Homeನ್ಯಾಯ ಪಥಮದ್ದುಂಟೆ ರಾಜಕೀಯ ಧ್ರುವೀಕರಣಕ್ಕೆ?

ಮದ್ದುಂಟೆ ರಾಜಕೀಯ ಧ್ರುವೀಕರಣಕ್ಕೆ?

- Advertisement -
- Advertisement -

ಜಗತ್ತಿನ ಹಲವು ಪ್ರಜಾಪ್ರಭುತ್ವಗಳಿಗೆ ಮಾರಕವಾಗಿ ಪರಿಣಮಿಸಿರುವ ರಾಜಕೀಯ ಧ್ರುವೀಕರಣದ ಬಗ್ಗೆ ಹಲವು ವಲಯಗಳಲ್ಲಿ ಇಂದು ಮುಖ್ಯ ಚರ್ಚೆಯಾಗುತ್ತಿದೆ. ಪ್ರಮುಖವಾಗಿ ಎರಡು ಪ್ರಧಾನ ಪಕ್ಷಗಳ ಪ್ರಜಾಪ್ರಭುತ್ವವಾದ ಯುಎಸ್‌ಎನಲ್ಲಿ ಮಾತ್ರ ಒಂದು ಕಾಲದಲ್ಲಿ ಹೆಚ್ಚು ಸಮಸ್ಯಾತ್ಮಕವಾಗಿ ಕಂಡಿದ್ದ ಈ ಪೊಲಿಟಿಕಲ್ ಪೋಲರೈಸೇಷನ್ ಇಂದು ಯೂರೋಪ್ ಮತ್ತು ಏಷಿಯಾದ ಹಲವು ರಾಷ್ಟ್ರಗಳಲ್ಲಿ ಹೆಮ್ಮರವಾಗಿ ಬೆಳೆದು ಪ್ರಜಾಪ್ರಭುತ್ವವನ್ನೆ ಅಣಕಿಸುತ್ತಿದೆ ಮತ್ತು ಅಲುಗಾಡಿಸುತ್ತಿದೆ. ಈ ಧ್ರುವೀಕರಣ ಹೆಚ್ಚಿರುವ ದೇಶಗಳಲ್ಲಿ ತೀವ್ರ ಸಂಪ್ರದಾಯವಾದಿ ಅಥವಾ ಬಲಪಂಥೀಯ ಪಾಪ್ಯುಲಿಸ್ಟ್ ನಾಯಕರು ತಲೆ ಎತ್ತುತ್ತಿರುವುದು; ಮತ್ತು ಸರ್ವಾಧಿಕಾರಿ ಧೋರಣೆಯ ನಾಯಕತ್ವವನ್ನು ತಮ್ಮದಾಗಿಸಿಕೊಂಡು, ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಬಲಹೀನಗೊಳಿಸುತ್ತಿರುವುದು ಸರ್ವೇಸಾಮಾನ್ಯ ಸಂಗತಿಯಾಗಿದೆ.

ಬಹಳಷ್ಟು ರಾಷ್ಟ್ರಗಳಲ್ಲಿ ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇನು ಬುಡಮೇಲು ಮಾಡದೆ, ಆಯಾ ಸಂವಿಧಾನಗಳನ್ನು ’ಅತಿ ಜಾಣ್ಮೆಯಲ್ಲಿ ಬಳಸಿಕೊಳ್ಳುವ ಮೂಲಕವೋ ಅಥವಾ ತಿರುಚುವ ಮೂಲಕವೋ ಅಂತಹ ಅಧಿಕಾರವನ್ನು ಸ್ಥಾಪಿಸುತ್ತಿರುವುದು ಈ ಸಮಸ್ಯೆಯನ್ನು ನೇರವಾಗಿ ಎದುರಿಸಲು ಸಾಧ್ಯವಾಗದಂತಹ ಪ್ರತಿಕೂಲ ಪರಿಸ್ಥಿತಿ ನಿರ್ಮಾಣವಾಗಿದೆ.

ಯೂರೋಪಿನ ರಾಷ್ಟ್ರಗಳಲ್ಲಿ ಒಂದಾದ ಹಂಗರಿಯ ಪ್ರಧಾನಿ ವಿಕ್ಟೋರ್ ಓರ್ಬಾನ್ ಅಂತಹ ’ಸರ್ವಶಕ್ತ’ ನಾಯಕರಲ್ಲಿ ಅಗ್ರಸಾಲಿನಲ್ಲಿ ನಿಲ್ಲುತ್ತಾನೆ. 2010ರಿಂದ ನಿರಂತರವಾಗಿ ಅಧಿಕಾರದಲ್ಲಿರುವಂತೆ ನೋಡಿಕೊಳ್ಳಲು ರಾಜಕೀಯ ಧ್ರುವೀಕರಣವನ್ನು ಇನ್ನಿಲ್ಲದೆ ಬಳಸಿಕೊಂಡವನೀತ; ಕೋರ್ಟ್‌ಗಳಿಂದ ಹಿಡಿದು ಯಾವುದೇ ಪ್ರಜಾಪ್ರಭುತ್ವ ಸಂಸ್ಥೆ ತನ್ನ ಅಧಿಕಾರ ಮತ್ತು ನೀತಿಗಳನ್ನು ಟೀಕಿಸಿದರೆ ಅವುಗಳನ್ನು ಡಿಲೆಜಿಟಮೈಸ್ ಮಾಡುವ ಅಸ್ತ್ರಗಳನ್ನು ಸದಾ ಬಗಲಲ್ಲಿ ಇರಿಸಿಕೊಂಡವನು; ತನ್ನನ್ನು ವಿರೋಧಿಸಿದ ಸರ್ಕಾರೇತರ ಸಂಸ್ಥೆಗಳ ಮೇಲೆ ಅಧಿಕಾರ ದುರ್ಬಳಕೆ ಮಾಡಿ ಅವುಗಳನ್ನು ಬಾಯಿ ಮುಚ್ಚಿಸಿದವನು; ಹೀಗೆ ಇಂದು ಓರ್ಬಾನ್ ಅಮೆರಿಕದ ಟ್ರಂಪ್ ಅಭಿಮಾನಿಗಳು ಕೂಡ ಎದುರುನೋಡುವ ಮುಖಂಡನಾಗಿ ಬೆಳೆದುನಿಂತಿದ್ದಾನೆ.

ಜನರನ್ನು ಪೋಲರೈಸ್ ಮಾಡಲು ಓರ್ಬಾನ್ ಬಳಸಿಕೊಂಡದ್ದು ಎಂದಿನಂತೆ ಬಲಪಂಥೀಯ ನಾಯಕರು ಸೆನ್ಸೇಷನಲೈಸ್ ಮಾಡುವಂತಹ ಸಂಗತಿಗಳನ್ನೇ! ಯುರೋಪಿನ ಇತರ ದೇಶಗಳಿಗೆ ಹೋಲಿಸಿದರೆ ಹಂಗರಿಗೆ ವಲಸೆ ಬರುವವರ ಸಂಖ್ಯೆ ಅತಿ ಕಡಿಮೆ ಪ್ರಮಾಣದಲ್ಲಿದ್ದರೂ, ವಲಸೆ ವಿರೋಧಿ ನೀತಿಯನ್ನು ಮುಂದುಮಾಡಿದ; ಸಿರಿಯಾದಲ್ಲಿ ನಡೆದ ಯುದ್ಧದಿಂದ ನಿರಾಶ್ರಿತರಾಗಿ ಬಂದಿದ್ದ ಅಲ್ಪಸಂಖ್ಯೆಯ ಜನಸಮೂಹದ ಮೇಲೆ ದಮನಕಾರಿ ನೀತಿಗಳ ಪ್ರಹಾರ ಮಾಡಿದ. ಇಸ್ಲಾಮಫೋಬಿಯಾವನ್ನು ಉಪಯೋಗಿಸಿಕೊಂಡ.

ತನ್ನದು ಕ್ರಿಶ್ಚಿಯನ್ ಸಾಂಪ್ರದಾಯಿಕ ದೇಶವೆಂದು ಸಾರಿ, ಗೇ ಹಕ್ಕುಗಳ ವಿರುದ್ಧ ಸಮರ ಸಾರಿದ. ಗೇ ಹಕ್ಕುಗಳನ್ನು ಮಾನ್ಯ ಮಾಡಿದ ಸಂಸ್ಥೆಗಳು ಮತ್ತು ಕೋರ್ಟ್‌ಗಳನ್ನೇ ಗೇಲಿ ಮಾಡಿದ. ಎಲ್ಲ ದೇಶಗಳ ಬಲಪಂಥೀಯರ ವರಸೆಯಂತೆ ಹಂಗರಿ ಅಲ್ಲಿನ ನಾಗರಿಕರಿಗೆ ಮಾತ್ರ ಸೇರಿದ್ದು ಎಂದು ದೊಡ್ಡಗಂಟಲಲ್ಲಿ ಪ್ರತಿಪಾದಿಸುವುದನ್ನು ಮುಂದುವರಿಸಿದ. ಪ್ರಜಾಪ್ರಭುತ್ವದ ಸಂಸ್ಥೆಗಳನ್ನು, ಅಕೆಡೆಮಿಕ್ ಅಧ್ಯಯನಗಳನ್ನು ನಿಸ್ತೇಜಗೊಳಿಸಿ, ಎಲ್ಲಾ ಚುನಾವಣೆಗಳಲ್ಲಿ ತನ್ನ ಬಲಪಂಥೀಯ ಫಿಡೆಸ್ ಪಕ್ಷವೇ ಗೆಲ್ಲುವಂತಹ ವಾತಾವರಣ ನಿರ್ಮಿಸಿಕೊಂಡಿರುವುದಕ್ಕೆ ಓರ್ಬಾನ್ ಇಂದು ಜಗತ್ತಿನ ಹಲವು ಸಂಪ್ರದಾಯವಾದಿ ಪಕ್ಷಗಳು ಎದುರು ನೋಡುವ ಮುಖಂಡನಾಗಿ ಬೆಳೆದಿದ್ದಾನೆ. ಇಂದು ಹಂಗರಿಯನ್ನು ಸಂಪ್ರದಾಯವಾದಿ ರಾಷ್ಟ್ರವಾಗಷ್ಟೇ ಅಲ್ಲ ಇಲ್ಲಿಬರಲ್ ದೇಶ ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಮುಖಂಡನೀತ!

ಈ ಪೋಲರೈಸೇಷನ್ ಯುರೋಪಿನಾದ್ಯಂತ ಒಂದೇ ರೀತಿಯಾಗಿ ಬೆಳೆದಿದೆಯೇ ಎಂದರೆ ಉತ್ತರ ಏಕರೂಪವಾದುದೇನಲ್ಲ. ಉದಾಹರಣೆಗೆ ಜರ್ಮನಿಯನ್ನೇ ತೆಗೆದುಕೊಂಡರೆ, ಅಲ್ಲಿ ಈ ಹಿಂದೆ ಚಾನ್ಸಲರ್ ಆಗಿದ್ದ ಅಂಗೆಲಾ ಮೆರ್ಕೆಲ್ ಅವರು ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ ಎಂಬ ಸಂಪ್ರದಾಯವಾದಿ ಪಕ್ಷಕ್ಕೆ ಸೇರಿದವರಾಗಿದ್ದರೂ ವಲಸೆಯ ಬಗ್ಗೆ ಉದಾರ ನೀತಿಯನ್ನು ಹೊಂದಿದ್ದರು. ಲಕ್ಷಾಂತರ ನಿರಾಶ್ರಿತರಿಗೆ ಆಶ್ರಯ ಒದಗಿಸುವ ನೀತಿಗೆ ಕಾರಣರಾಗಿದ್ದರು. ಇದು ಅಮೆರಿಕ ಸಂಪ್ರದಾಯವಾದಿ ರಿಪಬ್ಲಿಕನ್ನರ ಧ್ಯೇಯಕ್ಕೆ ವಿರುದ್ಧವಾಗಿದ್ದು ಮೆರ್ಕೆಲ್ ಅವರನ್ನು ದೂಷಿಸುವಂತೆ ಮಾಡಿತ್ತು.

ಜರ್ಮನಿಯಲ್ಲಿ ಈ ಧ್ರುವೀಕರಣ ಕಡಿಮೆ ಪ್ರಮಾಣದಲ್ಲಿ ಇರುವುದಕ್ಕೆ ನಾಜಿ ಆಡಳಿತದ ಟ್ರಾಮಾವೂ ಕಾರಣವಿರಬಹುದು ಮತ್ತು ಅಂತಹ ಧ್ರುವೀಕರಣಕ್ಕೆ ಇಳಿಯುವ ಮುಖಂಡನನ್ನು ಜನರು ಒಪ್ಪಲು ನಿರಾಕರಿಸಬಹುದು ಎಂಬಂತಹ ಅಧ್ಯಯನಗಳು ನಡೆಯುತ್ತಲೇ ಇವೆ. ಜರ್ಮನಿ ಒಂದು ಕಡೆಗಾದರೆ, ಯುರೋಪಿಯನ್ ಯೂನಿಯನ್‌ನಿಂದ ಹೊರಬರುವ ಜನಾಭಿಮತ ಬ್ರೆಕ್ಸಿಟ್‌ನಲ್ಲಿ ಇದೇ ಧ್ರುವೀಕರಣದ ಮೊರೆಹೋಗಿ ಜನಪ್ರಿಯರಾಗಿದ್ದ ಯುಕೆಯ ಬೋರಿಸ್ ಜಾನ್ಸನ್, ಕೋವಿಡ್ ನಿಯಂತ್ರಣದಲ್ಲಿ ವಿಫಲರಾಗಿದ್ದರಿಂದ ಆ ಜನಪ್ರಿಯತೆ ಕುಸಿದುಬಿದ್ದಿತ್ತು.

ಒಂದು ಸರ್ವೇ ಪ್ರಕಾರ ಬೋರಿಸ್ ಜಾನ್ಸನ್ ಅವರನ್ನು ಅಪೇಕ್ಷಿಸುವ ಪ್ರಮಾಣ ಏಪ್ರಿಲ್ 2020ಕ್ಕೆ +29% ಇದ್ದರೆ, ಕೊರೊನಾ ನಂತರದಲ್ಲಿ ಅದು -52%ಗೆ ಕುಸಿದಿತ್ತು ಎಂದು ಫೈನಾನ್ಷಿಯಲ್ ಟೈಮ್ಸ್‌ನ ಒಂದು ವರದಿ ದಾಖಲಿಸುತ್ತದೆ. ಅದನ್ನು ಡಿಪೋಲರೈಸೇಶನ್ ಎಂದು ಕೂಡ ಬಣ್ಣಿಸುತ್ತದೆ. ಜರ್ಮನಿಯಲ್ಲಿ ಕಳೆದ ವರ್ಷ ಸೋಷಿಯಲಿಸ್ಟ್ ಧೋರಣೆಯ ಓಲಾಫ್ ಶೋಲ್ಜ್ ಅಧಿಕಾರಕ್ಕೆ ಬಂದು ಲಿಂಗ ಸಮಾನತೆಯ ಸಂಪುಟ ರಚಿಸಿದ್ದನ್ನು ಈ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳಬಹುದು. ಬೋರಿಸ್ ಜಾನ್ಸನ್ ಈಗ ಯುಕೆಯ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಪ್ರಧಾನಿಯ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದೆ. ಪ್ರಧಾನಿಯಾಗಲಿರುವ ಮತ್ತೊಬ್ಬ ಕನ್ಸರ್ವೆಟಿವ್ ಮುಖಂಡ ಜನರನ್ನು ಪೋಲರೈಸ್ ಮಾಡುವುದರಲ್ಲಿ ಬೋರಿಸ್ ಜಾನ್ಸನ್ ಗಿಂತಲೂ ತೀವ್ರವಾಗಿರುತ್ತಾರೋ ಇಲ್ಲವೆ ಮೆದುವಾಗಿರುತ್ತಾರೋ ಕಾದು ನೋಡಬೇಕಿದೆ.

Photo Courtesy: Business today

ಅಲ್ಲದೆ ಹಲವು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಈ ಪೋಲರೈಸ್ ಮಾಡುವ ಪಾಪ್ಯುಲಿಸ್ಟ್ ಬಲಪಂಥೀಯ ನಾಯಕರನ್ನು ಸೋಲಿಸಿ, ಎಲ್ಲರನ್ನು ಒಳಗೊಳ್ಳುವ ಭರವಸೆ ನೀಡುತ್ತಿದ್ದ, ಮಾನವ ಹಕ್ಕುಗಳ, ಪರಿಸರ ಕಾಳಜಿ-ಕ್ಲೈಮೇಟ್ ಚೇಂಜ್ ಬಗ್ಗೆ ಧ್ವನಿಯೆತ್ತುತ್ತಿದ್ದ, ಅಲ್ಪಸಂಖ್ಯಾತರು ಹಾಗೂ ನಿರಾಶ್ರಿತರ ಪರವಾದ ನೀತಿಗಳನ್ನು ಪ್ರತಿಪಾದಿಸುತ್ತಿದ್ದ ನಾಯಕರು, ಪಕ್ಷಗಳು ಅಧಿಕಾರಕ್ಕೆ ಬರುತ್ತಿವೆ.

ಚಿಲಿಯಲ್ಲಿ ಅಧ್ಯಕ್ಷರಾಗಿ ಮಿಲೇನಿಯಲ್ ಗೇಬ್ರಿಯಲ್ ಬೋರಿಕ್ ಅಧಿಕಾರ ಸ್ವೀಕರಿಸಿದ್ದು ತುಸು ಹಳೆಯ ಉದಾಹರಣೆಯಾದರೆ, ಕೊಲಂಬಿಯಾದಲ್ಲಿ ಪ್ರಧಾನಿಯಾಗಿ ಗುಸ್ತಾವೋ ಪೆಟ್ರೋ ಪ್ರಧಾನಿಯಾಗಿದ್ದು ತಾಜಾ ಉದಾಹರಣೆ. ಬ್ರೆಜಿಲ್‌ನಲ್ಲಿ ಕೂಡ ಬಲಪಂಥೀಯ ಬೋಲ್ಸೋನಾರೋನ ಜನಪ್ರಿಯತೆ ಕೊರೊನಾ ನಂತರದಲ್ಲಿ ತೀವ್ರವಾಗಿ ಕುಸಿದಿದ್ದು ಮುಂದಿನ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುವ ಮುನ್ಸೂಚನೆಗಳಿವೆ ಎಂಬ ವರದಿಗಳಿವೆ. ಅಂದರೆ ಒಂದು ಕಾಲದಲ್ಲಿ ಪ್ರತಿಗಾಮಿ ಮುಖಂಡರಿಗೆ ಸಹಾಯ ಮಾಡಿದ್ದ ಧ್ರುವೀಕರಣ, ನಂತರದಲ್ಲಿ ಬದಲಾಗುತ್ತಿರುವ ದೇಶಗಳೂ ಇವೆ, ಅದು ತೀವ್ರವಾಗುತ್ತಿರುವ ಅಮೆರಿಕ (ಟ್ರಂಪ್ ಕಳೆದ ಅವಧಿಗೆ ಸೋತರೂ ಆತನ ಜನಪ್ರಿಯತೆ ತಗ್ಗಿಲ್ಲ ಎನ್ನುತ್ತವೆ ಹಲವು ಸರ್ವೇಗಳು), ಹಂಗರಿಯಂತಹ ದೇಶಗಳೂ ನಮ್ಮ ಕಣ್ಣಮುಂದಿವೆ.

ಈ ನಿಟ್ಟಿನಲ್ಲಿ ಭಾರತದಲ್ಲಿ ಮೋದಿ ಅಧಿಕಾರಕ್ಕೆ ಬರುವುದಕ್ಕಾಗಿ ಪ್ರಾರಂಭವಾದ ಪೋಲರೈಸೇಷನ್ ಪ್ರಾಜೆಕ್ಟ್‌ಅನ್ನು ನೋಡುವುದು ಹೇಗೆ? ಅದನ್ನು ಇಲ್ಲಿ ಮೆಟ್ಟಿನಿಲ್ಲುವುದು ಸುಲಭವಲ್ಲದಿರುವುದೇಕೆ? ಎಂಬ ಪ್ರಶ್ನೆಗಳನ್ನು ಹಾಕಿಕೊಂಡರೆ ದೊಡ್ಡ ವಿಫಲತೆ ಕಾಣಿಸುವುದು ನಮ್ಮ ವಿರೋಧ ಪಕ್ಷಗಳಲ್ಲಿ ಮತ್ತು ಮಾಧ್ಯಮಗಳ ಸ್ಪೇಸ್‌ನಲ್ಲಿ. ಇದ್ದುದರಲ್ಲಿ ಆಶಾದಾಯಕತೆ ಕಾಣಿಸುವುದು ನಾಗರಿಕ ಸಮಾಜ ಸ್ವಲ್ಪವಾದರೂ ಎಚ್ಚೆತ್ತುಕೊಂಡಿರುವ ಬಗೆಯಲ್ಲಿ.

ತುಸು ಹಿಂದಕ್ಕೆ ಹೋಗಿ ನೋಡೋಣ; ಪೋಲರೈಸೇಷನ್ ಪ್ರಾಜೆಕ್ಟ್‌ನ ಪ್ರಾರಂಭಿಕ ಹಂತದಲ್ಲಿ ಗುರಿಯಾಗಿಸಿಕೊಂಡಿದ್ದ ಒಂದು ಮುಖ್ಯ ಅಂಶ ನೆಹರೂ, ಗಾಂಧಿ ಮುಂತಾದ ನಾಯಕರ ಬಗ್ಗೆ ಸುಳ್ಳುಸಂಗತಿಗಳನ್ನು ಬಿಂಬಿಸುವುದರಿಂದ. ಫೇಕ್ ಸುದ್ದಿಯ ವ್ಯವಸ್ಥಿತ ಜಾಲದೊಂದಿಗೆ ಹೆಣೆಯಲಾದ ಕಥೆಗಳಲ್ಲಿ ಜನಸಮೂಹದ ಒಂದು ಪಾಲು ಬೇಸ್ತುಬಿತ್ತು. ನೆಹರೂ ಮತ್ತು ಗಾಂಧಿಯವರ ಸಾಧನೆಯನ್ನು ಗುರುತಿಸುವವರನ್ನು, ಅವರ ಕೆಲಸಗಳನ್ನು ಶ್ಲಾಘಿಸುವವರನ್ನೂ ದ್ವೇಷಿಸುವ ಹಂತಕ್ಕೆ ಸಮಾಜವನ್ನು ಧ್ರುವೀಕರಿಸಲಾಗಿತ್ತು. ಇದನ್ನು ಮೆಟ್ಟಿನಿಂತದ್ದು ನಾಗರಿಕ ಸಮಾಜದ ಪ್ರಾಜ್ಞರೇ. ಕಾಂಗ್ರೆಸ್ ಪಕ್ಷ ತಮ್ಮ ನಾಯಕ ನೆಹರೂರವರ ಬಗ್ಗೆ ಹರಡಿದ್ದ ಸುಳ್ಳು ಪ್ರಚಾರವನ್ನು ನಿವಾರಿಸಲು ಯಾವ ಹೇಳಿಕೊಳ್ಳುವಂತ ಯೋಜನೆಗಳನ್ನೂ ಹಾಕಿಕೊಳ್ಳಲಿಲ್ಲ. ಕೊನೇಪಕ್ಷ ತಮ್ಮ ಪಕ್ಷದ ಕಾರ್ಯಕರ್ತರಿಗಾದರೂ ನೆಹರೂ, ಗಾಂಧಿ ಮುಂತಾದ ದೇಶ ಕಟ್ಟಿದ ಮುಖಂಡರ ಪ್ರಾಮುಖ್ಯತೆಯನ್ನು ಪರಿಚಯಿಸುವ ತ್ರಾಸವನ್ನೂ ತೆಗೆದುಕೊಂಡಂತೆ ಕಾಣಲಿಲ್ಲ.

ಇನ್ನು ಮುಸ್ಲಿಂ ಸಮುದಾಯವನ್ನು ರಾಕ್ಷಸೀಕರಿಸುವ ಸಂಘ ಪರಿವಾರದ ಕೃತ್ರಿಮ ಯೋಜನೆ ದೇಶದ ಜನತೆಯನ್ನು ಇನ್ನಿಲ್ಲದಂತೆ ಧ್ರುವೀಕರಿಸಿತು. ಇದಕ್ಕೆ ಮುಸ್ಲಿಂ ಸಮುದಾಯ ತಾಳ್ಮೆಯಿಂದ ಉತ್ತರಿಸಿದ್ದೇ ಆ ಧ್ರುವೀಕರಣವನ್ನು ತುಸು ತಗ್ಗಿಸಲು ಸಾಧ್ಯವಾಗಿದೆಯೇ ಹೊರತು, ವಿರೋಧ ಪಕ್ಷಗಳು ಆ ಸಮುದಾಯದ ವಿರುದ್ಧ ಹರಡುತ್ತಿರುವ ಅಪಪ್ರಚಾರಕ್ಕೆ ಎದುರಾಗಿ ಗಟ್ಟಿಯಾಗಿ ನಿಂತ ನಿದರ್ಶನಗಳು ಕಡಿಮೆ. ರಾಜಸ್ಥಾನದ ಟೇಲರ್ ಕೊಲೆಯನ್ನು ಇತ್ತೀಚಿನ ಉದಾಹರಣೆಯಾಗಿ ನೋಡಿದರೆ, ಅದರ ಸುತ್ತ ನಡೆಸಲಾದ ಕೋಮು ಧ್ರುವೀಕರಣ ಅಸಹ್ಯಕರವಾಗಿತ್ತು. ಕೊಲೆಯಲ್ಲಿ ಕುತಂತ್ರ ನಡೆದಿರಬಹುದು ಎಂಬ ಆರೋಪಗಳ ನಡುವೆಯೂ ಬಹುಸಂಖ್ಯಾತರು ರಕ್ತಕ್ಕಾಗಿ ಹವಣಿಸಿದ್ದನ್ನು ವಿರೋಧ ಪಕ್ಷಗಳು ದಿಟ್ಟವಾಗಿ ಎದುರಿಸಬೇಕಿತ್ತು.

ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡದಲ್ಲಿ ಆದ ಸರಣಿ ಕೊಲೆಗಳನ್ನೂ (ಮಸೂದ್, ಪ್ರವೀಣ್ ಮತ್ತು ಪಾಝಿಲ್) ಸಂಘ ಪರಿವಾರ ತನ್ನ ಎಂದಿನ ಕೋಮು ಧ್ರುವೀಕರಣಕ್ಕೆ ಬಳಸಿಕೊಂಡಿತು. ಮುಖ್ಯಮಂತ್ರಿಯವರನ್ನೂ ಒಳಗೊಂಡಂತೆ ಬಿಜೆಪಿ ಪಕ್ಷದ ಮುಖಂಡರು ಕೇವಲ ಪ್ರವೀಣ್ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಉಳಿದ ಸಂತ್ರಸ್ತರನ್ನು ಬೇಕೆಂತಲೇ ಕಡೆಗಣಿಸಿ ಪಕ್ಷಪಾತ ಧೋರಣೆಯನ್ನು ಮುಂದುವರೆಸಿದರು. ವಿರೋಧ ಪಕ್ಷಗಳ ಕೆಲವು ಮುಖಂಡರು ಎಲ್ಲಾ ಸಂತ್ರಸ್ತರ ಮನೆಗೆ ಭೇಟಿ ನೀಡಿದರೂ, ಅದರಲ್ಲಿ ಅಗತ್ಯವಾಗಿದ್ದಷ್ಟು ಕನ್ವಿಕ್ಷನ್ ಕಾಣಿಸಲಿಲ್ಲ ಎಂದೇ ಹೇಳಬೇಕು. ಜಾತ್ಯತೀತ ಮತ್ತು ಸಮಾನತೆಯ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟ ಪಕ್ಷಗಳು ಈ ಧ್ರುವೀಕರಣವನ್ನು ಗಟ್ಟಿಯಾಗಿ ಎದುರಿಸುವುದನ್ನು ಕರಗತ ಮಾಡಿಕೊಳ್ಳಬೇಕಿದೆ.

ಜೆಎನ್‌ಯು, ಸಿಎಎ, ರೈತ ಹೋರಾಟ, ಹಿಜಾಬ್, ಜುಬೇರ್ ಹೀಗೆ ಪಟ್ಟಿಮಾಡಬಹುದಾದ ಅಸಂಖ್ಯಾತ ಪ್ರಕರಣಗಳಲ್ಲಿ ನಾಗರಿಕ ಸಮಾಜ ನಿಧಾನಕ್ಕೆ ಎಚ್ಚೆತ್ತುಕೊಳ್ಳುತ್ತಿರುವುದು ಕಾಣುತ್ತಿದೆಯಾದರೂ, ಇದಕ್ಕೆ ಬೆಂಬಲವಾಗಿ ನಿಲ್ಲಬೇಕಿದ್ದ ಮುಖ್ಯವಾಹಿನಿ ಮಾಧ್ಯಮಗಳು ಪ್ರಭುತ್ವಕ್ಕೆ ಹಾಗೂ ಕಾರ್ಪೊರೆಟ್ ಸಂಸ್ಥೆಗಳಿಗೆ ಮಾರಿಕೊಂಡಿರುವುದರಿಂದ ಇಲ್ಲಿ ಡಿಪೋಲರೈಸೇಶನ್ ವೇಗ ಪಡೆದುಕೊಳ್ಳುತ್ತಿಲ್ಲ.

ಜುಬೇರ್ ಪ್ರಕರಣದಲ್ಲಾಗಲೀ, ನೂಪುರ್ ಶರ್ಮಾ ಪ್ರಕರಣದಲ್ಲಾಗಲೀ ಸುಪ್ರೀಂ ಕೋರ್ಟ್ ಮಾಡಿದ ಅಬ್ಸರ್ವೇಶನ್‌ಗಳನ್ನು, ಕೊಟ್ಟ ತೀರ್ಪನ್ನು ಸಂಘ ಪರಿವಾರದ ಕೆಲವು ಫ್ರಿಂಜ್ ಎಲಿಮೆಂಟ್‌ಗಳು ಗೇಲಿಮಾಡುತ್ತಾ, ಶರಿಯಾ ಕೋರ್ಟ್ ಎಂದು ಜರಿದು ಅವಮಾನಿಸುತ್ತಿದ್ದಾಗ ಮುಖ್ಯವಾಹಿನಿ ಮಾಧ್ಯಮಗಳಿಂದ ಮೂಡಬೇಕಿದ್ದ ತಿಳಿವಳಿಕೆ ಮಾಯವಾಗಿತ್ತು! ಯುಕೆಯಲ್ಲಿ ಬೋರಿಸ್ ಜಾನ್ಸನ್ ವಿರುದ್ಧ ಒಂದು ಮಟ್ಟದ ಜನಾಭಿಪ್ರಾಯಕ್ಕೆ ಕಾರಣವಾದದ್ದು ಅಲ್ಲಿನ ಮಾಧ್ಯಮ ಬಿಬಿಸಿಯನ್ನು (ಪ್ರಭುತ್ವದ ಸಂಸ್ಥೆಯಾದರೂ) ಹೆಚ್ಚು ಜನ ಅನುಸರಿಸುವುದಕ್ಕೆ ಹಾಗೂ ಆ ಮಾಧ್ಯಮ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಂಡಿರುವುದಕ್ಕೆ ಎನ್ನಲಾಗಿದೆ.

ಆಗಸ್ಟ್‌ನಲ್ಲಿ ಭಾರತ್ ಜೋಡ್ ಯಾತ್ರೆಯನ್ನು ಆಯೋಜಿಸುವುದಾಗಿ ಕಾಂಗ್ರೆಸ್ ಪಕ್ಷ ಘೋಷಿಸಿದೆ. ಇದನ್ನು ಅಭಿನಂದಿಸೋಣ. ಆದರೆ ಕರ್ನಾಟಕದಲ್ಲಿ ’ಗೆಲ್ಲುವ ಕನಸಿ’ನಲ್ಲೇ ಮುಖ್ಯಮಂತ್ರಿ ಗಾದಿಗಾಗಿ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಒಳಜಗಳವನ್ನು ನೋಡಿದರೆ, ಸಂಘ ಪರಿವಾರ ಮತ್ತು ಬಲಪಂಥೀಯ ಬಿಜೆಪಿ ಪಕ್ಷ ತನ್ನ ಪೋಲರೈಸೇಷನ್ ಯೋಜನೆ ಯಶಸ್ಸು ಕಾಣದೆಯೂ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ಹುಟ್ಟುಹಾಕುತ್ತಿದೆ. ಮತ್ತೊಂದೆಡೆ ಪ್ರಾದೇಶಿಕ ಪಕ್ಷಗಳು ನಿಧಾನಕ್ಕೆ ನೆಲಕಚ್ಚುತ್ತಿವೆ. ಪ್ರಾದೇಶಿಕ ಪಕ್ಷಗಳ ಬಲವರ್ಧನೆ ಕೂಡ ಸಂಘಪರಿವಾರದ ಧ್ರುವೀಕರಣ ಯೋಜನೆಗೆ ಬ್ರೇಕ್ ಹಾಕಲು ಸಹಕಾರವಾದೀತು.

ಸ್ಪೇನ್ ದೇಶದಲ್ಲಿ, ಕ್ಯಾಟಲಾನ್ ಬಂಡುಕೋರರನ್ನು ಜೈಲಿಗೆ ತಳ್ಳಿದ್ದ ಸರ್ಕಾರ ಅವರಿಗೆ ಈಗ ರಿಲ್ಯಾಕ್ಸೇಶನ್ ನೀಡುವ ಮಾತನಾಡುತ್ತಿದೆ. ತನ್ನ ನೀತಿಗಳಿಗೆ ಕ್ಯಾಟಲಾನ್ ಸ್ವಾತಂತ್ರ್ಯ ಬಯಸುವ ಪಕ್ಷಗಳ ಬೆಂಬಲ ಬೇಕಿರುವುದರಿಂದ ಈ ಬದಲಾವಣೆ ಸಾಧ್ಯವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇಲ್ಲೂ ಕೂಡ ಪ್ರಾದೇಶಿಕ ಪಕ್ಷಗಳ ಬೆಂಬಲವಿಲ್ಲದೆ ಅಧಿಕಾರ ಹಿಡಿಯುವ ಸಾಧ್ಯತೆ ಕ್ಷೀಣಿಸಿದಾಗ ಎಂಥ ಬಲಶಾಲಿ-ಸರ್ವಶಕ್ತ ನಾಯಕನೂ ಬಗ್ಗಲೇಬೇಕಾಗುತ್ತದೆ.

ಈ ನೆಲೆಯಲ್ಲಿ ನಾಗರಿಕ ಸಮಾಜ ಎಚ್ಚೆತ್ತುಕ್ಕೊಳ್ಳುತ್ತಿರುವುದನ್ನು ಗುರುತಿಸಿ ವಿರೋಧ ಪಕ್ಷಗಳು ಹಾಗೂ ಸಣ್ಣ ಪ್ರಾದೇಶಿಕ ಪಕ್ಷಗಳು ಸಂಘಪರಿವಾರದ ಈ ಪೋಲರೈಸೇಷನ್ ಪ್ರಾಜೆಕ್ಟ್ ವಿರುದ್ಧ ದಿಟ್ಟ ಧ್ವನಿ ತಳೆಯುವುದು, ಅದಕ್ಕಾಗಿ ಸಂಘಟಿತರಾಗಿ ಒಗ್ಗೂಡುವುದು, ಆ ಪಕ್ಷಗಳ ಹಿತದೃಷ್ಟಿಯಿಂದಲೂ ಮತ್ತು ದೇಶದ ಸಮಸ್ತ
ನಾಗರಿಕರ ಹಿತದೃಷ್ಟಿಯಿಂದಲೂ ಅಗತ್ಯವಾದದ್ದು.

– ಗುರುಪ್ರಸಾದ್ ಡಿ ಎನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಬಕಾರಿ ಹಗರಣದಲ್ಲಿ ಕೇಜ್ರಿವಾಲ್ ಮತ್ತು ಇತರರು ಖುಲಾಸೆ: ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಸಿಬಿಐ

ಮದ್ಯ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರರನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಿಬಿಐ ದೆಹಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ ಎಂದು...

ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಚುನಾವಣೆ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ: 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಡೆಹಿಡಿದಿದೆ. ಭಾರತದ ಮುಖ್ಯ...

ಹಾಜರಾತಿ ಆಧಾರದ ಮೇಲೆ ಪರೀಕ್ಷಾ ನಿಷೇಧ ವಿರೋಧಿಸಿ ಎಎಂಯು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಪ್ರತಿಭಟನೆ; ಬಂಧನ, ಹಲ್ಲೆ ಆರೋಪ 

ಕಡಿಮೆ ಹಾಜರಾತಿ ಕಾರಣ ಸೆಮಿಸ್ಟರ್ ಪರೀಕ್ಷೆಗಳಿಂದ ನಿಷೇಧಿಸಲ್ಪಟ್ಟಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ನಂತರ, ವಿಶ್ವವಿದ್ಯಾಲಯದ ಪ್ರೊಕ್ಟೋರಿಯಲ್ ತಂಡವು ಹಲವಾರು ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದೆ ಎಂದು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ (AMU)...

ವಿಧಾನಸಭಾ ಚುನಾವಣೆಗೂ ಮುನ್ನ ಎಐಎಡಿಎಂಕೆಯಿಂದ ಉಚ್ಚಾಟನೆಗೊಂಡ ಮಾಜಿ ಸಿಎಂ ಪನ್ನೀರ್‌ಸೆಲ್ವಂ, ಪ್ರತಿಸ್ಪರ್ಧಿ ಡಿಎಂಕೆ ಪಕ್ಷಕ್ಕೆ ಸೇರ್ಪಡೆ

ಮೂರು ಬಾರಿ ತಮಿಳುನಾಡು ಮುಖ್ಯಮಂತ್ರಿ ಮತ್ತು ಜೆ ಜಯಲಲಿತಾ ಅವರ ದೀರ್ಘಕಾಲದ ಸಹಾಯಕರಾಗಿದ್ದ ಪನ್ನೀರ್‌ಸೆಲ್ವಂ ಅವರನ್ನು ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್) ಅವರೊಂದಿಗಿನ ತೀವ್ರ ಅಧಿಕಾರ ಹೋರಾಟದ ನಂತರ 2022 ರಲ್ಲಿ ಎಐಎಡಿಎಂಕೆಯಿಂದ...

‘ನಾನು ಭ್ರಷ್ಟನಲ್ಲ’: ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯದಿಂದ ಕ್ಲೀನ್ ಚಿಟ್; ಮಾಧ್ಯಮಗಳೆದುರು ಭಾವುಕರಾದ ಕೇಜ್ರಿವಾಲ್

ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಖುಲಾಸೆಗೊಳಿಸಿದ ಕೆಲವೇ ಕ್ಷಣಗಳಲ್ಲಿ, ಫೆಬ್ರವರಿ 27, ಶುಕ್ರವಾರದಂದು ಮಾಧ್ಯಮಗಳ...

‘ಮುಸ್ಲಿಮರ ವಿರುದ್ಧ ದ್ವೇಷ ಭಾಷಣ’: ಅಸ್ಸಾಂ ಸಿಎಂ ಹಿಮಂತ ಶರ್ಮಾಗೆ ನೋಟಿಸ್ ಜಾರಿ ಮಾಡಿದ ಗುವಾಹಟಿ ಹೈಕೋರ್ಟ್

ಗುವಾಹಟಿ: ಮುಸ್ಲಿಮರನ್ನು ಗುರಿಯಾಗಿಸಿಕೊಂಡು "ದ್ವೇಷ ಭಾಷಣ" ಮಾಡಿದ್ದಾರೆ ಎಂಬ ಆರೋಪದ ಮೇಲೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಗುವಾಹಟಿ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ. ಬಂಗಾಳಿ ಮೂಲದ ಮುಸ್ಲಿಮರನ್ನು ಗುರಿಯಾಗಿಸಿಕೊಂಡು...

ಅಫ್ಘಾನಿಸ್ತಾನದೊಂದಿಗೆ ‘ಮುಕ್ತ ಯುದ್ಧ’ ಘೋಷಿಸಿದ ಪಾಕಿಸ್ತಾನ; ತಾಲಿಬಾನ್‌ ವಿರುದ್ಧ ಆಪರೇಷನ್‌ ಗಜಬ್-ಲಿಲ್‌-ಹಕ್‌ ಆರಂಭಿಸಿದ ಪಾಕ್‌ ಸೇನೆ!

ಅಫ್ಘಾನಿಸ್ತಾನದೊಂದಿಗಿನ ಉದ್ವಿಗ್ನತೆಯನ್ನು ಇಸ್ಲಾಮಾಬಾದ್ ಔಪಚಾರಿಕವಾಗಿ ಹೆಚ್ಚಿಸಿದೆ, ಹಂಚಿಕೆಯ ಗಡಿಯಲ್ಲಿ ಹೊಸ ಮತ್ತು ಮಾರಕ ಘರ್ಷಣೆಗಳ ನಂತರ ತಾಲಿಬಾನ್ ನೇತೃತ್ವದ ಸರ್ಕಾರದ ವಿರುದ್ಧ ಮುಕ್ತ ಯುದ್ಧ ಎಂದು ಘೋಷಿಸಿದೆ.  ಶುಕ್ರವಾರ ಮುಂಜಾನೆ ಕಾಬೂಲ್ ಮತ್ತು ಕಂದಹಾರ್‌ನಲ್ಲಿ...

ಎಬಿವಿಪಿ ದಾಂಧಲೆ : ಚರ್ಚಾ ಕಾರ್ಯಕ್ರಮ ಆಯೋಜಿಸಿದ್ದ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ ಅಜೀಂ ಪ್ರೇಮ್ ಜಿ ವಿವಿ

ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯಕ್ಕೆ (ಎಪಿಯು) ಎಬಿವಿಪಿ ಸದಸ್ಯರು ನುಗ್ಗಿ ದಾಂಧಲೆ ನಡೆಸಿದ ಬಳಿಕ, ಕ್ಯಾಂಪಸ್‌ನಲ್ಲಿ ಚರ್ಚಾ ಕಾರ್ಯಕ್ರಮ ಆಯೋಜಿಸಿದ್ದ 'ಸ್ಪಾರ್ಕ್ ರೀಡಿಂಗ್ ಸರ್ಕಲ್' ಎಂಬ ಸಾಮಾಜಿಕ ಮಾಧ್ಯಮ ಪುಟದ ವಿರುದ್ಧ ಕುಲಸಚಿವರು...

2019ರ ಈಸ್ಟರ್ ದಾಳಿಗೆ ಸಂಬಂಧಿಸಿದಂತೆ ಶ್ರೀಲಂಕಾದ ಮಾಜಿ ಗುಪ್ತಚರ ಮುಖ್ಯಸ್ಥರ ಬಂಧನ

2019ರ ಈಸ್ಟರ್ ಭಾನುವಾರದ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ಶ್ರೀಲಂಕಾದ ಅಪರಾಧ ತನಿಖಾಧಿಕಾರಿಗಳು ಮಾಜಿ ರಾಜ್ಯ ಗುಪ್ತಚರ ಸೇವೆ (SIS) ಮುಖ್ಯಸ್ಥ ನಿವೃತ್ತ ಮೇಜರ್ ಜನರಲ್ ಸುರೇಶ್ ಸಲ್ಲೇ ಅವರನ್ನು ಬಂಧಿಸಿದ್ದಾರೆ ಎಂದು ಪೊಲೀಸ್...

ಹೈದರಾಬಾದ್| ವಿಡಿಯೋ ಗೇಮ್ ಆಡಬೇಡ ಎಂದಿದ್ದಕ್ಕೆ ನೇಣಿಗೆ ಶರಣಾದ 12 ವರ್ಷದ ಬಾಲಕ

ವಿಡಿಯೋ ಗೇಮ್ ಆಡಿದ್ದಕ್ಕಾಗಿ ತಂದೆ ನಿರಂತರವಾಗಿ ಬೈಯುತ್ತಿದ್ದ ಕಾರಣ 12 ವರ್ಷದ ಬಾಲಕ (ಫೆ.26) ಗುರುವಾರ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ ಎಂದು 'ಸಿಯಾಸತ್' ವರದಿ ಮಾಡಿದೆ. ಬಂಜಾರಾ ಹಿಲ್ಸ್‌ನ...