ರಾಜಕೀಯ ಲಾಭಕ್ಕಾಗಿ ಒಂದು ಧರ್ಮದ ವಿರುದ್ಧ ದ್ವೇಷ ಭಾವನೆ ಹರಡುವುದು, ಪ್ರೊಪಗಂಡ ಮಾಡುವುದು ಕೊನೆಗೆ ತಮಗೆ ಎಂತಹ ದುಷ್ಪರಿಣಾಮ ಬೀರಬಹುದು ಎಂಬುದಕ್ಕೆ ಉತ್ತರಾಖಂಡ ರಾಜ್ಯದ ಈ ಬಿಜೆಪಿ ಮುಖಂಡ ತಾಜಾ ಉದಾಹರಣೆಯಾಗಿ ನಮ್ಮ ಮುಂದಿದ್ದಾರೆ. ತನ್ನ ಮಗಳು ಪ್ರೀತಿಸಿದ್ದ ಹುಡುಗನೊಂದಿಗೆ ಮದುವೆ ನಿಶ್ಚಯಿಸಿದ್ದರು. ಆದರೆ ಹಿಂದುತ್ವವಾದಿಗಳು ಅತಿಯಾದ ಒತ್ತಡಕ್ಕೆ ಬಲಿಯಾಗಿ ಸ್ವಂತ ಮಗಳ ಮದುವೆಯನ್ನೇ ರದ್ದುಗೊಳಿಸಬೇಕಾದ ದುಸ್ಥಿತಿ ಅವರದಾಗಿದೆ.
ಉತ್ತರಾಖಂಡದ ಪೌರಿ ಗರ್ವಾಲ್ ನಾಗಲ್ ಪಾಲಿಕಾ (ಪುರಸಭೆ) ಅಧ್ಯಕ್ಷ, ಬಿಜೆಪಿ ಮುಖಂಡ ಯಶಪಾಲ್ ಬೇನಮ್ ಅವರ ಪುತ್ರಿ ಮೋನಿಕಾ ಎಂಬುವವರು ಲಕ್ನೋ ವಿವಿಯಲ್ಲಿ ಓದುತ್ತಿದ್ದಾಗ ರಯೀಸ್ ಅಹ್ಮದ್ ಅವರ ಮಗ ಮೋನಿಸ್ ಅಹ್ಮದ್ ಅವರನ್ನು ಪ್ರೀತಿಸಿದ್ದರು. ಇಬ್ಬರೂ ಪರಸ್ಪರ ಮದುವೆಯಾಗಲು ನಿರ್ಧರಿಸಿದ್ದರು. ಇದನ್ನು ಎರಡು ಕುಟುಂಬಗಳಿಗೆ ತಿಳಿಸಿ ಒಪ್ಪಿಗೆ ಪಡೆಯಲಾಗಿತ್ತು. ಮೇ 28 ರಂದು ಅವರ ಮದುವೆಗೆ ಸಕಲ ಸಿದ್ದತೆ ನಡೆಸಲಾಗಿತ್ತು. ಆದರೆ ಮದುವೆ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಬಿಜೆಪಿ ಮುಖಂಡರು ಮತ್ತು ಹಿಂದುತ್ವವಾದಿಗಳು ಈ ಅಂತರ್ಧರ್ಮೀಯ ಮದುವೆಗೆ ಅಡ್ಡಿಪಡಿಸಿದರು. ಮದುವೆ ರದ್ದುಗೊಳಿಸುವಂತೆ ತೀವ್ರ ಒತ್ತಡ ಹೇರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ್ದ ವಧುವಿನ ತಂದೆ ಬಿಜೆಪಿ ಮುಖಂಡ ಯಶಪಾಲ್ ಬೇನಮ್, “ಇದು 21ನೇ ಶತಮಾನ. ನಮ್ಮ ಮಕ್ಕಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಎಲ್ಲ ಹಕ್ಕುಗಳನ್ನು ಹೊಂದಿದ್ದಾರೆ. ಯಾರೂ ಅದನ್ನು ವಿರೋಧಿಸಬಾರದು” ಎಂದಿದ್ದರು. ಇಷ್ಟು ದಿನ ಬಿಜೆಪಿ ಪಕ್ಷ ಮತ್ತು ಹಿಂದುತ್ವವಾದಿಗಳು ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ದ್ವೇಷ ಹರಡುತ್ತಿದ್ದಾಗ, ಲವ್ ಜಿಹಾದ್ ಎಂಬ ಸುಳ್ಳು ಕಥೆ ಕಟ್ಟುತ್ತಿದ್ದಾಗ ಅದನ್ನು ನೋಡಿ ಬೆಂಬಲಿಸಿದ್ದ ಅಥವಾ ಸುಮ್ಮನಿದ್ದ ಯಶಪಾಲ್ ಬೇನಮ್ ಈಗ ತನ್ನದೇ ಮಗಳ ಮದುವೆಗೆ ಬರುತ್ತಿರುವ ವಿರೋಧವನ್ನು ಟೀಕಿಸಿದ್ದಾರೆ.
‘ಈ ಘಟನೆಯನ್ನು ಧರ್ಮದ ಮೂಲಕ ನೋಡುತ್ತಿರುವವರಿಗೆ ನಾನು ಹೇಳುವುದೇನೆಂದರೆ ಇದು ಎರಡು ಕುಟುಂಬಗಳಿಗೆ ಸಂಬಂಧಿಸಿದ ಮಹತ್ವದ ವಿಷಯವಾಗಿದೆ. ಇಬ್ಬರು ಯುವಜನರ ಭವಿಷ್ಯ ಇದರಲ್ಲಿದೆ ಮತ್ತು ಈ ಪ್ರಕರಣದಲ್ಲಿ ನಮಗೆ ಧರ್ಮವು ಮುಖ್ಯವಲ್ಲ. ಆದರೆ ಈ ಮದುವೆ ಹಿಂದೂ ಸಂಪ್ರದಾಯದಂತೆ ನಡೆಯಲಿದೆ’ ಎಂದು ಬೇನಮ್ ಹೇಳಿದ್ದರು. ಆದರೂ ಸಹ ಹಿಂದುತ್ವವಾದಿಗಳು ಮುಸ್ಲಿಂ ಯುವಕನೊಂದಿಗೆ ಅವರ ಮಗಳ ಮದುವೆ ನಡೆಯಬಾರದೆಂದು ಆಗ್ರಹಿಸಿದ್ದರು.
ಬಿಜೆಪಿ ಸದಸ್ಯ ಮತ್ತು ರಾಜ್ಯ ಸರ್ಕಾರ ನಿರ್ವಹಿಸುವ ಗೋಸಂರಕ್ಷಣಾ ಆಯೋಗದ ಅಧ್ಯಕ್ಷರಾದ ಧರ್ಮವೀರ್ ಗುಸೇನ್ ಎಂಬುವವರು ಮಾತನಾಡಿ, “ನಾವು ಈಗಲೂ ಉತ್ತರಾಖಂಡದಲ್ಲಿ ಚಿಕ್ಕ ಧೋತಿ (ಕೆಳಭಾಗದ ಬ್ರಾಹ್ಮಣ) ಮತ್ತು ಉದ್ದ ಧೋತಿ (ಮೇಲುಭಾಗದ ಬ್ರಾಹ್ಮಣ) ಸಂಪ್ರದಾಯವನ್ನು ಅನುಸರಿಸುತ್ತೇವೆ. ಇದರರ್ಥ ನಾವು ನಮ್ಮ ಸಂಪ್ರದಾಯಗಳನ್ನು ನಂಬುತ್ತೇವೆ ಮತ್ತು ನಮ್ಮ ಸಂಸ್ಕೃತಿಯಲ್ಲಿ ಆಕ್ಷೇಪಾರ್ಹವಾದ ಯಾವುದನ್ನೂ ಸ್ವೀಕರಿಸಲು ಸಾಧ್ಯವಿಲ್ಲ. ಅಂತಹ ಮದುವೆಗಳನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದಿದ್ದಾರೆ.
ವಿಎಚ್ಪಿ, ಭೈರವ ಸೇನೆ ಮತ್ತು ಬಜರಂಗದಳ ಕಾರ್ಯಕರ್ತರು ಮದುವೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಇಂತಹ ಮದುವೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಜಿಲ್ಲಾ ವಿಎಚ್ಪಿ ಕಾರ್ಯಾಧ್ಯಕ್ಷ ದೀಪಕ್ ಗೌಡ ಹೇಳಿದ್ದಾರೆ.
ಈ ವಿವಾದಗಳು ಭುಗಿಲೆದ್ದ ನಂತರ ತನ್ನ ಮಗಳ ಮದುವೆಯನ್ನು ರದ್ದುಗೊಳಿಸುವುದಾಗಿ ಬಿಜೆಪಿ ಮುಖಂಡ ಯಶಪಾಲ್ ಬೇನಮ್ ತಿಳಿಸಿದ್ದಾರೆ. “ಸಾರ್ವಜನಿಕ ಪ್ರತಿನಿಧಿಯಾದ ನನಗೆ ನನ್ನ ಮಗಳ ಮದುವೆ ಪೊಲೀಸ್ ಮತ್ತು ಆಡಳಿತದ ರಕ್ಷಣೆಯಲ್ಲಿ ನಡೆಯುವುದು ಇಷ್ಟವಿಲ್ಲ. ನಾನು ಸಾರ್ವಜನಿಕ ಭಾವನೆಗಳನ್ನು ಗೌರವಿಸುತ್ತೇನೆ. ಹಾಗಾಗಿ ಸದ್ಯ ಮದುವೆ ಮುಂದೂಡುತ್ತಿದ್ದೇವೆ. ಅದೇ ವ್ಯಕ್ತಿಯೊಂದಿಗೆ ತಮ್ಮ ಮಗಳ ಮದುವೆಯ ಬಗ್ಗೆ ಕುಟುಂಬದವರು, ಹಿತೈಷಿಗಳು ಮತ್ತು ವರನ ಕಡೆಯವರು ಒಟ್ಟಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ತನ್ನ ಮಗಳು ಯಾರನ್ನು ಮದುವೆಯಾಗಬೇಕೆಂದು ನಿರ್ಧರಿಸುವ ಹಕ್ಕು ಅವಳಿಗಾಗಲಿ, ತನಗಾಗಲಿ ಇಲ್ಲದ ಪರಿಸ್ಥಿತಿ ಆ ಬಿಜೆಪಿ ಮುಖಂಡನದಾಗಿದೆ. ಇದು ಸಂವಿಧಾನಬಾಹಿರವಾದುದು. ಬೇವು ಬಿತ್ತಿ, ಮಾವು ನಿರೀಕ್ಷಿಸಲಾಗುವುದಿಲ್ಲ ಎಂಬ ಗಾದೆ ಮಾತಿನಂತೆ ಇದೊಂದು ಎಲ್ಲರಿಗೂ ದೊಡ್ಡ ಕರೆಗಂಟೆಯಾಗಿದೆ. ರಾಜಕೀಯಕ್ಕೆ ಧರ್ಮವನ್ನು ಎಳೆದು ತರಬಾರದು ಮತ್ತು ಪ್ರತಿಯೊಬ್ಬರ ಆಯ್ಕೆ ಮತ್ತು ಹಕ್ಕುಗಳನ್ನು ಗೌರವಿಸಬೇಕು. ಆಗ ಮಾತ್ರ ನಾವು ಸಹ ಸ್ವತಂತ್ರವಾಗಿ ಬದುಕಲು ಸಾಧ್ಯ ಎಂಬುದನ್ನು ಈ ಘಟನೆ ನಿರೂಪಿಸಿದೆ.
ಇದನ್ನೂ ಓದಿ; ಕರಾವಳಿ: ಬೆಚ್ಚಿ ಬೀಳಿಸಿದ ಬುದ್ಧಿವಂತರ ಸೀಮೆಯ “ತಿರುಚು” ಫಲಿತಾಂಶ!


