Homeಚಳವಳಿಅತ್ಯಾಚಾರ ತಡೆಗಟ್ಟಲು ಸಾಧ್ಯ! ಅದರ ಮೂಲಬೇರುಗಳನ್ನು ಅರಿತಾಗ ಮಾತ್ರ...

ಅತ್ಯಾಚಾರ ತಡೆಗಟ್ಟಲು ಸಾಧ್ಯ! ಅದರ ಮೂಲಬೇರುಗಳನ್ನು ಅರಿತಾಗ ಮಾತ್ರ…

ಮೈಸೂರು ಮತ್ತು ತುಮಕೂರು ಅತ್ಯಾಚಾರಗಳ ಹಿನ್ನೆಲೆಯಲ್ಲಿ ಅತ್ಯಾಚಾರಕ್ಕೆ ಮೂಲ ಕಾರಣಗಳೇನು? ಕೊನೆಗೊಳಿಸುವುದು ಹೇಗೆ ಎಂಬುದರ ಕುರಿತು ಲೇಖನ.

- Advertisement -
- Advertisement -

ಲೈಂಗಿಕ ಹಿಂಸೆಯನ್ನು ತಡೆಗಟ್ಟಲು ಸಾಧ್ಯ; ತಡೆಗಟ್ಟಲೇಬೇಕು!

ಇಂದು ಲೈಂಗಿಕ ಹಿಂಸಾಚಾರ ಮತ್ತು ಅತ್ಯಾಚಾರವೆಂಬುದು ಸರ್ಕಾರ ಹಾಗೂ ಸಮಾಜದ ಮುಂದೆ ಬೃಹದಾಕಾರವಾಗಿ ನಿಂತಿರುವ ಅದರದ್ದೇ ಪ್ರತಿಬಿಂಬದಂತೆ ಕಂಡುಬರುತ್ತಿದೆ. ಇದು ಸಮಾಜವೊಂದು ಯಾವ ಮಟ್ಟಕ್ಕೆ ಕೊಳೆಯಬಹುದು ಎಂಬುದಕ್ಕೆ ಸಾಕ್ಷಿಯಾಗಿರುವ ಪ್ರತಿಬಿಂಬ. ಇದು, ‘ನಾಗರಿಕ’ ಎನಿಸಿಕೊಂಡಿರುವ ಸಮಾಜ ಎಂತಹ ಹೃದಯಹೀನ ಹಂತವನ್ನು ತಲುಪಬಹುದು ಎಂಬುದರ ಪ್ರತಿಬಿಂಬ.

ಇಂದು ಮನುಕುಲದ ಅಮಾನವೀಯ, ಕ್ರೂರ ಲಕ್ಷಣಗಳಲ್ಲೊಂದಾಗಿ ಬೆಳೆದು ನಿಂತಿರುವ ಅತ್ಯಾಚಾರವೆಂಬ ಪೆಡಂಭೂತವು ನಮ್ಮೆಲ್ಲರ ಮುಂದೆ ಕೆಲವು ಮೂಲಭೂತವಾದ ಪ್ರಶ್ನೆಗಳನ್ನೆತ್ತಿ ನಿಲ್ಲಿಸಿದೆ; ನಿಜಕ್ಕೂ ಈ ಸಮಾಜ ಮಹಿಳೆಯರ ವಿಚಾರದಲ್ಲಿ ಎಷ್ಟು ಪ್ರಜಾತಾಂತ್ರಿಕವಾಗಿ ಆಲೋಚಿಸುತ್ತಿದೆ? ಎಷ್ಟು ಪ್ರಜಾತಾಂತ್ರಿಕವಾಗಿ ನಡೆದುಕೊಳ್ಳುತ್ತಿದೆ? ಮಹಿಳೆ ಮತ್ತು ಪುರುಷನನ್ನು ಎಷ್ಟು ಮಟ್ಟಿಗೆ ಸಮಾನ ನೆಲೆಯಲ್ಲಿ ಸ್ವೀಕರಿಸಿದೆ? ಹೆಚ್ಚಾಗಿ ಮನೆಯೊಳಗೇ ಇದ್ದ ಮಹಿಳೆಯನ್ನು, ಹೊರಕ್ಕೂ ತಂದು ದುಡಿಯಲು ಹಚ್ಚಲಾಗಿದೆ. ಆ ಮೂಲಕ ಆಕೆಯ ಶ್ರಮವನ್ನು ಆಧುನಿಕ ಜಗತ್ತಿನ ಕುಬೇರರು ತಮ್ಮ ಅಗತ್ಯಗಳಿಗನುಸಾರ ದೋಚುತ್ತಿದ್ದಾರೆ. ಆದರೆ, ಮಹಿಳೆಯ ಈ ಪಾತ್ರಕ್ಕೆ ಆಕೆಯ ಕುಟುಂಬದ ಚೌಕಟ್ಟು ಎಷ್ಟರ ಮಟ್ಟಿಗೆ ಬದಲಾಗಿದೆ? ಮಹಿಳೆಯ ಸ್ವತಂತ್ರ ವ್ಯಕ್ತಿತ್ವ ಮತ್ತು ಅಸ್ತಿತ್ವವನ್ನು ಒಪ್ಪಿಕೊಳ್ಳಲು ಎಷ್ಟರಮಟ್ಟಿಗೆ ಈ ಜಗತ್ತು ಸಿದ್ಧವಿದೆ? ಇಷ್ಟು ವರ್ಷಗಳ ಇತಿಹಾಸ ಹೊಂದಿರುವ ‘ನಾಗರಿಕ’ ಜಗತ್ತು ಮಹಿಳೆಯರ ಮೇಲಿನ ಹಿಂಸೆಗಳ ವಿಚಾರಕ್ಕೆ ಬಂದರೆ ಮಾತ್ರ ಯಾಕೆ ಅತ್ಯಂತ ಕ್ರೂರವಾಗಿ, ಬರ್ಬರವಾಗಿ ನಡೆದುಕೊಳ್ಳುತ್ತದೆ? ಮಹಿಳೆಯನ್ನು ತುಚ್ಛೀಕರಿಸುವ, ಎರಡನೆಯ ದರ್ಜೆಯ ನಾಗರಿಕಳಂತೆ ನೋಡುವ ಸಮಾಜದ ಮನಸ್ಥಿತಿಗೂ, ಈ ಲೈಂಗಿಕ ಹಿಂಸೆಗೂ ಸಂಬಂಧವಿಲ್ಲವೇ? ಇಂತಹ ಹಿಂಸೆಗಳನ್ನು ತಡೆಯಬೇಕಾದರೆ ನಿಜಕ್ಕೂ ಆಗಬೇಕಾದುದೇನು?

ಈ ಮೂಲಭೂತ ಪ್ರಶ್ನೆಗಳಿಗೆ ಸಮರ್ಪಕ ಮತ್ತು ವಾಸ್ತವದ ಉತ್ತರ ಕಂಡುಕೊಂಡು, ಕುಟುಂಬ ಮತ್ತು ಇಡೀ ಸಮಾಜದ ಪ್ರಜಾತಾಂತ್ರೀಕರಣದೆಡೆಗೆ ಸಾಗುತ್ತಿಲ್ಲ. ಬದಲಿಗೆ, ಆಳುವವರು ಮತ್ತು ಅಭಿಪ್ರಾಯ ರೂಪಿಸುವವರು (ಸರ್ಕಾರ, ರಾಜಕಾರಣಿಗಳು, ಅಧಿಕಾರಿಗಳು, ಮಾಧ್ಯಮಗಳು, ಇವರೆಲ್ಲರ ಬೆನ್ನಿಗಿರುವ ಮಠ-ಮಾನ್ಯಗಳು, ಸ್ವಾಮೀಜಿಗಳು, ಮಾಧ್ಯಮಗಳು ಇತ್ಯಾದಿ), ಹೆಚ್ಚುತ್ತಿರುವ ಅತ್ಯಾಚಾರಗಳ ಹೊಣೆಯನ್ನು ಮತ್ತೆ ಮತ್ತೆ ಬಲಿಪಶುಗಳಾಗಿರುವ ಹೆಣ್ಣುಮಕ್ಕಳ ಹೆಗಲಿಗೇ ವರ್ಗಾಯಿಸುತ್ತಿದ್ದಾರೆ; ತಣ್ಣನೆಯ ಕ್ರೌರ್ಯದಲ್ಲಿ ತಮ್ಮ ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿದ್ದಾರೆ.

ಮತ್ತೊಂದೆಡೆ ಇವರುಗಳೇ ಸೇರಿ, ಎಲ್ಲವನ್ನೂ ಸರಕಾಗಿಸುತ್ತಿರುವ ಮಾರುಕಟ್ಟೆ ಶಕ್ತಿಗಳನ್ನು, ಮನೋರಂಜನಾ ಉದ್ದಿಮೆಯ ದೊಡ್ಡ ಕಾರ್ಪೊರೇಟ್‌ಗಳನ್ನು ಕೊಬ್ಬಿಸುತ್ತಿದ್ದಾರೆ. ಮಹಿಳೆಯರನ್ನೂ, ಅವರ ಘನತೆಯನ್ನೂ ಕೂಡಾ ಮಾರಾಟದ ವಸ್ತುವಾಗಿಸಿದ್ದಾರೆ. ‘ಸೆಕ್ಸ್ ಮತ್ತು ಕ್ರೈಮ್‌’ ಅನ್ನೇ ಮನರಂಜನೆ ಎಂಬಂತೆ ಯುವಸಮೂಹವನ್ನು ದಿಕ್ಕುತಪ್ಪಿಸುತ್ತಾ, ಲೈಂಗಿಕ ಹಿಂಸಾಚಾರ ಹೆಚ್ಚಲು ನೇರವಾಗಿ ಕಾರಣರಾಗುತ್ತಿದ್ದಾರೆ.

1990ರ ನಂತರ ಜಾರಿಗೆ ಬಂದ ಜಾಗತೀಕರಣ ನೀತಿಯು ಎಲ್ಲವನ್ನೂ ಸರಕನ್ನಾಗಿಸಿದಂತೆ, ಮಹಿಳೆಯನ್ನೂ ಸರಕನ್ನಾಗಿಸಿದೆ. ಇದಕ್ಕೆ ವ್ಯಕ್ತಿಗತ ಮಹಿಳೆಯರು ಕಾರಣವಲ್ಲ. ಇದೊಂದು ಲಾಭದ ಉದ್ದಿಮೆ. ಈ ನೀತಿಗಳನ್ನು ನಮ್ಮ ಸರ್ಕಾರಗಳೇ ತಂದು, ಈಗ ಅದರ ಪರಿಣಾಮವಾದ ಅತ್ಯಾಚಾರದ ಹೆಚ್ಚಳಕ್ಕೆ ಯಾರೋ ಕೆಲವು ವಿಕೃತ ವ್ಯಕ್ತಿಗಳು ಮಾತ್ರ ಕಾರಣವೆಂಬಂತೆ ಮಾತಾಡುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕಾದರೆ, ನಮ್ಮನ್ನು ಆಳುವವರು ಮಾಡಬೇಕಾದ್ದನ್ನು ಮಾಡುತ್ತಿಲ್ಲ; ಬದಲಿಗೆ ಮಾಡಲೇಬಾರದಾದ್ದನ್ನು ಮಾಡುತ್ತಿದ್ದಾರೆ!!

ಶತಮಾನಗಳಿಂದ ಮುಂದುವರೆಯುತ್ತಾ ಬಂದ ಈ ಕ್ರೌರ್ಯ ಈಗಲೂ ಹಾಗೆಯೇ ಮುಂದುವರೆದಿದೆ-ಅಥವಾ ಹಿಂದಿಗಿಂತ ಹೆಚ್ಚುತ್ತಿದೆ-ಎಂದರೆ, ಅದಕ್ಕೆ ಅತ್ಯಾಚಾರಿಗಳು ಮತ್ತು ಲೈಂಗಿಕ ಹಿಂಸೆ ನೀಡುವವರು ಎಷ್ಟು ಹೊಣೆಯೋ, ನಮ್ಮನ್ನು ಆಳುತ್ತಿರುವ ಪ್ರಭುತ್ವಗಳೂ ಅಷ್ಟೇ ಹೊಣೆ; ಜೊತೆಗೆ, ಈ ಸಮಸ್ಯೆಯನ್ನು ಉಪೇಕ್ಷಿಸುತ್ತಾ ಬಂದ ಪ್ರಜ್ಞಾವಂತ ಜನರ ನಿಷ್ಕ್ರಿಯತೆಯ ಪಾಲೂ ಇದರಲ್ಲಿ ಸೇರಿದೆ. ಈಗಾಗಲೇ ಬಹಳ ಕಾಲದಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಈ ಕರ್ತವ್ಯ ಇನ್ನಷ್ಟು ಕಾಲ ಹೀಗೆಯೇ ಉಪೇಕ್ಷೆಗೊಳಗಾಗದಂತೆ ನೋಡಿಕೊಳ್ಳಬೇಕಾದ ಹೊಣೆ ನಮ್ಮ ಮೇಲಿದೆ.

ಈ ನಿಟ್ಟಿನಲ್ಲಿ, ಹೆಚ್ಚುತ್ತಿರುವ ಅತ್ಯಾಚಾರಗಳಿಗೆ ಮಹಿಳೆಯನ್ನೇ ಹೊಣೆಯಾಗಿಸಿ, ಯಾವುದೇ ಪರಿಣಾಮಕಾರಿ ನಿಯಂತ್ರಣ ಕ್ರಮಗಳಿಗೆ ಮುಂದಾಗದ ಸರ್ಕಾರಗಳ ವಿರುದ್ಧದ ನಮ್ಮೆಲ್ಲರ ಹೋರಾಟಗಳನ್ನು ಇನ್ನಷ್ಟು ತೀಕ್ಷ್ಣಗೊಳಿಸಬೇಕಾಗಿದೆ. ಒಟ್ಟಿನಲ್ಲಿ ನಾವೆಲ್ಲರೂ ಇನ್ನಷ್ಟು ಕ್ರಿಯಾಶೀಲರಾಗಿ ಒಂದು ವಿದ್ಯಮಾನವಾಗಿ ಹರಡುತ್ತಿರುವ ಈ ಬರ್ಬರ ಹಿಂಸಾಚಾರದ ವಿರುದ್ಧದ ಐಕ್ಯ ಹೋರಾಟಕ್ಕೆ ಬೀದಿಗಿಳಿಯಲೇಬೇಕಾಗಿದೆ. ಇದು ಸಮಾನ ಮನಸ್ಕರ ಸಮಷ್ಟಿ ಪ್ರಯತ್ನದಿಂದ ಆಗಬೇಕಾದ ಕೆಲಸವಾಗಿದೆ.

• ಬಟ್ಟೆ ಹೆಚ್ಚು ಹಾಕುವುದು, ಕಡಿಮೆ ಹಾಕುವುದು ಅತ್ಯಾಚಾರಕ್ಕೆ ಕಾರಣವಲ್ಲ; ಹೆಣ್ಣು ಮಕ್ಕಳು ಹೊರಗೆ ಹೊತ್ತಲ್ಲದ ಹೊತ್ತಲ್ಲಿ ಓಡಾಡುವುದು ಅತ್ಯಾಚಾರಕ್ಕೆ ಕಾರಣವಲ್ಲ.

• ಅತ್ಯಾಚಾರ ನಡೆಸುವವರಲ್ಲಿ ಹೆಚ್ಚಿನವರು ವಿವಿಧ ರೀತಿಯಲ್ಲಿ ಮೇಲಿನ ಸ್ಥಾನದಲ್ಲಿರುವವರು. ಅತ್ಯಾಚಾರಕ್ಕೆ ಒಳಗಾಗುವವರು ವಿವಿಧ ಕಾರಣಗಳಿಂದಾಗಿ ದುರ್ಬಲರಾಗಿರುವವರು. (ಈಗೀಗ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ಅಥವಾ ಮುದಿವಯಸ್ಸಿನ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿರುವುದಕ್ಕೂ ಅದೇ ಕಾರಣ).

• ಅಶ್ಲೀಲವಾದ ಚಿತ್ರಗಳನ್ನು ಇಂಟರ್‌ನೆಟ್, ಟಿವಿ-ಸಿನೆಮಾ, ಪತ್ರಿಕೆಗಳಲ್ಲಿ ಪ್ರಸಾರ ಮಾಡುತ್ತಿರುವುದೂ ಅಲ್ಲದೇ, ಎಲ್ಲರ ಕೈಗಳಿಗೂ ತಲುಪುವ ಮೊಬೈಲ್‌ಗೂ ಕಳಿಸುವ ಉದ್ದಿಮೆಯನ್ನು ತಡೆಯಲು ಏನು ಮಾಡಲಾಗಿದೆ? ನೀಲಿ ಚಿತ್ರಗಳಿಂದ ಹಿಡಿದು, ‘ಮಾಮೂಲಿ’ ಪತ್ರಿಕಾ ವರದಿಗಳೆಲ್ಲದರಲ್ಲೂ ಮಹಿಳೆಯನ್ನು ಸೆಕ್ಸ್ ಬೊಂಬೆಯನ್ನಾಗಿ ಚಿತ್ರಿಸುತ್ತಿರುವ ಎಲ್ಲರೂ ಇದರ ಕುರಿತು ಯೋಚಿಸಬೇಕಲ್ಲವೇ? ಜಾಗತೀಕರಣ ನೀತಿಗಳ ನಂತರ ಇದು ಇನ್ನೂ ಹೆಚ್ಚಾಗಿದೆ.

• ಎಲ್ಲಕ್ಕಿಂತ ಮುಖ್ಯವಾಗಿ ಯಾರು ದುರ್ಬಲರೆಂದು ಬಿಂಬಿಸಲ್ಪಡುತ್ತಾರೋ, ಅವರೇ ಶೋಷಣೆಗೆ ಒಳಗಾಗುವುದು. ಮಹಿಳೆಯನ್ನು ಅಸಮಾನವಾಗಿಟ್ಟಿರುವ ಸಮಾಜದಲ್ಲಿ, ಮಹಿಳೆಯನ್ನು ಸರಕು ಮಾಡಿಟ್ಟಿರುವ ಸಮಾಜದಲ್ಲಿ ಅತ್ಯಾಚಾರ ತಡೆಗಟ್ಟಬೇಕೆಂದರೆ ಮೊದಲು ನಾವು ಸಮಾನತೆಯ ಕಡೆಗೆ ಚಲಿಸಬೇಕು. ಅದಕ್ಕಾಗಿ ಸರ್ಕಾರ ಹಾಗೂ ಸಮಾಜವನ್ನು ಒತ್ತಾಯಿಸಬೇಕು.

• ಮಹಿಳೆಯರ ಸುರಕ್ಷತೆಯ ಕುರಿತು ಕ್ರಮಗಳು ಪರಿಣಾಮಕಾರಿಯಾಗಿ ಜರುಗದಿರುವುದು ಮತ್ತು ಪೊಲೀಸ್ ಹಾಗೂ ನ್ಯಾಯಾಂಗದ ವ್ಯವಸ್ಥೆಯಲ್ಲಿರುವ ಕೊರತೆಗಳು ಲೈಂಗಿಕ ಹಿಂಸೆಯ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿವೆ.

ಪರಿಹಾರ ಮಾರ್ಗಗಳು
1. ಹೆಣ್ಣನ್ನು ತುಚ್ಛೀಕರಿಸುವ, ದುರ್ಬಳಕೆ ಮಾಡುವ, ಮಹಿಳೆಯರ ಘನತೆಯನ್ನು ಕುಗ್ಗಿಸುವ, ಹೆಣ್ಣು-ಗಂಡಿನ ನಡುವೆ ಮೇಲುಕೀಳನ್ನು ಆಚರಿಸುವ, ಎಲ್ಲಾ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ನಂಬಿಕೆಗಳನ್ನೂ, ಸಂಸ್ಥೆಗಳನ್ನೂ, ಆಚರಣೆಗಳನ್ನೂ ನಿಷೇಧಿಸಬೇಕು: ಇದು ಈ ದೇಶದ ಸಂವಿಧಾನ ರೂಪಿಸುವಲ್ಲಿ ಮುಖ್ಯಪಾತ್ರ ವಹಿಸಿದ ಡಾ. ಅಂಬೇಡ್ಕರ್ ಅವರು ಅರ್ಧ ಶತಮಾನಕ್ಕೂ ಹಿಂದೆಯೇ ಹಿಂದೂ ಕೋಡ್ ಬಿಲ್‌ನಲ್ಲಿ ಪ್ರಸ್ತಾಪಿಸಿದರು. ಅದನ್ನು ಈ ದೇಶದ ಪಟ್ಟಭದ್ರರು ಆಗಲೂ ಜಾರಿಮಾಡಲು ಅವಕಾಶ ಕೊಡಲಿಲ್ಲ. ಈಗಲೂ ಸ್ತ್ರೀ ಪುರುಷ ಸಮಾನತೆಯ ಚಿಂತನೆಗಳನ್ನು ಬೆಳೆಯಲು ಬಿಡುತ್ತಿಲ್ಲ. ಅತ್ಯಾಚಾರ, ಲೈಂಗಿಕ ಹಿಂಸೆ ಮಾತ್ರವಲ್ಲದೆ, ಎಲ್ಲಾ ರೀತಿಯ ಮಹಿಳೆಯರ ಮೇಲಿನ ದೌರ್ಜನ್ಯಗಳ ಬೇರು ಇದೇ ಆಗಿರುವುದರಿಂದ, ಇದನ್ನು ಸರ್ಕಾರ ತೀವ್ರ ನಿಗಾವಹಿಸಿ ತಡೆಗಟ್ಟುವ ಅಗತ್ಯವಿದೆ.

ಎಲ್ಲಾ ಜನಪ್ರತಿನಿಧಿಗಳು, ಪೊಲೀಸ್ ಅಧಿಕಾರಿಗಳು, ನ್ಯಾಯಾಧೀಶರು, ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು, ಮಾಧ್ಯಮಗಳು ಸೇರಿದಂತೆ ಜವಾಬ್ದಾರಿ ಸ್ಥಾನದಲ್ಲಿರುವ ಯಾರೇ ಆದರೂ, ಮಹಿಳೆಯರ ಮೇಲಿನ ಅತ್ಯಾಚಾರಗಳ ವಿಚಾರದಲ್ಲಿ ಲಘುವಾಗಿ ಸಾರ್ವಜನಿಕ ಹೇಳಿಕೆಗಳನ್ನು ಕೊಟ್ಟರೆ, ಅವುಗಳನ್ನು ‘ಲೈಂಗಿಕ ಹಿಂಸೆಯ ಪ್ರಚೋದನೆ’ ಎಂದು ಪರಿಗಣಿಸಿ, ಕಾನೂನು ಕ್ರಮ ಜರುಗಿಸಬೇಕು.

2. ಮಹಿಳೆಯರ ಸಾಮಾಜಿಕ ಸ್ಥಾನ-ಮಾನವನ್ನು ಉತ್ತಮಪಡಿಸುವ ದೃಷ್ಟಿಯಿಂದ, ಅಧಿಕಾರ, ಆಸ್ತಿ, ಉದ್ಯೋಗ, ಶಿಕ್ಷಣಗಳಲ್ಲಿ ಕಡ್ಡಾಯವಾಗಿ ಶೇ. 50ರಷ್ಟು ಮೀಸಲಾತಿ ಮತ್ತಿತರ ಕ್ರಮಗಳಿಗೆ ಮುಂದಾಗಬೇಕು. (ಮಹಿಳೆಯರ ವರ್ಗ, ಜಾತಿ ಹಿನ್ನೆಲೆಯನ್ನಾಧರಿಸಿದ ವರ್ಗೀಕರಣವೂ ಇರಬೇಕು).

3. ಸಮಾಜದ ಪ್ರಜಾತಾಂತ್ರೀಕರಣದ ದಿಕ್ಕಿನಲ್ಲಿ ಖಚಿತವಾದ ಹೆಜ್ಜೆಗಳನ್ನಿಡುವುದು: ಪಠ್ಯಗಳಲ್ಲಿ, ಸಾಮಾಜಿಕ ಸಂಸ್ಥೆಗಳಲ್ಲಿ, ಕುಟುಂಬದಲ್ಲಿ ಲಿಂಗ ಅಸಮಾನತೆ (ಹಾಗೂ ಜಾತಿ-ವರ್ಗ-ಧರ್ಮ ಮೊದಲಾದ ಎಲ್ಲಾ ರೀತಿಯ ಅಸಮಾನತೆಗಳು) ಅಪರಾಧ ಎಂಬ ಮನೋಭಾವವನ್ನು ಸಮಾಜದಲ್ಲಿ ಬೇರೂರಿಸಲು ವ್ಯಾಪಕವಾದ ಅರಿವಿನ ಕಾರ್ಯಕ್ರಮಗಳನ್ನು ಗಂಭೀರವಾಗಿ ಯೋಜಿಸುವುದು ಮತ್ತು ಕಾರ್ಯಗತಗೊಳಿಸುವುದು.

4. ಎಲ್ಲಾ ಶಾಲಾ-ಕಾಲೇಜುಗಳಲ್ಲಿ (ಖಾಸಗಿ ಮತ್ತು ಸರ್ಕಾರಿ), ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರುವ ಕೆಲಸದ ಸ್ಥಳಗಳಲ್ಲಿ, ಸ್ವಸಹಾಯ ಗುಂಪುಗಳಲ್ಲಿ ಮೊದಲಾದೆಡೆ ಮಹಿಳಾ ಆತ್ಮರಕ್ಷಣಾ ತರಬೇತಿಯನ್ನು ಕಡ್ಡಾಯವಾಗಿ ಜಾರಿಗೊಳಿಸುವುದು.

5. ಅತ್ಯಾಚಾರ ವಿರೋಧಿ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು: ಲೈಂಗಿಕ ಹಿಂಸೆ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ, ಸರಿಯಾದ ತನಿಖೆಯನ್ನು ಮತ್ತು ಶೀಘ್ರ ನ್ಯಾಯದಾನವನ್ನು ಖಾತ್ರಿಪಡಿಸಬೇಕು. ಪೊಲೀಸ್ ಯಂತ್ರಾಂಗ ಮತ್ತು ನ್ಯಾಯಾಂಗ ಪ್ರಭಾವಗಳಿಗೆ ಮಣಿಯುವುದನ್ನು ಅಥವಾ ಭ್ರಷ್ಟಾಚಾರಕ್ಕೆ ಒಳಗಾಗಿ ಇಂತಹ ಪ್ರಕರಣಗಳಲ್ಲಿ ನಿರಪರಾಧಿಗಳನ್ನು ಬಲಿಯಾಗಿಸುವುದನ್ನು ಸರ್ಕಾರ ತಡೆಗಟ್ಟಬೇಕು.

6. ಲೈಂಗಿಕ ಹಿಂಸೆ ವಿರೋಧಿ ನಿಯಮಗಳನ್ನು ರೂಪಿಲು ಏಪ್ರಿಲ್‌ನಲ್ಲಿ ನಡೆಯುವ ಬಜೆಟ್ ಅಧಿವೇಶದಲ್ಲಿ ವಿಶೇಷ ಚರ್ಚೆಯ ಅವಧಿಯನ್ನು ಗೊತ್ತುಪಡಿಸಬೇಕು ಮತ್ತು ಇದಕ್ಕಾಗಿ ವಿಶೇಷ ಬಜೆಟ್‌ನ್ನು ಒದಗಿಸಬೇಕು. ಇಂತಹ ಕೆಲಸಗಳಿಗಾಗಿಯೇ ಇರುವ ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೊದಲಾದವು ಈ ದಿಕ್ಕಿನಲ್ಲಿ ಪರಿಣಾಮಕಾರಿ ಕೆಲಸ ನಿರ್ವಹಿಸುವಂತೆ ಬಲಪಡಿಸಬೇಕು ಮತ್ತು ಇದರಲ್ಲಿ ವಿಫಲವಾಗದಂತೆ ಖಾತ್ರಿಪಡಿಸಬೇಕು.

7. ಮೇಲೆ ಹೇಳಿರುವ ಎಲ್ಲಾ ಹಕ್ಕೊತ್ತಾಯಗಳನ್ನು ಈಡೇರಿಸಲು ಕೂಡಲೇ ಮುಂದಾಗುವುದರ ಜೊತೆಗೆ ಈ ತಕ್ಷಣದಲ್ಲೇ ತೆಗೆದುಕೊಳ್ಳಬಹುದಾದ ಕ್ರಮವೂ ಇದೆ. ಇಂಟರ್‌ನೆಟ್, ಮೊಬೈಲ್, ಸಿನೆಮಾ, ಸಮೂಹ ಮಾಧ್ಯಮಗಳು ಮತ್ತಿತರೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಸೆಕ್ಸ್ ಉದ್ದಿಮೆಯನ್ನು, ಮಹಿಳೆಯರನ್ನು ತುಚ್ಛೀಕರಿಸುವ ಸಂಗತಿಗಳನ್ನು ತಡೆಗಟ್ಟಬೇಕು.

ಈ ನೆಲದಲ್ಲಿ ಹೆಣ್ಣು ತುಳಿಯಲ್ಪಡುತ್ತಿದ್ದರೆ,
ಅವಮಾನಿಸಲ್ಪಡುತ್ತಿದ್ದರೆ,
ನಿಮ್ಮೆದೆಯ ಮೇಲೆ ಕೈಯಿಟ್ಟು ಹೇಳಿ,
ಈ ದೇಶ ಸ್ವತಂತ್ರವೇ?!

ಕೃಪೆ: ಮಹಿಳಾ ಮುನ್ನಡೆ, ಕರ್ನಾಟಕ ಜನಶಕ್ತಿ ಮತ್ತು ಲೈಂಗಿಕ ಹಿಂಸೆ ವಿರೋಧಿ ಜನಚಳುವಳಿಯ ಕಿರುಪುಸ್ತಕದಿಂದ ಈ ಲೇಖನವನ್ನು ಆಯ್ದುಕೊಳ್ಳಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಅಶ್ಲೀಲ ಸಿನಿಮಾ ಧಾರವಾಹಿ ಸಂಭಾಷಣೆಗಳು, ದೃಶ್ಯಗಳು ಮತ್ತು ಯುವಜನತೆಯನ್ನು ಹುಚ್ಚಬ್ಬಿಸುವ ಅಶ್ಲೀಲ ಸಿನಿಮಾಹಾಡುಗಳನ್ನು ನಿರ್ಬಂಧಿಸಬೇಕು. ಪ್ರೀತಿ ಎಂದರೆ ಏನು? ಜೀವನದಲ್ಲಿ ಅದರ ಅವಶ್ಯಕತೆ ಎಷ್ಟು, ಅದರ ಮಹತ್ವ, ಹಸು ಎಮ್ಮೆ ನಾಯಿ ಬೆಕ್ಕು ಕಾಗೆ ಗೂಬೆ ಗುಬ್ಬಚ್ಚಿ ಹೀಗೆ ಎಲ್ಲ ಪ್ರಾಣಿ ಪಕ್ಷಿಗಳಂತೆ ಮಾನವನಿಗೂ ಕಾಮತೃಷೆ ಇದೆ ಎನ್ನುವುದನ್ನು ಯುವಜನತೆಗೆ ಅರ್ಥೈಸಿ ಹೇಳಬೇಕಾಗಿದೆ, ಅದನ್ನ ವೈಭವೀಕರಿಸಿ ಹಣ ಮಾಡುತ್ತಿರುವವರನ್ನ ಹತೋಟಿ ಯಲ್ಲಿಡಬೇಕಾಗಿದೆ

  2. ಎಲ್ಲಾ ವಯೋಮಾನದ ಗಂಡು ಮಕ್ಕಳೂ ಹೆಣ್ಣುಮಕ್ಕಳ ಬಗ್ಗೆ ಸೂಕ್ಷ್ಮತೆ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ.
    ಸ್ವಾತಂತ್ರ್ಯ ಪೂರ್ವದಲ್ಲೇ ಈಶ್ವರಚಂದ್ರ ವಿದ್ಯಾಸಾಗರ್, ರಾಜಾರಾಮ ಮೋಹನ್ ರಾಯರು,
    ಜ್ಯೋತೀಬಾ ಫುಲೆ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ, ವಿಧವಾ ವಿವಾಹದ ಬಗ್ಗೆ ಹೋರಾಟ ಮಾಡಿದರು. ಹಾಗಾದರೆ ಈಗಿನ ಕಾಲದ ನಾವು ಇಂಥಾ ಅಸಮಾನತೆ, ಬರ್ಬರತೆಯಲ್ಲಿ ಬದುಕುವುದು ಗಂಡುಮಕ್ಕಳ ವ್ಯಕ್ತಿತ್ವಕ್ಕೆ ಅವಮಾನ ಎಂಬ ಜಾಗೃತಿ ಮೂಡಿಸುವ ಅವಶ್ಯಕತೆ ಪ್ರಜ್ಞಾವಂತರ ಜವಾಬ್ದಾರಿ. ಈ ಜವಾಬ್ದಾರಿ ಮನೆ, ಸಮಾಜ, ಸರಕಾರ ಎಲ್ಲರದ್ದೂ ಆಗಿದೆ.
    ಮನೆಯಲ್ಲಿ ಅಮ್ಮಂದಿರು ಹೆಣ್ಣುಮಕ್ಕಳ ಬಗ್ಗೆ ತೆಗೆದುಕೊಳ್ಳುವ ಜಾಗೃತೆಯ ಎರಡು ಪಟ್ಟು ತನ್ನ ಗಂಡು ಮಕ್ಕಳ ಬಗ್ಗೆ ತೆಗೆದುಕೊಳ್ಳಬೇಕು. ತನ್ನ ಮಗ ಹಾಗೂ ಗಂಡ ಹೆಣ್ಣು ಮಕ್ಕಳ ಬಗ್ಗೆ ಎಷ್ಟು ಮಾನವೀಯತೆ, ಕಾಳಜಿ ತೋರುತ್ತಾನೆ?
    ಹೆಣ್ಣು ಗಂಡಿನಂತೇ ಸಮಾನವಾಗಿ ಸಂತೋಷವಾಗಿ ಬದುಕಲು ಅರ್ಹ ಜೀವಿ. ಅವಳನ್ನು ಒಂದು ಸರಕಿನಂತೆ ನೋಡುವ ಅಭ್ಯಾಸವನ್ನು ಮನೆಯಲ್ಲಿ ಅಮ್ಮಂದಿರು, ಶಾಲೆಗಳಲ್ಲಿ ಅಧ್ಯಾಪಕರು ಪ್ರಶ್ನೆ ಮಾಡುತ್ತಾ ಗಂಡುಮಕ್ಕಳಲ್ಲಿ ಎಚ್ಚರವನ್ನು ಮೂಡಿಸಬೇಕು.
    ಈಗಿನ ಹೆಣ್ಣು ಮಕ್ಕಳೂ ಪ್ರತಿಯೊಂದು ವಿಷಯವನ್ನೂ ವಿಮರ್ಶೆ ಮಾಡಿ ಸತ್ಯಾಸತ್ಯತೆಯನ್ನು ಅರ್ಥ ಮಾಡಿ ತಾನು ಒಂದು ಸರಕು ಎನ್ನುವ ಭಾವನೆಯನ್ನೆನು ಬಿಟ್ಟು ಸಮಾಜದಲ್ಲೂ ಹೆಣ್ಣನ್ನು ಸರಕಿನಂತೆ ನೋಡುವ ಪ್ರತಿಯೊಂದನ್ನೂ ಪ್ರಶ್ನೆ ಮಾಡಬೇಕು.

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....