Homeಚಳವಳಿ’ಮಿಸ್ಟರ್‌ ಯಡಿಯೂರಪ್ಪ ನೀವು ಪ್ರಜಾಪ್ರಭುತ್ವವಾದಿಯಲ್ಲ, ಸರ್ವಾಧಿಕಾರಿ’!: ಕೋಡಿಹಳ್ಳಿ ಚಂದ್ರಶೇಖರ್ ಸಂದರ್ಶನ

’ಮಿಸ್ಟರ್‌ ಯಡಿಯೂರಪ್ಪ ನೀವು ಪ್ರಜಾಪ್ರಭುತ್ವವಾದಿಯಲ್ಲ, ಸರ್ವಾಧಿಕಾರಿ’!: ಕೋಡಿಹಳ್ಳಿ ಚಂದ್ರಶೇಖರ್ ಸಂದರ್ಶನ

ಬೆಳೆ ಬೆಳೆದು ನಿಂತಿದೆ, ಈಗ 10 ಸಾವಿರ ಕೋಟಿಯ ಆವರ್ತ ನಿಧಿಯನ್ನು ತೆರೆದು ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕು. ಅದಕ್ಕಾಗಿ ಸುಗ್ರಿವಾಜ್ಞೆ ಹೊರಡಿಸಬೇಕು.

- Advertisement -
- Advertisement -

ರೈತ ವಿರೋಧಿ ಕಾನೂನಿನ ವಿರುದ್ದ ಹೋರಾಟ ಕಟ್ಟಿ ರೈತರನ್ನು ರಾಜ್ಯ ಮಟ್ಟದಲ್ಲಿ ಸಂಘಟಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಸಮರ ಸಾರಿರುವ ರೈತ ಹೋರಾಟಗಾರ, ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾಗಿರುವ ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ನಾನುಗೌರಿ.ಕಾಂ ಸಂದರ್ಶನ ನಡೆಸಿದ್ದು ಅದರ ಪೂರ್ಣಪಾಠ ಕೆಳಗಿದೆ.

ನಾನುಗೌರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ತಂದಿರುವ ಕಾಯಿದೆ ರೈತಪರ ಎಂದು ಹೇಳುತ್ತಿದೆ, ಅದಾಗಿಯೂ ರೈತರು ಅದನ್ನು ವಿರೋಧಿಸುತ್ತಿರುವುದು ಯಾಕೆ?

ಕೋಡಿಹಳ್ಳಿ ಚಂದ್ರಶೇಖರ್: ಮೊದಲನೆಯದಾಗಿ ಕೇಂದ್ರ ಸರ್ಕಾರ ಕೃಷಿಗೆ ಸಂಬಂಧಪಟ್ಟಂತೆ ತಂದಿರುವ ಕಾಯ್ದೆಗಳಾದ ಎಪಿಎಂಸಿ ಕಾಯ್ದೆ, ಅಗಶ್ಯ ವಸ್ತು/ಪದಾರ್ಥಗಳ (ತಿದ್ದುಪಡಿ) ಕಾಯ್ದೆ, ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಆಶ್ವಾಸನೆ ಮತ್ತು ಕೃಷಿ ಸೇವಾ ಒಪ್ಪಂದ ಕಾಯ್ದೆ ಇವೆಲ್ಲವೂ ನೇರವಾಗಿ ರಾಜ್ಯ ಪಟ್ಟಿಯಲ್ಲಿರುವ ವಿಷಯಗಳು. ಕೇಂದ್ರ ಸರ್ಕಾರ ಇವುಗಳಿಗೆ ತಮ್ಮ ಅಧಿಕಾರವನ್ನು ಬಳಸಿಕೊಂಡು ಅವುಗಳಿಗೆ ಕೈ ಹಾಕಿದ್ದು ಮೊದಲನೆ ತಪ್ಪು. ರಾಜ್ಯಗಳನ್ನು ಹಾಗೂ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಾಗೂ ಅವರ ಒಪ್ಪಿಗೆ ಪಡೆದುಕೊಂಡ ನಂತರ ಈ ವಿಷಯದಲ್ಲಿ ಕೇಂದ್ರ ಸರ್ಕಾರ ಅವುಗಳ ಬಗ್ಗೆ ಮಾತನಾಡಬೇಕಿತ್ತು. ಆದರೆ ಅದನ್ನು ಬಿಟ್ಟು ಏಕಾಏಕಿ ಲೋಕ ಸಭೆಯಲ್ಲಿ ಸುಗ್ರಿವಾಜ್ಞೆ ಹೊರಡಿಸಿ ಮಸೂದೆಯನ್ನು ಸದನಗಳಲ್ಲಿ ಯಾವುದೆ ಚರ್ಚೆಗಳಿಲ್ಲದೆ ಪಾಸು ಮಾಡಿ ರಾಷ್ಟ್ರಪತಿಯ ಕೈಯ್ಯಲ್ಲಿ ಸಹಿ ಹಾಕಿಸುವುದೆಂದರೆ ಏನರ್ಥ? ಇದು ಪ್ರಜಾಪ್ರಭುತ್ವವೆ?

ನಮ್ಮ ಪ್ರಶ್ನೆ ಮಿಸ್ಟರ್‌ ಮೋದಿಗೆ ದೇಶ ಪ್ರಸ್ತುತ ಎದುರಿಸುತ್ತಿರುವ ಪ್ರಶ್ನೆ ಕೊರೊನಾ ಆಗಿದೆ. ಸುಗ್ರಿವಾಜ್ಞೆ ತರವುದು ವಿಶೇಷ ಸಂಧರ್ಭದಲ್ಲಿ, ಅಂದರೆ ದೇಶದ ಭದ್ರತೆಯ ವಿಚಾರದಲ್ಲಿ, ದೇಶದಲ್ಲಿ ಭೀಕರವಾಗಿ ಸಾವು ನೋವು ಉಂಟಾದರೆ, ಪ್ರಕೃತಿ ವಿಕೋಪದಿಂದ ದೇಶದಲ್ಲಿ ಆಹಾಕಾರ ಶುರುವಾಗಿದ್ದರೆ… ಹೀಗೆ ಇಂತಹ ಸಮಯದಲ್ಲಿ ಸುಗ್ರಿವಾಜ್ಞೆ ಹೊರಡಿಸಬೇಕು. ಆದರೆ ಪ್ರಸ್ತುತ ಸುಗ್ರೀವಾಜ್ಞೆ ಮೂಲಕ ಹೊರಡಿಸಿರುವ ಯಾವುದೆ ವಿಷಯ ಕೂಡಾ ಈ ವಿಷಯಗಳ ನಡುವೆ ಸಂಬಂಧ ಹೊಂದಿಲ್ಲ. ಆದರೂ ಇಂತಹ ಕಾಯ್ದೆಗಳನ್ನು ತಂದಿದ್ದಾರೆ. ಹಾಗಾದರೆ ಮಿಸ್ಟರ್‌ ಮೋದಿ ಈ ಸುಗ್ರಿವಾಜ್ಞೆಯ ಆದ್ಯತೆಯ ವಿಷಯ ಯಾವುದು?

ರೈತರ ಮೇಲೆ ಅಷ್ಟೊಂದು ಪ್ರೀತಿ ಪ್ರಧಾನಿಗೆ ಇದ್ದರೆ ಕಾಯ್ದೆಗಳು ಸಂಪೂರ್ಣ ರೈತರ ಪರವಾಗಿರಬೇಕಿತ್ತಲ್ಲ. ಆದರೆ ಕಾಯಿದೆಗಳೇಕೆ ಕಾರ್ಪೊರೇಟ್ ಪರವಾಗಿದೆ? ಇವರ ಉದ್ದೇಶ ಸುತ್ತಿಬಳಸಿ ಕಾರ್ಪೊರೇಟ್ ಕಂಪನಿಗಳಿಗೆ ಲಾಭ ತರವುದೇ ಹೊರತು ರೈತರಿಗೆ ಅಲ್ಲ. ಅದಕ್ಕಾಗಿ ನಮ್ಮ ಹೋರಾಟ.

ನಾನುಗೌರಿ: ರಾಜ್ಯದಲ್ಲಿ ನಡೆಯುತ್ತಿರುವ ಐಕ್ಯ ಹೋರಾಟ ಒಂದು ಮಟ್ಟಕ್ಕೆ ಜನ ಸಾಮಾನ್ಯರಿಗೆ ತಲುಪಿದೆ. ಇದಾಗಿಯೂ ಕೇಂದ್ರ ಸರ್ಕಾರವಾಗಲೀ ಅದಕ್ಕೆ ಪೂರಕ ಕಾಯ್ದೆಗಳನ್ನು ತಂದ ರಾಜ್ಯ ಸರ್ಕಾರವಾಗಲೀ ಇವುಗಳಿಂದ ವಿಚಲಿತವಾಗಿಲ್ಲ ಯಾಕೆ?

ಕೋಡಿಹಳ್ಳಿ ಚಂದ್ರಶೇಖರ್: ರಾಜ್ಯ ಸರ್ಕಾರದ ಬಗ್ಗೆ ಹೇಳುವುದಾರೆ ಯಡಿಯೂರಪ್ಪ ಸುಗ್ರಿವಾಜ್ಞೆ ಹೊರಡಿಸಿದರು. ಆದರೆ ಇವುಗಳನ್ನು ತರಬೇಕಾದರೆ ರೈತರೊಂದಿಗೆ ಚರ್ಚೆ ಮಾಡಬೇಕಿತ್ತು ಆದರೆ ಮಾಡಿಲ್ಲ. ವಿಧಾನ ಸಭೆಯಲ್ಲಿ ಬಹುಮತ ಪಡೆಯಿತು, ನಂತರ ವಿಧಾನ ಪರಿಷತ್‌ನಲ್ಲಿ ಬಹುಮತ ಇಲ್ಲದೆ ಬಿದ್ದು ಹೋಯಿತು. ಅಷ್ಟೇ ಅಲ್ಲದೆ ಇಡೀ ಕರ್ನಾಟಕದ ಜನತೆ ರಾಜ್ಯದ ಬೀದಿ ಬೀದಿಯಲ್ಲಿ ಮಸೂದೆಯ ವಿರುದ್ದ ಅವಿಶ್ವಾಸವನ್ನು ಮಂಡಿಸಿದ್ದಾರೆ. ಜನ ಈ ರೀತಿಯಲ್ಲಿ ಬೀದಿ ಬಂದು ಪ್ರತಿಭಟಿಸುತ್ತಿದ್ದರೂ ಅದಕ್ಕೆ ಬಗ್ಗದ ಯಡಿಯೂರಪ್ಪ ಸರ್ಕಾರ ಮತ್ತೇ ಸಚಿವ ಸಂಪುಟ ಸಭೆಯನ್ನು ಕರೆದು ಮತ್ತೇ ಸುಗ್ರಿವಾಜ್ಞೆ ಹೊರಡಿಸುತ್ತಾರೆಂದರೆ, ’ಮಿಸ್ಟರ್‌ ಯಡಿಯೂರಪ್ಪ ನೀವು ಪ್ರಜಾಪ್ರಭುತ್ವವಾದಿಯಲ್ಲ, ಸರ್ವಾಧಿಕಾರಿ’! ಎಂದು ನಾನು ಹೇಳುತ್ತೇನೆ. ರಾಜ್ಯ ಸರ್ಕಾರ ನರೇಂದ್ರ ಮೋದಿಯ ಆದೇಶವನ್ನು ಪಾಲಿಸಲೇ ಇರುವುದೆ ಹೊರತು ರಾಜ್ಯದ ರೈತ ಹಿತಾಸಕ್ತಿಗಳನ್ನು ಎತ್ತಿಹಿಡಯಲು ಅಲ್ಲ ಎಂಬುವುದನ್ನು ಸಾಬೀತುಪಡಿಸಿದೆ.

ನಾನುಗೌರಿ: ಎಪಿಎಂಸಿ ರೈತರ ಹಿತಕ್ಕಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಹಿಂದಿನಿಂದಲೂ ಇದೆ. ಆದರೆ, ಹಿಂದಿನಿಂದಲೂ ತಮ್ಮ ಪರವಾಗಿ ಇರದಿದ್ದ ಎಪಿಎಂಸಿ ಕುರಿತಾಗಿ ರೈತರಿಗೇಕೆ ಇದ್ದಕ್ಕಿದ್ದ ಹಾಗೆ ಪ್ರೀತಿ ಹುಟ್ಟುತ್ತಿದೆ?

ಕೋಡಿಹಳ್ಳಿ ಚಂದ್ರಶೇಖರ್: ಹಿಂದೆ ಇದ್ದ ಎಪಿಎಂಸಿ ಹಾಗೂ ಅದರ ಕಾನೂನು ಕಾಯ್ದೆಯ ನಡುವೆ ಕೂಡಾ ವ್ಯಾಪಾರಸ್ಥರು ರೈತರಿಗೆ ಮೋಸ ಮಾಡುತ್ತಿದ್ದರು. ಬಿಳಿ ಚೀಟಿ, ದಳ್ಳಾಳಿಗಳ ಕಾಟ ಮುಂತಾದವುಗಳು ಇದ್ದವು ನಿಜಾವೆ. ಆದರೆ ಇದೆಲ್ಲದರ ನಡುವೆ ಇದನ್ನು ಬದಲಾಯಿಸಲು ಸರ್ಕಾರಕ್ಕೆ ಅಧಿಕಾರ ಇತ್ತು, ಆದರೆ ಮಾಡಿಲ್ಲ. ಎಪಿಎಂಸಿ ಕಾಯ್ದೆಯಲ್ಲಿ ರೈತನಿಗೆ ಹಮಾಲಿ, ವ್ಯಾಪಾರಿ ಅಥವಾ ದಳ್ಳಾಳಿ ಸೇರಿದಂತೆ ತೂಕದಲ್ಲಾಗಲಿ, ಅಳತೆಯಲ್ಲಾಗಲಿ ಹಾಗೂ ಕೊಡಬೇಕಾದ ಹಣದಲ್ಲಾಗಲಿ ಮೋಸ ಮಾಡಿದರೆ, ಅವರ ವಿರುದ್ದ ಕೇಸು ದಾಖಲಾಗಿ ಮೋಸಗಾರರನ್ನು ಜೈಲಿಗೆ ಕಳುಹಿಸುವಂತೆ ಎಪಿಎಂಸಿ ಕಾನೂನಿನಲ್ಲಿ ಅವಕಾಶ ಇದೆ.

ಎಪಿಎಂಸಿಯಲ್ಲಿ ವ್ಯಾಪಾರಿಗಳ ಒಂದು ಗುಂಪು ಇರುತ್ತದೆ, ಅಲ್ಲಿ ಮಾರಿದರೆ ರೈತನಿಗೆ ಸ್ಪರ್ದಾತ್ಮಕ ಬೆಲೆ ಸಿಗುತ್ತದೆ. ಇಷ್ಟೇ ಅಲ್ಲದೆ ರೈತನಿಗೆ ತನ್ನ ಬೆಳೆಯ ಬಗೆಗಿನ ಬೆಲೆಯ ಬಗ್ಗೆ ಅರಿವು ಇರುತ್ತದೆ. ಆದರೆ ಈಗ ಸರ್ಕಾರ ತಂದಿರುವ ಎಪಿಎಂಸಿಯ ಕಾಯ್ದೆಯ ತಿದ್ದುಪಡಿಯಲ್ಲಿ ಎಪಿಯಂಸಿಯ ಬಗ್ಗೆ ಇರುವ ಯಾವುದನ್ನು ತಿದ್ದುಪಡಿ ಮಾಡುತ್ತಿಲ್ಲ. ಎಪಿಎಂಸಿ ಹಾಗೆಯೆ ಇರುತ್ತದೆ, ಕಾನೂನುಗಳು ಹಾಗೆಯೆ ಇರುತ್ತದೆ, ಎಪಿಎಂಸಿ ಕಮೀಟಿಗಳು ಹಾಗೆಯೆ ಇರುತ್ತದೆ ಇದು ಯಾವುದನ್ನು ಸರಿಪಡಿಸದೆ, ಎಪಿಎಂಸಿಯನ್ನು ಮೀರಿ ಬೈಪಾಸ್ ಕಾನೂನನ್ನು ಜಾರಿ ಮಾಡುತ್ತಿದ್ದಾರೆ. ಹಿಂದಿನ ಎಪಿಎಂಸಿ ಕಾನೂನಿನಲ್ಲಿ ಕಾರ್ಪೊರೇಟ್ ಕಂಪೆನಿಗಳು ಎಪಿಎಂಸಿಗೆ ನುಗ್ಗುವುದನ್ನು ತಡೆದಿದ್ದವು. ಅಲ್ಲಿ ನಡೆಯುವ ಎಲ್ಲಾ ವ್ಯಾಪಾರಗಳೂ ಎಪಿಎಂಸಿ ಪ್ರಾಂಗಣದಲ್ಲೇ ನಡೆಯಬೇಕು, ಎಪಿಎಂಸಿಗೆ ಬರುವವರು ಎಪಿಎಂಸಿಗೆ ’ತೆರಿಗೆ’ ಕಟ್ಟಬೇಕು ಎಂದು ಕಾನೂನು ಇತ್ತು.

ಆದರೆ ಈಗ ಬರುವಂತಹ ಕಾನೂನಿನಲ್ಲಿ ಇದು ಯಾವುದೂ ಇಲ್ಲ. ಈ ಕಾಯಿದೆ ಹೊಸದಾಗಿ ಬರುವ ಕಾರ್ಪೊರೇಟ್‌ಗಳಿಗೆ ಅನ್ವಯವಾಗುವುದಿಲ್ಲ. ಅವರು ದೇಶದ ಯಾವುದೇ ಕಡೆಗೆ ಹೋಗಿ ಖರೀದಿ ಮಾಡಬಹುದು. ಖಾಸಗಿಯಾಗಿ ಮಾರುಕಟ್ಟೆಯನ್ನು ಕೂಡಾ ಹೊಂದಬಹುದು. ಅವರು ಎಪಿಎಂಸಿಗೆ ಯಾವುದೆ ತೆರಿಗೆ ಕಟ್ಟಬೇಕಾಗಿಲ್ಲ. ಹಾಗಾಗಿ ಇರುವ ಎಪಿಎಂಸಿಯನ್ನು ಬಲಪಡಿಸಿ ಎಂದು ಕೇಳುತ್ತಿರುವುದು.

ನಾನುಗೌರಿ: ಬೆಂಬಲ ಬೆಲೆ, ವೈಜ್ಞಾನಿಕ ಬೆಲೆ ಇತ್ಯಾದಿಗಳು ಸ್ವಾಮಿನಾಥನ್ ಅವರ ಶಿಫಾರಸ್ಸಿನ ನಂತರ ಇನ್ನೂ ಬಲ ಪಡೆದುಕೊಳ್ಳಬೇಕಿತ್ತು, ಆದರೆ ಹಾಗಾಗುತ್ತಿಲ್ಲ. ಇದಕ್ಕೆ ಕಾರಣವೇನು?

ಕೋಡಿಹಳ್ಳಿ ಚಂದ್ರಶೇಖರ್: ರೈತರಿಗೆ ಸಹಾಯ ಮಾಡುತ್ತೇವೆ, ನಮ್ಮ ಆಡಳಿತದಲ್ಲಿ ರೈತರ ಬೆಳೆಗಳಿಗೆ ದುಪ್ಪಟ್ಟು ಬೆಲೆ ಸಿಗುತ್ತಾ ಇದೆ ಎಂದು ಸರ್ಕಾರ ನಾಚಿಕೆಯಿಲ್ಲದೆ ಹೇಳುತ್ತಿದೆ. ಆದರೆ ಈ ಮೂರ್ಖರಿಗೆ ನಾನು ಹೇಳುವುದಿಷ್ಟೆ, ಗೊಬ್ಬರದ ಬೆಲೆ, ಕೂಲಿ, ಟ್ಯಾಕ್ಸ್‌‌, ಕೃಷಿ ಉಪಕರಣಗಳ ಬೆಲೆ ಸೇರಿದಂತೆ ಎಲ್ಲವು ದುಪ್ಪಟ್ಟುಗೊಂಡಿದೆ. ಇದರ ಜೊತೆ ರೈತ ಉತ್ಪನ್ನದ ಬೆಲೆ ಅಲ್ಪ ಜಾಸ್ತಿಯಾಗಿದೆ. ಆದರೆ ಅವುಗಳ ಬೆಲೆಗಳ ಸಮಾನವಾಗಿ ರೈತರ ಬೆಳೆಗಳ ಬೆಲೆ ಏರಿಕೆಯಾಗಿಲ್ಲ. ನಾವು ಸ್ವಾಮಿನಾಥನ್ ವರದಿಗೆ ಇನ್ನಷ್ಟು ವಿಷಯಗಳನ್ನು ಸೇರಿಸಲು ಬೇಡಿಕೆ ಇಟ್ಟಿದ್ದೆವು. 2014 ರಲ್ಲಿ ಈ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಇದುವರೆಗೂ ಇವುಗಳ ಗೋಜಿಗೆ ಹೋಗಿಲ್ಲ. ಈಗ ಈ ದಾರಿಯನ್ನು ಬಿಟ್ಟು ಅಡ್ಡ ದಾರಿಯಲ್ಲಿ ಕಾರ್ಪೋರೇಟ್ ಕಂಪೆನಿಗಳ ಅಜೆಂಡವನ್ನು ಹಿಡಿದುಕೊಂಡು ಬಂದಿದೆ. ಇದು ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ. ಆದರೆ ಸರ್ಕಾರ ಕಾರ್ಪೋರೇಟ್‌ಗಳು ಬಂದ ನಂತರವೇ ಸ್ವಾಮಿನಾಥನ್ ಶಿಫಾರಸ್ಸನ್ನು ಜಾರಿ ಮಾಡುತ್ತದೆ ಎನ್ನುವ ಅನುಮಾನ ನಮ್ಮದು.

ನಾನುಗೌರಿ: ಕೋವಿಡ್ ಸಂದರ್ಭವು ಕೃಷಿ ಕ್ಷೇತ್ರದ ಮೇಲೆ ಯಾವ ಪರಿಣಾಮವನ್ನು ಬೀರಿತು?

ಕೋಡಿಹಳ್ಳಿ ಚಂದ್ರಶೇಖರ್: ಹಿಂದಿನಿಂದಲೂ ರೈತರಿಗೆ ಏನೂ ಒಳ್ಳೆಯ ದಿನ ಆಗಿರಲಿಲ್ಲ. ಗೊಬ್ಬರದ ಕೊರತೆ, ಬೀಜದ ಕೊರತೆಯ ನಡುವೆ ಕೂಡಾ ಈ ಬಾರಿ ನೂರು ಶೇಖಡ ಮುಂಗಾರು ಬಿತ್ತನೆಯಾಗಿದೆ. ಹಿಂದೆ ಎಲ್ಲಾ 60-70% ಆಗುತ್ತಿತ್ತು. ಕೊರೊನಾ ಸಮಯದಲ್ಲಿ ದೇಶದಲ್ಲಿ ಕೃಷಿಯನ್ನು ಹೊರತು ಪಡಿಸಿ ಎಲ್ಲಾ ಉತ್ಪಾದನೆಯೂ ನಿಂತು ಹೋಗಿದೆ. ಆದರೆ ಕೃಷಿಕ್ಷೇತ್ರ ಮಾತ್ರ ಈ ಬಿಕ್ಕಟ್ಟಿನಲ್ಲೂ ಕೂಡಾ ತನ್ನ ಉತ್ಪಾದನೆಯನ್ನು ನಿಲ್ಲಿಸದೇ ತನ್ನ ಕರ್ತವ್ಯ ನಿರ್ವಹಿಸಿತು. ಕೊರೊನಾದ ಆರ್ಥಿಕ ಹಿಂಜರಿತದಲ್ಲೂ ರೈತ ತನ್ನ ಕೆಲಸವನ್ನು ನಿಲ್ಲಿಸಲಿಲ್ಲ.

photo courtesy : Vijaya Karnataka

ನಾನುಗೌರಿ: ಬಿಡಿಬಿಡಿಯಾಗಿ ಹೋರಾಟ ನಡೆಸುತ್ತಿದ್ದ ರೈತ ಸಂಘಟನೆಗಳು ಒಟ್ಟಾಗಿ ಸೇರಿ ಬಂದ್‌ಗೆ ಕರೆ ನೀಡಿದಿರಿ. ಈ ಐಕ್ಯತೆ ಮುಂದೆಯೂ ಮುಂದುವರೆಯಲಿದೆಯೇ?

ಕೋಡಿಹಳ್ಳಿ ಚಂದ್ರಶೇಖರ್: ಪ್ರಸ್ತುತ ಸಂಧರ್ಭದಲ್ಲಿ ಈ ಭಿನ್ನಾಭಿಪ್ರಾಯದ ಪ್ರಶ್ನೆ ಬರುವುದೇ ಇಲ್ಲ. ಸರ್ಕಾರಗಳು ಹಾಕಿರುವ ’ಕಾನೂನಿನ ವಿಷ’ ರೈತರ ಬಾಯಿಗೆ ಸುರಿಯುತ್ತಾ ಇದೆ. ಇದರಿಂದ ಯಾರಿಗೂ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಪ್ರಸ್ತುತ ಸರ್ಕಾರವೇ ನಿಂತು ರೈತರ ಸಾಮೂಹಿಕ ಹತ್ಯೆ ಮಾಡುತ್ತಿರುವಾಗ ಇದರ ವಿರುದ್ದ ನಾವು ನಿಲ್ಲಬೇಕಾಗಿರುವುದು ಅನಿವಾರ್ಯವಾಗಿದೆ. ಇಲ್ಲಿ ಭಿನ್ನಾಭಿಪ್ರಾಯ ಇಲ್ಲವೆ ಇಲ್ಲ.

ನಾನುಗೌರಿ: ನೀವೆ ಹೇಳಿದಂತೆ ಒಳ್ಳೆಯ ಮುಂಗಾರು ಬಿತ್ತನೆಯಾಗಿರುವ ಈ ಹೊತ್ತಿನಲ್ಲಿ ಬಂಪರ್ ಬೆಳೆ ಬಂದು ಬೆಲೆ ಕುಸಿತ ಸಂಭವಿಸಬಹುದು. ಆ ನಿಟ್ಟಿನಲ್ಲಿ ನಿಮ್ಮ ಮುಂದಾಲೋಚನೆಯೇನು?

ಕೋಡಿಹಳ್ಳಿ ಚಂದ್ರಶೇಖರ್: ಈಗಾಗಲೇ ಸಜ್ಜೆ, ಹೆಸ್ರು, ಉದ್ದು ಹಾಗೂ ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ಮಾರುಕಟ್ಟೆಗೆ ಬರುತ್ತಿದೆ. ಸರ್ಕಾರದ ಬೆಂಬಲ ಬೆಲೆ ಇನ್ನೂ ಪ್ರಾರಂಭವಾಗಿಲ್ಲ.ಈಗಾಗಲೆ ಕೊಪ್ಪಳದ ಡಿಸಿ ಕಚೇರಿಯಲ್ಲಿ ಸಜ್ಜೆ ಮತ್ತು ಮೆಕ್ಕೆ ಜೋಳ ತುಂಬಿದ ಟ್ರಾಕ್ಟರ್‌ ಸಹಿತ ರೈತರು ಕೂತಿದ್ದರು. ಅವರನ್ನು ಜಿಲ್ಲಾಧಿಕಾರಿಗಳು ಮಾತುಕತೆಗೆ ಬೆಂಗಳೂರಿಗೆ ಕರೆತರುತ್ತಿದ್ದಾರೆ. ಇದರ ಅರ್ಥವೇನೆಂದರೆ ರೈತರ ಬೆಳೆಗಳನ್ನು ಸರ್ಕಾರ ತೆಗೆದುಕೊಳ್ಳುವುದು ಕೈಬಿಟ್ಟಿದೆ, ಖರೀದಿ ಮಾಡುತ್ತಿಲ್ಲ ಎಂದರ್ಥ.

ಬೆಳೆ ಬೆಳೆದು ನಿಂತಿದೆ, ಈಗ 10 ಸಾವಿರ ಕೋಟಿಯ ಆವರ್ತ ನಿಧಿಯನ್ನು ತೆರೆದು ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕು. ನಾನು ಯಡಿಯೂರಪ್ಪರಿಗೆ ಹೇಳುವುದೇನೆಂದರೆ ಸುಗ್ರಿವಾಜ್ಞೆ ತರಬೇಕಿರುವುದು ಕಾಯ್ದೆಗಳನ್ನು ತಿದ್ದುಪಡಿ ಮಾಡುವುದಕ್ಕೆ ಅಲ್ಲ. ಈ ಆವರ್ತ ನಿಧಿಯನ್ನು ತರಲು, ಖರೀದಿ ಕೇಂದ್ರವನ್ನು ಸ್ಥಾಪಿಸಲು ಸುಗ್ರಿವಾಜ್ಞೆ ಹೊರಡಿಸಬೇಕು.

ನಾನುಗೌರಿ: ಪ್ರಸ್ತುತ ರಾಜ್ಯದಲ್ಲಿ ನಡೆದಿರುವ ಹೋರಾಟ ಯಶಸ್ವಿಯಾಗಿದೆಯೇ ? ನಿಮ್ಮ ಹೋರಾಟ ಮುಂದುವರೆಯುತ್ತದೆಯೆ?

ಕೋಡಿಹಳ್ಳಿ ಚಂದ್ರಶೇಖರ್: ಖಂಡಿವಾಗಿಯೂ ನಮ್ಮ ಹೋರಾಟ ಮುಂದುವರೆಯುತ್ತದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ, ಈ ಬಗ್ಗೆ ಎಲ್ಲರ ಅಭಿಪ್ರಾಯಗಳನ್ನು ಪಡೆದು ನಾವು ಮುಂದುವರೆಯುತ್ತೇವೆ. ಮತ್ತು ಹೋರಾಟದ ಯಶಸ್ಸಿನ ಬಗ್ಗೆ ಹೇಳುವುದಾದರೆ “ಕೊರೊನಾ ಸಂಧರ್ಭವನ್ನು ಬಳಸಿ, ಜನರ ಮನಸ್ಸಿನಲ್ಲಿ ಭಯವನ್ನು ಬಿತ್ತಿ ಸರ್ಕಾರ ಕಾಯಿದೆಯನ್ನು ತಂದು ಬಹಳ ದೊಡ್ಡ ಅಪರಾಧ ಮಾಡಿದೆ. ಆದರೆ ಕೊರೊನಾ ಭಯವನ್ನು ಮೀರಿ ನಾವು ಜನರ ಮನಸ್ಸನ್ನು ಮುಟ್ಟಿದ್ದೇವೆ. ರೈತರ ನಡುವೆ ಈ ಚರ್ಚೆ ನಡೆಯುವಂತೆ ಮಾಡಿದ್ದೇವೆ, ಅಷ್ಟರ ಮಟ್ಟಿಗೆ ನಮ್ಮ ಹೋರಾಟ ಯಶಸ್ವಿಯಾಗಿದೆ.”

ರೈತಸಂಘದ ರಾಜ್ಯ ಅಧ್ಯಕ್ಷರಾಗಿರುವ ಚಂದ್ರಶೇಖರ್ ಹಾಸನ ಜಿಲ್ಲೆಯವರು. ನೀರಾ ಚಳುವಳಿಯಲ್ಲಿ ಹೆಚ್ಚು ಸಕ್ರಿಯವಾಗಿದ್ದ ಅವರು ಎಂ.ಡಿ.ನಂಜುಂಡಸ್ವಾಮಿಯವರ ನಿಧನದ ನಂತರ, ರೈತಸಂಘದ ರಾಜ್ಯ ಮುಖಂಡರಾಗಿ ಜವಬ್ದಾರಿ ವಹಿಸಿಕೊಂಡರು. ಈಗ ಸದ್ಯ ಬೆಂಗಳೂರಿನಲ್ಲಿ ಇರುವ ಅವರು ರಾಜ್ಯದ ವಿವಿಧ ಭಾಗಗಳಲ್ಲಿ ಸಕ್ರಿಯ ಜಿಲ್ಲಾ ಘಟಕಗಳನ್ನು ಹೊಂದಿದ್ದು ಸಕ್ರಿಯರಾಗಿ ನೇತೃತ್ವ ಕೊಡುತ್ತಿದ್ದಾರೆ.

  • ಸಂದರ್ಶನ: ಬಾಪು ಅಮ್ಮೆಂಬಳ

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ರೈತರು ಮೋದಿಗೆ ಕೃತಜ್ಞತೆ ಹೇಳುತ್ತಿದ್ದಾರೆ ಎಂದು ಹಳೆಯ ಫೋಟೋ ಹಂಚಿಕೊಂಡ ಬಿಜೆಪಿ ನಾಯಕ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...