Homeಮುಖಪುಟಅಂತಾರಾಷ್ಟ್ರೀಯ ಮಹಿಳಾ ದಿನ; ಸ್ತ್ರೀ ಪುರುಷರಲ್ಲಿ ಸಮಾನತೆ ಸಾಧ್ಯವೇ?: ಎಚ್ ಎಸ್ ಶ್ರೀಮತಿ

ಅಂತಾರಾಷ್ಟ್ರೀಯ ಮಹಿಳಾ ದಿನ; ಸ್ತ್ರೀ ಪುರುಷರಲ್ಲಿ ಸಮಾನತೆ ಸಾಧ್ಯವೇ?: ಎಚ್ ಎಸ್ ಶ್ರೀಮತಿ

ಅಧಿಕಾರ ಮತ್ತು ಅಧೀನತೆಯ ಸೂತ್ರವನ್ನು ನಿರಂತರವಾಗಿ ಉಳಿಸುವುದೇ ಪಿತೃಪ್ರಧಾನ ವ್ಯವಸ್ಥೆಯ ಮುಖ್ಯ ತಂತ್ರಗಾರಿಕೆ. ಈ ಸೂತ್ರಕ್ಕೆ ಬದ್ಧವಾಗಿ ಉಳಿಯುವಂತೆ ಜನರನ್ನು ಒತ್ತಾಯಿಸುವ ತರಬೇತಿಯನ್ನು ಅದು ಈ ವ್ಯವಸ್ಥೆಯ ಎಲ್ಲ ಸಾಂಸ್ಥಿಕ ವಲಯಗಳಲ್ಲಿಯೂ ಜಾರಿಯಲ್ಲಿ ಇಟ್ಟಿದೆ. ಹಾಗಾಗಿ ಯಾರಿಗೂ ಈ ತರಬೇತಿಯ ಪಾಠಗಳಿಂದ ಮುಕ್ತಿಯಿಲ್ಲ. ನಿರಂತರ ಪರಿಶ್ರಮದಿಂದ ಮಾತ್ರವೇ ಈ ಪಾಠಗಳನ್ನು ಮರೆಯುವ ಬಗೆಗಳನ್ನು ಶೋಧಿಸಬೇಕಾಗುತ್ತದೆ.

- Advertisement -
- Advertisement -

ಸ್ತ್ರೀವಾದ ಹೋರಾಟ ಪ್ರತಿ ಪುರುಷ ಮತ್ತು ಮಹಿಳೆ ವೈಯಕ್ತಿಕವಾಗಿಯೇ ನಿಭಾಯಿಸಬೇಕಾದ ಹೊಣೆ

ಸ್ತ್ರಿವಾದ ಹೋರಾಟ ಪ್ರತಿ ಪುರುಷ ಮತ್ತು ಮಹಿಳೆ ವೈಯಕ್ತಿಕವಾಗಿಯೇ ನಿಭಾಯಿಸಬೇಕಾದ ಹೊಣೆ
ಮಾನವರು ಸಮುದಾಯಗಳಾಗಿ ಬದುಕಲು ತೊಡಗಿದ ಆರಂಭದಲ್ಲಿ ಗಂಡು ಮತ್ತು ಹೆಣ್ಣುಗಳೆಂಬ ತಾರತಮ್ಯಗಳೇನೂ ಇರಲಿಲ್ಲ. ಮುಂದುವರೆದ ಒಂದು ಹಂತದಲ್ಲಿ ಗಂಡಸರ ಪ್ರಾಬಲ್ಯಕ್ಕೆ ಹೆಚ್ಚಿನ ಅವಕಾಶಗಳು ತೆರೆದುಕೊಂಡವು. ಇದನ್ನೇ ನಿರಂತರವಾಗಿಸುವ ಪ್ರಯತ್ನಗಳಲ್ಲಿ ಗಂಡಸರು ತಮ್ಮ ಜೊತೆಗೇ ಇದ್ದ ಹೆಂಗಸರ ಮೇಲೆ ಅಧಿಕಾರವನ್ನು ಸ್ಥಾಪಿಸುವ ಪ್ರಯತ್ನಗಳಲ್ಲಿ ತೊಡಗಿದರು. ಗಂಡು ಮತ್ತು ಹೆಣ್ಣುಗಳ ಸಂಬಂಧಗಳಲ್ಲಿ ಯಜಮಾನಿಕೆ ಮತ್ತು ಅಧೀನತೆ ಎಂಬ ಶ್ರೇಣೀಕರಣ ಮೊದಲಾಯಿತು.

ಇದೇ ಮಾನವ ಚರಿತ್ರೆಯಲ್ಲಿ ಕಾಣಿಸಿಕೊಂಡ ಮೊತ್ತಮೊದಲ ಶ್ರೇಣೀಕರಣ ಎಂದು ಏಂಗೆಲ್ಸ್ ಗುರುತಿಸುತ್ತಾನೆ. ಮುಂದೆ ಈ ತಂತ್ರಗಾರಿಕೆಯೇ ಪ್ರಯೋಗಗೊಳ್ಳುತ್ತಾ ಜಾತಿ, ಜನಾಂಗ, ಕೋಮು, ವರ್ಗ ಎಂಬ ಲೆಕ್ಕವಿಲ್ಲದಷ್ಟು ಶ್ರೇಣೀಕರಣಗಳು ಜಾರಿಗೊಂಡವು. ಎಲ್ಲ ಬಗೆಯ ಶ್ರೇಣೀಕರಣಗಳೂ ಪ್ರಬಲರಾದವರು ದುರ್ಬಲರಾದವರ ಮೇಲೆ ಅಧಿಕಾರವನ್ನು ಸ್ಥಾಪಿಸುವ ತಂತ್ರಗಾರಿಕೆಗಳೇ ಆಗಿವೆ. ಇಂದಿಗೂ ಸಮಾಜ ವ್ಯವಸ್ಥೆ ಎಂದರೆ ಅಧಿಕಾರ ಮತ್ತು ಅಧೀನತೆಗಳ ಸಂಘರ್ಷ ಮಾತ್ರವೇ ಆಗಿದೆ. ಕಲ್ಪಿತ ಶತ್ರುವಿನೊಂದಿಗೆ ನಡೆಸುತ್ತಿರುವ ಈ ಸಂಘರ್ಷವು ಎಂದಿಗೂ ಮುಗಿಯಲಾರದು. ಈ ಎಲ್ಲ ಸಂಗತಿಗಳನ್ನೂ ಸಾಮಾಜಿಕ ಕಳಕಳಿಯ ಚಿಂತನಶೀಲರೂ, ಸಂವೇದನಾಶೀಲರೂ ಚರ್ಚಿಸುತ್ತಲೇ ಬಂದಿದ್ದಾರೆ.

ಸ್ತ್ರೀವಾದೀ ಚಿಂತನೆಯು ಕೂಡಾ ಪುರುಷರನ್ನು ಶತ್ರುವಾಗಿ ಕಲ್ಪಿಸಿಕೊಂಡೇ ಹುಟ್ಟಿದ್ದು. ಆದರೆ ಇಂದು ಈ ಚಿಂತನೆಯು ಅತ್ಯಂತ ಸೂಕ್ಷ್ಮವಾದ ದಾರ್ಶನಿಕ ಒಳನೋಟಗಳನ್ನು ಕಾಣಿಸಬಲ್ಲ ಪ್ರಬುದ್ಧತೆಯದಾಗಿ ಬೆಳೆದಿದೆ. ಎಲ್ಲ ದುರ್ಬಲ ಸಮುದಾಯಗಳೂ ನಿರಂತರವಾಗಿ ತೊಡಗಿಕೊಂಡೇ ಬರುತ್ತಿರುವ ಹೋರಾಟಗಳಿಗೆ ದಾರಿಗಳನ್ನು ಕಾಣಿಸಬಲ್ಲ ಸಾಮರ್ಥ್ಯ ಈ ಸ್ತ್ರೀವಾದೀ ದಾರ್ಶನಿಕ ನೋಟಕ್ಕೆ ಇದೆ. ಯಾವುದೇ ಹೋರಾಟಗಳು ಹೊಂದಿರಬಹುದಾದ ವೈಚಾರಿಕ ಆಶಯಗಳು, ಸಾಮರ್ಥ್ಯಗಳು ಕೇವಲ ಆರಂಭಿಕ ಬಿಂದುಗಳು ಮಾತ್ರವೇ ಆಗಿರುತ್ತವೆ; ಇವುಗಳ ನಿರ್ಣಾಯಕ ಅಂತ್ಯವಾಗಿ ಅವು ನಮ್ಮ ಜೀವನಕ್ರಮಗಳಲ್ಲಿ ಕ್ರಿಯಾಶೀಲವಾಗಬೇಕು ಎಂಬ ಒಳನೋಟವನ್ನು ಸ್ತ್ರೀವಾದೀ ದಾರ್ಶನಿಕತೆಯು ನೀಡುತ್ತದೆ. ಸಮಾಜವ್ಯವಸ್ಥೆಯಲ್ಲಿ ನಿರ್ಮಾಣಗೊಂಡಿರುವ ಶ್ರೇಣೀಕರಣಗಳೂ, ಆ ಕುರಿತು ನಡೆಯುತ್ತಿರುವ ಸಾಮಾಜಿಕ ಹೋರಾಟಗಳೂ ಈ ಮಾತನ್ನು ಗಮನಿಸುವ ಅಗತ್ಯವಿದೆ.

ಇಂದಿನ ಸ್ತ್ರೀವಾದಿಗಳು ಎಲ್ಲರೂ ಸ್ತ್ರೀವಾದಿಗಳಾಗೋಣ, ಸ್ತ್ರೀವಾದವು ನಮ್ಮೆಲ್ಲರ
ಅಗತ್ಯವೇ ಆಗಿದೆ ಎಂದು ಹೇಳುತ್ತಿದ್ದಾರೆ. ಈವರೆಗೂ ಸ್ತ್ರೀವಾದ ಎಂದರೆ ಪುರುಷರೊಂದಿಗೆ ಸಾಮಾಜಿಕ ಸಮಾನತೆ, ಮಹಿಳಾ ಸ್ವಾತಂತ್ರ್ಯ ಎಂಬ ಮಾತುಗಳೇ ಕೇಳಿಬರುತ್ತಿದ್ದವು. ಈಗ ಇದ್ದಕ್ಕಿದ್ದಂತೆ ಸ್ತ್ರೀವಾದವನ್ನು ಎಲ್ಲರ ಅಗತ್ಯ ಎಂದು ಹೇಳಿದರೆ ಸುಲಭವಾಗಿ ನಂಬಲಾಗದು. ಆದರೆ ಇದು ತುಂಬಾ ಸೂಕ್ಷ್ಮವಾದ ಒಂದು ಚಿಂತನೆ. ಎಲ್ಲ ಬಗೆಯ ಸಾಮಾಜಿಕ ಶ್ರೇಣೀಕರಣಗಳಲ್ಲಿಯೂ ಪುರುಷರು ಮತ್ತು ಮಹಿಳೆಯರು ಹೆಚ್ಚೂಕಡಿಮೆ ಸಮಸಂಖ್ಯೆಯಲ್ಲಿ ಇದ್ದಾರೆ. ಇವರಿಬ್ಬರ ನಡುವೆ ಸಮಾಜ ವ್ಯವಸ್ಥೆ ಎಂಬ ಅಧಿಕಾರ ಕೇಂದ್ರವು ಶತ್ರುತ್ವವನ್ನು ಹುಟ್ಟುಹಾಕಿದೆ.

ನಮ್ಮಲ್ಲಿ ನಡೆಯುತ್ತಾ ಬಂದಿರುವ ವೈಚಾರಿಕ ಚರ್ಚೆಗಳು ಇವನ್ನೆಲ್ಲಾ ಬಿಡಿಬಿಡಿಯಾಗಿ ಸೂಕ್ಷ್ಮ್ಮಗಳಲ್ಲಿ ವಿವರಿಸುತ್ತಿವೆ. ಇಂಥ ಚರ್ಚೆಗಳ ಕೊನೆಯಲ್ಲಿ, ಸಾಧಾರಣವಾಗಿ, ಸಮಾಜವು ಬದಲಾಗಬೇಕು, ಮುಖ್ಯವಾಗಿ ಪುರುಷರ ಮನಸ್ಥಿತಿಯಲ್ಲಿ ಪರಿವರ್ತನೆಗಳು ಬರಬೇಕು ಎಂಬ ಅಮೂರ್ತವಾದ ಮಾತುಗಳಷ್ಟೇ ಕೇಳಿಸುತ್ತವೆ. ವೈಚಾರಿಕ ಚರ್ಚೆಗಳಲ್ಲಿ ಅಮೂರ್ತವಾಗಿಯೇ ಉಳಿದುಬಿಡುವ ಆಶಯಗಳು ನಮ್ಮೆಲ್ಲರ ಬದುಕುಗಳಲ್ಲಿ, ನಮ್ಮ ಜೀವನ ಕ್ರಮಗಳ ಎಲ್ಲ ಕ್ಷಣಗಳಲ್ಲಿಯೂ ಸಾಕಾರಗೊಳ್ಳುವ ಹಾದಿಗಳನ್ನು ಕುರಿತು ಸ್ತ್ರೀವಾದೀ ದಾರ್ಶನಿಕತೆಯು ಮಾತನಾಡುತ್ತದೆ.

ಆದರೆ ಈ ಯಾವ ಮಾತುಗಳನ್ನೂ ಒಂದು ವೈಚಾರಿಕ ಆಕೃತಿಯಾಗಿ ಕಟ್ಟಿ ನಿರೂಪಿಸಲು ಸಾಧ್ಯವಾಗುವುದಿಲ್ಲ. ಇದೊಂದು ಬಗೆಯ ವಿಶಿಷ್ಟವೂ, ಕ್ರಾಂತಿಕಾರಿಯೂ ಆದ ಹೋರಾಟದ ಬಗೆ. ಇಲ್ಲಿ ಪ್ರತಿಯೊಬ್ಬರೂ ಸಹಭಾಗಿಗಳು. ಇಲ್ಲಿ ನೇತಾರರೆನಿಸಿ, ಮಾರ್ಗದರ್ಶಕರೆನಿಸಿ ಯಾರೂ ನಿಂತಿರುವುದಿಲ್ಲ. ಇಲ್ಲಿ ಯಾರೂ ಹಿಂಬಾಲಕರಲ್ಲ. ಇಲ್ಲಿನ ಹೋರಾಟದ ಒಟ್ಟು ಚಿಂತನೆ ಸಾಮುದಾಯಿಕವಾದದ್ದೇ. ಆದರೆ ಹೋರಾಟವು ಮಾತ್ರ ಪ್ರತಿಯೊಬ್ಬರೂ ವೈಯಕ್ತಿಕವಾಗಿಯೇ ನಿಭಾಯಿಸಬೇಕಾದ ಹೊಣೆ ಎನಿಸಿ ನಿರಂತರವಾಗಿ ನಡೆಯಬೇಕು.

ಮಹಿಳೆಯರು ಮತ್ತು ಪುರುಷರು ತೀರಾ ವೈಯಕ್ತಿಕ ನೆಲೆಗಳಿಂದ ತೊಡಗಿ ಹಲವಾರು ಸಾರ್ವಜನಿಕ ವಲಯಗಳಲ್ಲಿ ಭೇಟಿಯಾಗುತ್ತಿರುತ್ತಾರೆ. ಅವರ ನಡುವೆ ಬರುವ ಹಲವು ಬಗೆಯ ಸಂಬಂಧಗಳಲ್ಲಿ ಅವೆಷ್ಟೋ ಮಾತುಕತೆಗಳು ನಡೆಯುತ್ತವೆ. ಕೊಡುಕೊಳ್ಳುವ ವ್ಯವಹಾರಗಳಲ್ಲಿ ಅವೆಷ್ಟೋ ರೂಢಿಗತ ವರ್ತನಾವಿಧಾನಗಳೂ ಇರುತ್ತವೆ. ಈ ಎಲ್ಲ ಕ್ಷಣಗಳಲ್ಲಿಯೂ ನಮ್ಮ ನಮ್ಮ ಮಾತುಕತೆಗಳನ್ನು, ವರ್ತನಾವಿಧಾನಗಳನ್ನು ಸೂಕ್ಷ್ಮ ಸಂವೇದನೆಗಳಲ್ಲಿ ಗಮನಿಸಿಕೊಳ್ಳಲು ನಮಗೆ ಸಾಧ್ಯವಾಗಲು ತೊಡಗಿದರೆ, ಹೋರಾಟವು ಸರಿದಾರಿಯಲ್ಲಿ ಸಾಗಿದೆ ಎಂದೇ ಅರ್ಥ. ಆದರೆ ಈ ಗಮನಿಸುವಿಕೆ ಮತ್ತು ತಿದ್ದಿಕೊಳ್ಳುವ ಕ್ರಿಯೆ ಎಂದರೆ ಒಮ್ಮೆಗೇ ಮುಗಿಯುತ್ತದೆ ಎಂದಿಲ್ಲ. ನಮಗೇ ತಿಳಿಯದೆಯೂ ನಾವು ಹಳೆಯ ಚಾಳಿಯ ಮಾತುಕತೆಗಳಿಗೆ, ವರ್ತನೆಗಳಿಗೆ ಹೊರಳಿಬಿಟ್ಟಿರುತ್ತೇವೆ. ಈ ಸೂಕ್ಷ್ಮದ ಎಚ್ಚರದಲ್ಲಿ ನಾವು ಸದಾಕಾಲವೂ ಇರಬೇಕಾಗುತ್ತದೆ.

ಅಧಿಕಾರ ಮತ್ತು ಅಧೀನತೆಯ ಸೂತ್ರವನ್ನು ನಿರಂತರವಾಗಿ ಉಳಿಸುವುದೇ ಪಿತೃಪ್ರಧಾನ ವ್ಯವಸ್ಥೆಯ ಮುಖ್ಯ ತಂತ್ರಗಾರಿಕೆ. ಈ ಸೂತ್ರಕ್ಕೆ ಬದ್ಧವಾಗಿ ಉಳಿಯುವಂತೆ ಜನರನ್ನು ಒತ್ತಾಯಿಸುವ ತರಬೇತಿಯನ್ನು ಅದು ಈ ವ್ಯವಸ್ಥೆಯ ಎಲ್ಲ ಸಾಂಸ್ಥಿಕ ವಲಯಗಳಲ್ಲಿಯೂ ಜಾರಿಯಲ್ಲಿ ಇಟ್ಟಿದೆ. ಹಾಗಾಗಿ ಯಾರಿಗೂ ಈ ತರಬೇತಿಯ ಪಾಠಗಳಿಂದ ಮುಕ್ತಿಯಿಲ್ಲ. ನಿರಂತರ ಪರಿಶ್ರಮದಿಂದ ಮಾತ್ರವೇ ಈ ಪಾಠಗಳನ್ನು ಮರೆಯುವ ಬಗೆಗಳನ್ನು ಶೋಧಿಸಬೇಕಾಗುತ್ತದೆ. ಏಕೆಂದರೆ ನಮ್ಮ ಅನುಭವ ಲೋಕದ ಪ್ರೀತಿ, ಗೌರವ, ಸಮಾನತೆ ಎಂಬ ಭಾವನೆಗಳನ್ನು ಮಾತ್ರವೇ ಅಲ್ಲ, ಅವುಗಳನ್ನು ವ್ಯಕ್ತಪಡಿಸುವ ಬಗೆಗಳನ್ನು ಕೂಡಾ ಆ ತರಬೇತಿಯೇ ವ್ಯಾಖ್ಯಾನಿಸಿಬಿಡುತ್ತದೆ.

ಉದಾಹರಣೆಗೆ, ಪುರುಷರು ಮಹಿಳೆಯರಿಗೆ ಪ್ರೀತಿ ಗೌರವಗಳನ್ನು, ವಸ್ತುಗಳನ್ನು ಕೊಡುವ ಮೂಲಕ ತೋರಿಸಬೇಕು, ಮತ್ತು ಮಹಿಳೆಯರು ಆ ಭಾವಗಳನ್ನು ಸೇವೆಯ ಮೂಲಕ ತೋರಿಸಬೇಕು ಎಂಬ ಪಾಠವನ್ನು ನಾವೆಲ್ಲರೂ ಕಲಿತಿದ್ದೇವೆ ಮತ್ತು ಹಾಗೆಯೇ ವರ್ತಿಸುತ್ತೇವೆ. ನಮ್ಮೆಲ್ಲರ ಬದುಕುಗಳ ಎಲ್ಲ ಕ್ಷಣಗಳೂ ಈ ಮಾದರಿಯವೇ ಆಗಿವೆ ಎಂಬುದಕ್ಕೆ ಉದಾಹರಣೆಗಳನ್ನು ಕೊನೆಯಿಲ್ಲದೆ ಜೋಡಿಸುತ್ತಲೇ ಹೋಗಬಹುದು. ಗಂಡಸರಾಗಲೀ, ಹೆಂಗಸರಾಗಲೀ ಇಷ್ಟೆಲ್ಲವನ್ನೂ ಚಿಂತಿಸಿ ಸಂಬಂಧಗಳನ್ನು ನಿಭಾಯಿಸುತ್ತಾರೆ ಎಂದೇನಲ್ಲ. ನಮಗೆ ದೊರೆಯುವ ತರಬೇತಿಗಳು ಅಷ್ಟು ಗಾಢವಾದವು ಎಂಬುದನ್ನು ನಾವು ತಿಳಿಯಬೇಕು.

ಅಧಿಕಾರ ಮತ್ತು ಅಧೀನತೆಯ ಸಮೀಕರಣವು ಮಾತ್ರ ಎಲ್ಲಿಯೂ ಸಡಿಲುಗೊಳ್ಳದಂತೆ ಕಾಯುವ ತರಬೇತಿಯ ರಾಜಕಾರಣವನ್ನು ಸುಲಭದಲ್ಲಿ ಅರ್ಥಮಾಡಿಕೊಳ್ಳುವುದು ಆಗದ ಮಾತು. ಆದರೂ ಈ ರಾಜಕಾರಣವನ್ನು ಭೇದಿಸದ ಹೊರತು ಯಾವ ಹೋರಾಟಗಳಿಗೂ ಅರ್ಥವೇ ಉಳಿಯುವುದಿಲ್ಲ. ಸ್ತ್ರೀವಾದೀ ದಾರ್ಶನಿಕತೆಯು ಈ ಹಾದಿಯಲ್ಲಿ ಬೆಳಕನ್ನು ತೋರುವ ಸಾಮರ್ಥ್ಯದ್ದಾಗಿದೆ. ಮಹಿಳೆಯರೂ, ಪುರುಷರೂ ಕೂಡಿಯೇ ಸ್ತ್ರೀವಾದಿಗಳಾಗಬೇಕು ಎಂದರೆ ಈ ಹಾದಿಯಲ್ಲಿ ನಡೆಯೋಣ ಎಂದಷ್ಟೇ ಅರ್ಥ. ವ್ಯವಸ್ಥೆಯ ತರಬೇತಿಯ ಪಾಠಗಳನ್ನು ನಾವೆಲ್ಲರೂ ಮರೆಯಬೇಕು.

ಅಧಿಕಾರ ಮತ್ತು ಅಧೀನತೆಯ ಸಮೀಕರಣವನ್ನು ನಿರಾಕರಿಸಿ ನಿಲ್ಲಬೇಕು. ಇದು ಮಾತ್ರವೇ ಸಮಸಮಾಜದ ಕನಸುಗಳನ್ನು ಸಾಕಾರಗೊಳಿಸಬಲ್ಲುದು. ಈ ಹೋರಾಟದ ಕ್ರಮವು ಸ್ಪಷ್ಟವಾಗಿದೆ. ವ್ಯವಸ್ಥೆಯು ನೀಡಿದ ತರಬೇತಿಯ ಪಾಠಗಳನ್ನು ಮರೆಯುವುದು ಎಂದರೆ ನಮ್ಮನಮ್ಮ ಮಾತುಕತೆಗಳನ್ನು, ವರ್ತನೆಗಳನ್ನು ಅನುಕ್ಷಣವೂ ಗಮನಿಸಿಕೊಳ್ಳುವ ವಿವೇಚನೆಯನ್ನು ಬೆಳೆಸಿಕೊಳ್ಳುವುದು; ಮತ್ತು ಇದನ್ನೇ ಉಸಿರಾಡುವ, ಜೀವಿಸುವ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು. ಈ ಪ್ರಯತ್ನವು ನಮ್ಮ ಜೀವನ ಕ್ರಮಗಳಲ್ಲಿ ಹಾಸುಹೊಕ್ಕಾಗಿ ನೆಲೆಗೊಳ್ಳಬೇಕು.

ಎಚ್ ಎಸ್ ಶ್ರೀಮತಿ

ಎಚ್ ಎಸ್ ಶ್ರೀಮತಿ
ಕನ್ನಡದ ಸ್ತ್ರೀವಾದಿ ಚಿಂತಕಿ ಮತ್ತು ಲೇಖಕಿ. ಮಹಾಶ್ವೇತಾ ದೇವಿಯವರ ’ರುಡಾಲಿ’, ’ಹಜಾರ್ ಚೌರಾಶೀರ ಮಾ’, ಸಿಮೋನ್ ದ ಬೋವ ಅವರ ‘ದ ಸೆಕಂಡ್ ಸೆಕ್ಸ್’, ಬೆಟ್ಟಿ ಫ್ರೀಡನ್ ಅವರ ’ದ ಫೆಮಿನಿಸ್ಟ್ ಮಿಸ್ಟಿಕ್’, ಬೆಲ್ ಹುಕ್ಸ್ ಅವರ ’ಎಲ್ಲರಿಗಾಗಿ ಸ್ತ್ರೀವಾದ’ ಸೇರಿದಂತೆ ಹಲವು ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಲವು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿರುವ ಶ್ರೀಮತಿ ಅವರು ’ಸ್ತ್ರೀವಾದ’, ’ಸ್ತ್ರೀವಾದ : ಪಾರಿಭಾಷಿಕ ಪದಕೋಶ’, ’ಗೌರಿ ದುಃಖ’ ಸೇರಿದಂತೆ ಇನ್ನು ಹಲವಾರು ಪುಸ್ತಕಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ.


ಇದನ್ನೂ ಓದಿ: ದೌರ್ಜನ್ಯವನ್ನು ಕೊನೆಗಾಣಿಸಲು ಸ್ತ್ರೀವಾದೀ ಚಳುವಳಿ “ಸ್ತ್ರೀವಾದ: ಅಂಚಿನಿಂದ ಕೇಂದ್ರದೆಡೆಗೆ” ಪುಸ್ತಕದ ಅಧ್ಯಾಯವೊಂದರ ಆಯ್ದ ಭಾಗ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...