ಮಕ್ಕಳು, ಮಹಿಳೆಯರ ಮೇಲಿನ ಅತ್ಯಾಚಾರ ಕೊಲೆ ಪ್ರಕರಣಗಳು ಇಂದಿಗೂ ಮುಂದುವರೆಯುತ್ತಿರುವುದು ನಾಗರಿಕ ಸಮಾಜ ಕೊಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಸರ್ಕಾರಗಳ ನಿರ್ಲಕ್ಷ್ಯ, ಇಚ್ಛಾಶಕ್ತಿಯ ಕೊರತೆಯಿಂದಾಗಿ ಅಮಾಯಕರು ಅಸುನೀಗುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಉತ್ತರ ಪ್ರದೇಶದ 6 ವರ್ಷದ ಬಾಲಕಿ ಮೇಲೆ ಕ್ರೂರ ಲೈಂಗಿಕ ದೌರ್ಜನ್ಯವೆಸಗಿ, ಕೊಲೆಗೈದು ಮೃತದೇಹವನ್ನು ಟ್ರಂಕ್ನಲ್ಲಿ ಬಚ್ಚಿಟ್ಟಿದ್ದನ್ನು ಭೇದಿಸಿರುವ ಪೊಲೀಸರು ಅಮ್ಜದ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಹಾಪುರ್ ನಗರದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಪಕ್ಕದ ಮನೆಯ ಬಾಲಕಿಯನ್ನು ಎಳೆದುತಂದು ಲೈಂಗಿಕ ಹಿಂಸೆ ನೀಡಿ ಕೊಲೆಗೈದಿರುವುದನ್ನು ಆರೋಪಿ 38 ವರ್ಷದ ಅಜ್ಮದ್ ಒಪ್ಪಿಕೊಂಡಿದ್ದು, ಆತನ ಮನೆಯ ಟ್ರಂಕ್ನಿಂದ ಮೃತದೇಹವನ್ನು ವಶಪಡಿಸಿಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.
6 ವರ್ಷದ ಬಾಲಕಿ ಅಂಗಡಿಗೆ ತೆರಳಿದ್ದಾಗ ಆರೋಪಿ ಮನೆಗೆ ಎಳೆದೊಯ್ದಿದ್ದ. ದುಷ್ಕೃತ್ಯವೆಸಗೆ ಯಾರಿಗೂ ತಿಳಿಯಬಾರದೆಂದು ಬಾಲಕಿಯ ಮೃತದೇಹವನ್ನು ತನ್ನ ಮನೆಯ ಟ್ರಂಕಿನಲ್ಲಿ ಬಚ್ಚಿಟ್ಟಿದ್ದ. ಆ ಸಮಯದಲ್ಲಿ ಆತನ ಹೆಂಡತಿ ಮತ್ತು ಮಕ್ಕಳು ಮನೆಯಲ್ಲಿರಲಿಲ್ಲ. ಬಾಲಕಿ ಮನೆಗೆ ಹಿಂದಿರುಗದಿದ್ದಾಗ ಆಕೆಯ ಕುಟುಂಬದವರು ಶುಕ್ರವಾರ ಪೊಲೀಸ್ ದೂರು ನೀಡಿದ್ದರು. ಅದೇ ಸಮಯದಲ್ಲಿ ನೆರ ಮನೆಯವರು ಕೆಟ್ಟ ವಾಸನೆ ಬರುತ್ತಿದೆಯೆಂದು ದೂರು ನೀಡಿದಾಗ ಪೊಲೀಸರು ಮನೆಗಳನ್ನು ಪರೀಶಿಲಿಸಿದಾಗ ಮೃತ ದೇಹ ಕಂಡುಬಂದಿದೆ.
ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ ಸಂದರ್ಭದಲ್ಲಿ ಆಕ್ರೋಶಭರಿತ ಜನಸಮೂಹದಿಂದ ಆತನನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಕೊಲೆಯನ್ನು ಒಪ್ಪಿಕೊಂಡಿದ್ದು, ತಾನು ಆ ವೇಳೆ ಡ್ರಗ್ ಸೇವಿಸಿದ್ದೆ ಎಂದು ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದು ವಿಚಾರಣೆ ಮುಂದುವರೆದಿದೆ.
ಲೈಂಗಿಕ ದೌರ್ಜನ್ಯ ಎನ್ನುವುದು ಅತಿ ಕ್ರೂರ ಅಪರಾಧವಾಗಿದೆ. ಅದಕ್ಕೆ ತೀವ್ರತೆರನಾದ ಶಿಕ್ಷೆ ವಿಧಿಸಲಾಗುತ್ತದೆ. 18 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವು ಪೊಕ್ಸೊ ಕಾಯ್ದೆಯಡಿ ಬರಲಿದ್ದು, ಆರೋಪಿಯೇ ತಾನು ತಪ್ಪಿತಸ್ಥನಲ್ಲ ಎಂದು ಸಾಬೀತುಪಡಿಸಬೇಕಾಗುತ್ತದೆ. ಈ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸುವುದರ ಜೊತೆಗೆ ಅತ್ಯಾಚಾರಕ್ಕೆ ತೀವ್ರ ಶಿಕ್ಷೆಯಿದೆಯೆಂದು ಸರ್ಕಾರ ಎಲ್ಲೆಡೆ ಪ್ರಚಾರ ಮಾಡಬೇಕಿದೆ. ಜೊತೆಗೆ ಮಹಿಳಾ ಸಮಾನತೆ, ರಕ್ಷಣೆ ಮತ್ತು ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆ ಮೂಲಕ ಅತ್ಯಾಚಾರಗಳೆಂಬ ಹೀನ ಕೃತ್ಯಗಳನ್ನು ತಡೆಯಲು ಸಾಧ್ಯ.
ಇದನ್ನೂ ಓದಿ: ಬ್ಯಾಟರಾಯನಪುರ ಠಾಣೆಯಲ್ಲಿ ಯುವಕನಿಗೆ ಕಸ್ಟಡಿ ಹಿಂಸೆ: ಪಾಪ್ಯುಲರ್ ಫ್ರಂಟ್ ಆಕ್ರೋಶ