ಭಾರತವು ಪ್ಯಾಲೆಸ್ತೀನ್ಗೆ ಮತ್ತೆ ತನ್ನ ಬೆಂಬಲವನ್ನು ವಿಶ್ವಸಂಸ್ಥೆಯಲ್ಲಿ ವ್ಯಕ್ತಪಡಿಸಿದೆ. ಜೂನ್ 24 ರಂದು ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್ಎಸ್ಸಿ) ಅಧಿವೇಶನದಲ್ಲಿ, ‘ಸ್ವತಂತ್ರ, ಕಾರ್ಯಸಾಧು ಮತ್ತು ಪ್ರಜಾಪ್ರಭುತ್ವವಾದಿ ಪ್ಯಾಲೆಸ್ತೀನ್’ಗೆ ಭಾರತವು ಬೆಂಬಲ ವ್ಯಕ್ತಪಡಿಸಿದೆ. ಜೊತೆಗೆ ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವನ್ನು ಕೊನೆಗೊಳಿಸಬೇಕೆಂದು ಕರೆ ನೀಡಿದೆ.
ಅಧಿವೇಶನದಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಶಾಂತಿ ಮಾತುಕತೆಗಳನ್ನು ಪುನರಾರಂಭಿಸಲು ಭಾರತ ಕರೆ ನೀಡಿದ್ದು, “ಅರ್ಥಪೂರ್ಣ ಮತ್ತು ನಿರಂತರ ಶಾಂತಿಯನ್ನು ಖಾತ್ರಿಪಡಿಸಿಕೊಳ್ಳಲು ಎರಡು ರಾಜ್ಯಗಳ ಪರಿಹಾರವಲ್ಲದೆ ಪರ್ಯಾಯ ಮಾರ್ಗವಿಲ್ಲ” ಎಂದು ಹೇಳಿದೆ.
ಇದನ್ನೂ ಓದಿ: ಪ್ಯಾಲೆಸ್ತೀನ್: ಗಾಝಾ ಮೇಲೆ ಮತ್ತೆ ವಾಯುದಾಳಿ ನಡೆಸಿದ ಇಸ್ರೇಲ್
“ಬಿಕ್ಕಟ್ಟಿನ ಮುಂದುವರಿಕೆಯು ಎರಡು ದೇಶಗಳ ನಡುವೆ ಅವಿಶ್ವಾಸವನ್ನು ಹೆಚ್ಚಿಸುತ್ತದೆ. ಇದು ಹಿಂಸಾಚಾರವು ಮರುಕಳಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಪ್ರಕ್ರಿಯೆಯನ್ನು ತಕ್ಷಣ ಪುನರಾರಂಭಿಸುವ ಅಗತ್ಯವಿದ್ದು, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ನೇರ ಮಾತುಕತೆಗಳ ಅಗತ್ಯವನ್ನು ನಾನು ಮತ್ತೊಮ್ಮೆ ಒತ್ತಿಹೇಳುತ್ತೇನೆ” ಎಂದು ಯುಎನ್ಎಸ್ಸಿ ಅಧಿವೇಶನದಲ್ಲಿ ಭಾರತದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ವಿಕಾಸ್ ಸ್ವರೂಪ್ ಹೇಳಿದ್ದಾರೆ.
ಮೇ ತಿಂಗಳಲ್ಲಿ ಇಸ್ರೇಲ್ ಮತ್ತು ಹಮಾಸ್ 11 ದಿನಗಳ ಕಾಲ ಮುಖಾಮುಖಿಯಾಗಿದ್ದವು. ಈ ಸಮಯದಲ್ಲಿ ಎರಡೂ ಕಡೆಯಿಂದ ಸಾವಿರಾರು ರಾಕೆಟ್ಗಳನ್ನು ಉಡಾಯಿಸಲಾಗಿದ್ದು, 250 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದರ ನಂತರ ಸಂಘರ್ಷ ಪ್ರಾರಂಭಿಸಿದ್ದ ಇಸ್ರೇಲ್ ಕದನ ವಿರಾಮಕ್ಕೆ ಒಪ್ಪಿಕೊಂಡು, ಮೇ 21 ರಿಂದ ಅದು ಜಾರಿಯಲ್ಲಿದೆ.
ಮೇ 16 ರಂದು ನಡೆದ ಯುಎನ್ಎಸ್ಸಿಯ ಮುಕ್ತ ಸಭೆಯಲ್ಲಿ ಮಾತನಾಡಿದ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ ಅವರು, “ಭಾರತ ಎಲ್ಲಾ ಹಿಂಸಾಚಾರ ಮತ್ತು ವಿನಾಶವನ್ನು ಖಂಡಿಸುತ್ತದೆ. ಪ್ಯಾಲೆಸ್ತೀನ್ನ ನ್ಯಾಯಬದ್ಧ ಉದ್ದೇಶವನ್ನು ಮತ್ತು ದ್ವಿರಾಷ್ಟ್ರ ಪರಿಹಾರವನ್ನು ಬೆಂಬಲಿಸುತ್ತದೆ” ಎಂದು ಹೇಳಿದ್ದರು.
ಇದನ್ನೂ ಓದಿ: ಪ್ಯಾಲೆಸ್ಟೀನೀಯರ ಹೋರಾಟ; ದಬ್ಬಾಳಿಕೆಯ ವಿರೋಧ ಅದು ಜಗಳಗಂಟತನವಲ್ಲ