ಗಾಝಾದಲ್ಲಿ ಕದನ ವಿರಾಮ ಜಾರಿಯಾಗಿದೆ ಎಂದು ಇಡೀ ಜಗತ್ತು ಮಾತನಾಡಿಕೊಳ್ಳುತ್ತಿದೆ. ತಾನೇ ಬಾಂಬ್ ಕೊಟ್ಟು ಕಂದಮ್ಮಗಳ ಸಾವಿಗೆ ಕಾರಣರಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಯುದ್ಧ ನಿಲ್ಲಿಸಿದ ಶಾಂತಿಯ ರಾಯಭಾರಿಯಾಗಿ ಹೊರ ಹೊಮ್ಮಿದ್ದಾರೆ. ಮುಂದೆ ನಿಂತು ಕಂದಮ್ಮಗಳ ರಕ್ತ ಹರಿಸಿದ ಇಸ್ರೇಲ್ ಅಧ್ಯಕ್ಷ ನೆತನ್ಯಾಹು ನಿರಪರಾಧಿ ಎಂಬಂತೆ ಜಾಗತಿಕ ನಾಯಕರು ಕೈ ಕುಲುಕುತ್ತಿದ್ದಾರೆ.
ಈ ನಡುವೆ ಕದನ ವಿರಾಮದಿಂದ ಪ್ಯಾಲೆಸ್ತೀನಿಯರಿಗೆ ಕನಿಷ್ಠ ಬದುಕುವ ಅವಕಾಶ ಸಿಕ್ಕಿತಾ? ಎಂದು ನೋಡಿದರೆ, ಇಲ್ಲ ಎನ್ನುತ್ತವೆ ವರದಿಗಳು.
ಆಕ್ರಮಿತ ಜೆರುಸಲೆಮ್ನ ಉತ್ತರದಲ್ಲಿ ಓರ್ವ ಪ್ಯಾಲೆಸ್ತೀನಿಯ ಹತ್ಯೆ
ಇತ್ತೀಚಿನ ವರದಿಗಳ ಪ್ರಕಾರ, ಆಕ್ರಮಿತ ಜೆರುಸಲೆಮ್ನ ಉತ್ತರಕ್ಕೆ ಇರುವ ಅರ್ರಾಮ್ ಪಟ್ಟಣದಲ್ಲಿ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ ಒಬ್ಬರು ಪ್ಯಾಲೆಸ್ತೀನಿ ವ್ಯಕ್ತಿ ಸಾವನ್ನಪ್ಪಿದ್ದಾರೆ. 57 ವರ್ಷದ ವ್ಯಕ್ತಿಯನ್ನು ಇಸ್ರೇಲಿ ಸೈನಿಕರು ಹೊಡೆದು ಕೊಂದಿದ್ದಾರೆ ಎಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ ಪ್ಯಾಲೆಸ್ತೀನಿ ಸುದ್ದಿ ಸಂಸ್ಥೆ ವಫಾ ವರದಿ ಮಾಡಿದೆ.
ನಮ್ಮ ಸಿಬ್ಬಂದಿ ಮೃತ ವ್ಯಕ್ತಿಯ ದೇಹವನ್ನು ಕಲಾಂಡಿಯಾ ಚೆಕ್ಪಾಯಿಂಟ್ನಲ್ಲಿ ಸ್ವೀಕರಿಸಿ ಪ್ಯಾಲೆಸ್ತೀನ್ ವೈದ್ಯಕೀಯ ಸಂಕೀರ್ಣಕ್ಕೆ ಸಾಗಿಸಿದ್ದಾರೆ ಪ್ಯಾಲೆಸ್ತೀನ್ ರೆಡ್ ಕ್ರೆಸೆಂಟ್ ಖಚಿತಪಡಿಸಿದೆ.
ಇಸ್ರೇಲಿ ಪಡೆಗಳು ಇಂದು (ಅ.15) ಬೆಳಿಗ್ಗೆಯಿಂದ ಆಕ್ರಮಿತ ಪಶ್ಚಿಮ ದಂಡೆಯ ವಿವಿಧ ಪ್ರದೇಶಗಳ ಮೇಲೆ ಸರಣಿ ದಾಳಿ ಮತ್ತು ಅತಿಕ್ರಮಣಗಳನ್ನು ನಡೆಸಿವೆ. ಸೈನಿಕರು ಬಿಡುಗಡೆಯಾದ ಕೈದಿಗಳ ಮನೆಗಳ ಮೇಲೂ ದಾಳಿ ನಡೆಸಿದ್ದಾರೆ ಮತ್ತು ಇಸ್ರೇಲಿ ಜೈಲುಗಳಿಂದ ಬಿಡುಗಡೆಯಾದ ಕೈದಿಗಳನ್ನು ಬೆಂಬಲಿಸಿ ಯಾವುದೇ ಸಂಭ್ರಮಾಚರಣೆ ನಡೆಸದಂತೆ ಅವರ ಕುಟುಂಬಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಗಳು ಹೇಳಿವೆ.
ಬೆತ್ಲಹೆಮ್ ಗವರ್ನರೇಟ್ನಲ್ಲಿ ನಾಲ್ವರು ಬಂಧಿಸಿದ ಇಸ್ರೇಲಿ ಪಡೆಗಳು
ಬೆತ್ಲಹೆಮ್ ಗವರ್ನರೇಟ್ನಲ್ಲಿ ಪ್ಯಾಲೆಸ್ತೀನಿಯರ ಮನೆಗಳ ಮೇಲೆ ದಾಳಿ ನಡೆಸಿದ ಇಸ್ರೇಲಿ ಪಡೆಗಳು ಶೋಧ ಕಾರ್ಯ ಕೈಗೊಂಡಿವೆ. ಕನಿಷ್ಠ ನಾಲ್ವರನ್ನು ಬಂಧಿಸಿವೆ ಎಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವಫಾ ವರದಿ ಮಾಡಿದೆ.
ಜಬಲ್ ಅಲ್-ಮವಾಲೆಹ್ ಪ್ರದೇಶದಿಂದ ಕರೆದೊಯ್ಯಲ್ಪಟ್ಟ ಮುಸ್ತಫಾ ಮೂಸಾ ನವವ್ರಾ, ಅಲ್-ಕರ್ಕಫಾದ ಮುಹಮ್ಮದ್ ರಈದ್ ಜವಾಹರಾ, ಕ್ಯಾರಿಟಾಸ್ ಪ್ರದೇಶದ ರಈದ್ ಅಬ್ದುಲ್ ಕರೀಮ್ ಅಲ್-ಮದ್ಬೌಹ್ ಮತ್ತು ಬೆತ್ಲೆಹೆಮ್ ನಗರದ ಪೂರ್ವದಲ್ಲಿರುವ ಹಿಂಡಾಜಾದ ಝಕಾರಿಯಾ ಜಮಾಲ್ ಅವಿದಾ ಬಂಧಿತರು ಎಂದು ತಿಳಿದು ಬಂದಿದೆ.
ಗವರ್ನರೇಟ್ನ ವಿವಿಧ ಪ್ರದೇಶಗಳಲ್ಲಿ ಅನೇಕ ಮನೆಗಳ ಮೇಲೆ ಇಸ್ರೇಲಿ ಪಡೆಗಳು ದಾಳಿ ನಡೆಸಿವೆ. ಆದರೆ, ನಾಲ್ವರು ಹೊರತು ಇತರ ಯಾವುದೇ ಬಂಧನಗಳು ವರದಿಯಾಗಿಲ್ಲ ಎಂದು ವರದಿಗಳು ಹೇಳಿವೆ.
ಪಶ್ಚಿಮ ದಂಡೆಯ ಅಲ್-ಮುಗಯೀರ್ ಗ್ರಾಮದ ಪ್ರವೇಶದ್ವಾರ ಮುಚ್ಚಿದ ಇಸ್ರೇಲಿ ಸೈನಿಕರು
ಇಸ್ರೇಲಿ ಸೈನಿಕರು ಆಕ್ರಮಿತ ಪಶ್ಚಿಮ ದಂಡೆಯ ಅಲ್-ಮುಗಯೀರ್ ಗ್ರಾಮದ ಪಶ್ಚಿಮ ದ್ವಾರವನ್ನು ಮುಚ್ಚಿ ಪ್ಯಾಲೆಸ್ತೀನಿರು ಗ್ರಾಮ ಪ್ರವೇಶಿಸದಂತೆ ಮತ್ತು ಹೊರ ಹೋಗದಂತೆ ತಡೆಯುತ್ತಿದ್ದಾರೆ ಎಂದು ಅಲ್-ಮುಘಯ್ಯಿರ್ ಗ್ರಾಮ ಮಂಡಳಿಯ ಮುಖ್ಯಸ್ಥ ಅಮೀನ್ ಅಬು ಅಲಿಯಾ ಅವರನ್ನು ಉಲ್ಲೇಖಿಸಿ ವಫಾ ವರದಿ ಮಾಡಿದೆ.
ಅಕ್ಟೋಬರ್ 7, 2023ರಂದು ಗಾಝಾದಲ್ಲಿ ಆಕ್ರಮಣ ಪ್ರಾರಂಭವಾದಾಗಿನಿಂದ ಇಸ್ರೇಲಿ ಪಡೆಗಳು ಗ್ರಾಮದ ಪೂರ್ವ ದ್ವಾರವನ್ನು ಮುಚ್ಚಿತ್ತು. ಹಾಗಾಗಿ, ಪಶ್ಚಿಮ ದ್ವಾರ ಗ್ರಾಮದ ಏಕೈಕ ಪ್ರವೇಶ ಮಾರ್ಗವಾಗಿತ್ತು.
ಇಸ್ರೇಲಿ ಸೈನಿಕರು ಪ್ರವೇಶದ್ವಾರವನ್ನು ಮುಚ್ಚುತ್ತಿರುವ ದೃಶ್ಯಗಳನ್ನು ಸುದ್ದಿ ಸಂಸ್ಥೆ ಅಲ್ ಜಝೀರಾ ಪ್ರಕಟಿಸಿದೆ.
ಒತ್ತೆಯಾಳುಗಳ ಮೃತದೇಹ ಹಸ್ತಾಂತರಿಸಿದ ಹಮಾಸ್
ಅಲ್-ಜಝೀರಾ ವರದಿಯ ಪ್ರಕಾರ, ಬುಧವಾರ ಹಮಾಸ್ ನಾಲ್ವರು ಇಸ್ರೇಲಿ ಒತ್ತೆಯಾಳುಗಳ ಮೃತದೇಹವನ್ನು ಹಸ್ತಾಂತರಿಸಿದೆ. ಈ ಮೂಲಕ ಕದನ ವಿರಾಮದ ಬಳಿಕ ಹಸ್ತಾಂತರಿಸಿದ ಮೃತದೇಹಗಳ ಸಂಖ್ಯೆ 8ಕ್ಕೆ ಏರಿದೆ. ಇನ್ನೂ 20 ಒತ್ತೆಯಾಳುಗಳ ಮೃತದೇಹ ಹಮಾಸ್ ಬಳಿ ಇವೆ.
ಒಪ್ಪಂದ ಮುರಿದ ಇಸ್ರೇಲ್
ವರದಿಗಳ ಪ್ರಕಾರ, ಇಸ್ರೇಲ್ ಒಪ್ಪಿಕೊಂಡ ಸಂಖ್ಯೆಯ ಅರ್ಧದಷ್ಟು ನೆರವು ಟ್ರಕ್ಗಳನ್ನು ಗಾಝಾಕ್ಕೆ ಅನುಮತಿಸುವುದಾಗಿ ಹೇಳುತ್ತಿದೆ. ಒತ್ತೆಯಾಳುಗಳ ಮೃತದೇಹ ಹಸ್ತಾಂತರಿಸುವಲ್ಲಿ ವಿಳಂಬವನ್ನು ಉಲ್ಲೇಖಿಸಿ ರಫಾ ಕ್ರಾಸಿಂಗ್ ತೆರೆಯುವುದನ್ನು ತಡ ಮಾಡಿದೆ.
ಕದನ ವಿರಾಮ ಒಪ್ಪಂದದಲ್ಲಿ ಹೇಳಿದಷ್ಟು ನೆರವು ಟ್ರಕ್ಗಳನ್ನು ಮೊದಲ ದಿನ ಇಸ್ರೇಲ್ ಗಾಝದೊಳಗೆ ಬಿಟ್ಟಿಲ್ಲ. ವಿಶ್ವ ಆಹಾರ ಕಾರ್ಯಕ್ರಮದ ಮೂಲಕ 137 ನೆರವು ಟ್ರಕ್ಗಳು ಗಾಝಾ ಪಟ್ಟಿ ತಲುಪಿವೆ. ಆ ಟ್ರಕ್ಗಳಲ್ಲಿ ಹೆಚ್ಚಿನವು ಹಿಟ್ಟು ಮತ್ತು ಅತ್ಯಂತ ಅಗತ್ಯವಾದ ಸಾಮಗ್ರಿಗಳಿಂದ ತುಂಬಿದ್ದವು. ಇದರಿಂದ ಕನಿಷ್ಠ ಮೂರು ತಿಂಗಳ ಕಾಲ ಪ್ಯಾಲೆಸ್ತೀನಿಯರು ಜೀವಿಸಬಹುದು ಎಂದು ವರದಿಗಳು ಹೇಳಿವೆ.
ಪ್ರಸ್ತುತ, ಗಾಝಾದ ನೆಲದ ಮೇಲಿನ ಪರಿಸ್ಥಿತಿ ಶಾಂತವಾಗಿದೆ. ಒಪ್ಪಂದಂತೆ ಇಸ್ರೇಲ್ ಎಲ್ಲಾ ನೆರವು ಟ್ರಕ್ಗಳನ್ನು ಗಾಝಾದ ಒಳಗೆ ಬಿಡಬೇಕು ಎಂದು ಪ್ಯಾಲೆಸ್ತೀನಿಯರು ನಿರೀಕ್ಷಿಸುತ್ತಿದ್ದಾರೆ. ಆದರೆ, ಒತ್ತೆಯಾಳುಗಳ ಎಲ್ಲಾ ಮೃತದೇಹಗಳನ್ನು ಹಸ್ತಾಂತರಿಸಿದ ಬಳಿಕ ಇಸ್ರೇಲ್ ಬದ್ದತೆ ಬದಲಾಯಿಸುವ ಆತಂಕವಿದೆ.
ಹಮಾಸ್ಗೆ ಎಚ್ಚರಿಕೆ ಕೊಟ್ಟ ಟ್ರಂಪ್
ಶಸ್ತ್ರಾಸ್ತ್ರ ತ್ಯಜಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಮಾಸ್ ಕರೆ ಕೊಟ್ಟಿದ್ದಾರೆ. ನೀವು ತ್ಯಜಿಸದಿದ್ದರೆ, ನಾನು ತ್ಯಜಿಸುವಂತೆ ಮಾಡುತ್ತೇವೆ, ಅದೂ ಕೂಡ ತ್ವರಿತವಾಗಿ, ಬಹುಶಃ ಹಿಂಸಾತ್ಮಕವಾಗಿ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
9 ಜನರನ್ನು ಹತ್ಯೆಗೈದ ಇಸ್ರೇಲ್
ಕದನ ವಿರಾಮ ಸಂಪೂರ್ಣ ಜಾರಿಯಾಗಿ ಒತ್ತೆಯಾಳುಗಳು, ಬಂಧಿತರ ಹಸ್ತಾಂತರ ಬಹುತೇಕ ಪೂರ್ಣಗೊಳ್ಳುತ್ತಿದ್ದರೂ, ಇಸ್ರೇಲ್ ಮಂಗಳವಾರ 9 ಪ್ಯಾಲೆಸ್ತೀನಿಯರನ್ನು ಹತ್ಯೆ ಮಾಡಿದೆ ಎಂದು ವರದಿಗಳು ಹೇಳಿವೆ. ಹಾಗಾಗಿ, ಇಸ್ರೇಲ್ ಮತ್ತೆ ಕದನ ವಿರಾಮ ಮುರಿದಿದೆ ಎನ್ನಲಾಗಿದೆ. ಹಮಾಸ್ ಒತ್ತೆಯಾಳುಗಳ ಮೃತದೇಹಗಳನ್ನು ಸಂಪೂರ್ಣವಾಗಿ ಹಸ್ತಾಂತರಿಸಿದ ಬಳಿಕ ಇಸ್ರೇಲ್ ಕದನ ವಿರಾಮ ಒಪ್ಪಂದಕ್ಕೆ ಬದ್ದವಾಗಿ ಇರುತ್ತದೆಯೇ? ಎಂಬ ಪ್ರಶ್ನೆ ಈಗ ಮೂಡಿದೆ.


