Homeಮುಖಪುಟಅಮೆರಿಕದ ಶಾಖಕ್ಕೆ ಭಾರತದಲ್ಲಿ ಬೆವರಿದ ಫೇಸ್‌ಬುಕ್ - ರಾಜಾರಾಂ ತಲ್ಲೂರು

ಅಮೆರಿಕದ ಶಾಖಕ್ಕೆ ಭಾರತದಲ್ಲಿ ಬೆವರಿದ ಫೇಸ್‌ಬುಕ್ – ರಾಜಾರಾಂ ತಲ್ಲೂರು

ಸಾಮಾನ್ಯವಾಗಿ ಎಲ್ಲ ಕಾರ್ಪೊರೇಟ್ ಸಂಸ್ಥೆಗಳಂತೆಯೇ ಫೇಸ್‌ಬುಕ್ ಕೂಡ ತಾನು ಹೊಕ್ಕ ದೇಶಗಳಲ್ಲೆಲ್ಲ ಅಲ್ಲಿನ ಆಳುವವರನ್ನು ಖುಷಿಯಾಗಿಟ್ಟುಕೊಳ್ಳುವ ಕೌಶಲವನ್ನು ಚೆನ್ನಾಗಿ ಕರಗತ ಮಾಡಿಕೊಂಡಿದೆ. ಈ ಗೆದ್ದೆತ್ತಿನ ಬಾಲ ಹಿಡಿಯುವ ಕೌಶಲಕ್ಕೆ ವ್ಯಾಪಾರ ಬಿಟ್ಟರೆ ಬೇರೆ ಹಂಗಿಲ್ಲ.

- Advertisement -
- Advertisement -

ಈ ನವೆಂಬರ್‌ನಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಅದರ ಕಾವು ಏರುತ್ತಿರುವಂತೆಯೇ ಫೇಸ್‌ಬುಕ್, ಟ್ವಿಟ್ಟರ್ ಮೊದಲಾದ ಸೋಷಿಯಲ್ ಮೀಡಿಯಾ ಕಂಪನಿಗಳ ಮ್ಯಾನೇಜ್ಮೆಂಟ್ ಕೋಣೆಗಳಲ್ಲಿ ಬೆವರು ಮೂಡತೊಡಗಿದೆ. ತಮಾಷೆ ಎಂದರೆ, ಡೆಮೊಕ್ರಾಟರು ಮತ್ತು ರಿಪಬ್ಲಿಕನ್ನರಿಬ್ಬರೂ ಮಿಲಿಯಗಟ್ಟಲೆ ಡಾಲರ್ ಜಾಹೀರಾತುಗಳನ್ನು ಇದೇ ಸೋಷಿಯಲ್ ಮೀಡಿಯಾ ಸಂಸ್ಥೆಗಳಿಗೆ ಸುರಿಯುತ್ತಾ, ಅಲ್ಲೇ ಅದೇ ಸೋಷಿಯಲ್ ಮೀಡಿಯಾಗಳಿಗೆ ವಾಚಾಮಗೋಚರ ಬೈಗುಳಮಳೆಯನ್ನೂ ಸುರಿಸುತ್ತಾ ತಮ್ಮ ಚುನಾವಣಾ ಪ್ರಚಾರಕ್ಕೆ ಬಿಸಿಯೇರಿಸಿಕೊಳ್ಳುತ್ತಿದ್ದಾರೆ.

2012ರ ಹೊತ್ತಿಗೇ ಸೋಷಿಯಲ್ ಮೀಡಿಯಾಗಳು ಚುನಾವಣೆಗಳ ಮೇಲೆ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿವೆ ಎಂಬುದು ಸಾಬೀತಾಗಿತ್ತು. 2016ರ ಚುನಾವಣೆಯಲ್ಲಿ ಅದನ್ನು ಕಾರ್ಯರೂಪಕ್ಕೂ ತಂದು ತೋರಿಸಿದ ಟ್ರಂಪ್ ಅಮೆರಿಕದ ಅಧ್ಯಕ್ಷರಾದದ್ದು ಈಗ ಇತಿಹಾಸ. ಈಗ 2020ರ ಚುನಾವಣೆಯ ಹೊತ್ತಿಗೆ ಅಲ್ಲಿ ಪರಿಸ್ಥಿತಿ ಬದಲಾಗಿದೆ. ಡೆಮೊಕ್ರಾಟರು ಮತ್ತು ರಿಪಬ್ಲಿಕನ್ನರಿಬ್ಬರೂ ಸೋಷಿಯಲ್ ಮೀಡಿಯಾದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ತೀರ್ಮಾನಿಸಿಕೊಂಡೇ ರಂಗಕ್ಕಿಳಿದಿರುವುದು ಫೇಸ್‌ಬುಕ್, ಟ್ವಿಟ್ಟರ್ ಇತ್ಯಾದಿಗಳ ತಲೆಬಿಸಿಗೆ ಮೂಲ ಕಾರಣ.

ಅಮೆರಿಕದ ಚುನಾವಣೆಯ ಹಾದಿಯಲ್ಲಿ ನಡೆದಿರುವ ಸೋಷಿಯಲ್ ಮೀಡಿಯಾ ಜಿದ್ದಾಜಿದ್ದಿ ಪ್ರಹಸನದಲ್ಲಿ ಒಂದು ಹೆಚ್ಚುವರಿ ಫಿಟ್ಟಿಂಗ್ ಆಗಿ ಕುಳಿತಿರುವ ಭಾರತಕ್ಕೆ ಮನಸ್ಸಿದ್ದರೆ, ಈ ಆಟವನ್ನು ಅರ್ಥಮಾಡಿಕೊಳ್ಳುವುದಕ್ಕೆ ಇದೊಂದು ಅವಕಾಶವೇ ಹೊರತು, ಈಗ ಭಾರತದಲ್ಲಿ ಎದ್ದಿರುವ ಫೇಸ್‌ಬುಕ್ ಭಾರತ ಸರ್ಕಾರದ ನಡುವಿನ ಸಂಬಂಧಗಳ ಚರ್ಚೆ ಅಲ್ಲಿಂದ ಮುಂದೆ ಸಾಗಲು ಈ ಪ್ರಕರಣ ಹಾದಿಮಾಡಿಕೊಟ್ಟೀತೆಂದು ಅನ್ನಿಸುವುದಿಲ್ಲ.

ಅಮೆರಿಕದ ಸಂವಹನ ಸಭ್ಯತೆಯ ಕಾಯಿದೆಯ ಸೆಕ್ಷನ್ 230ರ ಅಡಿಯಲ್ಲಿ, ಈ ಸೋಷಿಯಲ್ ಮೀಡಿಯಾಗಳನ್ನು ವೇದಿಕೆಗಳು (platforms) ಎಂದು ಪರಿಗಣಿಸಲಾಗಿರುವುದರಿಂದ ಅವಕ್ಕೆ ಪ್ರಕಾಶಕರಿಗೆ (publisher)ಗೆ ಅನ್ವಯವಾಗುವ ಸಾಂಪ್ರದಾಯಿಕ ಕಟ್ಟುನಿಟ್ಟಿನ ಕಾನೂನುಗಳು ಅನ್ವಯ ಆಗುವುದಿಲ್ಲ. ಆದರೆ ಈ ಚುನಾವಣೆಯ ಹೊತ್ತಿಗೆ ಈ ವೇದಿಕೆಗಳು ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುವ ವೇದಿಕೆಗಳಲ್ಲ, ಅವರು ತಮ್ಮಲ್ಲಿ ಕಾಣಿಸಿಕೊಳ್ಳುವ ಪೋಸ್ಟ್‌ಗಳನ್ನು ಸೆನ್ಸಾರ್ ಮಾಡುವ, ನಿಯಂತ್ರಿಸುವ, ತಿದ್ದುವ, ಅಡಗಿಸಿಡುವ ಹತ್ಯಾರುಗಳನ್ನು ಹೊಂದಿವೆ ಎಂಬುದು ಬಹಿರಂಗಗೊಂಡಿದೆ. ಎಲ್ಲರ ಕಣ್ಣುಗಳೂ ಅವರ ಮೇಲೆ ನೆಟ್ಟಿವೆ. ವಿಶೇಷವಾಗಿ ಫೇಸ್‌ಬುಕ್, ಟ್ವಿಟ್ಟರ್‌ಗಳೆರಡೂ ಈ ಚುನಾವಣೆಯಲ್ಲಿ ಬಹಳ ಎಚ್ಚರಿಕೆಯ ಹೆಜ್ಜೆಗಳನ್ನು ಇಡತೊಡಗಿವೆ. ಹಾಗಾಗಿ ರಿಪಬ್ಲಿಕನ್ನರು ಮತ್ತು ಡೆಮೊಕ್ರಾಟರಿಬ್ಬರಿಗೂ ಕಾಸುಕೊಟ್ಟು ಬೈದುಕೊಳ್ಳಲು ಸಮಾನಾವಕಾಶಗಳು ಸಿಗತೊಡಗಿವೆ.

2020 ಜುಲೈ: ಭಾರತ ಅಮೆರಿಕಗಳಲ್ಲಿ ಸೋಷಿಯಲ್ ಮೀಡಿಯಾ ಬಳಕೆಯ ಹೋಲಿಕೆ

ಮೀಡಿಯಾ                   ಭಾರತ (ಕೋಟಿಗಳಲ್ಲಿ)        ಅಮೆರಿಕ (ಕೋಟಿಗಳಲ್ಲಿ)

ಟ್ವಿಟ್ಟರ್ ಖಾತೆಗಳು          1.7                                 6.2

ಫೇಸ್‌ಬುಕ್ ಖಾತೆಗಳು       29                                  19

ಇನ್ಸ್ಟಾಗ್ರಾಂ ಖಾತೆಗಳು      10                                  13

 

ಭಾರತದಲ್ಲಿ ಫೇಸ್‌ಬುಕ್ ಆಟ

ಸಾಮಾನ್ಯವಾಗಿ ಎಲ್ಲ ಕಾರ್ಪೊರೇಟ್ ಸಂಸ್ಥೆಗಳಂತೆಯೇ ಫೇಸ್‌ಬುಕ್ ಕೂಡ ತಾನು ಹೊಕ್ಕ ದೇಶಗಳಲ್ಲೆಲ್ಲ ಅಲ್ಲಿನ ಆಳುವವರನ್ನು ಖುಷಿಯಾಗಿಟ್ಟುಕೊಳ್ಳುವ ಕೌಶಲವನ್ನು ಚೆನ್ನಾಗಿ ಕರಗತ ಮಾಡಿಕೊಂಡಿದೆ. ಈ ಗೆದ್ದೆತ್ತಿನ ಬಾಲ ಹಿಡಿಯುವ ಕೌಶಲಕ್ಕೆ ವ್ಯಾಪಾರ ಬಿಟ್ಟರೆ ಬೇರೆ ಹಂಗಿಲ್ಲ. ಭಾರತದಲ್ಲೂ ಮೊದಲ ಪೂರ್ಣಪ್ರಮಾಣದ ಸೋಷಿಯಲ್ ಮೀಡಿಯಾ ಕಾಳಗದ ಚುನಾವಣೆ 2019ರಲ್ಲಿ ನಡೆದ ಬಳಿಕ, ವಿಶೇಷವಾಗಿ ಫೇಸ್‌ಬುಕ್ ಸ್ವಲ್ಪ ಎಚ್ಚರಿಕೆಯ ಹೆಜ್ಜೆಗಳನ್ನು ಇಡಲಾರಂಭಿಸಿದೆ; ಆದರೆ ಅದಕ್ಕೆ ಭಾರತದ ಸನ್ನಿವೇಶದ ಅರಿವಿಲ್ಲದಿರುವುದು, ಅದನ್ನು ಇನ್ನಷ್ಟು ಸಂಕಟಕ್ಕೆ ಸಿಕ್ಕಿಸಿಹಾಕಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಸಾಕಷ್ಟು ಹಾನಿಮಾಡಿದೆ.

2014ರ ಚುನಾವಣೆಯಲ್ಲಿ ಆಗ ಪ್ರತಿಪಕ್ಷವಾಗಿದ್ದ NDA ಸೋಷಿಯಲ್ ಮೀಡಿಯಾ ಮೆಂದಷ್ಟೂ ಹಸುರಿದ್ದ ಹುಲ್ಲುಗಾವಲಾಗಿತ್ತು. ಆಗ ಪರಿಸ್ಥಿತಿ ಹಾಗಿತ್ತು. ಸೋಷಿಯಲ್ ಮೀಡಿಯಾದ ಮಟ್ಟಿಗೆ ಅದು ಮೋದಿಯವರ ಪಕ್ಷಕ್ಕೆ ಏಕಪಕ್ಷೀಯವಾದ ಗೆಲುವಾಗಿತ್ತು. ಆದರೆ 2018ರ ಹೊತ್ತಿಗೆ ಪ್ರತಿಪಕ್ಷಗಳು ಸ್ವಲ್ಪಮಟ್ಟಿಗೆ ಎಚ್ಚೆತ್ತುಕೊಂಡದ್ದರಿಂದಾಗಿ ಸೋಷಿಯಲ್ ಮೀಡಿಯಾ ಕೂಡ ಪೈಪೋಟಿಯ ಕಣವಾಯಿತು. ಆದರೆ, ಆಗಷ್ಟೇ ಸೋಷಿಯಲ್ ಮೀಡಿಯಾಕ್ಕೆ ಕಣ್ಣು ತೆರೆದಿದ್ದ ಪ್ರತಿಪಕ್ಷಗಳಿಗೆ ಸ್ಪಷ್ಟ ಗುರಿ ಇಲ್ಲದ್ದರಿಂದಾಗಿ, 2019ರಲ್ಲಿ ಮತ್ತೆ NDA ಮೇಲುಗೈ ಸಾಧಿಸಿತು. ಆದರೆ, ಫೇಸ್‌ಬುಕ್ ಪರಿಸ್ಥಿತಿ ಮೊದಲಿನಂತೆ ನಿಷ್ಕಳಂಕವಾಗಿ ಉಳಿದಿರಲಿಲ್ಲ. ಅದು ಎಲ್ಲರಿಗೂ ಸಮಾನಾವಕಾಶಗಳನ್ನು ಒದಗಿಸುವ ವೇದಿಕೆ ಅಲ್ಲ ಎಂಬುದು ನಿಧಾನಕ್ಕೆ ಬಯಲಿಗೆ ಬರತೊಡಗಿತು. ಚುನಾವಣೆ ತಯಾರಿಯ ಹೊತ್ತಿಗೇ ಇದು ಸುದ್ದಿಯಾಗತೊಡಗಿದ್ದರಿಂದಾಗಿ, ಆ ಮೊದಲು ಫೇಕ್ ಸುದ್ದಿಗಳು ಫೇಸ್‌ಬುಕ್‌ನಲ್ಲಿ ಹರಿದಾಡಿದ್ದನ್ನು ಒಪ್ಪಿಕೊಂಡ ಫೇಸ್‌ಬುಕ್, ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಅಂತಹ ಫೇಕ್ ಸುದ್ದಿಗಳನ್ನು ಗುರುತಿಸಿ, ಹರಡದಂತೆ ನಿಲ್ಲಿಸಲು, ಈಗಾಗಲೇ ಇರುವ 7500 ಮಾಡರೇಟರ್‌ಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಿ, ಅಂದಾಜು 20000 ಮಾಡರೇಟರ್‌ಗಳನ್ನು ನೇಮಿಸಿಕೊಳ್ಳುತ್ತಿರುವುದಾಗಿ 2018ರ ಸೆಪ್ಟಂಬರ್ ವೇಳೆಗೆ ಹೇಳಿತು. ಜೆನ್‌ಪ್ಯಾಕ್ಟ್, ಕಾಗ್ನಿಜೆಂಟ್ ಮತ್ತು ಎಕ್ಸೆಂಚರ್ ಸಂಸ್ಥೆಗಳು ಈ ಮಾಡರೇಷನ್‌ನ ಮಾನವಸಂಪನ್ಮೂಲಗಳನ್ನು ಒದಗಿಸುವ ಬಹುತೇಕ ಜಾಗತಿಕ ಗುತ್ತಿಗೆ ಹಿಡಿದಿವೆ.

ಈ ರೀತಿಯ ಕಂಟೆಂಟ್ ಮಾಡರೇಷನ್ ಎಂಬುದು ಬಹಳ ಮಾಯಕದ ಕೆಲಸ. ಯಾವುದು ಪ್ರಕಟಣೆಗೆ ಅನರ್ಹ ಎಂಬ ಒಂದು ಗ್ಲೋಬಲ್ ಮಾನದಂಡ ಮತ್ತು ಫೇಸ್‌ಬುಕ್‌ನ ವ್ಯಾವಹಾರಿಕ ಹಿತಾಸಕ್ತಿಗಳ ತಾಕಲಾಟದ ನಡುವೆ ಭಾರತದಂತಹ ವಿಸ್ತಾರವಾದ, ವೈವಿಧ್ಯಮಯವಾದ ದೇಶವೊಂದರ ಕೋಟಿಗಟ್ಟಲೆ ಫೇಸ್‌ಬುಕ್ ಪುಟಗಳ ಮೇಲೆ ಕಣ್ಣಿಡುವುದು ಮತ್ತು 24 ತಾಸುಗಳಲ್ಲಿ ಅದಕ್ಕೆ ಅಬದ್ಧವೆನ್ನಿಸಿದ್ದನ್ನು ಅಳಿಸಿಹಾಕುವುದು ಸವಾಲೆಂಬುದರಲ್ಲಿ ಸಂಶಯ ಇಲ್ಲ. ಆದರೆ ಈ ರೀತಿ ಕಣ್ಣಿಡುವವರು ಯಾರು? ಅವರನ್ನು ನೇಮಿಸಿಕೊಂಡವರು ಯಾರು? ಅವರ ಉದ್ದೇಶಗಳೇನು? ಎಂಬುದನ್ನೆಲ್ಲ ನಿಯಂತ್ರಿಸುವುದು ಸಾಂಸ್ಥಿಕವಾಗಿ ಬಹುತೇಕ ಅಸಾಧ್ಯ ಸನ್ನಿವೇಶ. ಭಾರತದಂತಹ ಪ್ರಮುಖ ಮಾರುಕಟ್ಟೆಯಲ್ಲಿ ತನ್ನದೇ ವ್ಯವಹಾರ ಹಿತಾಸಕ್ತಿಗಳನ್ನೂ ಹೊಂದಿರುವ ಫೇಸ್‌ಬುಕ್‌ನಂತಹ ಖಾಸಗಿ ಸಂಸ್ಥೆಗಂತೂ ಇದು ಕತ್ತಿಯ ಮೇಲಿನ ನಡಿಗೆ. ಇಲ್ಲಿನ ಆಳುವವರನ್ನು ಸಂತುಷ್ಟಗೊಳಿಸಿಕೊಂಡು ಮುಂದುವರಿಯುವುದು ಅದಕ್ಕೆ ಅನಿವಾರ್ಯ. ಹಾಗಾಗಿ ಇಂದು, ಭಾರತದಲ್ಲಿ ಫೇಸ್‌ಬುಕ್ ಗೋಡೆಯ ಮೇಲೆ ಯಾವ ಕಂಟೆಂಟ್ ಉಳಿಯುತ್ತದೆ- ಯಾವ ಕಂಟೆಂಟ್ ಅನ್ನು ಅಳಿಸಲಾಗುತ್ತದೆ ಎಂಬುದು ಉದಾಹರಣೆಗಳ ಸಮೇತ ಸುದ್ದಿಯಾಗತೊಡಗಿದೆ.

ಆಗಬೇಕಾದ್ದು ಏನು?

ಸೋಷಿಯಲ್ ಮೀಡಿಯಾ ಎಂಬುದು ಸರ್ವಸಮರ್ಥ ಮಾಧ್ಯಮ ಎಂಬುದು ಸಾಬೀತಾದ ಮೇಲೆ ಅದರ ಸುಸೂತ್ರ ನಿರ್ವಹಣೆಗಾಗಿ ಬೇರೆ ಮಾಧ್ಯಮಗಳಿಗಿರುವಂತಹ ಕಾನೂನುಬದ್ಧ ನಿಯಂತ್ರಣಗಳು ಒಂದು ಜಾಗತಿಕ ನಿಯಮಗಳ ಚೌಕಟ್ಟಿನಲ್ಲಿ ರೂಪುಗೊಳ್ಳುವುದು ಅಗತ್ಯವಿದೆ.

ಆನ್‌ಲೈನ್ ದ್ವೇಷಸಾಧನೆಯ ಮಾತುಗಳು, ಲೈಂಗಿಕವಾದ ಕಂಟೆಂಟ್‌ಗಳನ್ನು ಆನ್‌ಲೈನ್‌ನಿಂದ ಹೊರತೆಗೆಯಲು ಸಮರ್ಥವಾದ ಪರಿಕರಗಳನ್ನು ಈಗ ಬಹುತೇಕ ಎಲ್ಲ ಸೋಷಿಯಲ್ ಮೀಡಿಯಾಗಳೂ ಹೊಂದಿವೆ. ಅದಕ್ಕೆ ಜಾಗತಿಕವಾದ ವ್ಯವಸ್ಥೆಯೂ ಇದೆ.

ಆದರೆ, ಇದರ ಮುಸುಕಿನಲ್ಲಿ ರಾಜಕೀಯ ಉದ್ದೇಶಗಳ ಕಾರಣಕ್ಕಾಗಿ ಒಂದು ರಾಜಕೀಯ ಪಕ್ಷದ ಹಿತಾಸಕ್ತಿಗಳನ್ನು ರಕ್ಷಿಸುವ, ಇನ್ನೊಂದರ ಹಿತಾಸಕ್ತಿಗಳಿಗೆ ಹಾನಿ ಮಾಡುವ ಕಂಟೆಂಟ್‌ಗಳನ್ನು ಹಾಗೇ ಉಳಿಸುವಂತಹ ರಂಗೋಲಿಯಡಿ ತೂರಿ ನಡೆಯುವ ಆಟಗಳನ್ನು ಸಾಂಸ್ಥಿಕ ನಿಯಮಗಳು ನಿಭಾಯಿಸುವುದು ಭಾರತದ ಸಂದರ್ಭದಲ್ಲಿ ಕಷ್ಟ ಇದೆ. ಇಲ್ಲಿ ಭಾವನೆಗಳಿಗೆ ಧಕ್ಕೆ ಉಂಟಾದ ಕುರಿತು ಸೈಬರ್ ಕ್ರೈಮ್ ದೂರುಗಳು ಚಾಲ್ತಿಯಲ್ಲಿವೆಯಾದರೂ ಅದು ಅಂತಹ ಪ್ರಕಟಣೆಗಳಿಗೆ ಅವಕಾಶಕೊಡುವ, ಅದನ್ನು ಹರಡುವ ಸಮಾನ ದೋಷಿ ಆಗಿರುವ ಸೋಷಿಯಲ್ ಮೀಡಿಯಾ ಫ್ಲಾಟ್‌ಫಾರಂಅನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ. ಈ ಫ್ಲಾಟ್‌ಫಾರಂಗಳು ಅವು ಕಾರ್ಯಾಚರಿಸುವ ದೇಶದ ನೆಲದ ಕಾನೂನಿಗೆ ಉತ್ತರದಾಯಿ ಆಗುವ ತನಕ ಈ ಸಮಸ್ಯೆ ಪರಿಹಾರ ಆಗುವ ಲಕ್ಷಣಗಳು ಕಾಣುತ್ತಿಲ್ಲ.


ಇದನ್ನೂ ಓದಿ: ’ಮೈ ಡಿಯರ್ ಮೀಡಿಯಾ’: ಸುದ್ದಿಮನೆಗಳು ಸ್ಥಿತ್ಯಂತರಗೊಂಡ ಬಗೆ – ರಾಜಾರಾಂ ತಲ್ಲೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...