ಢಾಕಾ: ಬಾಂಗ್ಲಾದೇಶದ ಪ್ರಮುಖ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ನಂತರ ಹೆಚ್ಚಿದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಎರಡನೇ ಅತಿದೊಡ್ಡ ನಗರ ಚಿತ್ತಗಾಂಗ್ನಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರದಲ್ಲಿ ವೀಸಾ ಕಾರ್ಯಾಚರಣೆಯನ್ನು ಮುಂದಿನ ಸೂಚನೆ ಬರುವವರೆಗೂ ಭಾರತ ಭಾನುವಾರ ಸ್ಥಗಿತಗೊಳಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಕಳೆದ ವರ್ಷ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರವನ್ನು ಪದಚ್ಯುತಗೊಳಿಸಲು ಕಾರಣವಾದ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಯ ಪ್ರಮುಖ ನಾಯಕನಾಗಿದ್ದ ಹಾದಿ, ಫೆಬ್ರವರಿ 12 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಅಭ್ಯರ್ಥಿಯಾಗಿದ್ದರು.
ಡಿಸೆಂಬರ್ 12 ರಂದು ಕೇಂದ್ರ ಢಾಕಾದ ಬಿಜೋಯ್ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ ಮುಸುಕುಧಾರಿ ಬಂದೂಕುಧಾರಿಗಳು ಅವರ ತಲೆಗೆ ಗುಂಡು ಹಾರಿಸಿದ್ದರು. ಗುರುವಾರ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ನಿಧನರಾದರು.
ಅವರ ಸಾವು ಬಾಂಗ್ಲಾದೇಶದಾದ್ಯಂತ ದಾಳಿಗಳು ಮತ್ತು ವಿಧ್ವಂಸಕ ಕೃತ್ಯಗಳಿಗೆ ಕಾರಣವಾಯಿತು, ಗುರುವಾರ ಚಟ್ಟೋಗ್ರಾಮ್ನಲ್ಲಿರುವ ಸಹಾಯಕ ಭಾರತೀಯ ಹೈಕಮಿಷನರ್ ನಿವಾಸದ ಮೇಲೆ ಕಲ್ಲು ತೂರಾಟವೂ ಸೇರಿದಂತೆ ಹಲವೆಡೆ ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಲಾಯಿತು.
ಚಿತ್ತಗಾಂಗ್ನಲ್ಲಿ ಭಾರತೀಯ ವೀಸಾ ಅರ್ಜಿಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ ಎಂದು ಭಾರತೀಯ ವೀಸಾ ಅರ್ಜಿ ಕೇಂದ್ರ (IVAC)ತಿಳಿಸಿರುವುದಾಗಿ ಭಾನುವಾರ ಢಾಕಾ ಟ್ರಿಬ್ಯೂನ್ ಪತ್ರಿಕೆ ಉಲ್ಲೇಖಿಸಿದೆ.
ಚಿತ್ತಗಾಂಗ್ನಲ್ಲಿರುವ ಭಾರತದ ಸಹಾಯಕ ಹೈಕಮಿಷನ್ನಲ್ಲಿ ಇತ್ತೀಚೆಗೆ ನಡೆದ ಭದ್ರತಾ ವೈಫಲ್ಯದ ಘಟನೆಯ ನಂತರ ಈ ನಿರ್ಧಾರ ತೆಗೆದುಕೊಂಡಿದ್ದು ಭಾನುವಾರದಿಂದ ಜಾರಿಗೆ ಬಂದಿದೆ.
IVAC ಪ್ರಕಾರ, ಬಂದರು ನಗರದಲ್ಲಿನ ಎಲ್ಲಾ ಭಾರತೀಯ ವೀಸಾ ಸಂಬಂಧಿತ ಸೇವೆಗಳು ಡಿಸೆಂಬರ್ 21 ರಿಂದ ಮುಂದಿನ ಸೂಚನೆ ಬರುವವರೆಗೆ ಮುಚ್ಚಲ್ಪಡುತ್ತವೆ.
ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ವೀಸಾ ಅರ್ಜಿ ಕೇಂದ್ರವನ್ನು ಮತ್ತೆ ತೆರೆಯುವ ಕುರಿತು ಮತ್ತಷ್ಟು ಘೋಷಣೆ ಮಾಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಡಿಸೆಂಬರ್ 20 ರಂದು, ಬಾಂಗ್ಲಾದೇಶದ ಸಿಲ್ಹೆಟ್ ನಗರದಲ್ಲಿರುವ ಭಾರತೀಯ ಸಹಾಯಕ ಹೈಕಮಿಷನ್ ಕಚೇರಿ ಮತ್ತು ವೀಸಾ ಅರ್ಜಿ ಕೇಂದ್ರದಲ್ಲಿ ಭದ್ರತೆಯನ್ನು ಬಲಪಡಿಸಲಾಯಿತು.
“ಯಾವುದೇ ಮೂರನೇ ವ್ಯಕ್ತಿ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳಬಾರದು” ಎಂದು ಖಚಿತಪಡಿಸಿಕೊಳ್ಳಲು ವರ್ಧಿತ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಸಿಲ್ಹೆಟ್ ಮೆಟ್ರೋಪಾಲಿಟನ್ ಪೊಲೀಸ್ನ ಹೆಚ್ಚುವರಿ ಉಪ ಆಯುಕ್ತ (ಮಾಧ್ಯಮ) ಸೈಫುಲ್ ಇಸ್ಲಾಂ ಅವರನ್ನು ಢಾಕಾ ಟ್ರಿಬ್ಯೂನ್ ಪತ್ರಿಕೆ ಶನಿವಾರ ಉಲ್ಲೇಖಿಸಿದೆ.
ಢಾಕಾ ವಿಶ್ವವಿದ್ಯಾಲಯದ ಮಸೀದಿಯ ಬಳಿಯ ರಾಷ್ಟ್ರೀಯ ಕವಿ ಕಾಜಿ ನಜ್ರುಲ್ ಇಸ್ಲಾಂ ಅವರ ಸಮಾಧಿಯ ಬಳಿ ಶನಿವಾರ ಹೆಚ್ಚುವರಿ ಬಿಗಿ ಭದ್ರತೆಯ ನಡುವೆ 32 ವರ್ಷದ ಹಾದಿ ಅವರ ಅಂತ್ಯಕ್ರಿಯೆ ನಡೆಸಲಾಯಿತು.
ಅಂತ್ಯಕ್ರಿಯೆಯ ಪ್ರಾರ್ಥನೆಯಲ್ಲಿ ಹತ್ತಾರು ಸಾವಿರ ಜನರು ಭಾಗವಹಿಸಿದ್ದರು, ಮತ್ತು ಆಚರಣೆಗೆ ಮುಂಚಿತವಾಗಿ, ಅವರು “ದೆಹಲಿ ಅಥವಾ ಢಾಕಾ – ಢಾಕಾ, ಢಾಕಾ” ಮತ್ತು “ಸಹೋದರ ಹಾದಿಯ ರಕ್ತ ವ್ಯರ್ಥವಾಗಲು ಬಿಡುವುದಿಲ್ಲ” ಮುಂತಾದ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದರು.


