ನಾಡುವವರ ಜನಸಂಖ್ಯೆ 7 ಕೋಟಿಗೂ ಅಧಿಕವಿದ್ದರೂ ಅವು 8ನೇ ಶೆಡ್ಯೂಲ್‌ನಲ್ಲಿ ಸ್ಥಾನ ಪಡೆದಿಲ್ಲ. ಅವುಗಳ ಸ್ಥಾನವನ್ನು ಸಂಸ್ಕೃತ ಮತ್ತು ಹಿಂದಿ ನುಂಗುತ್ತಿವೆ. ಹಾಗಾಗಿ ಕಳೆದ 50 ವರ್ಷಗಳಲ್ಲಿ ಭಾರತದ 220 ಭಾಷೆಗಳು ಕಣ್ಮರೆಯಾಗಿವೆ ಎನ್ನಲಾಗುತ್ತಿದೆ. ಉತ್ತರ ಮತ್ತು ಮಧ್ಯಭಾರತದ 50ಕ್ಕೂ ಹೆಚ್ಚು ಭಾಷೆಗಳು ಪ್ರಸ್ತುತ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡು ಅಳಿವಿನ ಅಂಚಿನಲ್ಲಿವೆ.

ಇದನ್ನೂ ಓದಿ: ಶಿಕ್ಷಣ ಮಾಧ್ಯಮದಲ್ಲಿ ಹಿಂದಿ ಹೇರಿಕೆ: ಕೇಂದ್ರದ ನಡೆ ವಿರೋಧಿಸಿದ ಸ್ಟಾಲಿನ್ ಜೊತೆಗೂಡಿದ ಕೇರಳ ಸಿಎಂ

ಹಾಗಾಗಿಯೇ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ವಿರುದ್ಧ ಹೋರಾಟಗಳು ಆರಂಭವಾಗಿವೆ. ಬಿಜೆಪಿಯನ್ನು ಹಿಂದಿ ಸಾಮ್ರಾಜ್ಯಶಾಹಿ ಪಕ್ಷ ಎಂದು ಕರೆದಿರುವ ಪಶ್ಚಿಮ ಬಂಗಾಳದ ಬಾಂಗ್ಲಾ ಪೋಖ್ಕೊ ಸಂಘಟನೆಯು ಅಕ್ಟೋಬರ್ 16ರಂದು ಕೋಲ್ಕತ್ತಾ ಸೇರಿದಂತೆ 16 ಜಿಲ್ಲೆಗಳಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದೆ. ಈ ಹಿಂದೆಯೂ ಸಹ ರಾಜ್ಯದಲ್ಲಿ ಅಧಿಕಾರದಲ್ಲಿರುವ ಟಿಎಂಸಿ ಪಕ್ಷವು ಹಿಂದಿ ಹೇರಿಕೆಯ ವಿರುದ್ಧ ದನಿಯೆತ್ತಿತ್ತು. ಟಿಎಂಸಿ ವಕ್ತಾರರು “ಭಾರತದ ಭಾಷಾ ವೈವಿಧ್ಯತೆಯು ದೇಶದ ಪ್ರಜಾತಂತ್ರವನ್ನು ಸುಂದರಗೊಳಿಸಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಒಂದು ಭಾಷೆಯನ್ನು ಹೇರುವುದು ವಿಭಜಕ ರಾಜಕಾರಣವಾಗಿದೆ” ಎಂದಿದ್ದರು.

ಹಿಂದಿ ಹೇರಿಕೆಯೇಕೆ?

ನಮ್ಮ ದೇಶದಲ್ಲಿ ಹಿಂದಿ ಎಂದರೆ ಸಂಸ್ಕೃತದ ವ್ಯಾಪಕ ಪ್ರಭಾವವಿರುವ ಒಂದು ಭಾಷೆಯಾಗಿದೆ. ಈ ಕಾರಣದಿಂದ ಹಿಂದಿ ಶ್ರೇಷ್ಠ ಉಳಿದ ಭಾಷೆಗಳು ಕನಿಷ್ಟ ಮತ್ತು ಎರಡನೇ ದರ್ಜೆಯ ಭಾಷೆಗಳು ಎಂಬ ಮನೋಭಾವ ಬಿತ್ತಲಾಗುತ್ತಿದೆ.

ಹಿಂದಿಯ ಮೂಲಕ ಬ್ರಾಹ್ಮಣೀಯ ಮೌಲ್ಯಗಳನ್ನು ಹೇರುವುದು ಬಿಜೆಪಿಯ ಉದ್ದೇಶವಾಗಿದೆ. ಹಿಂದಿ ಭಾಷಿಕರಿಗೆ ಹಲವು ವಲಯಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಿಕೊಂಡು ಬರಲಾಗಿದೆ. ಇನ್ನೊಂದೆಡೆ ವಿಶ್ವಸಂಸ್ಥೆಯಲ್ಲಿ ಹಿಂದಿ ಭಾಷೆಗೆ ಅಧಿಕೃತ ಸ್ಥಾನಮಾನ ದೊರಕುವಂತೆ ಮಾಡುವುದಕ್ಕಾಗಿ ಹಿಂದಿ ಭಾರತದ ರಾಷ್ಟ್ರಭಾಷೆಯಾಗಬೇಕು ಎಂದು ಬಿಜೆಪಿ ಹೇಳುತ್ತದೆ. ಒಟ್ಟಿನಲ್ಲಿ ಹಿಂದಿ-ಹಿಂದೂ-ಹಿಂದೂಸ್ತಾನ ಘೋಷಣೆಯಡಿ ಅಧಿಕಾರ ಹಿಡಿಯುವುದು, ಶ್ರೇಷ್ಠ ಕನಿಷ್ಠ ಎಂಬ ತಾರತಮ್ಯವನ್ನು ಜೀವಂತವಾಗಿಡುವುದೇ ಮುಖ್ಯ ಅಜೆಂಡಾವಾಗಿದೆ.

ಈ ಕಾರಣಗಳಿಗಾಗಿಯೇ ದಕ್ಷಿಣದ ರಾಜ್ಯಗಳು ಹಿಂದಿ ಹೇರಿಕೆ ವಿರುದ್ಧ ನಿರಂತರವಾಗಿ ಹೋರಾಡುತ್ತಿವೆ. ಭಾರತದ ವಸಾಹತುಶಾಹಿ ಹಿನ್ನೆಲೆ ಮತ್ತು ಇಂದಿನ ಜಾಗತೀಕರಣಗಳ ಹಿನ್ನೆಲೆಯಿಂದಾಗಿ ಇಂಗ್ಲಿಷ್ ಎರಡನೇ ಭಾಷೆಯ ಶೈಕ್ಷಣಿಕ ಪೂರ್ವಗತ್ಯಗಳನ್ನು ಪೂರೈಸುತ್ತಿದೆ. ಆ ಜಾಗದಲ್ಲಿ ಹಿಂದಿಯನ್ನು ಪರಿಚಯಿಸುವುದು ಕೃತಕ ಮಾತ್ರವಲ್ಲ ಹಿಂದಿಯೇತರ ರಾಜ್ಯದ ಮಕ್ಕಳಿಗೆ ಮತ್ತು ಜನರಿಗೆ ಮಾಡುವ ತಾರತಮ್ಯ ಹಾಗೂ ಆನ್ಯಾಯವೂ ಆಗುತ್ತದೆ. ಹೀಗಾಗಿ ಹಿಂದಿಯು ಎರಡನೆಯ ಅಥವಾ ಮೂರನೆಯ ಭಾಷೆಯಾಗಿ ಸಲ್ಲದು ಎಂಬುದು ದಕ್ಷಿಣದ ರಾಜ್ಯಗಳ ಒತ್ತಾಯವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...

ಚೀನಾ ನಿರ್ಮಿತ ರೋಬೋ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದ ಗ್ಯಾಲ್ಗೋಟಿಯಾ ವಿವಿ AI ಸಮ್ಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿ ಆಗದಂತೆ ತಡೆದಿದ್ದು ರಾಹುಲ್ ಗಾಂಧಿ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿಯಾಗದಂತೆ ರಾಹುಲ್ ಗಾಂಧಿ ತಡೆದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ (ಫೆ.17) ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "2014 ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...

ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಅರ್ಜಿ: ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರ ವಿರುದ್ಧದ ಐ-ಪ್ಯಾಕ್ ಕಚೇರಿ ಶೋಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ...