ಭಾರತದ ಧ್ವಜ ಸಂಹಿತೆಯನ್ನು ಉಲ್ಲಂಘಿಸಿ ವಿರೂಪಗೊಳಿಸಲಾಗಿರುವ ಮತ್ತು ಕಳಪೆಯಾಗಿ ಹೊಲಿದ ಧ್ವಜಗಳನ್ನು ರಾಜ್ಯ ಬಿಜೆಪಿ ತನ್ನ ಕೇಂದ್ರ ಕಚೇರಿಯ ಮಳಿಗೆಯಲ್ಲಿ ಮಾರಾಟ ಮಾಡುತ್ತಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಜುಲೈ 31 ರಂದು ಸಚಿವ ಎಸ್ ಟಿ ಸೋಮಶೇಖರ್ ಅವರು ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ‘ಹರ್ ಘರ್ ತಿರಂಗ’ ಅಭಿಯಾನದ ಅಂಗವಾಗಿ ತ್ರಿವರ್ಣ ಧ್ವಜವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಈ ಮಾರಾಟದ ಮಳಿಗೆಯನ್ನು ಉದ್ಘಾಟಿಸಿದ್ದರು.
ಮಲ್ಲೇಶ್ವರಂನಲ್ಲಿರುವ ತನ್ನ ರಾಜ್ಯ ಕೇಂದ್ರ ಕಚೇರಿಯಿಂದ 10 ಲಕ್ಷ ಸೇರಿದಂತೆ ಕರ್ನಾಟಕದಾದ್ಯಂತ 75 ಲಕ್ಷ ಧ್ವಜಗಳನ್ನು ಪ್ರತಿ ಮನೆಯಲ್ಲಿ ಹಾರಿಸುವ ಗುರಿಯನ್ನು ಬಿಜೆಪಿ ಹೊಂದಿದೆ. ಬಿಜೆಪಿ ಕಚೇರಿಯಿಂದ ಮಾರಾಟವಾಗುವ ಧ್ವಜಗಳು ಪಾಲಿಯೆಸ್ಟರ್ನಿಂದ ತಯಾರಿಸಲ್ಪಟ್ಟಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
‘ಹರ್ ಘರ್ ತಿರಂಗಾ’ ಅಭಿಯಾನಕ್ಕಾಗಿ ಪಾಲಿಯೆಸ್ಟರ್ ಮತ್ತು ಯಂತ್ರ-ನಿರ್ಮಿತ ರಾಷ್ಟ್ರಧ್ವಜಗಳ ಉತ್ಪಾದನೆಯನ್ನು ಅನುಮತಿಸಲು ಕೇಂದ್ರ ಸರ್ಕಾರವು 2021ರ ಡಿಸೆಂಬರ್ 30 ರಂದು ಭಾರತದ ಧ್ವಜ ಸಂಹಿತೆಯನ್ನು ತಿದ್ದುಪಡಿ ಮಾಡಿದೆ.
ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಭಾರತೀಯ ರೈತರು ರಾಷ್ಟ್ರಧ್ವಜ ಅಪಮಾನಿಸಿಲ್ಲ
ಧ್ವಜದ ಸಂಹಿತೆ ಪ್ರಕಾರ, “ತ್ರಿವರ್ಣ ಧ್ವಜವು ಆಯತಾಕಾರದ ಆಕಾರದಲ್ಲಿರಬೇಕು. ಧ್ವಜವೂ ಯಾವುದೇ ಗಾತ್ರದ್ದಾಗಿದ್ದರೂ ಅದರ ಉದ್ದ ಮತ್ತು ಅಗಲದ ಅನುಪಾತವು 3:2 ಆಗಿರಬೇಕು. ಅಶೋಕ ಚಕ್ರವನ್ನು ಮಧ್ಯದಲ್ಲಿ ಇಡಬೇಕು. ಮೂರು ಅಡ್ಡ ಪಟ್ಟೆಗಳು (ಕೇಸರಿ, ಬಿಳಿ, ಹಸಿರು) ಸಮಾನ ಪ್ರಮಾಣದಲ್ಲಿರಬೇಕು”
ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾರಾಟ ಮಾಡಲಾಗುತ್ತಿರುವ ಅನೇಕ ಧ್ವಜಗಳು ಆಯತಾಕಾರ ಅಥವಾ 3:2 ಅನುಪಾತಕ್ಕೆ ಅನುಗುಣವಾಗಿಲ್ಲ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. “ಕೆಲವು ಧ್ವಜಗಳಲ್ಲಿ ಅಶೋಕ ಚಕ್ರ ಮಧ್ಯದಲ್ಲಿ ಇಲ್ಲ. ಇನ್ನೂ ಕೆಲವು ಧ್ವಜಗಳಲ್ಲಿ ಹಸಿರು ಪಟ್ಟೆಗಳು ಕೇಸರಿ ಮತ್ತು ಬಿಳಿ ಬಣ್ಣಗಳಿಗಿಂತ ದೊಡ್ಡದಾಗಿವೆ” ಎಂದು ವರದಿಯು ಉಲ್ಲೇಖಿಸಿದೆ. ಗುಣಮಟ್ಟ ತುಂಬಾ ಕಳಪೆಯಾಗಿದ್ದು, ಅನೇಕ ಧ್ವಜಗಳು ಕೆಟ್ಟದಾಗಿ ಹೊಲಿಯಲಾಗಿದೆ ಎಂದು ಅದು ಹೇಳಿದೆ.
ಪ್ರತಿಯೊಂದು ಧ್ವಜವನ್ನು 25 ರೂ.ಗೆ ಮಾರಾಟ ಮಾಡಲಾಗುತ್ತಿದ್ದು, ನಗದು ರೂಪದಲ್ಲಿ ಪಾವತಿಸಲು ಕೇಳಲಾಗುತ್ತಿದೆ. ಯಾವುದೇ ಕಾರ್ಡ್/ಯುಪಿಐ ಪಾವತಿಯನ್ನು ಸ್ವೀಕರಿಸಲಾಗುತ್ತಿಲ್ಲ ಎಂದು ವರದಿ ಹೇಳಿದೆ. ಪಾವತಿ ಮಾಡಿರುವುದಕ್ಕೆ ಯಾವುದೇ ರಸೀದಿ ನೀಡಲಾಗುವುದಿಲ್ಲ. ಧ್ವಜ ಖರೀದಿಸುವವರು ತಮ್ಮ ಹೆಸರನ್ನು ನೀಡಬೇಕಾಗಿದೆ. ಹಲವು ದೋಷಗಳ ಹೊರತಾಗಿಯೂ, ಧ್ವಜಗಳು ಬಿಸಿ ಕೇಕ್ನಂತೆ ಮಾರಾಟವಾಗುತ್ತಿವೆ ಎಂದು ವರದಿ ಉಲ್ಲೇಖಿಸಿದೆ.
“ಮಾರಾಟವು ಉತ್ತಮವಾಗಿದ್ದು, ಹೆಚ್ಚಿನ ಜನರು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ” ಎಂದು ಪಕ್ಷದ ಕಾರ್ಯಕರ್ತರೊಬ್ಬರು ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
“ನಾವು ಈಗಾಗಲೇ ನಮ್ಮ ಕಚೇರಿಯಿಂದ ಸುಮಾರು 3 ಲಕ್ಷ ಧ್ವಜಗಳನ್ನು ಮಾರಾಟ ಮಾಡಿದ್ದೇವೆ” ಎಂದು ಪಕ್ಷದ ಎಂಎಲ್ಸಿ, ಕರ್ನಾಟಕದಲ್ಲಿ ತಿರಂಗ ಪ್ರಚಾರದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಧ್ವಜಗಳಲ್ಲಿ ಯಾವುದೇ ಉತ್ಪಾದನಾ ದೋಷಗಳನ್ನು ತಾನು ಗಮನಿಸಿಲ್ಲ ಎಂದು ರವಿಕುಮಾರ್ ಹೇಳಿಕೊಂಡಿದ್ದು, ಧ್ವಜದ ವಿರೂಪಗೊಂಡ ವಿಚಾರದ ಬಗ್ಗೆ ಪರಿಶೀಲಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
“ನಾವು ಅದನ್ನು 25 ರೂ.ಗೆ ಖರೀದಿಸಿ ಅದೇ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ. ಸಾರಿಗೆ ಸೇರಿದಂತೆ ಇತ್ಯಾದಿ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ವಿವಿಧ ಮಾರಾಟಗಾರರಿಂದ ಧ್ವಜಗಳನ್ನು ಪಡೆಯಲಾಗಿದೆ. ಪಕ್ಷದ ಕಾರ್ಯಕರ್ತರು ಕೂಡಾ ಧ್ವಜಗಳನ್ನು ಸ್ವಯಂಪ್ರೇರಿತರಾಗಿ ಹೊಲಿಯುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ: ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು
ಆಡಳಿತ ಪಕ್ಷ ಬಿಜೆಪಿ ಮಾರಾಟ ಮಾಡುತ್ತಿರುವ ಕೆಲವು ಧ್ವಜಗಳು ಭಾರತದ ಧ್ವಜ ಸಂಹಿತೆಯಲ್ಲಿ ಸೂಚಿಸಲಾದ ಮಾರ್ಗಸೂಚಿಗಳನ್ನು “ಸ್ಪಷ್ಟವಾಗಿ ಉಲ್ಲಂಘಿಸುತ್ತವೆ” ಎಂದು ಕಾನೂನು ತಜ್ಞರು ಹೇಳಿದ್ದಾರೆಂದು ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿಯಲ್ಲಿ ಹೇಳಿದೆ.