Homeಚಳವಳಿ`ಸೆರೆಮನೆಯಲ್ಲಿ ನಿರಪರಾಧಿ' - ಪ್ರೊ. ಹನಿ ಬಾಬು ಅವರ ಕುಟುಂಬ ನಮ್ಮೆಲ್ಲರನ್ನು ಉದ್ದೇಶಿಸಿ ಬರೆದಿರುವ ಪತ್ರ

`ಸೆರೆಮನೆಯಲ್ಲಿ ನಿರಪರಾಧಿ’ – ಪ್ರೊ. ಹನಿ ಬಾಬು ಅವರ ಕುಟುಂಬ ನಮ್ಮೆಲ್ಲರನ್ನು ಉದ್ದೇಶಿಸಿ ಬರೆದಿರುವ ಪತ್ರ

- Advertisement -
- Advertisement -

ಪ್ರೊ. ಹನಿ ಬಾಬು ಅವರನ್ನು ಈಗಿಂದೀಗ ಬಿಡುಗಡೆಮಾಡಿ

 ಭೀಮಾ ಕೋರೇಗಾಂವ್-ಎಲ್ಗಾರ್ ಪರಿಷತ್ ಮೊಕದ್ದಮೆ ಎಂದು ಹೆಸರಾದ ಮೊಕದ್ದಮೆಯಡಿಯಲ್ಲಿ ನಮ್ಮ ದೇಶದ ಹದಿನಾರು ಜನ ಧೀಮಂತಧೀಮಂತೆಯರು ದಸ್ತಗಿರಿಯಾಗಿ, ಸೆರೆಮನೆಯಲ್ಲಿದ್ದಾರೆ. ಬಿಕೆ-16 (ಭೀಮಾ ಕೋರೇಗಾಂವ್-16) ಎಂದು ಕರೆಯಲಾಗುವ ಆ ಧೀಮಂತರಲ್ಲಿ ಒಬ್ಬರಾದ ಪ್ರೊ. ಹನಿ ಬಾಬು ಅವರ ಕುಟುಂಬದವರು ನಾವು ಈಗ, ನಮ್ಮ ದೇಶಬಾಂಧವರನ್ನು ಉದ್ದೇಶಿಸಿ, ಈ ಪತ್ರ ಬರೆಯುತ್ತಿದ್ದೇವೆ.  

ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಸಹ-ಪ್ರಾಧ್ಯಾಪಕರಾಗಿರುವ ಹನಿ ಬಾಬು ಎಂ. ಟಿ. ಅವರು ಭಾಷಾಶಾಸ್ತ್ರದ ವಿದ್ವಾಂಸರು; ಆ ವಿಷಯದಲ್ಲಿ ಹೈದರಾಬಾದಿನ ಇಂಗ್ಲಿಷ್ ಮತ್ತು ವಿದೇಶ ಭಾಷೆಗಳ ವಿಶ್ವವಿದ್ಯಾನಿಲಯ (ಇಎಫ್‍ಎಲ್‍ಯು) ಹಾಗೂ ಜರ್ಮನಿಯ ಕೋನ್‍ಸ್ಟಾನ್ಜ಼್ ವಿಶ್ವವಿದ್ಯಾನಿಲಯದಿಂದ ಸಂಶೋಧನ ಡಾಕ್ಟರೇಟ್ ಪಡೆದವರು. ನಿಷ್ಠಾವಂತ ಬೋಧಕರು ಅವರು; ತಾನೊಬ್ಬ ಅಂಬೇಡ್ಕರ್‍ವಾದಿ ಎನ್ನುವ ಸಾಮಾಜಿಕ ಕಾರ್ಯಕರ್ತರು; ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಬದುಕನ್ನೇ ಮುಡಿಪಿಟ್ಟವರು; ಜಾತಿ ವ್ಯವಸ್ಥೆಯನ್ನು ವಿರೋಧಿಸುವ ಹೋರಾಟಗಳಲ್ಲಿ ತೊಡಗಿರುವವರು. ಹಾಗಾಗಿ, ಅವರು ಅನೇಕಾನೇಕ ವಿದ್ಯಾರ್ಥಿ ಮತ್ತು ವಿದ್ವಾಂಸ ಜನರ ಪ್ರೀತಿಗೌರವಗಳನ್ನು ಗಳಿಸಿರುವುದಾಗಲಿ, ‘ಪ್ರಜಾಪ್ರಭುತ್ತ್ವದಲ್ಲಿ ನಂಬಿಕೆ ಇಟ್ಟಿರುವ ಪ್ರಜ್ಞಾವಂತ; ಸ್ನೇಹಮಯೀ ಧೀಮಂತ; ಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಹೃದಯವಂತ’ ಎಂದೆಲ್ಲ ಹೆಸರಾಗಿರುವುದಾಗಲಿ ಅಚ್ಚರಿಯ ವಿಷಯವೇನಲ್ಲ.

ಆ ತಥಾಕಥಿತ ಬಿಕೆ-16 ಜನರ ಮೇಲೆ, ಅವರು ಹತ್ಯೆಯೊಂದನ್ನು ಮಾಡಲು ಸಂಚು ರೂಪಿಸಿದರು ಎಂಬ ಆರೋಪವಿದೆ. ಹಾಗೆ ಶುರುವಾದ ಆ ಪ್ರಕರಣ ಈಗ ಆ ಆರೋಪಿಗಳ ಕಂಪ್ಯೂಟರುಗಳಲ್ಲಿ ಕೆಲವು ಪತ್ರಗಳು ಕಂಡುಬಂದಿವೆ ಎಂಬಷ್ಟಕ್ಕೆ ಮಾತ್ರ ಬಂದು ನಿಂತಿದೆ. ಆದರೆ ಆ ಅಷ್ಟು ಪತ್ರಗಳಲ್ಲಿ ಯಾವೊಂದರಲ್ಲಿಯೂ ಯಾರ ಸಹಿಯೂ ಇಲ್ಲ. ಅಪರಾಧ ತನಿಖೆಯ ಸಂಸ್ಥೆಗಳಿಗೆ, ಆ ಪತ್ರಗಳು ಸಾಚಾ ಎಂದು ಸಾಬೀತು ಮಾಡಲು ಕೂಡ ಆಗಿಲ್ಲ. ಅಲ್ಲದೆ, ಆ ಆ ಪತ್ರಗಳನ್ನು ಆ ಆರೋಪಿಗಳ ಕಂಪ್ಯೂಟರುಗಳಲ್ಲಿ, ಅವರಿಗೆ ಗೊತ್ತಾಗದಂತೆ, ದೂರ ಕುಳಿತ ಕೇಡಿಗರು ಯಾರೋ ಬೇಕೆಂದೇ ಸೇರಿಸಿದ್ದಾರೆ ಎಂಬ ವಿಷಯ ಈಗ ಜಾಹೀರಾಗಿದೆ.

ಹಾಗಾಗಿ, 2018ರಿಂದ ಮೊದಲುಗೊಂಡು, ಭೀಮಾ ಕೋರೇಗಾಂವ್–ಎಲ್ಗಾರ್ ಪರಿಷತ್ ಪ್ರಕರಣ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಒಟ್ಟು ಕಾರ್ಯಕಲಾಪವೇ ಒಂದು ದೊಡ್ಡ ಸುಳ್ಳು ಎಂದೂ, ಆ ಪ್ರಕರಣದ ಸಂಚುಗಾರರಲ್ಲಿ ಒಬ್ಬರೆಂದು ಹನಿ ಬಾಬು ಅವರನ್ನು ಹೆಸರಿಸಿರುವುದು ಘೋರವಾದ ಅನ್ಯಾಯವೆಂದೂ, ದೇಶದ ಪ್ರಭುತ್ತ್ವವೇ ನ್ಯಾಯದ ನಡೆಗೆ ತಾನು ಅಡ್ಡಿಯಾಗಿ ನಿಂತಿದೆ ಎಂದೂ ನಾವು ಹೇಳಬೇಕಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಏಜೆನ್ಸಿಯು (ಎನ್ಐಎ) ಬಾಬು ಅವರನ್ನು ಮುಂಬೈಗೆ ಕರೆಸಿಕೊಂಡು, ಸತತ ಐದು ದಿನಗಳ ಕಾಲ, ಗೊತ್ತುಗುರಿಯಿಲ್ಲದ ವಿಚಾರಣೆ ನಡೆಸಿತು. ಆಮೇಲೆ, 28 ಜುಲೈ 2020ರಂದು, ಅವರನ್ನು ಬಂಧಿಸಿತು.

ಅದಾಗುವುದಕ್ಕೆ ಸಾಕಷ್ಟು ಮುಂಚೆ, 2019ರ ಸೆಪ್ಟೆಂಬರ್‍ ತಿಂಗಳಲ್ಲಿ, ಪೊಲೀಸರು ನಮ್ಮ ಮನೆಯ ಮೇಲೊಂದು ದಾಳಿ ನಡೆಸಿದ್ದರು. ಬಾಬು ಅವರ ಬಂಧನದನಂತರ, 2020ರ ಆಗಸ್ಟ್ ತಿಂಗಳಲ್ಲಿ, ಇನ್ನೊಮ್ಮೆ ದಾಳಿಮಾಡಿ, ಸುದೀರ್ಘ ಶೋಧ ನಡೆಸಿ, ನಮ್ಮನ್ನು ಹೆದರಿಸಿ ಬೆದರಿಸಿದರು. ಸರಿಯಾದ ಸರ್ಚ್ ವಾರೆಂಟ್ ಇಲ್ಲದೆ, ಸಾಕ್ಷ್ಯಗಳನ್ನು ಕಲೆಹಾಕಲು ಪಾಲಿಸಲೇಬೇಕಾದ ಪ್ರಾಥಮಿಕ ಕಾರ್ಯವಿಧಾನ ಮತ್ತು ನಿಯಮಗಳಲ್ಲಿ ಒಂದನ್ನೂ ಪಾಲಿಸದೆ, ನಡೆಸಿದ ತಮ್ಮ ಆ ಶೋಧದನಂತರ ಪೊಲೀಸಿನವರು ಹನಿ ಬಾಬು ಅವರ ಪುಸ್ತಕ, ಕಾಗದಪತ್ರ ಮತ್ತು ವಿದ್ಯುನ್ಮಾನ ಸಾಧನಗಳನ್ನು ಹೊತ್ತೊಯ್ದರು. ತಾವು ಹೊತ್ತೊಯ್ದ ಆ ಸಾಧನ ಮತ್ತು ವಸ್ತುಗಳನ್ನು ಅವರು ಕೆಡಿಸದೆ, ಜೋಪಾನ ಮಾಡುತ್ತಾರೆ ಎಂಬ ಭರವಸೆ ನಮಗಿಲ್ಲ. ಅವರು ಅವುಗಳಲ್ಲಿ ಯಾವುದಕ್ಕೂ ಸಾಕ್ಷ್ಯತ್ತ್ವದ ಸಂಖ್ಯೆಗಳನ್ನು ಒದಗಿಸಿಲ್ಲ. ಅರ್ಥಾತ್, ಅವರಿಗೆ ಆ ಸಾಧನಗಳಲ್ಲಿನ ಮಾಹಿತಿಗೆ ಕೈಹಾಕಿ ಅದನ್ನು ತಮಗೆ ಬೇಕಾದಂತೆ ತಿರಿಚುವ ಅವಕಾಶ ದೊರಕಿದೆ. ಅದರಿಂದ ಅವುಗಳ ಸಾಕ್ಷ್ಯತ್ತ್ವದ ಮೌಲ್ಯಕ್ಕೆ ಕುಂದುಂಟಾಗಿದೆ.

ಎನ್ಐಎ ಸಂಸ್ಥೆಯು ತಮ್ಮಿಂದ ಜಪ್ತಿಮಾಡಿಕೊಂಡಿರುವ ವಿದ್ಯುನ್ಮಾನ ಸಾಧನಗಳ ಕ್ಲೋನ್ ಪ್ರತಿಗಳನ್ನು ತಮಗೆ ಒದಗಿಸಬೇಕು ಎಂದು ಬಾಬು ಅವರೂ ಸೇರಿದಂತೆ ತಥಾಕಥಿತ ಬಿಕೆ-16 ಎಂಬವರೆಲ್ಲರೂ ಅಧಿಕೃತವಾಗಿ, ತಮ್ಮ ಸಂವಿಧಾನದತ್ತ ಹಕ್ಕಿನ ಭಾಗವಾಗಿ ಕೇಳಿಕೊಂಡಿದ್ದರೂ ಎನ್‍ಐಎ ಸಂಸ್ಥೆಯು ಅವರ ಆ ಬೇಡಿಕೆಯನ್ನು ಈಡೇರಿಸುತ್ತಿಲ್ಲ. ಅದರಿಂದಾಗಿ ತಾವು ನಿರಪರಾಧಿಗಳು ಎಂದು ಸಾಬೀತು ಮಾಡುವುದು ಅವರಿಗೆ ದುಸ್ಸಾಧ್ಯವಾಗಿದೆ. ಇಂಥಲ್ಲಿ, ಬೇಕೆಂದೇ ತಡಮಾಡುವುದೆಂದರೆ ‘ಕೊಡುವುದಿಲ್ಲ, ಹೋಗಯ್ಯ’ ಎಂದು ಹೇಳಿದಂತೆಯೆ ಅಲ್ಲವೆ?

ಎನ್‍ಐಎ ಅವರು ನಮಗೆ ಆ ಕ್ಲೋನ್ ಪ್ರತಿಗಳನ್ನು ಕೊಡದೆ ಸತಾಯಿಸುತ್ತಿರುವುದು ಯಾಕಿರಬಹುದು? ಆ ಪ್ರಶ್ನೆಗೆ ಉತ್ತರ, ಬಹುಶಃ, ಅಮೆರಿಕೆಯ ಮ್ಯಾಸ್ಸಚುಸೆಟ್ಸ್ ರಾಜ್ಯದಲ್ಲಿರುವ ಆರ್ಸೆನಲ್ ಕನ್ಸಲ್ಟಿಂಗ್ ಎಂಬ ಹೆಸರಿನ ಡಿಜಿಟಲ್ ವಿಧಿವೈಜ್ಞಾನಿಕ ಸಂಸ್ಥೆ ಇತ್ತೀಚೆಗೆ ನಡೆಸಿದ ಒಂದು ಶೋಧದಲ್ಲಿದೆ. ಹ್ಯಾಕರ್ ಒಬ್ಬನು, ಕೇಡುಮಾಡಲೆಂದೇ ತಯಾರಿಸಿದ ಸಾಫ್ಟ್‍ವೇರನ್ನು ಬಳಸಿ, ತಥಾಕಥಿತ ಬಿಕೆ-16 ಜನರಲ್ಲಿ ಒಬ್ಬರಾದ ರೋನಾ ವಿಲ್ಸನ್ ಅವರ ಲ್ಯಾಪ್‍ಟಾಪಿನಲ್ಲಿ ಕೆಲವು ಕಡತಗಳನ್ನು ತುಂಬಿದನೆಂದೂ ಆ ಕಡತಗಳು ಅಲ್ಲಿಂದ ರೋನಾ ಅವರ ಗೆಳೆಯರ ಲ್ಯಾಪ್‍ಟಾಪ್‍ಗಳಿಗೂ ಹರಡಿಕೊಂಡವು ಎಂದೂ ಆ ಶೋಧವು ಹೇಳುತ್ತದೆ. ಈ ಹದಿನಾರು ಜನರು ಮಾವೋವಾದಿಗಳೊಂದಿಗೆ ಪತ್ರವ್ಯವಹಾರ ನಡೆಸಿದ್ದರು ಎಂದು ಎನ್‍ಐಎ ಮಾಡಿದ ಆರೋಪದ ಬೆಂಬಲಕ್ಕಿರುವ ಒಂದೇ ಸಾಕ್ಷ್ಯವೆಂದರೆ ಸುಳ್ಳಿನ ಆ ಕಡತಗಳು, ಅಷ್ಟೆ. ಆದರೆ ಈಗ, ಆರ್ಸೆನಲ್ ಕನ್ಸಲ್ಟಿಂಗ್ ಅವರ ಶೋಧದಿಂದಾಗಿ, ಆ ಆರೋಪದಲ್ಲಿ ಚೂರೂ ಹುರುಳಿಲ್ಲ ಎನ್ನುವುದು ಬಯಲಾಗಿದೆ.

ಇಷ್ಟಾದರೂ, ನ್ಯಾಯಾಲಯವು ತಾನು ಸ್ವಯಂಪ್ರೇರಿತವಾಗಿ ಇದು ಯಾವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ;  ಮೊಕದ್ದಮೆಯ ‘ಸಾಕ್ಷ್ಯ’ಗಳು ಎಂದು ಪ್ರಭುತ್ತ್ವವು ಮುಂದಿಟ್ಟಿರುವ  ಮಾಹಿತಿಯ ಸಮಗ್ರ, ಸ್ವತಂತ್ರ ತನಿಖೆಗೆ ಆಗಲಿ, ವಿಧಿವೈಜ್ಞಾನಿಕ ವಿಶ್ಲೇಷಣೆಗೆ ಆಗಲಿ ಆದೇಶ ನೀಡಿಲ್ಲ. ಇದೀಗ ಮಹಾಸೋಜಿಗದ ಸಂಗತಿ. ಪ್ರಜಾಪ್ರಭುತ್ತ್ವವಿರುವ ಯಾವುದೇ ದೇಶದಲ್ಲಿ, ಸತ್ಯಾಸತ್ಯ ವಿವೇಚನೆಯ ಅಂಥ ಕೆಲಸ ತತ್ ಕ್ಷಣವೇ ನಡೆದುಬಿಡುತ್ತದೆ. ಆದರೆ ನಮ್ಮಲ್ಲಿ ಮಾತ್ರ ನ್ಯಾಯಾನ್ಯಾಯ ವಿವೇಚನೆಯ ಕೆಲಸಕ್ಕೆ ಅಡ್ಡಗಾಲುಹಾಕುವ ವಿಳಂಬತಂತ್ರದ ಮೇಲಾಟವೇ ನಡೆಯುತ್ತಿದೆ.

ಹಾಗಾಗಿ, ಈ ದಸ್ತಗಿರಿಗಳೆಲ್ಲವೂ  ಒಂದು ಷಡ್ಯಂತ್ರದನುಸಾರ ನಡೆದಿವೆ ಎನ್ನಬೇಕಿದೆ. ಈವರೆಗೆ, ದಸ್ತಗಿರಿಯಾದ ಯಾರೊಬ್ಬರ ವಿರುದ್ಧವೂ ಯಾವುದೇ ನ್ಯಾಯಾಲಯದಲ್ಲಿಯೂ ಆರೋಪಪಟ್ಟಿಯ ಸಲ್ಲಿಕೆಯಾಗಿಲ್ಲ. ಪ್ರತಿಸಲವೂ, ‘ಹೊಸದಾಗಿ ಬಂಧನಕ್ಕೊಳಗಾದವರ ವಿಚಾರಣೆ ನಡೆಯಬೇಕಿದೆ. ಹಾಗೂ ಹೊಸ ಸಾಕ್ಷ್ಯಗಳನ್ನು ಪರೀಕ್ಷಿಸಬೇಕಿದೆ’ ಎಂಬ ನೆವವೊಡ್ಡುತ್ತಲೇ ಆರೋಪಪಟ್ಟಿಯ ಸಲ್ಲಿಕೆಯನ್ನು ಅನಂತಕಾಲ ಮುಂದೂಡುವ ಹುನ್ನಾರ ನಡೆದಿದೆ. ಪ್ರಭುತ್ತ್ವವು ಹೇಳುತ್ತಿರುವ ಸುಳ್ಳುಗಳ ಪರದೆಯ ಹಿಂದಿನ ಸತ್ಯವೆಂದರೆ, ಇದುವೆ.

ಮೇಲಾಗಿ, ಪೊಲೀಸರ ಕೇಸಿನ ಪರವಾಗಿ ತಾವು ಸಾಕ್ಷಿಯಾಗಬೇಕೆಂದು, ಮತ್ತು ಸದರಿ ಮೊಕದ್ದಮೆಯಡಿ ಸೆರೆಯಾದ ಉಳಿದವರಲ್ಲಿ ಕೆಲವರನ್ನು ಕುರಿತು (ಕನಿಷ್ಠ ಪಕ್ಷ ಒಬ್ಬರನ್ನು ಕುರಿತಾದರೂ) ಸುಳ್ಳು ಸಾಕ್ಷ್ಯ ನೀಡಬೇಕೆಂದು ಎನ್‍ಐಎ ಅವರು ತಮ್ಮಮೇಲೆ ದಬ್ಬಾಳಿಕೆ ನಡೆಸಲು ಪ್ರಯತ್ನಿಸಿದ್ದನ್ನು ಬಾಬು ಅವರು ನಮ್ಮಲ್ಲಿ ಹೇಳಿಕೊಂಡಿದ್ದಾರೆ. ದಬ್ಬಾಳಿಕೆಯ ಆ ಪ್ರಯತ್ನ ಈ ಪ್ರಕರಣದಲ್ಲಿ ದಸ್ತಗಿರಿಯಾಗಿರುವ ಉಳಿದವರ ಮೇಲೂ ನಡೆದಿದೆ. ಆದರೆ ಬಾಬು ಅವರಾಗಲಿ, ತಥಾಕಥಿತ ಬಿಕೆ-16 ಗುಂಪಿನ ಉಳಿದವರು ಯಾರೇ ಆಗಲಿ, ಒಬ್ಬರು ಇನ್ನೊಬ್ಬರನ್ನು ಸುಳ್ಳುಸುಳ್ಳೇ ಸಿಕ್ಕುಹಾಕಿಸಲು ಒಪ್ಪದೆ, ನಿಜವಾದ ಋಜುತ್ವವನ್ನು ತೋರಿದ್ದಾರೆ. ಯಾಕೆಂದರೆ, ನಿಜಕ್ಕೂ, ಅವರು ಯಾರೂ ಯಾವ ಅಪರಾಧವನ್ನೂ ಮಾಡದವರು, ನಿಜವಾದ ದೇಶಪ್ರೇಮಿಗಳು.

ಇನ್ನು ಇದು ಕೋವಿಡ್ ಪಿಡುಗಿನ ಕಾಲ. ನಮ್ಮ ಬಂದೀಖಾನೆಗಳಲ್ಲಿ ಪ್ರತಿದಿನವೂ ಹೊಸ ಕೋವಿಡ್ ಪಾಸಿಟಿವ್ ಕೇಸ್‍ಗಳು ಪತ್ತೆಯಾಗುತ್ತಿವೆ. ಕೈದಿಗಳು ಸಾಯುತ್ತಿದ್ದಾರೆ ಎಂಬ ವರದಿಗಳಿವೆ. ಮಹಾರಾಷ್ಟ್ರದ ಸೆರೆಮನೆಗಳಲ್ಲಿ ಕೋವಿಡ್-19 ಮಹಾಮಾರಿಯು ಎಗ್ಗಿಲ್ಲದೆ ಹರಡುತ್ತಿರುವುದನ್ನು ಕುರಿತು ಮುಂಬೈನ ಉಚ್ಚ ನ್ಯಾಯಾಲಯವು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ದಾಖಲಿಸಿಕೊಂಡಿದೆ. ಈ ಕೋವಿಡ್‍ಮಾರಿ ತಂದೊಡ್ಡಿರುವ ಮಹಾಸಂಕಟವನ್ನು ಲೆಕ್ಕಿಸಿ, ವಿಶ್ವದ ಹಲವು ರಾಷ್ಟ್ರಗಳು, ತಮ್ಮಲ್ಲಿನ ರಾಜಕೀಯ ಕೈದಿಗಳ ಬಿಡುಗಡೆಮಾಡುತ್ತಿವೆ.

ಆದರೆ ನಮ್ಮಲ್ಲಿ ಆಗುತ್ತಿರುವುದೇ ಬೇರೆ. ನಮ್ಮ, ತಥಾಕಥಿತ, ಬಿಕೆ-16 ಜನರು ಜಾಮೀನು ಬೇಡಿ ಮತ್ತೆಮತ್ತೆ ಅರ್ಜಿ ಸಲ್ಲಿಸುತ್ತಿದ್ದರೂ, ಅವೆಲ್ಲವೂ, ಆ ಧೀಮಂತರ  ವಯಸ್ಸು ಹಾಗು ಆರೋಗ್ಯದ ಪರಿಸ್ಥಿತಿಯನ್ನು ಕೂಡ ಲೆಕ್ಕಿಸದೆ, ಮತ್ತೆಮತ್ತೆ ತಿರಸ್ಕಾರಗೊಳ್ಳುತ್ತಿವೆ. ಇದೆಲ್ಲ ಮಾನವ ಹಕ್ಕುಗಳ ಎಗ್ಗಿಲ್ಲದ ಉಲ್ಲಂಘನೆಯಲ್ಲದೆ ಮತ್ತೇನು? ವಿಪರ್ಯಾಸವೆಂದರೆ, ನಮ್ಮ ಸರ್ವೋಚ್ಚ ನ್ಯಾಯಾಲಯವು, ಈಚೆಗೆ, ‘ಅಪರಾಧ ಪ್ರಕರಣವು ಎಂಥದೇ ಇರಲಿ, ದಸ್ತಗಿರಿಯಾದವರು ಎಂಥವರೇ ಇರಲಿ, ಅವರ ನ್ಯಾಯಾಂಗ ವಿಚಾರಣೆಯು ತ್ವರಿತವಾಗಿ ನಡೆದು ಮುಗಿಯಬೇಕು. ಅದು ಹಾಗಾಗಬೇಕಾದದ್ದು ಅವರ ಮೂಲಭೂತ ಹಕ್ಕು. ಆ ಹಕ್ಕು ಯುಎಪಿಎ ಕಾಯಿದೆಯಡಿಯಲ್ಲಿ ಬಂಧಿತರಾದವರಿಗೂ ಇದೆ’ ಎಂದು ಬಹಳ ಸ್ಪಷ್ಟವಾಗಿ ಘೋಷಿಸಿದೆ.

ದೇಶದ ಅತ್ಯುನ್ನತ ನ್ಯಾಯಾಲಯವೇ ಹಾಗೆಂದು ಹೇಳಿರುವಾಗ, ಬಾಬು ಅಂಥವರು ಮತ್ತು ತಥಾಕಥಿತ ಬಿಕೆ-16 ಗುಂಪಿನ ಉಳಿದೆಲ್ಲ ಧೀಮಂತರು, ಭಾರತದ ಸಂವಿಧಾನವು ನಮ್ಮೆಲ್ಲರಿಗೆ ಕೊಟ್ಟಿರುವ ಪ್ರಜಾಪ್ರಭುತ್ತ್ವದ ಹಕ್ಕುಗಳಲ್ಲಿ ನಂಬಿಕೆಯಿಟ್ಟು ಅವುಗಳನ್ನು ಎತ್ತಿಹಿಡಿದ ಮಾತ್ರಕ್ಕೆಯೆ ಸೆರೆಯಾಗಿ, ನ್ಯಾಯಾಂಗ ವಿಚಾರಣೆಯ ಕಷ್ಟನಷ್ಟಗಳಿಗೆ ತುತ್ತಾಗಬೇಕಾದದ್ದು ನಮ್ಮ ಪಾಲಿನೊಂದು ಥರದ ಯಾತನೆಯಾದರೆ, ಆ ವಿಚಾರಣೆಯ ನೆವದಲ್ಲಿ ನ್ಯಾಯದೇವತೆಗೆ ಹೇಳತೀರದ ಅಪಚಾರವಾಗುವುದನ್ನು ಕಣ್ಣಾರೆ ಕಾಣುತ್ತ ನಾವೆಲ್ಲ ಕೊರಗಬೇಕಾದದ್ದು, ಬಲಿಯಾಗಬೇಕಾದದ್ದು ಮತ್ತೊಂದು ಥರದ ಯಾತನೆ.

ತಮ್ಮ ಕೇಸನ್ನು ಕುರಿತಂತೆ ನ್ಯಾಯಾಂಗ ವಿಚಾರಣೆಯ ಶುರುವು ಕೂಡ ಆಗದೆ, ಅದು ‘ಈಗ ಆಗಬಹುದು, ಆಗ ಆಗಬಹುದು’ ಎಂದು ಕಾಯುತ್ತ,  ತಮ್ಮ ನೆಂಟರಿಷ್ಟರನ್ನು, ಕ್ಷಣ ಕೂಡ, ಕಾಣಲಾಗದೆ, ಅವರೊಡನೆ ಮಾತನಾಡಲಾಗದೆ, ಅವರಿಗೆ ಪತ್ರ ಬರೆಯಲಾಗದೆ, ದಿನದಿನದ ಬದುಕಿಗೆ ಬೇಕೇಬೇಕಾದ ಸರಳ ಸಾಮಾನ್ಯ ಸಲಕರಣೆಗಳಿಗಾಗಿ ಕೂಡ ಪ್ರಭುತ್ತ್ವದ ಅಧಿಕಾರಿಗಳಲ್ಲಿ, ಮತ್ತೆಮತ್ತೆ, ದೈನ್ಯತೆಯಿಂದ ಬೇಡಿಕೊಳ್ಳಬೇಕಾಗುತ್ತ, ಸೆರೆಮನೆಯಲ್ಲಿಯೆ ಕೊಳೆಯಬೇಕಾದ ಕೈದಿಗಳಿಗೆ ಆಗುವ ಮಾನಸಿಕ ಹಿಂಸೆ ಇದೆಯಲ್ಲ, ಅದು ಸೆರೆಮನೆಯ ಹೊರಗಿರುವ ನಮಗೆ ಆಗುವ ಹಿಂಸೆಗಿಂತ ಎಷ್ಟೋ ಪಟ್ಟು ಮಿಗಿಲು. ಬಣ್ಣಿಸಲು ಮಾತು ಸಾಲದು.

ನ್ಯಾಯಾಂಗದ ಕಲಾಪವೇ ಶಿಕ್ಷೆಯಾಗುವುದು ಇನ್ನಾದರೂ ತಪ್ಪಲಿ ಎಂದು ಪ್ರಾರ್ಥಿಸುತ್ತ, ಹನಿ ಬಾಬು ಅವರ ಕುಟುಂಬದವರಾದ ನಾವು ಮಾಡುತ್ತಿರುವ ಮನವಿ ಇದು:

1) ಈ ಪ್ರಕರಣದ ಆರೋಪಿಗಳಿಗೆಲ್ಲರಿಗೂ, ಈಕೂಡಲೆ, ಮೇಲೆ ಹೇಳಿರುವ ಕ್ಲೋನ್ ಪ್ರತಿಗಳಂಥವು ಸೇರಿದಂತೆ, ಅವರು ಕೇಳುವ ಎಲ್ಲ ಸಾಕ್ಷ್ಯಗಳೂ ಸಿಗುವಂತಾಗಬೇಕು. ಆಗ ಆ ಪ್ರತಿವಾದಿ ಪಕ್ಷದವರಿಗೆ ಆ ಸಾಕ್ಷ್ಯಗಳ ಸತ್ಯಾಸತ್ಯದ ಸ್ವತಂತ್ರ ತನಿಖೆಗೆ ಅವಕಾಶ ಒದಗಿದಂತಾಗಿ, ವಿಚಾರಣೆಯ ಕಲಾಪವು ಆದಷ್ಟು ಬೇಗ ಶುರುವಾಗಲು ಅನುವಾಗುತ್ತದೆ.

2) ಆರೋಪಿಗಳೆಲ್ಲರಿಗೂ ಅವರವರ  ವಿಚಾರಣೆ ಶುರುವಾಗುವವರೆಗೂ, ಕಾನೂನಿನ ನೀತಿನಿಯಮಗಳ ಅನುಸಾರವಾಗಿ, ತತ್ ಕ್ಷಣವೇ ಜಾಮೀನು ಸಿಕ್ಕಬೇಕು.

ಇಲ್ಲದಿದ್ದರೆ, ಅದು ಈಗಾಗಲೆ ಹಾಗೆ ಆಗಿಲ್ಲ ಎಂದಿಟ್ಟುಕೊಂಡರೂ, ನಮ್ಮ ನ್ಯಾಯಾಂಗ ವ್ಯವಸ್ಥೆಯು ತಾನೇ, ಮತ್ತು ಬೇಕೆಂದೇ, ನ್ಯಾಯದೇವತೆಯನ್ನು ಗಿರಗಿಟ್ಟಲೆ ತಿರುಗಿಸಿ, ದಿಕ್ಕೆಡಿಸುತ್ತಿದೆ ಎಂಬ ಅಪವಾದಕ್ಕೆ ಒಳಗಾಗಬೇಕಾಗುತ್ತದೆ.

05 ಮೇ 2021

ಸಹಿಮಾಡಿದವರು:
ಜೆನ್ನೀ (ಹೆಂಡತಿ)
ಫಾತಿಮಾ (ತಾಯಿ)
ಫರ್ಜಾ಼ನಾ (ಮಗಳು)
ಹ್ಯಾರಿಶ್, ಹಾಗೂ ಅನ್ಸಾರಿ (ಒಡಹುಟ್ಟಿದವರು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಬೀಮಾ ಕೋರೆಗಾವ್ ಪ್ರಕರಣದ ಎಲ್ಲಾ 16 ಬಂದಿತರಿಗೂ ಈ ಕೂಡಲೇ ಜಾಮೀನು ದೊರಕಬೇಕು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...