ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಜವಾದ್ ಚಂಡಮಾರುತ ಪೂರ್ವ ಕರಾವಳಿಗೆ ಅಪ್ಪಳಿಸಿದ್ದು, ಪಶ್ಚಿಮ ಬಂಗಾಳದ ದಕ್ಷಿಣ ಭಾಗಗಳು ಮತ್ತು ಕೋಲ್ಕತ್ತಾದಲ್ಲಿ ಭಾರಿ ಮಳೆಗೆ ಕಾರಣವಾಗಿದೆ. ಪಶ್ವಿಮ ಬಂಗಾಳ ಸರ್ಕಾರ ಹೂಗ್ಲಿ ನದಿಯಲ್ಲಿ ದೋಣಿ ಸೇವೆಗಳನ್ನು ನಿಲ್ಲಿಸಿದೆ. ಜೊತೆಗೆ ಸಮುದ್ರತೀರದ ರೆಸಾರ್ಟ್ಗಳಿಗೆ ಭೇಟಿ ನೀಡದಂತೆ ಪ್ರವಾಸಿಗರಿಗೆ ಮನವಿ ಮಾಡಿದೆ.
” ಚಂಡಮಾರುತ ಉತ್ತರ-ಈಶಾನ್ಯಕ್ಕೆ ಒಡಿಶಾ ಕರಾವಳಿಯುದ್ದಕ್ಕೂ ಪಶ್ಚಿಮ ಬಂಗಾಳದ ಕಡೆಗೆ ಚಲಿಸುವ ಸಾಧ್ಯತೆಯಿದೆ. ಕೋಲ್ಕತ್ತಾ, ಹೌರಾ, ಉತ್ತರ ಮತ್ತು ದಕ್ಷಿಣ 24 ಪರಗಣಗಳು, ಪುರ್ಬಾ ಮತ್ತು ಪಶ್ಚಿಮ ಮೇದಿನಿಪುರ್ನಲ್ಲಿ ಮಳೆಯಾಗಿದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ದಕ್ಷಿಣ 24 ಪರಗಣಗಳು ಮತ್ತು ಪುರ್ಬಾ ಮೇದಿನಿಪುರ ಜಿಲ್ಲೆಗಳ ಕರಾವಳಿ ಪ್ರದೇಶಗಳು ಮತ್ತು ಪುರ್ಬಾ ಬರ್ಧಮಾನ್ನ ಕೆಲವು ಭಾಗಗಳು ಸೇರಿದಂತೆ ದಕ್ಷಿಣ ಬಂಗಾಳದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ವಾರಾಂತ್ಯದಲ್ಲಿ ಸಮುದ್ರ ತೀರದ ರೆಸಾರ್ಟ್ಗಳಾದ ದಿಘಾ, ಮಂದರ್ಮಣಿ, ಬಕ್ಖಾಲಿ, ಫ್ರೇಜರ್ಗಂಜ್ ಮತ್ತು ಇತರ ಕರಾವಳಿ ಪ್ರದೇಶಗಳಿಗೆ ಭೇಟಿ ನೀಡದಂತೆ ರಾಜ್ಯ ಸರ್ಕಾರ ಪ್ರವಾಸಿಗರಲ್ಲಿ ಮನವಿ ಮಾಡಿದೆ. ಬಹುತೇಕ ಎಲ್ಲಾ ಮೀನುಗಾರರು ಕಾಕದ್ವೀಪ್, ದಿಘಾ ಮತ್ತು ಇತರ ಕರಾವಳಿ ಪ್ರದೇಶಗಳಿಗೆ ವಾಪಸ್ ಮರಳಿದ್ದಾರೆ.
ಇದನ್ನೂ ಓದಿ: ಜವಾದ್ ಚಂಡಮಾರುತ: ಒಡಿಶಾ, ಆಂಧ್ರದ ಕರಾವಳಿಯಲ್ಲಿ ಸ್ಥಳಾಂತರ ಪ್ರಕ್ರಿಯೆ ಆರಂಭ
ಪಶ್ಚಿಮ ಬಂಗಾಳ ಸರ್ಕಾರವು ದಕ್ಷಿಣ 24 ಪರಗಣಗಳು ಮತ್ತು ಪುರ್ಬಾ ಮೇದಿನಿಪುರದ ಕರಾವಳಿ ಪ್ರದೇಶಗಳಿಂದ ಸುಮಾರು 17,900 ಜನರನ್ನು ಬೇರೆಡೆಗೆ ಸ್ಥಳಾಂತರಿಸಿದ್ದು, ಎರಡು ಜಿಲ್ಲೆಗಳಲ್ಲಿ 48 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ತುರ್ತು ಪರಿಸ್ಥಿತಿಯನ್ನು ಎದುರಿಸಲು ಆಡಳಿತವು 115 ವಿವಿಧೋದ್ದೇಶ ಸೈಕ್ಲೋನ್ ಶೆಲ್ಟರ್ಗಳನ್ನು ಮತ್ತು 135 ಹೆಚ್ಚುವರಿ ತಾತ್ಕಾಲಿಕ ಪರಿಹಾರ ಆಶ್ರಯಗಳನ್ನು ತೆರೆದಿದೆ” ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಇನ್ನೆರಡು ದಿನಗಳಲ್ಲಿ ಭಾರೀ ಮಳೆಯಾಗಲಿದ್ದು, ಯಾವುದೇ ಸಮಸ್ಯೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲಾ ಸಿಬ್ಬಂದಿಯ ವಾರದ ರಜೆ ಹಾಗೂ ಇತರೆ ರಜೆಗಳನ್ನು ರದ್ದುಗೊಳಿಸಲಾಗಿದೆ ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಹತ್ತೊಂಬತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತಂಡಗಳನ್ನು ನಿಯೋಜಿಸಲಾಗಿದೆ. ರಾಜ್ಯ ವಿದ್ಯುತ್ ಮತ್ತು ಲೋಕೋಪಯೋಗಿ ಇಲಾಖೆಗಳು ಮತ್ತು ರಾಜ್ಯ ವಿದ್ಯುತ್ ವಿತರಣಾ ಕಂಪನಿಯ (WBSEDCL) ತಂಡಗಳನ್ನು ನಿರ್ಣಾಯಕ ಹಂತಗಳಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದು, ಮಾಹಿತಿ ಪಡೆಯುತ್ತಿದ್ದಾರೆ. ಮುನ್ಸಿಪಲ್ ಸಂಸ್ಥೆಗಳ ಅಧಿಕಾರಿಗಳು ಎಲ್ಲ ಎಚ್ಚರಿಕೆ ತೆಗೆದುಕೊಳ್ಳುತ್ತಿದ್ದಾರೆ ಎಂದು ರಾಜ್ಯ ಸಚಿವ ಫಿರ್ಹಾದ್ ಹಕೀಮ್ ಹೇಳಿದ್ದಾರೆ.