HomeUncategorizedಬೀದಿ ನಾಟಕ; ಕತ್ತಿ ಯಾವುದಾದರೇನು?: ಪ್ರೊ. ಶಿವರಾಮಯ್ಯ

ಬೀದಿ ನಾಟಕ; ಕತ್ತಿ ಯಾವುದಾದರೇನು?: ಪ್ರೊ. ಶಿವರಾಮಯ್ಯ

- Advertisement -
- Advertisement -

ದೃಶ್ಯ-ಒಂದು
ರೈತ ಯುವಕ ಯುವತಿಯರು ಎರಡು ಗುಂಪುಗಳು ಎದುರುಬದುರಾಗಿ ಕುವೆಂಪು ’ರೈತನ ದೃಷ್ಟಿ’ ಕವನದ ನಾಟ್ಯಾಭಿನಯ ಮಾಡುತ್ತಿರುತ್ತಾರೆ.
ಗುಂಪು-1: ಕರಿಯರದೊ ಬಿಳಿಯರದೊ ಯಾರದಾದರೇನು? ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ! (ನಿರ್ಗಮನ)
ಗುಂಪು-2: ವಿಜಯನಗರವೊ? ಮೊಗಲರಾಳ್ವಿಕೆಯೊ? ಇಂಗ್ಲಿಷರೊ? ಎಲ್ಲರೂ ಜಿಗಣಿಗಳೆ ನನ್ನ ನೆತ್ತರಿಗೆ! (ನಿರ್ಗಮನ)
ಗುಂಪು-1+2: ಕತ್ತಿ ಪರದೇಶಿಯದಾದರೆ ಮಾತ್ರ ನೋವೆ? ನಮ್ಮವರೆ ಹದ ಹಾಕಿ ತಿವಿದರದು ಹೂವೆ? (ನಿರ್ಗಮನ)
ಗುಂಪು-1: ಸೋಮಾರಿಗಳಿಗೆ ಸುಖಿಗಳಿಗೆ ರಸಿಕರಿಗಲ್ತೆ ಸ್ವರಾಜ್ಯವೆಂಬುದದು ಕಾಮಧೇನು? (ನಿರ್ಗಮನ)
ಗುಂಪು-2: ನೃಪ ಎಂಬ ಹೆಸರೊಡನೆ ಮುಡಿಯೊಂದನಾಂತೊಡನೆ ಕಳ್ಳರೊಡೆಯನು ಕೃಪೆಯ ಮೂರ್ತಿಯೇನು? (ನಿರ್ಗಮನ)
ಗುಂಪು-1+3: ತಿಂದುಂಡು ಮೆರೆವವರ ಮೆರವಣಿಗೆಗಾನು ಬಾಯ್ದೆರೆದು ನೋಳ್ಪ ಬೆಪ್ಪಾಗಬೇಕೇನು? (ನಿರ್ಗಮನ)
ಗುಂಪು-1: ಹರಕೆ ಯಾರದೊ? ಹಬ್ಬವಾರಿಗೊ? ಅದಾವಗಂ ಸಾಮ್ರಾಜ್ಯಕಾಳಿಗಾನಲ್ತೆ ಕುರಿ ಕೊಲೆಗೆ? (ನಿರ್ಗಮನ)
ಗುಂಪು-2: ಕುಯ್ಗಿರಿಯನೆಂತಂತೆ ಸಾವು ಬದುಕಿನ ನಡುವೆ ಕರುಣೆ ಗರಗಸದಿಂದೆ ಸೀಳುವರು ಬೆಲೆಗೆ. (ನಿರ್ಗಮನ)
ಗುಂಪು-1: ನೇಗಿಲಿನ ಮೇಲಾಣೆ! ಬಸವಗಳ ಮೇಲಾಣೆ! ನೆತ್ತರಿಲ್ಲದೆ ಸುಕ್ಕಿ ಸೊರಗಿದೆನ್ನಾಣೆ! (ನಿರ್ಗಮನ)
ಗುಂಪು-2: ಸಾಮ್ರಾಜ್ಯ ಶೂರ್ಪನಖಿ ಮೋಹಿನಿಯ ರೂಪಕ್ಕೆ ಮರುಳಾಗಗೆನೆಂದಿಗೂ, ಸೀತೆ ಮೇಲಾಣೆ! (ನಿರ್ಗಮನ)
ಗುಂಪು-1 : ಬಡತನದ ಗೊಬ್ಬರವನುದಿನಂ ಹೀರಿ ಹಿಡಿಸದೋ ಸಾಮ್ರಾಜ್ಯ ಸಿರಿಯ ಕಸ್ತೂರಿ! (ನಿರ್ಗಮನ)
ಗುಂಪು-2: ಸಾಕೆನಗೆ, ಸಾಕಯ್ಯ, ಸಾಮ್ರಾಜ್ಯ ಪೂಜೆ: ಸಿಡಿಮದ್ದಿನಕ್ಷತೆಗೆ ಗುಂಡು ಚರೆ ಲಾಜೆ! (ನಿರ್ಗಮನ)
ಗುಂಪು-1+2 : ಕತ್ತಿಪರದೇಶಿಯಾದರೆ ಮಾತ್ರ ನೋವೆ? ನಮ್ಮವರೆ ಹದಹಾಕಿ ತಿವಿದರದು ಹೂವೆ?
ಎರಡೂ ಗುಂಪುಗಳೊಂದಿಗೆ ಮತ್ತಷ್ಟು ರೈತರು, ಮಹಿಳೆಯರು, ಮಕ್ಕಳು, ಮುದುಕರು ಒಟ್ಟಾಗುವರು
ಗುಂಪು-1: ಮುಂದೇನು ಮಾಡುವುದೊ ಅಣ್ಣಾ?
ಗುಂಪು-2: ರಾಜಧಾನಿ ಮುತ್ತಿಗೆಯೊ ತಮ್ಮಾ!
ಗುಂಪು-1: ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ-2020ಅನ್ನು ರದ್ದುಗೊಳಿಸಬೇಕು.
ಗುಂಪು-2: ರೈತರ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆಯನ್ನೂ..
ಗುಂಪು-1: ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ-2020ಅನ್ನೂ…
ಗುಂಪು-2: ಸರ್ಕಾರ ಬೇಷರತ್ತಾಗಿ ಹಿಂತೆಗೆದುಕೊಳ್ಳಬೇಕು.
ಗುಂಪು-1: ಯಾಕೆಂದರೆ, ಕೇಂದ್ರ ಸರ್ಕಾರ ಮಾಡಿರುವುದೇನು ಗೊತ್ತಾಯಿತಾ?
ಗುಂಪು-2: ಸರ್ಕಾರ ಎಪಿಎಂಸಿ ವ್ಯವಸ್ಥೆಯನ್ನೇ ಸಂಪೂರ್ಣ ಮುಚ್ಚುವಂತೆ ಮಾಡುವ ತಿದ್ದುಪಡಿ ತಂದಿದೆ ಅಲ್ವಾ?
ಗುಂಪು-1: ಎಪಿಎಂಸಿ ವ್ಯವಸ್ಥೆಗೆ ಬದಲಾಗಿ ಶ್ರೀಮಂತ ಬಂಡವಾಳಗಾರರಿಗೆ ಮಂಡಿಗಳ ಸ್ಥಾಪನೆಗೆ ಅವಕಾಶ ಮಾಡಿ ಕೊಟ್ಟಿದೆ ತಮ್ಮಾ.
ಗುಂಪು-2: ಈಗಿರುವ ಕಾಯ್ದೆಯಲ್ಲಿ ಎಪಿಎಂಸಿ ವ್ಯವಹಾರದ ಮೇಲೆ ತೆರಿಗೆ ಮತ್ತು ಶುಲ್ಕ ವಿಧಿಸುವ ಹಕ್ಕು ಸರ್ಕಾರಕ್ಕಿತ್ತಲ್ಲಾ?
ಗುಂಪು-1: ಹೌದು, ಆದರೆ ಹೊಸ ಕಾಯ್ದೆಯಲ್ಲಿ ಖಾಸಗಿ ಮಂಡಿಗಳಿಗೆ ಶುಲ್ಕ ವಿಧಿಸುವುದಿಲ್ಲವಂತೆ.
ಗುಂಪು-2: ಅವರಿಗೆ ತೆರಿಗೆ ಮತ್ತು ಶುಲ್ಕ ವಿನಾಯಿತಿಯನ್ನೂ ನೀಡಿದೆಯಂತೆ.
ಗುಂಪು-1: ಇದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಖಾಸಗಿಯವರಿಗೆ ಲಾಭ ಮಾಡಿಕೊಡುತ್ತದೆಯಲ್ಲವೆ ಅಣ್ಣಾ?
ಗುಂಪು-2: ಯಾಕ್ಹಿಂಗ್ ಮಾಡ್ತರೋ ಅಣ್ಣಾ?
ಗುಂಪು-1: ಯಾಕೆಂದರೆ, ಖಾಸಗಿ ಕಂಪನಿಗಳು ಆರಂಭದಲ್ಲಿ ನಮ್ಮ ಉತ್ಪನ್ನಗಳಿಗೆ ಹೆಚ್ಚು ಬೆಲೆ ನೀಡುತ್ತವೆ ನಿಜ. ಆಗ ನಾವು ಅವರಿಗೇ ಮಾರುತ್ತೇವೆ.
ಗುಂಪು-2: ಆಗ ಎಪಿಎಂಸಿಗಳು ಬಾಗಿಲು ಮುಚ್ಚಿಕೊಳ್ಳುತ್ತವೆ. ಏನಂತಿಯಾ?
ಗುಂಪು-1: ಆಮೇಲೆ ಖಾಸಗಿ ಕಂಪನಿಗಳ ಮತ್ತು ಬೃಹತ್ ಕಂಪನಿಗಳ ಆಟ ಶುರುವಾಗುತ್ತದೊ ತಮ್ಮಾ!
ಗುಂಪು-2: ಕ್ರಮೇಣ ಕಂಪನಿಗಳು ತಮ್ಮ ಕೊಳ್ಳುವ ಬೆಲೆಯನ್ನು ಇಳಿಸುತ್ತವೆ. ಹೆಚ್ಚಿನ ಬೆಲೆಗೆ ಮಾರಿ ತಮ್ಮ ಲಾಭವನ್ನೂ ಹೆಚ್ಚಿಸಿಕೊಳ್ಳುತ್ತವೆ.
ಗುಂಪು-1+2: ಆಗ ನಾವು ಅನಿವಾರ್ಯವಾಗಿ ಖಾಸಗಿ ಕಂಪನಿಗಳಿಗೆ ನಮ್ಮ ಉತ್ಪನ್ನಗಳನ್ನು ಮಾರಬೇಕಾಗುತ್ತದೆ ಅಲ್ವೇನಣ್ಣಾ?
ಗುಂಪು-1: ಕನಿಷ್ಠ ಬೆಂಬಲ ಬೆಲೆಯೂ ಸಿಗುತ್ತದೆ ಎಂದು ಹೇಳ್ತಾ ಇದಾರಲ್ಲಣ್ಣಾ..
ಗುಂಪು-2: ಹೌದು, ಕನಿಷ್ಠ ಬೆಂಬಲ ಬೆಲೆಯೂ ಸಿಗುತ್ತದೆ ಎಂದು ಸರ್ಕಾರ ಬಾಯಿಮಾತಿನಲ್ಲಿ ಹೇಳುತ್ತಿದೆ ಅಷ್ಟೇ.
ಗುಂಪು-1+2: ಹಾಗಾದರೆ ಬೆಂಬಲ ಬೆಲೆ ರದ್ದಾಗದು ಎಂದು ಲಿಖಿತ ವಾಗ್ದಾನ ನೀಡಲ್ಲ ಯಾಕೆ ಈ ಸರ್ಕಾರ?
ಗುಂಪು-1: ಸಮಸ್ಯೆಯ ಕೇಂದ್ರ ಬಿಂದು ಇದೇ ಕಣಣ್ಣಾ! ಬೆಂಬಲ ಬೆಲೆ ರದ್ದಾಗದು ಎಂದು ಒಂದು ಸಾಲು ಸೇರಿಸುತ್ತಿಲ್ಲ ಯಾಕೆ?
ಗುಂಪು-2: ಯಾಕೆಂದರೆ ಅಷ್ಟೂ ಗೊತ್ತಿಲ್ಲವೆ ಸರ್ಕಾರಕ್ಕೆ? ಲಿಖಿತ ವಾಗ್ದಾನ ಕೊಟ್ಟರೆ ನಾವು ಕೋರ್ಟಿಗೆ ಹೋಗಿರುತ್ತೇವೆ ಎಂದು.
ಗುಂಪು-1: ಕಾಗೆ ಬಾಯಿಂದ ಮಾಂಸದ ಚೂರು ಕಸಿಯಲು ಹೊಗಳುವ ಈ ನರಿ ಬುದ್ಧಿ ನಮಗೇನು ಅರ್ಥವಾಗುವುದಿಲ್ಲವೆ?
ಗುಂಪು-2: ಒಂದೆಡೆ ಅನ್ನದಾತ, ನೇಗಿಲಯೋಗಿ ಎಂದೆಲ್ಲಾ ಹೊಗಳುವುದು.
ಗುಂಪು-1: ಇನ್ನೊಂದೆಡೆ ಅವನ ರಕ್ತ ಹೀರುವುದು! ಇದೆಂಥ ರೈತಪರ ಸರ್ಕಾರವೊ?
ಗುಂಪು-1+2: ಈ ಕಾಯ್ದೆ ಜಾರಿಯಾದರೆ ಕೆಲವೇ ವರ್ಷಗಳಲ್ಲಿ ರೈತರಿಗೆ ನೀಡಲಾಗುತ್ತಿದ್ದ ಬೆಂಬಲ ಬೆಲೆಯೂ ತಾನೇ ತಾನಾಗಿ ರದ್ದಾಗುತ್ತದೆ.
ಗುಂಪು-1: ಪಡಿತರ ವ್ಯವಸ್ಥೆ ನಿಯಮವೂ ಹೋಗುತ್ತದೆಯಂತೆ.
ಗುಂಪು-2: ಜತೆಗೆ ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟದ ವ್ಯವಸ್ಥೆಯೂ ನಿಂತು ಹೋಗುತ್ತದೆ. ಅಷ್ಟೇ ಅಲ್ಲ ಬಡವರ ಮಕ್ಕಳ ಓದುವ ಹಕ್ಕು ಸಹ ಇಲ್ಲವಾಗುತ್ತದೆ.
ಗುಂಪು-1+2: ಒಟ್ಟಿನಲ್ಲಿ ದೇಶದಲ್ಲಿ ರೈತರು, ಬಡವರು ಮತ್ತಷ್ಟು ಶೋಷಣೆಗೆ ಒಳಗಾಗುತ್ತಾರೆ ತಾನೆ?
ಗುಂಪು-1: ಹಾಗಾದರೆ ಯಾರಿಗೆ ಬಂತು ಸ್ವರಾಜ್ಯ?
ಗುಂಪು-2: ಕಾರ್ಪೊರೆಟ್ ಕಂಪನಿಗಳಿಗೆ ಬಂತು ಸ್ವರಾಜ್ಯ.
ಗುಂಪು-1+2: ಎಪಿಎಂಸಿ ಅಧಿಕಾರಿಗಳನ್ನು, ದಲ್ಲಾಳಿಗಳನ್ನು, ವರ್ತಕರನ್ನು ಕಂಟ್ರೋಲ್ ಮಾಡಲಾರದ ಸರ್ಕಾರ ’ನೆಗಡಿ ಬಂದರೆ ಮೂಗು ಕತ್ತರಿಸಿದರು’ ಎಂಬಂತೆ ವರ್ತಿಸುತ್ತಿದೆ. ಆದ್ದರಿಂದ ಈ ಕಾಯ್ದೆಗಳೇ ರದ್ದಾಗಬೇಕು.
ಗುಂಪು-1: ಬೆಲೆ ಖಾತರಿ ಮತ್ತು ಸೇವಾ ಒಪ್ಪಂದ ಕಾಯ್ದೆ ರದ್ದಾಗಬೇಕು.
ಗುಂಪು-2: ಯಾಕೆಂದರೆ ಮುಕ್ತ ಮಾರುಕಟ್ಟೆಯಲ್ಲಿ ರೈತರ ಕೃಷಿ ವಲಯದಲ್ಲಿ ಕಾರ್ಪೊರೆಟ್ ಹೂಡಿಕೆಗೆ ಬಲ ಒದಗಿಸುತ್ತದೆ.
ಗುಂಪು-1: ಸುಗ್ಗಿಯ ಕಾಲದಲ್ಲಿ ಬೆಲೆಗಳ ಏರಿಳಿತಗಳಿಂದ ರೈತರಿಗೆ ಇದು ರಕ್ಷಣೆ ಕೊಡುತ್ತದೆ ಎನ್ನಲಾಗಿದೆ.
ಗುಂಪು-2: ಆದರೆ ಇದು ಖಾಸಗಿ ಕಂಪನಿಗಳಿಗೆ ಹೆಚ್ಚು ಬೆಂಬಲ ಕೊಡುವ ಕಾಯ್ದೆಯೇ ಆಗಿದೆ.
ಗುಂಪು-1+2: ಕಂಪನಿಗಳ ವಂಚನೆಯ ವಿರುದ್ಧ ನಮಗೆ ಅಗತ್ಯ ಸುರಕ್ಷಾ ಕ್ರಮಗಳಿಲ್ಲ. ಕಂಪನಿಗಳ ವಿರುದ್ಧ ನ್ಯಾಯಾಲಯಕ್ಕೆ ಹೋಗುವಂತಿಲ್ಲ.
ಗುಂಪು-1: ಅಗತ್ಯ ವಸ್ತುಗಳ ಖರೀದಿ, ಸಾಗಾಣೆ ಮತ್ತು ದಾಸ್ತಾನಿನ ಮೇಲೆ ಇದ್ದ ನಿರ್ಬಂಧ ರದ್ದು ಆಗುವುದಿಲ್ಲವಂತೆ?
ಗುಂಪು-2: ಇದರಿಂದ ಕಾರ್ಪೊರೆಟ್ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡಿ ದುಪ್ಪಟ್ಟು ಲಾಭ ಗಳಿಸಬಹುದಾಗಿದೆ.
ಗುಂಪು-1+2: ಆದ್ದರಿಂದ ನಾವು ಈ ಮೂರೂ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತೇವೆ. ಅಲ್ಲಿವರೆಗೆ ನಮ್ಮ ಮುತ್ತಿಗೆಯನ್ನು ಎತ್ತುವುದಿಲ್ಲ. (ಧರಣಿ ಕೂರುವರು)
– ತೆರೆ –

ದೃಶ್ಯ – ಎರಡು

ಪುನಃ ಹಾಡು : ಕತ್ತಿ ಯಾವುದಾದರೇನು? ನಮ್ಮವರೆ ಹದಹಾಕಿ ತಿವಿದರದು ಹೂವೆ?

ಕಾರ್ಮಿಕರ ಒಕ್ಕೂಟ ಗುಂಪುಗುಂಪಾಗಿ ರಂಗ ಪ್ರವೇಶ.
ಗುಂಪು-1: ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಖಾಸಗಿ ಕಂಪನಿಗಳಿಗೆ ಬಿಟ್ಟುಕೊಡಬಾರದು.
ಗುಂಪು-2: ಖಾಸಗಿ ಕಂಪನಿಗಳು ಲಾಭಕೋರತನದಿಂದ ಕಡಿಮೆ ವೇತನಕ್ಕೆ ನಮ್ಮಿಂದ ಹೆಚ್ಚು ದುಡಿಸಿಕೊಳ್ಳುತ್ತವೆ.
ಗುಂಪು-1: ಕಾರ್ಮಿಕರ ಜೀವವಿಮಾ ರಕ್ಷಣೆಗೆ ಸೂಕ್ತ ಕಾನೂನಿಲ್ಲ.
ಗುಂಪು-2: ಬಡ್ತಿ ನಿಯಮಗಳನ್ನು ಪಾಲಿಸುವುದಿಲ್ಲ.
ಗುಂಪು-1+2: ಉದ್ಯೋಗ ಮೀಸಲಾತಿಗೆ ಅವಕಾಶವೇ ಇಲ್ಲ. ಸಾಮಾಜಿಕ ನ್ಯಾಯ ಕೇಳುವಂತೆಯೇ ಇಲ್ಲ.
ಗುಂಪು-1: ಗುತ್ತಿಗೆದಾರ ಕಂಪನಿ ಮಾಲೀಕ ಷರೀಕಾಗಿ ಬಡ ಕಾರ್ಮಿಕರ ಜೀವ ತೆಗೀತಾರೆ. ಜೀತ ತಪ್ಪಿದ್ದಲ್ಲ.
ಗುಂಪು-2: ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದಾಗಲಿ.
ಗುಂಪು-1+2: ಖಾಸಗೀಕರಣ ಬೇಡ, ರಾಷ್ಟ್ರೀಕರಣ ಬೇಕು.
(ಧರಣಿ ಕೂರುವರು)
– ತೆರೆ –

ದೃಶ್ಯ – ಮೂರು

ಹಾಡು : ಕತ್ತಿ ಯಾವುದಾದರೇನು? ನಮ್ಮವರೆ ಹದಹಾಕಿ ತಿವಿದರದು ಹೂವೆ?
ಮಹಿಳೆಯರು ಗುಂಪು ಗುಂಪಾಗಿ ಪ್ರವೇಶ
ಕೈಯಲ್ಲಿ ಸತ್ತ ಗಂಡಂದಿರ-ಮಕ್ಕಳ ಚಿತ್ರಪಟಗಳು ಇವೆ.
ಗುಂಪು-1: ನಮಗೆ 50:50 ಅನುಪಾತದಲ್ಲಿ ಉದ್ಯೋಗಾವಕಾಶ ಬೇಕು.
ಗುಂಪು-2: ಭೂಮಿಯ ಒಡೆತನ 50:50 ಅನುಪಾತದಲ್ಲಿರಬೇಕು.
ಗುಂಪು-1: ರೈತ ಹೋರಾಟದಲ್ಲಿ ವಯಸ್ಸಾದ ಮಹಿಳೆಯರನ್ನು ಮನೆಗೆ ಹಿಂತಿರುಗುವಂತೆ ಮನವೊಲಿಸಿ.
ಗುಂಪು-2: ಇಲ್ಲವಾದರೆ ಈ ಸಂಬಂಧ ಆದೇಶ ನೀಡಬೇಕಾದೀತು.
ಗುಂಪು-1+2: ನ್ಯಾಯಾಲಯದ ಈ ಸಲಹೆ ನಮ್ಮ ಅಸ್ಮಿತೆಗೆ ಮಾಡಿದ ಅವಮಾನ ಅಲ್ಲವೇ ಅಕ್ಕಾ?
ಗುಂಪು-1: ನಮ್ಮ ಮಕ್ಕಳು ಅತ್ತ ಗಡಿ ಕಾಯುತ್ತಿದ್ದಾರೆ.
ಗುಂಪು-2: ಇತ್ತ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಗುಂಪು-1: ರೈತ ಹೋರಾಟದಲ್ಲಿರುವ ಮಹಿಳೆಯರು ಕೂಲಿ ಹೋರಾಟಗಾರರೇ ಅಲ್ಲ ಎಂದು..
ಗುಂಪು-2: ತುತ್ತೂರಿ ಊದುವ ಮಾಧ್ಯಮದವರೇ…
ಗುಂಪು-1: ನೀವೇನು ಉತ್ತಿದ್ದೀರಾ? ಬಿತ್ತಿದ್ದೀರಾ?
ಗುಂಪು-2: ಕಳೆ, ಕೊಯ್ಲು ಮಾಡಿ ಒಕ್ಕಿದ್ದೀರಾ?
ಗುಂಪು-1+2: ನಾವು ಮನೆಗೆ ಹೋಗಬೇಕೆ? ತಾಕತ್ತಿದ್ದರೆ ನಮ್ಮನ್ನು ಹಿಂತಿರುಗಿಸಿ.. ರೈತ ವಿರೋಧಿ ಮೂರೂ ಕಾಯ್ದೆಗಳು ರದ್ದಾಗಬೇಕು.
(ಧರಣಿ ಕೂರುವರು)
-ತೆರೆ –

ದೃಶ್ಯ – ನಾಲ್ಕು
ಹಾಡು: ಕತ್ತಿ ಯಾವುದಾದರೇನು? ನಮ್ಮವರೆ ಹದಹಾಕಿ ತಿವಿದರದು ಹೂವೆ?
ರೈತ, ಕಾರ್ಮಿಕ, ಮಹಿಳಾ ಒಕ್ಕೂಟ ನಾಯಕರ ಪ್ರವೇಶ.
ತಂಡ-1: ರೈತ ವಿರೋಧಿ ಮಸೂದೆಗಳು ಕೊರೊನಾ ಲಾಕ್‌ಡೌನ್‌ನಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದ ಹಿಂದಿರುವ ರಾಜ ರಹಸ್ಯವೇನು ತಮ್ಮಾ?
ತಂಡ-2: ಅಷ್ಟೂ ಗೊತ್ತಾಗಲ್ವಾ ಅಣ್ಣಾ? ಯಾಕೆಂದ್ರೆ-ಲಾಕ್‌ಡೌನ್‌ನಲ್ಲಿ ಎಲ್ಲ ಬಾಯಿಗೆ ಮಾಸ್ಕ್ ಹಾಕಿರುತ್ತಾರೆ, ಹೋರಾಟಕ್ಕೆ ಹೊರಗೆ ಬರಲಾರರೆಂದಲ್ವಾ?
ತಂಡ-1+2: ಸರ್ಕಾರ ನಮ್ಮನ್ನು ಅಜ್ಞಾನಿಗಳು ಎಂದೇ ಭಾವಿಸಿದಂತಿದೆ ತಮ್ಮಾ – ನಾವು ಮುಷ್ಕರ ಹೂಡಿ ವರ್ಷ ಕಳಿತಾ ಬಂತು. ನಮ್ಮ ಹತ್ತಿರ ಯಾರೂ ಬರಲಿಲ್ಲ. ನಾವೆಂದರೆ ಅಷ್ಟು ಅಸಡ್ಡೆ ನಮ್ಮ ಪ್ರಧಾನಿಗೆ.
ತಂಡ-1: ಅಕ್ಕಂದಿರಾ, ತಂಗೀರಾ, ಈಗ ನಮಗೂ ನ್ಯಾಯ ಯಾವ್ದು? ಅನ್ಯಾಯ ಯಾವ್ದು? ಅಂತ ತಿಳಿಯುತ್ತದೆ.

ತಂಡ-2: ಸಂಸತ್ತಿನಲ್ಲಿ ಚರ್ಚೆ ಆಗಬೇಡವೇ, ಅಣ್ಣಾ?
ತಂಡ-1+2: ಕಾಟಾಚಾರಕ್ಕೆ ಆಮೇಲೆ ಮಾಡಿದರಲ್ಲ ತಮ್ಮಾ?
ತಂಡ-1: ನಮಗೆ ಬೇಡಾದರೆ ಹಿಂಪಡೆಯುವುದಕ್ಕೇನು ಅಡ್ಡಿ ಇವರಿಗೆ?
ತಂಡ-2: ಬಂಡವಾಳಿಗ ಕಾರ್ಪೊರೆಟ್ ಕಂಪನಿಗಳ ಕೈಗೊಂಬೆ ಸರ್ಕಾರಕ್ಕೆ ಸುಗ್ರೀವಾಜ್ಞೆ ಅಲ್ಲದೆ ಬೇರೆ ದಾರಿ ಇಲ್ಲ ತಮ್ಮಾ.
ತಂಡ-1+2: ನಮ್ಮ ಸಂಸದರು ಸಚಿವರು ರೈತ ಪರ ಅಂತ ಹೇಳಿಯೇ ಹೇಳ್ತಾರೆ, ಅವರೇನು ಮಾಡ್ತಾರೆ ಅಲ್ಲಿ?
ತಂಡ-1: ಮೊಸಳೆ ಕಣ್ಣೀರು ಹಾಕಿದಂತೆ ಮಾಡಿ ಕೂತಿರುತ್ತಾರೆ. ನಮಗಿಂತ ಅವರಿಗೆ ಪಕ್ಷ ನಿಷ್ಠೆಯೇ ಹೆಚ್ಚು.
ಗುಂಪು-2: ಸುಗ್ರೀವಾಜ್ಞೆಗೆ ಮೊದಲು ರೈತ ಪ್ರತಿನಿಧಿಗಳೊಡನೆ ಮಾತಾಡಬಹುದಿತ್ತಲ್ವಾ?
ಗುಂಪು-1+2: ನಮ್ಮನ್ನೇನು ಕೇಳೊದು ಅಂತ ಉಪೇಕ್ಷೆ ಸರ್ಕಾರಕ್ಕೆ, ಅಲ್ವಾ ತಮ್ಮಾ?
ಗುಂಪು-1: ಕೋಳಿ ಕೇಳಿ ಮೆಣಸು ಅರಿತಾರೇನಣ್ಣಾ? ಹಂಗಾ?
ಗುಂಪು-2: ಹಾಗೇ ಆಯ್ತೋ ತಮ್ಮಾ..
ತಂಡ-1+2: ಬಹುಮತ ಇದ್ದಾಗ ಈ ಹಮ್ಮು ಬಿಮ್ಮು ಸಹಜ ತಾನೇ? ಹಾಗೆ ಮಾಡಿದ್ದು ನಮ್ದೇ ತಪ್ಪು ಕಣಪ್ಪೊ!
ಗುಂಪು-1: ಈ ಸರ್ವಾಧಿಕಾರಿ ಧೋರಣೆಗೆ.. ಧಿಕ್ಕಾರ! ಪರಿಸರ ಪರ, ರೈತ ಪರ, ಕಾರ್ಮಿಕರ ಪರ ದನಿ ಎತ್ತಿದ ನೌದೀಪ್ ಕೌರ್, ದಿಶಾರವಿ ಅಂತ ಮಹಿಳೆಯರ ಮೇಲೆ ’ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಎಫ್‌ಐಆರ್ ಹಾಕಿ ದೇಶದ್ರೋಹದ ಆಪಾದನೆ ಹೊರಿಸಿ ಜೈಲಿಗಟ್ಟುವುದು ಇನ್ನು ಮುಂದೆ ನಿಲ್ಲಬೇಕು.
(ಧರಣಿ ಕೂರುವರು)
– ತೆರೆ –

ದೃಶ್ಯ – ಐದು

ಹಾಡು: ಕತ್ತಿ ಯಾವುದಾದರೇನು? ನಮ್ಮವರೆ ಹದಹಾಕಿ ತಿವಿದರದು ಹೂವೆ?

ವಿದ್ಯಾರ್ಥಿ ಯುವಜನ ತಂಡಗಳು
ತಂಡ-1: ನಮಗೆ ಬೇಕೇ ಬೇಕು.
ತಂಡ-2: ಉದ್ಯೋಗ ಬೇಕು.
ತಂಡ-1: ಎಲ್ಲಿಗಂಟ ಹೋರಾಟ?
ತಂಡ-2: ಉದ್ಯೋಗ ಖಾತ್ರಿ ಆಗತನಕ ಹೋರಾಟ!
ಸಾಹಿತಿ ಕಲಾವಿದರ ತಂಡಗಳು.
ತಂಡ-1: ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು. ಇದು ಸಂವಿಧಾನದತ್ತ ಹಕ್ಕು.
ತಂಡ-2: ಎಲ್ಲಿತನಕ ಹೋರಾಟ?
ತಂಡ 1+2: ಅಭಿವ್ಯಕ್ತಿ ಸ್ವಾತಂತ್ರ್ಯ ಸಿಕ್ಕೋ ತನಕ ಹೋರಾಟ!
ಮುಸ್ಲಿಂ, ಕ್ರಿಶ್ಚಿಯನ್ ಅಲ್ಪಸಂಖ್ಯಾತರ ತಂಡಗಳು.
ತಂಡ-1: ಸಾಮಾಜಿಕ ನ್ಯಾಯಕ್ಕೆ ದನಿ ಎತ್ತಿದರೆ ಜೈಲುವಾಸ ತಪ್ಪಬೇಕು.
ತಂಡ-1+2: ನಾವು ಭಾರತೀಯರು, ನಾವು ವಲಸಿಗರಲ್ಲ.
ತಂಡ-1: ಇಲ್ಲಿ ಹುಟ್ಟಿ ಇಲ್ಲೇ ಮಡಿವೆವು ನಾವು.
ತಂಡ-1+2: ಅಲ್ಪಸಂಖ್ಯಾತರ ವರದಿಗಳು ಜಾರಿಯಾಗಬೇಕು.
ತಂಡ-1: ಶಿಕ್ಷಣದಲ್ಲಿ ಮೀಸಲಾತಿ ಬೇಕು.
ತಂಡ-2: ಉದ್ಯೋಗದಲ್ಲಿ ಮೀಸಲಾತಿ ಬೇಕು.
ತಂಡ-1+2: ಇದು ಸಂವಿಧಾನಬದ್ಧ ಹಕ್ಕು ಭಿಕ್ಷೆ ಅಲ್ಲ.
ದಲಿತ ಸಂಘಟನೆಗಳ ತಂಡ
ತಂಡ-1: ಸಂವಿಧಾನಬದ್ಧ ಮೀಸಲಾತಿ ನಮ್ಮ ಹಕ್ಕು.
ತಂಡ-2: ಅಪ್ರಸ್ತುತ ಆದರೆ ನಾವು ಬಿಡುವುದಿಲ್ಲ.
ತಂಡ-1+2: ನಮ್ಮ ಹಕ್ಕುಗಳಿಗಾಗಿ ನಾವು ಕೊನೆಯವರೆಗೂ ಹೋರಾಡುತ್ತೇವೆ.
ಮಹಿಳಾ ತಂಡ
ತಂಡ-1: ನಮ್ಮ ಮೇಲಿನ ಅತ್ಯಾಚಾರ, ದೌರ್ಜನ್ಯ, ಅವಮಾನ,
ತಂಡ-2: ನಿಲ್ಲಬೇಕು, ನಿಲ್ಲಬೇಕು
ತಂಡ-1+2: ಸಂಬಂಧಪಟ್ಟ ಸರ್ಕಾರಗಳನ್ನೇ ಹೊಣೆ ಮಾಡಬೇಕು.
(ಧರಣಿ ಕೂರುವರು)
– ತೆರೆ –

ದೃಶ್ಯ – ಆರು
ಹಾಡು: ಕತ್ತಿ ಯಾವುದಾದರೇನು? ನಮ್ಮವರೆ ಹದಹಾಕಿ ತಿವಿದರದು ಹೂವೆ?
ನಾಗರಿಕರ ತಂಡಗಳು
ತಂಡ-1: ಪೆಟ್ರೋಲ್ ದರ ಏರುತ್ತಲೇ ಇದೆ.
ತಂಡ-2: ಲೀಟರ್‌ಗೆ ನೂರು ರೂಪಾಯಿ ಆಯ್ತಲ್ಲಾ ಸಾರ್!
ತಂಡ-1+2: ಕಾರ್ಪೊರೆಟ್ ಕಂಪನಿಗಳ ಲಾಭಕೋರತನ..
ತಂಡ-2: ಅಧಿಕಾರಿ ವರ್ಗದ ಲಂಚಕೋರತನ..
ತಂಡ-1+2: ಸಾಬೀತಾದರೆ ಶಿಕ್ಷೆಯಾಗಬೇಕು – ಶಿಕ್ಷೆಯಾಗಬೇಕು!
ಐಕ್ಯ ಹೋರಾಟಗಾರರು: ಪ್ರಶ್ನಿಸಿದವರು ರಾಜದ್ರೋಹಿಗಳೇ? ನ್ಯಾಯ ಕೇಳಿದರೆ ಭಯೋತ್ಪಾದಕರೆ?
ಪ್ರಜಾ ವಿರೋಧಿ ಮಸೂದೆಗಳು ಭೇಷರತ್ ರದ್ದಾಗಬೇಕು
ಗುಂಪು-1+2: ಅಲ್ಲಿವರೆಗೂ ಮುತ್ತಿಗೆ ಎತ್ತಲ್ಲ

ಜಾಗಬಿಟ್ಟು ಏಳಲ್ಲ
ಧಿಕ್ಕಾರ! ಧಿಕ್ಕಾರ!!
ರೈತವಿರೋಧಿ ಸರ್ಕಾರಕ್ಕೆ
ಧಿಕ್ಕಾರ! ಧಿಕ್ಕಾರ!!
ಸರ್ವಾಧಿಕಾರಿ ಧೋರಣೆ ಸರ್ಕಾರಕ್ಕೆ
ಧಿಕ್ಕಾರ! ಧಿಕ್ಕಾರ!!
ಮಹಿಳಾ ವಿರೋಧಿ ಸರ್ಕಾರಕ್ಕೆ
ಧಿಕ್ಕಾರ! ಧಿಕ್ಕಾರ!!
ಕಾರ್ಮಿಕ ವಿರೋಧಿ ಸರ್ಕಾರಕ್ಕೆ
ಧಿಕ್ಕಾರ! ಧಿಕ್ಕಾರ!!
ಮೀಸಲಾತಿ ವಿರೋಧಿ ಸರ್ಕಾರಕ್ಕೆ
ಧಿಕ್ಕಾರ! ಧಿಕ್ಕಾರ!!
(ಧರಣಿ ಕೂರುವರು)
– ತೆರೆ –

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...