Homeಮುಖಪುಟತಜ್ಞರ ವರದಿಯನ್ನು ನಿರಾಕರಿಸುತ್ತಿರುವ ಐಸಿಎಂಆರ್‌: ವೈದ್ಯಕೀಯ ತಜ್ಞರು ವರ್ಸಸ್ ರಾಜಕೀಯ

ತಜ್ಞರ ವರದಿಯನ್ನು ನಿರಾಕರಿಸುತ್ತಿರುವ ಐಸಿಎಂಆರ್‌: ವೈದ್ಯಕೀಯ ತಜ್ಞರು ವರ್ಸಸ್ ರಾಜಕೀಯ

- Advertisement -
- Advertisement -

ಜೂನ್ ೧೪ರಂದು ಹಲವಾರು ಪತ್ರಿಕೆಗಳಲ್ಲಿ ಒಂದು ವರದಿ ಪ್ರಕಟವಾಯಿತು. ಅಷ್ಟೆಲ್ಲಾ ಪತ್ರಿಕೆಗಳಲ್ಲಿ ಒಮ್ಮೆಗೇ ಆ ವರದಿ ಬರಲು ಕಾರಣವಿತ್ತು. ಅದರ ಮೂಲ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಆಗಿದ್ದುದರಿಂದ ಎಲ್ಲರೂ ಪ್ರಕಟಿಸಿದರು. ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು) ರಚಿಸಿದ ಒಂದು ತಜ್ಞರ ಸಮಿತಿಯು ಮುಂದಿಟ್ಟಿರುವ ಅಧ್ಯಯನ ವರದಿಯ ಪ್ರಕಾರ ನವೆಂಬರ್ ಮಧ್ಯಭಾಗದಲ್ಲಿ ಭಾರತದಲ್ಲಿ ಕೊರೊನಾ ಸೋಂಕಿನ ಶಿಖರ ಕಂಡುಬರುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ಅದರ ಮರುದಿನ, ಜೂನ್ ೧೫ರಂದು ಐಸಿಎಂಆರ್ ಒಂದು ಟ್ವೀಟ್‌ನ ಮುಖಾಂತರ ಇದನ್ನು ಅಲ್ಲಗಳೆಯಿತು. ಅವರ ಪ್ರಕಾರ ’ಇತರ ಸಹತಜ್ಞರಿಂದ ಇನ್ನೂ ಪರಾಮರ್ಶನೆಗೊಳಗಾಗದ ಈ ವರದಿಯು ಐಸಿಎಂಆರ್‌ದ್ದಲ್ಲ ಮತ್ತು ಇದು ಐಸಿಎಂಆರ್‌ನ ಅಧಿಕೃತ ತಿಳುವಳಿಕೆಯೂ ಅಲ್ಲ’. ಒಂದು ಟ್ವೀಟ್‌ನ ಮುಖಾಂತರ ಐಸಿಎಂಆರ್ ಹೀಗೆ ಹೇಳಿತ್ತು.

ಸದರಿ ತಜ್ಞ ವರದಿಯನ್ನು ತಯಾರು ಮಾಡಿದ್ದವರಲ್ಲಿ ದೇಶದ ಎರಡು ಪ್ರತಿಷ್ಠಿತ ಸಂಸ್ಥೆಗಳ ಪ್ರಮುಖ ತಜ್ಞರು, ಲಂಡನ್‌ನ ಒಬ್ಬ ತಜ್ಞರು ಮತ್ತು ಸ್ವತಃ ಐಸಿಎಂಆರ್ ರಚಿಸಿದ್ದ ರಾಷ್ಟ್ರೀಯ ಕೋವಿಡ್ ಟಾಸ್ಕ್ ಫೋರ್ಸ್‌ನ ’ಆಪರೇಷನ್ಸ್ ರಿಸರ್ಚ್ ಗ್ರೂಪ್‌ನ ಮುಖ್ಯಸ್ಥ’ ನರೇಂದ್ರ ಅರೋರಾ ಸಹಾ ಇದ್ದರು. ಈ ವರದಿಯು ಅಧಿಕೃತ ವರದಿಯಾಗಿಲ್ಲದಿದ್ದಲ್ಲಿ ಅದನ್ನು ಬಹಿರಂಗಗೊಳಿಸಲಾಯಿತೇಕೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸಿತು. ಈ ರೀತಿ ಕೆಲವು ಸಮಸ್ಯೆಗಳಾಗುವುದು ಸಹಜ ಎಂದುಕೊಳ್ಳುವುದಾದಲ್ಲಿ, ಜೂನ್ ೭-೮ರಂದೂ ಇಂತಹುದೇ ಒಂದು ಬೆಳವಣಿಗೆ ನಡೆದಿತ್ತು. ಭಾರತದಲ್ಲಿ ಅತೀ ಹೆಚ್ಚು ಕೊರೊನಾ ಸೋಂಕಿರುವ ನಗರಗಳು ಮತ್ತು ಮಧ್ಯಮ ಪ್ರಮಾಣ ಹಾಗೂ ಕಡಿಮೆ ಪ್ರಮಾಣದ ಸೋಂಕಿರುವ ನಗರಗಳಲ್ಲಿ ನಡೆಸಿದ ಒಂದು ಅಧ್ಯಯನ ವರದಿಯು ಜೂನ್ ೭ರಂದು ಹೊರಬಿದ್ದಿತ್ತು. ಅದರ ಪ್ರಕಾರ ಹಾಟ್‌ಸ್ಪಾಟ್ ನಗರಗಳಲ್ಲಿನ ಕಂಟೈನ್‌ಮೆಂಟ್ ಪ್ರದೇಶಗಳಲ್ಲಿ ಶೇ.೧೫ರಿಂದ ಶೇ.೩೦ರಷ್ಟು ಜನರಿಗೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇದೆ. ಇದನ್ನು ಸದರಿ ತಜ್ಞರು ಸುಖಾಸುಮ್ಮನೆ ಹೇಳಿದ್ದಲ್ಲ. ಅಂತಹ ಪ್ರದೇಶಗಳಲ್ಲಿನ ಜನರ ರಕ್ತವನ್ನು ತೆಗೆದುಕೊಂಡು ಪರೀಕ್ಷಿಸಿ, ಅವರ ದೇಹದಲ್ಲಿ ಕೊರೊನಾ ಸೋಂಕು ಬಂದು ಹೋಗಿರುವುದಕ್ಕೆ ನಿದರ್ಶನವಾಗಿ ಆಂಟಿಬಾಡಿಗಳಿರುವುದನ್ನು ಪತ್ತೆ ಹಚ್ಚಿ ಅಭಿಪ್ರಾಯ ಮುಂದಿಟ್ಟಿದ್ದರು.

ಆದರೆ ಮರುದಿನ ಜೂನ್ ೮ರಂದು ಇದನ್ನೂ ಐಸಿಎಂಆರ್ ನಿರಾಕರಿಸಿತು. ಇಂಡಿಯನ್ ಎಕ್ಸ್‌ಪ್ರೆಸ್‌ನ ಪ್ರಕಾರ ಈ ವರದಿಯನ್ನು ಪ್ರಧಾನಮಂತ್ರಿ ಕಚೇರಿ ಮತ್ತು ಒಕ್ಕೂಟ ಸರ್ಕಾರದ ಕ್ಯಾಬಿನೆಟ್ ಕಾರ್ಯದರ್ಶಿಯವರಿಗೂ ಈ ವರದಿಯನ್ನು ಸಲ್ಲಿಸಲಾಗಿತ್ತು. ಐಸಿಎಂಆರ್, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ, ವಿಶ್ವ ಆರೋಗ್ಯ ಸಂಸ್ಥೆಯ ಭಾರತ ಕಚೇರಿ ಹಾಗೂ ರಾಜ್ಯ ಸರ್ಕಾರಗಳ ನೆರವಿನೊಂದಿಗೆ ೭೦ ಜಿಲ್ಲೆಗಳ ೨೪,೦೦೦ ಜನರ ರಕ್ಷವನ್ನು ಸಂಗ್ರಹಿಸಿ ಈ ಅಧ್ಯಯನ ನಡೆಸಿದೆಯೆಂದೂ ಹೇಳಲಾಗಿತ್ತು. ದೇಶದ ಒಟ್ಟು ಕೊರೊನಾ ಸೋಂಕಿತರ ಪೈಕಿ ಶೇ.೭೦ರಷ್ಟು ಜನರಿದ್ದ ಮುಂಬಯಿ, ಅಹಮದಾಬಾದ್, ಪುಣೆ, ದೆಹಲಿ, ಕೊಲ್ಕೊತ್ತಾ, ಇಂದೋರ್, ಥಾಣೆ, ಜೈಪುರ, ಚೆನ್ನೈ ಮತ್ತು ಸೂರತ್‌ಗಳಲ್ಲಿನ ತಲಾ ೧೦ ಕಂಟೈನ್‌ಮೆಂಟ್ ಪ್ರದೇಶಗಳಿಂದ ತಲಾ ೫೦೦ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಇದಲ್ಲದೇ ಇನ್ನೂ ಕಡಿಮೆ ಹಬ್ಬಿದ್ದ ೨೧ ರಾಜ್ಯಗಳ ೬೦ ಜಿಲ್ಲೆಗಳಲ್ಲೂ ಅಧ್ಯಯನ ನಡೆಸಿತ್ತು.

ಅಂದರೆ ಸರ್ಕಾರದಿಂದಲೇ ಅಧಿಕೃತವಾಗಿ ಈ ಸಮೀಕ್ಷೆ ನಡೆದಿತ್ತೆನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಜೂನ್ ೯ರಂದು ’ಇವೆಲ್ಲಾ ಊಹಾಪೋಹ ಅಷ್ಟೇ. ಇನ್ನೂ ಅಂತಿಮ ವರದಿ ಬಂದಿಲ್ಲ’ ಎಂದು ಐಸಿಎಂಆರ್ ಟ್ವೀಟ್ ಮಾಡಿತು. ವರದಿಯಲ್ಲೂ ಸಹಾ ಕೊಲ್ಕೊತ್ತಾ ಮತ್ತು ಸೂರತ್‌ಗಳ ವರದಿ ಇನ್ನೂ ಬಂದಿಲ್ಲವೆಂದು ಹೇಳಲಾಗಿತ್ತಾದ್ದರಿಂದ ಈ ಟ್ವೀಟ್‌ಗೆ ಒಂದು ಕಾರಣವಿತ್ತೆಂದುಕೊಳ್ಳೋಣ. ಆದರೆ ಅಲ್ಲಿಂದಾಚೆಗೆ ಒಂದು ವಾರವಾದರೂ ಆ ’ಅಂತಿಮ ವರದಿ’ ಇನ್ನೂ ಹೊರಗೆ ಬಂದಿಲ್ಲ.

ಅಷ್ಟೇ ಅಲ್ಲದೇ ಈಗಿನ ಇನ್ನೊಂದು ವರದಿಯನ್ನೂ ಅಧಿಕೃತವಲ್ಲವೆಂದು ತಳ್ಳಿ ಹಾಕಲಾಗುತ್ತಿದೆ.

ಒಂದು ವೇಳೆ ಸರ್ಕಾರಕ್ಕೆ ಇವುಗಳನ್ನು ಹೊರಗೆ ಪ್ರಕಟಿಸಬಾರದೆಂಬ ಉದ್ದೇಶವಿದ್ದರೆ ಹೊರಗೆ ಬಂದದ್ದು ಹೇಗೆ? ’ಲೀಕ್’ ಆಯಿತೇ? ಇಲ್ಲ. ಸ್ವತಃ ಪಿಟಿಐ ಎರಡನೆಯ ವರದಿಯನ್ನು ಬಹಿರಂಗಗೊಳಿಸಿತ್ತು. ಅಂದರೆ ಸರ್ಕಾರಕ್ಕೆ ಇದು ಪ್ರಕಟವಾಗುವುದು ಬೇಕಿತ್ತೆ. ಅದಕ್ಕೆ ಕಾರಣ ಹೀಗಿರಬಹುದು. ಲಾಕ್‌ಡೌನ್ ಮಾಡಿದ್ದರಿಂದಾಗಿ ದೇಶದಲ್ಲಿ ಕೊರೊನಾ ಸೋಂಕಿನ ಹಬ್ಬುವಿಕೆಯ ಶಿಖರ (ಪೀಕ್) ಮುಟ್ಟಲು ೩೪ರಿಂದ ೭೬ ದಿನಗಳಷ್ಟು (ಲಾಕ್‌ಡೌನ್ ೨೦%ಇಂದ ೮೦% ವರೆಗೆ ಎಷ್ಟು ಪರಿಣಾಮಕಾರಿಯಾಗಿದೆಯೆಂಬುದರ ಆಧಾರದ ಮೇಲೆ ಅಷ್ಟಷ್ಟು) ನಿಧಾನವಾಗಿದೆಯೆಂದು ಹೇಳಿ, ಲಾಕ್‌ಡೌನ್‌ನ ಸಮರ್ಥನೆಯನ್ನು ಆ ವರದಿಯು ಮಾಡಿತ್ತು. ಲಾಕ್‌ಡೌನ್‌ನ ಕಾರಣದಿಂದಾಗಿ ಸೋಂಕು ಹರಡುವುದು (ನಿಲ್ಲುವುದಿಲ್ಲವಾದರೂ) ನಿಧಾನವಾಗುತ್ತದೆ ಎಂಬುದನ್ನು ಯಾರೂ ನಿರಾಕರಿಸಿಲ್ಲ. ಆದರೂ ಲಾಕ್‌ಡೌನ್‌ನಿಂದಾದ ಸಮಸ್ಯೆಗಳ ಕುರಿತು ಹೆಚ್ಚೆಚ್ಚು ವರದಿಗಳು ಬರುತ್ತಿರುವ ಹೊತ್ತಿನಲ್ಲಿ ಇದನ್ನು ಬಳಸಿಕೊಳ್ಳುವ ಆತುರವನ್ನು ಸರ್ಕಾರವು ತೋರಿದಂತಿದೆ.

ಅಷ್ಟೇ ಅಲ್ಲದೇ, ಸದರಿ ವರದಿಯಲ್ಲಿ ’ಲಾಕ್‌ಡೌನ್‌ನ ಕಾರಣದಿಂದಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸೂಕ್ತವಾಗಿ ಬಲಪಡಿಸಿಕೊಳ್ಳಲಾಯಿತು’ ಎಂತಲೂ ಹೇಳಲಾಗಿದೆ. ಬಹುಶಃ ಇದೂ ಸಹಾ ಸರ್ಕಾರಕ್ಕೆ ಬಳಸಿಕೊಳ್ಳಲು ಆಕರ್ಷಕವಾಗಿ ಕಾಣಿಸಿತೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗಿದ್ದ ಮೇಲೆ ಸರ್ಕಾರವೇಕೆ ಇದರಿಂದ ಹಿಂದಕ್ಕೆ ಹೋಯಿತು ಎಂಬುದಕ್ಕೆ ಕಾರಣ ಹುಡುಕಬೇಕಾಗುತ್ತದೆ. ವರದಿಯಲ್ಲೇ ಇದಕ್ಕೂ ಉತ್ತರವಿದ್ದಂತಿದೆ. ಮಾರ್ಚ್ ಲಾಕ್‌ಡೌನ್‌ನ ನಂತರದಲ್ಲೇ ಆ ಸಂದರ್ಭಕ್ಕೆ ಅಗತ್ಯವಿದ್ದ ವ್ಯವಸ್ಥೆಯನ್ನು ಸರ್ಕಾರವು ಮಾಡಿಕೊಂಡಿತೆಂದು ಹೇಳುವ ವರದಿಯು, ನವೆಂಬರ್ ಮೊದಲ ವಾರದ ನಂತರ (ಅಂದರೆ ಮುಂದಿನ ೫ ತಿಂಗಳ ನಂತರ!!) ದೇಶದಲ್ಲಿ ಐಸೋಲೇಷನ್ ಹಾಸಿಗೆಗಳು, ಐಸಿಯು ಹಾಸಿಗೆಗಳು ಮತ್ತು ವೆಂಟಿಲೇಟರ್‌ಗಳ ಪ್ರಮಾಣ ೫.೪, ೪.೬ ಮತ್ತು ೩.೯ ತಿಂಗಳವರೆಗೆ ಸಾಲದೇ ಬರುತ್ತದೆ ಎಂದು ಹೇಳುತ್ತದೆ!!!

ಇದು ಆಶ್ಚರ್ಯಕರವಾಗಿದೆ. ಏಕೆಂದರೆ ದಿಢೀರನೆ ಹೇರಲಾದ ಲಾಕ್‌ಡೌನ್‌ನಿಂದ ಸೋಂಕೂ ಹರಡದೇ ಇದ್ದಾಗ ಸಾರ್ವಜನಿಕ ಆರೋಗ್ಯ ಕ್ರಮಗಳು ಮತ್ತು ವ್ಯವಸ್ಥೆಯನ್ನು ಸೂಕ್ತವಾಗಿ ಮಾಡಿಕೊಳ್ಳಲಾಗಿದ್ದರೆ, ಮುಂದಿನ ೫ ತಿಂಗಳಲ್ಲಿ ಅಗತ್ಯವಿರುವಷ್ಟು ವ್ಯವಸ್ಥೆಯನ್ನು ಸರ್ಕಾರವೇಕೆ ಮಾಡಲು ಸಾಧ್ಯವಾಗುವುದಿಲ್ಲ? ಇದರ ಅರ್ಥ ದೊಡ್ಡ ಪ್ರಮಾಣದಲ್ಲಿ ಸಾವುಗಳು ಸಂಭವಿಸಬಹುದು ಎಂದೇ? ಈಗಾಗಲೇ ಮುಂಬಯಿಯ ಶೇ.೯೦ರಷ್ಟು ವೆಂಟಿಲೇಟರ್‌ಗಳು ತುಂಬಿವೆ ಎಂಬ ವರದಿಗಳು ಬಂದಿವೆ. ಜೊತೆಗೆ ಕೆಲವು ಕೋಟಿ ಜನರು ನವೆಂಬರ್ ಹೊತ್ತಿಗೆ ಸೋಂಕನ್ನು ಹೊಂದಿರುತ್ತಾರೆ ಎಂದೂ ವರದಿಯು ಹೇಳಿದೆ. ಬಹುಶಃ ಈ ಕಾರಣಕ್ಕೇ ಸರ್ಕಾರದ ಮುಖ್ಯ ಸ್ಥಾನದಲ್ಲಿರುವವರು ಐಸಿಎಂಆರ್‌ಗೆ ವರದಿಯಿಂದ ದೂರ ಕಾಪಾಡಿಕೊಳ್ಳಲು ಸೂಚಿಸಿದ್ದಂತಿದೆ.

ನಾವು ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶ ವರದಿಯಲ್ಲಿದೆ. ಅದೇನೆಂದರೆ ಒಟ್ಟು ಜಿಡಿಪಿಯ ೬.೨% ಅಷ್ಟು ಕೋವಿಡ್ ಸಾಂಕ್ರಾಮಿಕವನ್ನು ಎದುರಿಸಲು ವ್ಯಯಿಸಬೇಕಾಗುತ್ತದೆಂದು ಹೇಳಿದೆ. ಹಾಲಿ ಅದರ ಪ್ರಮಾಣ (ಬಜೆಟ್‌ನ ಅಂಕಿಅಂಶದ ಪ್ರಕಾರ) ೧.೩% ಮಾತ್ರ ಆಗಿದೆ. ಕೋವಿಡ್ ಎದುರಿಸಲು ಸರ್ಕಾರವು ವೈದ್ಯಕೀಯ ವ್ಯವಸ್ಥೆಗೆ ಮುಡಿಪಿಟ್ಟಿರುವ ಹಣದ ೭೫ ಪಟ್ಟನ್ನು ಖರ್ಚು ಮಾಡಬೇಕೆಂದು ಇದರ ಅರ್ಥ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ೨೫,೫೩೪ ಶತಕೋಟಿ ರೂ.ಗಳನ್ನು ಸರ್ಕಾರ ಖರ್ಚು ಮಾಡಬೇಕೆಂಬ ವರದಿಯು ಸರ್ಕಾರಕ್ಕೆ ಅಪ್ಯಾಯಮಾನವಾಗಿ ತೋರಿರಲಿಕ್ಕಿಲ್ಲ.

ತಜ್ಞರು ವರ್ಸಸ್ ರಾಜಕೀಯ ನಾಯಕರು ಎಂಬ ಸನ್ನಿವೇಶವೂ ಹೊಸತೇನಲ್ಲ. ಇದು ಇಂಗ್ಲೆಂಡಿನಲ್ಲೂ ತಲೆದೋರಿತ್ತೆಂದು ಅಲ್ಲಿನ ಗೆಳೆಯರು ಹೇಳುತ್ತಾರೆ. ಏಕೆಂದರೆ ’ನೋಡಿ ಪರಿಸ್ಥಿತಿ ಇಷ್ಟು ಭೀಕರವಾಗಬಹುದು’ ಎಂಬ ತಜ್ಞರ ವರದಿಯನ್ನು ದೇಶವನ್ನು ಮುನ್ನಡೆಸುತ್ತಿರುವ ನಾಯಕರು ಹಾಗೆಯೇ ಮುಂದಿಡಲಾಗದು. ಏಕೆಂದರೆ ಅವರು ಜನರಲ್ಲಿ ವಿಶ್ವಾಸವನ್ನೂ ಮೂಡಿಸುತ್ತಾ, ಹಂತ ಹಂತವಾದ ತಯಾರಿಯನ್ನು ಮಾಡಿಕೊಳ್ಳುತ್ತಾ ಮುನ್ಸಾಗಬೇಕಿರುತ್ತದೆ. ಆದರೆ ಇಲ್ಲಿ ಪರಿಸ್ಥಿತಿ ಉಲ್ಟಾ ಆಗಿದೆ. ಸರ್ಕಾರವೇ ಹೆಚ್ಚೆಚ್ಚು ಭೀತಿಯನ್ನು ಮೂಡಿಸುತ್ತಾ ಇದೆ. ಸರ್ಕಾರದ ತಪ್ಪುಗಳನ್ನೂ ಸಾಧನೆಗಳೆಂಬಂತೆ ಬಿಂಬಿಸುವ ಶೇ.೯೦ರಷ್ಟು ಮಾಧ್ಯಮ ಸಂಸ್ಥೆಗಳ ಮೂಲಕ ಸರ್ಕಾರವು ಕೊರೊನಾವನ್ನು ಒಂದು ಸಾಮಾಜಿಕ ಸಮಸ್ಯೆ ಮಾಡಿಬಿಟ್ಟಿದೆ.

ಕೊರೊನಾ ಲಾಕ್‌ಡೌನ್‌ನಿಂದ ಆರ್ಥಿಕ ಹಿಂಜರಿತ ಉಂಟಾಗುವುದಿಲ್ಲವೆಂದು ಆರ್ಥಿಕ ಖಾತೆಯ ರಾಜ್ಯ ಸಚಿವ ಹೇಳಿದರೆ, ಸರ್ಕಾರದ ಪರವಾಗಿ ಮಾತನಾಡುವ ಅಧಿಕೃತ ವ್ಯಕ್ತಿಗಳು ಸೋಂಕಿನ ಸಾಮುದಾಯಿಕ ಹರಡುವಿಕೆ ಆಗಿಲ್ಲವೆಂದು ಹೇಳುತ್ತಾರೆ. ಹಾಗಾಗಿಯೇ ಕಂಟೈನ್‌ಮೆಂಟ್ ಪ್ರದೇಶಗಳಲ್ಲಿ ಶೇ.೩೦ರಷ್ಟು ಜನರಿಗೆ ಸೋಂಕು ಹರಡಿ ಹೋಗಿದೆ ಎಂಬ ವರದಿಯನ್ನು ಸರ್ಕಾರದ ಸಂಸ್ಥೆಗಳು ನಿರಾಕರಿಸುತ್ತಿವೆ ಎಂಬ ಸಂಶಯ ದೃಢವಾಗುತ್ತದೆ. ಇಲ್ಲಿ ವಾಸ್ತವವನ್ನು ಒಪ್ಪಲು ಸರ್ಕಾರಕ್ಕೇಕೆ ಭಯ ಎಂಬುದೇ ಅರ್ಥವಾಗುವುದಿಲ್ಲ. ಒಂದು ವೇಳೆ ೧ ಕೋಟಿ ಜನರಿಗೆ ಈಗಾಗಲೇ ಭಾರತದಲ್ಲಿ ಸೋಂಕು ಬಂದಿದೆ ಎಂಬುದೇ ಭಯದ ವಿಚಾರವಲ್ಲ. ಏಕೆಂದರೆ ಅವರಲ್ಲಿ ಶೇ.೮೦ರಷ್ಟು ಜನರಿಗೆ ಏನೂ ಆಗಿಲ್ಲ ಎಂಬುದು ಕಣ್ಣಿಗೆ ರಾಚುತ್ತಿದೆ.

ಸರ್ಕಾರವು ಅವರು ಸಮಸ್ಯೆಯ ವ್ಯಾಪ್ತಿಯನ್ನು ಜನರ ಮುಂದೆ ಇಟ್ಟು, ನಾವು ಅದಕ್ಕೆ ಇಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ, ನೀವು ಹೀಗೆ ಮಾಡಬೇಕು ಎಂದು ಜನರಿಗೆ ಹೇಳಬೇಕು. ಅದನ್ನು ಮಾಡಲು ಸರ್ಕಾರಕ್ಕೆ ಬಹಳ ಹಿಂಜರಿಕೆಯಿದ್ದಂತಿದೆ. ತಜ್ಞರನ್ನು, ರಾಜ್ಯ ಸರ್ಕಾರಗಳನ್ನು, ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿಯನ್ನು ನಿಭಾಯಿಸುವ ಬದಲಿಗೆ ರಾಜಕೀಯ ಅನುಕೂಲ, ಅನಾನುಕೂಲಗಳ ವಿಚಾರವೇ ಪ್ರಧಾನವಾಗಿರಬಹುದು ಎಂದು ಭಾವಿಸಲು ಸಾಕಷ್ಟು ಪುರಾವೆಗಳು ಸಿಗುತ್ತಿವೆ. ಮೇಲಿನ ಎರಡು ವರದಿಗಳ ವಿಚಾರದಲ್ಲಿ ಸರ್ಕಾರವು ಐಸಿಎಂಆರ್ ಮೂಲಕ ನಡೆದುಕೊಂಡ ರೀತಿಯು ಅದನ್ನು ದೃಢಪಡಿಸುತ್ತವೆ.

ಅದೇನೇ ಇರಲಿ, ಮೇಲಿನ ಎರಡೂ ವರದಿಗಳು ಸೋಂಕಿನ ಈಗಿನ ವಿಸ್ತಾರ, ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ಹರಡಬಹುದಾದ ರೀತಿ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಾಕಷ್ಟು ಬೆಳಕು ಚೆಲ್ಲಿವೆ. ನವೆಂಬರ್ ಹೊತ್ತಿಗೂ ಸರ್ಕಾರವು ಸಿದ್ಧತೆ ಮಾಡಿಕೊಳ್ಳದಿರಬಹುದು ಎಂಬ ದೇಶದ ತಜ್ಞರ ಆತಂಕವನ್ನು, ರಾಜಕೀಯ ನಾಯಕರು ಸುಳ್ಳು ಮಾಡುವಂತೆ ಕಾಣುತ್ತಿಲ್ಲ. ಆ ಕೆಲಸವನ್ನು ಮಾಡುವಂತೆ ಒತ್ತಾಯಿಸಲು ದೇಶದ ಪ್ರಜ್ಞಾವಂತ ಜನರು ಸುವ್ಯವಸ್ಥಿತವಾದ ಕ್ಯಾಂಪೇನ್ ಮಾಡುವ ಅಗತ್ಯವಂತೂ ಕಾಣುತ್ತಿದೆ.

ಡಾ.ವಾಸು.ಎಚ್.ವಿ


ಐಸಿಎಂಆರ್ ಎಷ್ಟು ಬಾರಿ ಮಾರ್ಗಸೂಚಿಗಳನ್ನು ಬದಲಾಯಿಸುತ್ತೀರಿ? ತೆಲಂಗಾಣ ಆರೋಗ್ಯ ಸಚಿವರ ಪ್ರಶ್ನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...