ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ನಡೆಸುತ್ತಿರು ಒಳಮೀಸಲಾತಿಗಾಗಿನ ಧರಣಿ 76ನೇ ದಿನಕ್ಕೆ ಕಾಲಿಟ್ಟಿದೆ. ಬಜೆಟ್ ಅಧಿವೇಶನದಲ್ಲಿ ಚರ್ಚೆ ನಡೆಸದೇ, ಹೋರಾಟದ ಸ್ಥಳಕ್ಕೂ ಭೇಟಿ ಕೊಡದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಬೊಮ್ಮಾಯಿಯವರ ಅಣುಕು ಅಂತ್ಯ ಸಂಸ್ಕಾರ ಮಾಡಲು ಮುಂದಾದ ಹೋರಾಟಗಾರರನ್ನು ಪೊಲೀಸರು ತಡೆದಿದ್ದಾರೆ.
ಹೋರಾಟಗಾರರು ಸಿಎಂ ಬೊಮ್ಮಾಯಿಯವರ ಪ್ರತಿಕೃತಿಗೆ ಬೆಂಕಿ ಹಾಕಲು ಮುಂದಾದಾಗ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಈ ವೇಳೆ ತಳ್ಳಾಟ – ನೂಕಾಟ ನಡೆದಿದ್ದು, ಮಾತಿನ ಚಕಮಕಿ ನಡೆದಿದೆ. ಹೋರಾಟಗಾರರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದ್ದಾರೆ.
ಬೊಮ್ಮಾಯಿಯವರ ಫೋಟೊಗೆ ಹೂವಿನ ಹಾರ ಹಾಕಿ ಎಡೆ ಇಡಲಾಗಿತ್ತು. ಅಲ್ಲದೆ ಬೊಮ್ಮಾಯಿ ಪ್ರತಿಕೃತಿ ರಚಿಸಿ ಚಟ್ಟವನ್ನು ಸಹ ಕಟ್ಟಲಾಗಿತ್ತು. ಅಣುಕು ಶವ ಸಂಸ್ಕಾರ ಮಾಡುವ ವೇಳೆ ಸುಮಾರು 200 ಕ್ಕೂ ಅಧಿಕ ಪೊಲೀಸರು ಏಕಾಏಕಿ ಹೋರಾಟದ ಟೆಂಟ್ಗೆ ನುಗ್ಗಿ ಹಲ್ಲೆ ನಡೆಸಿದರು. ಪ್ರತಿಕೃತಿ ಕಿತ್ತುಕೊಂಡು ಹೋದರು. ಆದರೂ ನಾವು ಬೊಮ್ಮಾಯಿ ಫೋಟೊವನ್ನು ಸುಟ್ಟು ಪ್ರತಿಭಟನೆ ನಡೆಸಿದ್ದೇವೆ ಎಂದು ಹೋರಾಟಗಾರ ಕರಿಯಪ್ಪ ಗುಡಿಮನಿ ತಿಳಿಸಿದರು.
ಬೊಮ್ಮಾಯಿ ನೇತೃತ್ವದ ಸರ್ಕಾರದ ಕೊನೆಯ ಅಧಿವೇಶನ ಅಂತ್ಯವಾಯ್ತು. ಒಳಮೀಸಲಾತಿ ವಿಚಾರಾನೂ ಅನಿರ್ಧಿಷ್ಟವಾಗಿ ಮುಂದೂಡಲಾಯ್ತು. ಆಳುವ ಪಕ್ಷ, ಕೇಳುವ ಪಕ್ಷ, ಪರಿಶಿಷ್ಟ ಜಾತಿಯ ನೂರೊಂದು ಜಾತಿಗಳ ಪಾಲಿಗೆ ಸತ್ತಿವೆ.. ಆಳುವ.. ಕೇಳುವ ಪಕ್ಷ ನಾವಾಗಬೇಕಾಗಿದೆ.. ಎಂದು ಹೋರಾಟಗಾರ ಅಂಬಣ್ಣ ಅರೋಲಿಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಒಳ ಮೀಸಲಾತಿ: ಕಣ್ಣ ಗಾಯವನರಿಯುವ ಕ್ರಮ – ಹುಲಿಕುಂಟೆ ಮೂರ್ತಿ