Homeಮುಖಪುಟಅನ್ನಾ ಅಖ್ಮತೋವಾರ ಶಾಂತಿಗೀತೆಗೊಂದು ಪ್ರವೇಶ: ಭಾಗ-2

ಅನ್ನಾ ಅಖ್ಮತೋವಾರ ಶಾಂತಿಗೀತೆಗೊಂದು ಪ್ರವೇಶ: ಭಾಗ-2

- Advertisement -
- Advertisement -

(ಮಾರ್ಚ್ 16ರ ಸಂಚಿಕೆಯಲ್ಲಿ ಶಾಂತಿಗೀತೆಯ ಅನುವಾದದ ಪೂರ್ಣ ಪಠ್ಯ ಮತ್ತು ಮಾರ್ಚ್ 23ರ ಸಂಚಿಕೆಯಲ್ಲಿ ಶಾಂತಿಗೀತೆಗೊಂದು ಪ್ರವೇಶದ ಮೊದಲ ಭಾಗ ಪ್ರಕಟವಾಗಿತ್ತು… ಮುಂದುವರಿದಿದೆ..)

ಅಸಹನೀಯ ನೋವನ್ನು ನಿಭಾಯಿಸುವ ಪ್ರಯತ್ನ ಒಂಬತ್ತನೆಯ ಕವಿತೆಯಲ್ಲೂ ಮುಂದುವರೆದಿದೆ. ಏಳನೆಯ ಕವಿತೆಯಲ್ಲಿ ಸಂವೇದನೆಯನ್ನು ಕಳಕೊಳ್ಳುವುದು, ಎಂಟನೆಯ ಕವಿತೆಯಲ್ಲಿ ಸಾವು – ಈಗ ಸಂಪೂರ್ಣ ಮರೆವು ಬಿಡುಗಡೆಯ ದಾರಿಯಾಗಿ ಕಾಯುತ್ತದೆ. ಹಾಗಾಗಿ ಈ ಕವಿತೆಯ ಮೊದಲಿನಲ್ಲೇ ’ಹುಚ್ಚು ಚಾಚಿರುವ ರೆಕ್ಕೆಯ ನೆರಳು’, ಎಂಬ ಪ್ರತಿಮೆ ಬಂದಿದೆ. ’ಶಾಂತಿಗೀತೆ’ಯ ಸೂಕ್ತಿ ವಾಕ್ಯದಲ್ಲೂ ರೆಕ್ಕೆ ಅನ್ನುವುದು ರಕ್ಷಣೆಯ, ಆಸರೆಯ ಪ್ರತಿಮೆಯಾಗಿಯೇ ಬಳಕೆಯಾಗಿದೆ. ಈ ರೂಪಕ ಬೈಬಲಿನಿಂದ ಬಂದದ್ದು; ದೇವರ ರಕ್ಷಣೆಯನ್ನು ಹಕ್ಕಿಯ ರೆಕ್ಕೆಯ ರಕ್ಷಣೆ ಅನ್ನುವ ರೂಪಕದ ಮೂಲಕ ಬೈಬಲಿನಲ್ಲಿ ವರ್ಣಿಸಲಾಗಿದೆ. ಆದರೆ, ಇಲ್ಲಿ ರಕ್ಷಣೆಯಾಗಿ ತೋರುವ ಮರೆವಿನ ರೆಕ್ಕೆಯಲ್ಲಿ ಆರ್ಥಸಂಧಿಗ್ಧತೆ ಇದೆ; ಮರೆವು ಎಷ್ಟೇ ಆಕರ್ಷಕವಾಗಿ ಕಂಡರೂ ಅದು ತರುವ ಮರುಳು ಅಪಾಯಕಾರಿಯಾದದ್ದು. ನಿರೂಪಕಿ ತನಗೆ ಹುಚ್ಚು ಹಿಡಿದರೂ ಪರವಾಗಿಲ್ಲ. ನೋವಿನಿಂದ ಬಿಡುಗಡೆ ಬೇಕು ಎಂದು ಬಯಸುತ್ತಾಳೆ. ಆದರೆ ಆಕೆ ಮರೆಯಲು ಬಯಸುವ ನೋವಿನ ಭಾಗವಾಗಿ ಅವಳ ಮಗನ ನೆನಪೂ ಇದೆ. ನೆನಪು ಕಳೆದುಕೊಳ್ಳುವುದೆಂದರೆ ಮಗನ ನೆನಪನ್ನೂ ಕಳಕೊಳ್ಳುವುದೇ ಅಲ್ಲವೇ.

ಹುಚ್ಚನ್ನು ಹೀಗೆ ಆಕರ್ಷಕವಾಗಿಯೂ ಅಸಹ್ಯವಾಗಿಯೂ ಕಾಣುವ ವಿರೋಧಾಭಾಸ ಇಲ್ಲಿದೆ. ನಾನು ಮರವೆಗೆ ಸಂದಿದ್ದೇನೆ ಎಂದು ಹೇಳುತಿದ್ದ ಹಾಗೇ ಆಕೆಗೆ ತನ್ನದೇ ಮಾತು ಬಡಬಡಿಕೆಯ ಹಾಗೆ ಕೇಳುತ್ತದೆ; ಆದರೂ
ನಿರೂಪಕಿಯ ನೆನಪು ಸ್ಥಿರವಾಗಿದೆ; ಆಕೆ ಹುಚ್ಚಿಯಾಗಿದ್ದಿದ್ದರೆ ನೆನಪಿಟ್ಟುಕೊಳ್ಳಲು ಸಾಧ್ಯವೇ ಇರದಿದ್ದ ಸಂಗತಿಗಳೆಲ್ಲ, ಅವಳ ಅರಿವಿನಲ್ಲಿವೆ. ಈ ಕವಿತೆಯ ಮೊದಲ ಸ್ಟಾಂಜಾದಲ್ಲಿ ಭಾವತೀವ್ರತೆಯ ಪ್ರತಿಮೆಗಳಿದ್ದರೆ ಕೊನೆಯಲ್ಲಿ ಅಸ್ತವ್ಯಸ್ತ ಮನಸ್ಸಿಗೆ ಹೊಳೆಯಲು ಸಾಧ್ಯವೇ ಇರದ ಪ್ರತಿಮೆಗಳಿವೆ. ಈ ಭಾಗದ ತಣ್ಣನೆಯ ದನಿ ಗಮನಾರ್ಹವಾಗಿದೆ. ಎರಡು, ಮೂರು, ನಾಲ್ಕನೆಯ ಕವಿತೆಗಳಲ್ಲಿ ಹೇಳಿದ ಹಾಗೆ ತನ್ನಿಂದ ತಾನು ಬೇರೆಯಾಗುವುದಲ್ಲ, ಏಳು ಮತ್ತು ಎಂಟನೆಯ ಕವಿತೆಗಳಲ್ಲಿ ಹೇಳಿದ ಹಾಗೆ ಪ್ರಜ್ಞೆಯನ್ನು ಒರೆಸಿಹಾಕುವುದರಲ್ಲೂ ಅಲ್ಲ, ನೋವಿನ ಮೂಲದಲ್ಲಿರುವ, ಹಿಂಸೆ ಪಡುತ್ತಿರುವ ತನ್ನ ಪ್ರಿಯ ವ್ಯಕ್ತಿಯನ್ನು ಕುರಿತ ಪ್ರೀತಿಯನ್ನು ನಿಷ್ಠೆಯ ಶಕ್ತಿಯಾಗಿ ಪರಿವರ್ತಿಸಿಕೊಳ್ಳುವ ಬಯಕೆ, ನೋವುಣ್ಣುತ್ತಿರುವವನ ಪಕ್ಕದಲ್ಲೆ ಇರುವ, ಅವನಿಗೆ ಆಸರೆಯಾಗುವ, ಅದು ಸಾಧ್ಯವಾಗದಿದ್ದರೆ ಅವನನ್ನು ಸದಾ ನೆನೆಯುವ ಹಂಬಲ ಇಲ್ಲಿ ಮೂಡಿದೆ. ನೋವಿನಿಂದ ದೂರ ಓಡಿಹೋಗಬೇಕೆಂಬ ಅತ್ಯಂತ ಸಹಜವಾದ ಪ್ರವೃತ್ತಿಯ ಮೇಲೆ ಗೆಲುವು ಸಾಧಿಸಿದಾಗ ನಿರೂಪಕಿಯು ಸಹನೆಯ ಆಧ್ಯಾತ್ಮದ ಅನುಭವಕ್ಕೆ ಸಿದ್ಧಳಾಗುತ್ತಾಳೆ. ’ಪೀಠಿಕೆಯ ಬದಲಾಗಿ’ ಎಂಬ ಭಾಗದಲ್ಲಿ ಕಾಣಿಸಿದ ನೀಲಿತುಟಿಯ ಅಪಾರವೇದನೆಯ ಮಹಿಳೆಯ ಹಾಗಲ್ಲ ಈ ನಿರೂಪಕಿ. ಈಕೆ ಸಾಕ್ಷಿ ಪ್ರಜ್ಞೆಯಾಗುವಷ್ಟು ಬೆಳೆದುಬಿಟ್ಟಿದ್ದಾಳೆ.

*******

ಈ ಸಾಕ್ಷಿಯಾಗುವುದು, ಈ ಸಹನೆ ಇವೇ ಹತ್ತನೆಯ ಕವಿತೆ ’ಶಿಲುಬೆ’ಯ ಕೇಂದ್ರದಲ್ಲಿರುವ ಸಂಗತಿಗಳು. ಇಲ್ಲಿ ಅಖ್ಮತೋವಾ ಶಿಲುಬೆಗೇರಿದ ಯೇಸುವಿನ ಮುಂದೆ ನಿಂತಿರುವ ತಾಯಿ ಮೇರಿಯ ಚಿತ್ರವನ್ನು ಮೂಡಿಸಿದ್ದಾಳೆ. ಮಾತೆ/ಸಾಕ್ಷಿ ಪ್ರಜ್ಞೆಯ ಪರಮ ನಿದರ್ಶನವಾಗಿದ್ದಾಳೆ ಮೇರಿ. ಭೀತಿಯ ಯುಗದಲ್ಲಿ ಪ್ರಾಣ ತೆತ್ತ ಎಲ್ಲ ಮಕ್ಕಳ ತಾಯಂದಿರೊಡನೆ ಮೇರಿಯನ್ನು ಸಮೀಕರಿಸುವುದಕ್ಕೆ ರಶಿಯನ್ ಆರ್ಥಡಾಕ್ಸ್ ಚರ್ಚ್‌ನ ಉಲ್ಲೇಖ ಒದಗಿ ಬಂದಿದೆ. ’ನನ್ನನ್ನು ಗೋರಿಯಲ್ಲಿ ಕಂಡಾಗ ಅಳಬೇಡ ಅಮ್ಮಾ’ ಎನ್ನುವುದು ಈ ಉಕ್ತಿಯ ಸರಿಯಾದ ರೂಪ. ಆದರೆ ಗುಲಾಗ್ ಯಾತನಾಶಿಬಿರಗಳಲ್ಲಿ ಪ್ರಾಣ ಕಳೆದುಕೊಂಡವರ ಗೋರಿ ಎಲ್ಲಿರುತ್ತಿತ್ತೋ ಯಾರಿಗೂ ಗೊತ್ತಾಗುತ್ತಿರಲಿಲ್ಲ, ತಾಯಂದಿರು ಮಕ್ಕಳ ಗೋರಿಯ ಹತ್ತಿರ ಹೋಗಿ ಅಳುವುದು ಸಾಧ್ಯವೂ ಇರಲಿಲ್ಲ. ಹಾಗಾಗಿ ಕವಿ ಅರ್ಥಡಾಕ್ಸ್ ಚರ್ಚ್‌ನ ಪಠ್ಯದ ಮಾತನ್ನು ’ಮಣ್ಣಿಗಿಟ್ಟಿರುವ ನನಗಾಗಿ ಅಳಬೇಡ, ಅಮ್ಮಾ’ ಎಂದು ಬದಲಿಸಿಕೊಂಡಿದ್ದಾಳೆ.

’ಶಿಲುಬೆ’ ಎಂಬ ಈ ಕವಿತೆಯಲ್ಲಿ ಅಭಿನೀತವಾಗುವುದು ಮನುಷ್ಯ ಬದುಕಿನ ನಾಟಕವೇ ಹೊರತು ಧಾರ್ಮಿಕ, ತಾತ್ವಿಕ ಸಂಗತಿಗಳಲ್ಲ. ಯೇಸುವಿನ ’ತಂದೆಯೇ, ನನ್ನನ್ನೇಕೆ ತೊರೆದೆ?’ ಎಂಬ ಪ್ರಶ್ನೆಗೆ ಉತ್ತರ ದೊರೆಯಲಿಲ್ಲ; ಇಲ್ಲಿ, ಸಾಯುತ್ತಿರುವ ಮಗ ಬಯಸುವುದು ಪವಾಡವನ್ನಲ್ಲ, ಶಕುನವನ್ನಲ್ಲ, ಮನುಷ್ಯ ಸಂಪರ್ಕದ ಸರಳ ನೆಮ್ಮದಿಯನ್ನು, ಹಾಗಾಗಿ ತಾಯಿಯತ್ತ ತಿರುಗಿ ಅಳಬೇಡಮ್ಮಾ ಎನ್ನುತ್ತಾನೆ. ಒಂಬತ್ತನೆಯ ಕವಿತೆಯಲ್ಲಿಯ ಹಾಗೆಯೇ ಇಲ್ಲಿಯೂ ನಿರೂಪಕಿ ತನ್ನ ಮಗನ ಮಾತುಗಳ ನೆನಪನ್ನು ಗಟ್ಟಿಯಾಗಿ ಹಿಡಿದಿದ್ದಾಳೆ. ಯೇಸುವು ಮೇರಿಗೆ ನೇರವಾಗಿ ಹೇಳುವ ಮಾತು, ಆಕೆ ತನ್ನ ಆಸರೆಯೂ ಹೌದು, ಸಾಕ್ಷಿಯೂ ಹೌದು ಅನ್ನುವುದನ್ನು ಸೂಚಿಸುತ್ತದೆ. ಅಳುವ ಮೇರಿ ಮ್ಯಾಗ್ದಲೀನಳ ಚೀರಾಟ ಮೊದಲನೆಯ ಕವಿತೆಯಲ್ಲಿ ಕ್ರೆಮ್ಲಿನ್ ಗೋಡೆಯ ಬಳಿ ಹೆಂಗಸರ ಅಳುವಿನ ಪ್ರಸ್ತಾಪವಾಗಿತ್ತಲ್ಲ ಅದನ್ನು ನೆನಪಿಗೆ ತರುತ್ತದೆ. ಜಾನ್ ದುಃಖದಲ್ಲಿ ಕಲ್ಲಾದ ಎಂಬ ಮಾತು ಏಳನೆಯ ಕವಿತೆಯಲ್ಲಿ ನಿರೂಪಕಿ ತನ್ನ ಹೃದಯ ಕಲ್ಲಾಗಲಿ ಎಂದು ಕೋರಿದ್ದನ್ನು ನೆನಪಿಗೆ ತರುತ್ತದೆ. ಮೇರಿ ಮ್ಯಾಗ್ದಲೀನ್ ಮತ್ತು ಜಾನ್ ಇಬ್ಬರೂ ಅಂತಿಮ ವೇದನೆಯನ್ನು ನೋಡಲಾಗದೆ ಎದುರಿಸಲಾಗದೆ ಒಳಸರಿದುಕೊಳ್ಳುವವರು. ಅಳುವ ತಾಯಿಯನ್ನು ನೋಡಲಾರರು ಅವರು. ಆದರೂ ಅವರು ನೋಡಲಾಗದ್ದನ್ನೂ ಸಹಿಸುವ ಗಟ್ಟಿಗಿತ್ತಿ ತಾಯಿ.

******

ಸಾಕ್ಷಿಯಾಗಿರುವ ನಿರೂಪಕಿ ನೋವಿನಿಂದ ಬಿಡುಗಡೆ ಪಡೆಯುವುದಿಲ್ಲ. ಆದರೆ ಆ ನೋವಿನಲ್ಲಿ ಬದುಕಿನ ಉದ್ದೇಶ, ಸ್ಥಿರತೆಗಳನ್ನು ಕಂಡುಕೊಳ್ಳುತ್ತಾಳೆ. ’ಸಮಾರೋಪ’ ಕವಿತೆಯ ಮೊದಲ ಭಾಗದಲ್ಲಿ ಈ ನೋವು ಸಮೀಪದ್ದೂ ಹೌದು ದೂರದ್ದೂ ಹೌದು. ಅತ್ಯಂತ ಚಿತ್ರವತ್ತಾದ ಈ ಸಾಲುಗಳು ವೇದನೆಯನ್ನಲ್ಲ ವೇದನೆಯ ಪರಿಣಾಮಗಳನ್ನು ಖಚಿತವಾದ ವಿವರಗಳಲ್ಲಿ ನೀಡುತ್ತವೆ. ಕುಗ್ಗಿ, ಹಳ್ಳ ಬಿದ್ದು, ಮೂಳೆ ಕಾಣುವ ಮುಖ, ನೋವಿನ ಅಕ್ಷರಗಳ ಸಹಿ ಬಿದ್ದಿರುವ ಕೆನ್ನೆ ಹಾಳೆ, ಒಂದೇ ರಾತ್ರಿಯಲ್ಲಿ ನೆರೆತ ಕೂದಲು, ಶುಷ್ಕ ನಗು ಇವೆಲ್ಲವೂ ದಾರುಣ ಅನುಭವ ಉಳಿಸಿ ಹೋಗಿರುವ ಗುರುತುಗಳು. ನೋವು ಕಳೆದಿದೆ, ನಿಜ; ಆದರೂ ನೋವು ಇದ್ದೇ ಇದೆ. ಯಾಕೆಂದರೆ ಆ ನೋವಿನಿಂದಾದ ಪರಿಣಾಮ ಶಾಶ್ವತವಾದದ್ದು.

ಕವಿ-ಸಾಕ್ಷಿ ಈಗ ತನ್ನದೇ ನೋವಿಗೆ ಶರಣಾದವಳಲ್ಲ, ಆ ನೋವಿನಿಂದ ಕುರುಡಾದವಳೂ ಅಲ್ಲ. ಈಗ ಆಕೆ ತನ್ನ ಸುತ್ತಲೂ ಇರುವ ಇತರ ಹೆಂಗಸರ ನೋವು ದುಃಖಗಳ ಬಗ್ಗೆ ಸಂವೇದನೆ ಬೆಳೆಸಿಕೊಂಡವಳು. ತನ್ನ ಮಗನ ನೆನಪನ್ನು ಸ್ಥಿರಗೊಳಿಸಿಕೊಂಡ ಹಾಗೆಯೇ ಅಕಸ್ಮಾತ್ ಗೆಳೆಯರಾದರಲ್ಲ ಅವರ ಬಗ್ಗೆಯೂ ಕವಿ-ಸಾಕ್ಷಿಯ ನಿಷ್ಠೆ ದೃಢವಾಗುತ್ತದೆ. ಕೇವಲ ತನ್ನ ಪ್ರೀತಿಪಾತ್ರರ ಬಗ್ಗೆ ಮಾತ್ರ ಕಾಳಜಿ, ದುಃಖ ಇರುವ ಒಬ್ಬೊಬ್ಬರೂ ಕವಿ-ಸಾಕ್ಷಿಯ ಮೂಲಕ ಸಮುದಾಯವಾಗುತ್ತಾರೆ. ಎರಡನೆಯ ಭಾಗದಲ್ಲಿ ಬರುವ ’ನೆನೆಯುವ ಹೊತ್ತು’ ಎಂಬ ನುಡಿಯು ದಿವಂಗತರ ಆತ್ಮಗಳಿಗೆ ಸಲ್ಲಿಸಲಾಗುತ್ತಿದ್ದ ಸಾಂಪ್ರದಾಯಿಕ ಪ್ರಾರ್ಥನೆಯನ್ನು ಸೂಚಿಸುತ್ತದೆ. ತೀರಿಕೊಂಡ ಒಬ್ಬೊಬ್ಬರ ಹೆಸರನ್ನೂ ಪ್ರಾರ್ಥನೆಯ ಹೊತ್ತಿನಲ್ಲಿ ಹೇಳುವ ಪದ್ಧತಿಗೆ ಈಗ ಅವಕಾಶವಿಲ್ಲ; ಸತ್ತವರ ಹೆಸರ ಪಟ್ಟಿಯನ್ನು ಜಪ್ತಿ ಮಾಡಿದ್ದಾರೆ. ಒಬ್ಬೊಬ್ಬರ ವೈಯಕ್ತಿಕ ನೆನಪೂ ಅಸಾಧ್ಯವಾಗಿ ಕವಿಯು ನೆನಪಿನಲ್ಲುಳಿದ ಮಾತು ಬಳಸಿ ಶಬ್ಬಗಳ ಹೆಣಬಟ್ಟೆ ನೇಯ್ದಿದ್ದಾಳೆ. ರಶಿಯನ್ ಭಾಷೆಯ ಪೊಕ್ರೊವ್ ಎಂಬ ಮಾತಿಗೆ ಸೆರಗು, ಹೊದಿಕೆ ಎಂಬರ್ಥ ಮಾತ್ರವಲ್ಲದೆ ರಶಿಯನ್ ಅರ್ಥಡಾಕ್ಸ್ ಚರ್ಚಿನ ಉತ್ಸವದ ಸಮಯದಲ್ಲಿ ಕನ್ಯೆ ಮೇರಿಗೆ ಹೊದಿಸುತಿದ್ದ ಹೊಳಪಿನ ಚಾದರ ಎಂಬರ್ಥವೂ ಇದೆಯಂತೆ. ಅದು ಭಕ್ತರೆಲ್ಲರನ್ನು ರಕ್ಷಿಸುವ ಚಾದರ. ಹಾಗೆಯೇ ಕವಿಯ ಶಬ್ದ ಚಾದರ ದುಃಖಾರ್ತರಾದ ಇಡೀ ಸ್ತ್ರೀ ಸಮೂಹ ಹೊದೆಯಬಹುದಾದ ರಕ್ಷಣೆಯೂ ಹೌದು, ಸತ್ತವರಿಗಾಗಿ ಅಳುವವರ ನೆನಪೂ ಹೌದು.

ವೇದನೆ ಪಡುತ್ತಿರುವ ಹೆಂಗಸರು ವಿಸ್ಮೃತಿಗೆ ಗುರಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕವಿ-ಸಾಕ್ಷಿಯದ್ದು. ಸುತ್ತಲ ಬದುಕು ಕಾಲಕ್ರಮದಲ್ಲಿ ಬದಲಾಗುವುದು, ದುಃಖಿತರ ನೆನಪನ್ನು ಒರೆಸಿಬಿಡುವುದು ಖಚಿತ; ಆದರೂ ಕವಿ-ಸಾಕ್ಷಿ ತಾನು ಮಾತ್ರ ಬದಲಾಗದೆ ಉಳಿಯಲು ಬಯಸುತ್ತಾಳೆ. ಅವಳ ಮಟ್ಟಿಗೆ ಕಾಲವೆನ್ನುವುದು ಸೆರೆಮನೆಯ ಮುಂದಿನ ಇಷ್ಟಗಲ ಜಾಗದಲ್ಲಿ ಸ್ಥಿರವಾಗಿ ನಿಂತುಬಿಟ್ಟಿದೆ. ಹಾಗಾಗಿ ಭೀತಿಯುಗದ ದುಃಖದ ನೆನಪಿನ ತೀವ್ರತೆ ಕಡಿಮೆಯಾಗುವುದೇ ಇಲ್ಲ. ಗತಕಾಲದಲ್ಲಿ ಅವಿತಿಟ್ಟುಕೊಂಡು ವರ್ತಮಾನದ ನೋವನ್ನು ಮರೆಯಲು ಆಗದು ನಿರೂಪಕಿಯ ಬಾಲ್ಯ ಕಾಲದ ಕಡಲ ದಂಡೆ, ಯೌವನ ಕಾಲದ ಅತೃಪ್ತ ಭೂತ ಅಲೆಯುವ ಅರಸರ ಉದ್ಯಾನ ಇವೆರಡೂ ಭಾವನಾತ್ಮಕವಾಗಿ ಬಲು ದೂರದ, ಕೈಗೆಂದೂ ಎಟುಕದ ಸಂಗತಿಗಳು. ತೆಗೆಯದ ಚಿಲುಕದ, ಜಗ್ಗದ ಬಾಗಿಲಿನ ವರ್ತಮಾನವೊಂದೇ ಅವಳ ನೋವನ್ನು ಕೊನೆಯಿರದ ಹಾಗೆ ಹಿಗ್ಗಿಸಿವೆ. ಹಿಂದೊಮ್ಮೆ ಅನಿಸಿದ್ದಂತೆ ಸಾವಿನಲ್ಲಿ ಬಿಡುಗಡೆ ಕಾಣಬಹುದಿತ್ತೋ ಏನೋ. ಈಗ ಆಕೆ ಪರಮತ್ಯಾಗವನ್ನು ಮರೆಯುತ್ತಾಳೆ. ಬಿಡುಗಡೆಯ ಎಲ್ಲ ದಾರಿಗಳನ್ನೂ ಧಿಕ್ಕರಿಸಿ ಇಲ್ಲೇ ಇದ್ದು, ಬದುಕಿನಾಚೆಗೆ ಸಾಗಿದವರನ್ನು ನೆನೆಯುವ ಗಟ್ಟಿಗಿತ್ತಿಯಾಗುತ್ತಾಳೆ ಎಂದೂ ಬದಲಾಗದ ಎಂದೂ ಚಲಿಸದ ಸ್ಥಿರ ವಿಗ್ರಹವಾಗುತ್ತಾಳೆ (ರಶಿಯನ್ ಭಾಷೆಯಲ್ಲಿ ವಿಗ್ರಹ ಅನ್ನುವುದಕ್ಕೆ ಪಮ್ಯಕ್-ನಿಕ್ ಎಂಬ ಶಬ್ದವಿದೆಯಂತೆ, ಅದರಲ್ಲಿ ಪಮ್ಯಕ್ ಅನ್ನುವುದು ಸ್ಮರಣೆಯನ್ನು ಸೂಚಿಸುತ್ತದಂತೆ). ಬಲಿಯಾದವರೆಲ್ಲರ ನೆನಪಾಗಿ ಆಕೆ ಉಳಿಯುತ್ತಾಳೆ. ನಿಸರ್ಗದ ಹೊಸ ಬದುಕು ತೊಡಗುವ ಪ್ರತಿ ಚೈತ್ರದಲ್ಲೂ ಅವಳ ಕಂಬನಿ ಹರಿದು ಎಂದೂ ಕರಗದ ದುಃಖದಂತಿರುವ ಹಿಮದೊಡನೆ ಸೇರುತ್ತದೆ. ಬದುಕು ಸಾಗುತ್ತಿರುತ್ತದೆ.

ಅಖ್ಮತೋವಾ ಕಾಯುತ್ತ ನಿಂತಿದ್ದ ಎಡೆಯಲ್ಲಿ ಕಂಚಿನ ವಿಗ್ರಹ ಇಲ್ಲ. ಆದರೆ ಪ್ರಾಚೀನ ಸಾಹಿತ್ಯವನ್ನು ಬಲ್ಲ ಅಖ್ಮತೋವಳಿಗೆ ಹೊರೇಸನೆಂಬ ಪ್ರಾಚೀನ ’ಕಂಚಿಗಿಂತ ಹೆಚ್ಚು ಕಾಲ ಉಳಿದಿರುವ ನುಡಿ ಸ್ಮಾರಕ ನಿರ್ಮಿಸಿದ್ದೇನೆ’ ಎಂದು ತನ್ನ ಕವಿತೆಯ ಬಗ್ಗೆಯೇ ಹೇಳಿಕೊಂಡ ಮಾತು ಗೊತ್ತಿತ್ತು. ’ಶಾಂತಿಗೀತೆ’ ಅಂಥದೊಂದು ನುಡಿ ಸ್ಮಾರಕ; ಸತ್ತವರನ್ನು ದುಃಖದಿಂದಲೂ ನಿಷ್ಠೆ ಪ್ರೀತಿಗಳಿಂದಲೂ ದಿಟ್ಟಿಸುತ್ತ ನಿಂತೇ ಇರುವ ಸ್ಮಾರಕ.

(ಇಲ್ಲಿಗೆ ಶಾಂತಿಗೀತೆಗೊಂದು ಪ್ರವೇಶ ಪ್ರಬಂಧ ಮುಕ್ತಾಯಗೊಂಡಿದೆ)

ಪ್ರೊ. ಓ ಎಲ್ ನಾಗಭೂಷಣಸ್ವಾಮಿ

ಪ್ರೊ. ಓ ಎಲ್ ನಾಗಭೂಷಣಸ್ವಾಮಿ
ನಾಗಭೂಷಣಸ್ವಾಮಿ ಖ್ಯಾತ ಬರಹಗಾರರು. ’ನನ್ನ ಹಿಮಾಲಯ’, ’ಯುದ್ಧ ಮತ್ತು ಶಾಂತಿ’ (ವಾರ್ ಅಂಡ್ ಪೀಸ್), ನೆರೂಡ ನೆನಪುಗಳು (ಪಾಬ್ಲೋ ನೆರೂಡ ಆತ್ಮಕತೆ), ’ಬೆಂಕಿಗೆ ಬಿದ್ದ ಬಯಲು ಮತ್ತು ಪೆದ್ರೋ ಪರಾಮೋ’ (ಹ್ವಾನ್ ರುಲ್ಫೋನ ಕಥೆಗಳು ಮತ್ತು ಕಾದಂಬರಿ) ಅವರ ಪ್ರಕಟಿತ ಪುಸ್ತಗಳಲ್ಲಿ ಕೆಲವು. ’ಕ್ರೈಂ ಅಂಡ್ ಫನಿಶ್ಮೆಂಟ್’ ಅನುವಾದ ಪ್ರಕಟಣೆಗೆ ಸಿದ್ಧವಾಗಿದೆ.


ಇದನ್ನೂ ಓದಿ: ಅನ್ನಾ ಅಖ್ಮತೋವಾರ ಶಾಂತಿಗೀತೆಗೊಂದು ಪ್ರವೇಶ: ಭಾಗ-1

ಇದನ್ನೂ ಓದಿ: ಹೊಸ ಅನುವಾದ; ಅನ್ನಾ ಅಖ್ಮತೋವಾರ ಶಾಂತಿಗೀತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...