ಜಮ್ಮು ಕಾಶ್ಮೀರದ ಯುವಕರು ಪ್ರಜಾಪ್ರಭುತ್ವದಲ್ಲಿ ಮತ್ತೆ ವಿಶ್ವಾಸವನ್ನು ಕಂಡುಕೊಂಡಿದ್ದು, ತಮ್ಮ ಮತವು ಬದಲಾವಣೆಯನ್ನು ತರಬಹುದು ಎಂದು ಭಾವಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ. ಇದು ಅವರ ಸಬಲೀಕರಣದ ಮೊದಲ ಹೆಜ್ಜೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಶ್ರಿನಗರದ ಶೇರ್-ಎ-ಕಾಶ್ಮೀರ ಸ್ಟೇಡಿಯಂನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವ ಭರವಸೆಯನ್ನು ಬಿಜೆಪಿ ಈಡೇರಿಸುತ್ತದೆ ಎಂದು ಭರವಸೆ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ನನ್ನ ಜಮ್ಮು ಕಾಶ್ಮೀರದ ಯುವಕರು ಇನ್ನು ಅಸಹಾಯಕರಲ್ಲ. ಅವರು ಮೋದಿ ಸರ್ಕಾರದ ಅಡಿಯಲ್ಲಿ ಅಧಿಕಾರ ಪಡೆಯುತ್ತಿದ್ದಾರೆ. ಜಮ್ಮು ಕಾಶ್ಮೀರ ಬಿಜೆಪಿಯು ಯುವಕರ ಉದ್ಯೋಗಕ್ಕಾಗಿ ಬೃಹತ್ ಕಾರ್ಯಕ್ರಮಗಳನ್ನು ಮಾಡಿರುವುದು ನನಗೆ ಸಂತೋಷವಾಗಿದೆ. ಅವರಿಗೆ ಉದ್ಯೋಗ ನೀಡುವ ಕೆಲಸವನ್ನು ಬಿಜೆಪಿ ಮಾಡಲಿದೆ’’ ಎಂದು ಮೋದಿ ಹೇಳಿದ್ದಾರೆ.
ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಈ ಮೂರು ಪಕ್ಷಗಳು ತಮ್ಮ ಕುಟುಂಬಗಳ ಲಾಭಕ್ಕಾಗಿ ಪ್ರಜಾಪ್ರಭುತ್ವ ಮತ್ತು ಕಾಶ್ಮೀರವನ್ನು “ತುಳಿದು ಹಾಕಿವೆ” ಎಂದು ಹೇಳಿದ್ದಾರೆ.
“1980ರ ದಶಕದಲ್ಲಿ ಅವರು ಮಾಡಿದ್ದೇನು ಎಂಬುದು ನಿಮಗೆ ನೆನಪಿದೆಯೇ? ಅವರು ಜಮ್ಮು ಕಾಶ್ಮೀರದ ರಾಜಕೀಯವನ್ನು ತಮ್ಮ ಸ್ವಂತ ದುರಾಸೆಗಾಗಿ ಬಳಸಿಕೊಂಡರು. ಅವರು ತಮ್ಮ ಕುಟುಂಬವನ್ನು ಹೊರತುಪಡಿಸಿ ಯಾರೂ ಮುಂದೆ ಬರಲು ಬಯಸಲಿಲ್ಲ? ಇಲ್ಲದಿದ್ದರೆ, ಅವರು ಪಂಚಾಯತ್, ಡಿಡಿಸಿ ಮತ್ತು ಬಿಡಿಸಿ ಚುನಾವಣೆಗಳನ್ನು ಏಕೆ ನಿಲ್ಲಿಸಿದರು?. ತಮ್ಮ ಸ್ವಾರ್ಥದ ಫಲವಾಗಿ ಈ ಮೂರು ಕುಟುಂಬಗಳು ಮಾತ್ರ ಅಧಿಕಾರಕ್ಕೆ ಬರುತ್ತವೆ ಎಂದು ಭಾವಿಸಿದ ಯುವಕರು ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಜಮ್ಮು ಕಾಶ್ಮೀರದ ಪರಿಸ್ಥಿತಿಯು ಸಾಕಷ್ಟು ಬದಲಾಗಿದೆ. ಇದು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಯುವಕರ ವಿಶ್ವಾಸವನ್ನು ಪುನಃಸ್ಥಾಪಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ. “ಮೊದಲು ಚುನಾವಣೆ ನಡೆದ ಸಂದರ್ಭಗಳನ್ನು ನೆನಪಿಸಿಕೊಳ್ಳಿ. ಸಂಜೆ 6 ಗಂಟೆಗೆ ಪ್ರಚಾರಗಳು ನಿಲ್ಲುತ್ತವೆ. ಮನೆ-ಮನೆ ಪ್ರಚಾರ ಅಸಾಧ್ಯವಾಗಿತ್ತು. ಕಾಂಗ್ರೆಸ್, ಎನ್ಸಿ ಮತ್ತು ಪಿಡಿಪಿ ಈ ಮೂರು ಕುಟುಂಬಗಳು ಇದರಿಂದ ಸಂತೋಷವಾಗಿದ್ದವು” ಎಂದು ಅವರು ಹೇಳಿದ್ದಾರೆ.
“ಇಂದು, ಪ್ರಚಾರವು ತಡರಾತ್ರಿಯಲ್ಲಿ ನಡೆಯುತ್ತದೆ. ಈಗ, ಜನರು ಪ್ರಜಾಪ್ರಭುತ್ವವನ್ನು ಆಚರಿಸುತ್ತಿದ್ದಾರೆ. ಯುವಕರು ಮತ್ತೆ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವನ್ನು ಕಂಡುಕೊಂಡಿದ್ದಾರೆ, ಅವರು ತಮ್ಮ ಮತ, ತಮ್ಮ ಪ್ರಜಾಪ್ರಭುತ್ವದ ಹಕ್ಕು, ಬದಲಾವಣೆಯನ್ನು ತರಬಹುದು ಎಂದು ಭಾವಿಸುತ್ತಾರೆ. ಇದು ಸಬಲೀಕರಣದ ಮೊದಲ ಹೆಜ್ಜೆಯಾಗಿದೆ.” ಅವರು ಹೇಳಿದ್ದಾರೆ.
ವಿಡಿಯೊ ನೋಡಿ: ‘ಭ್ರಷ್ಟಾಚಾರವನ್ನು ನಾವು ಮರು ವ್ಯಾಖ್ಯಾನಿಸಬೇಕಾಗಿದೆ’ : ವಿ ಎಲ್ ನರಸಿಂಹಮೂರ್ತಿ


