Homeದಲಿತ್ ಫೈಲ್ಸ್ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ...

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

- Advertisement -
- Advertisement -

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ, ಮತ್ತು ಲಾಠಿಚಾರ್ಜ್ ನಡೆಸಿದ್ದಾರೆ. ಈ ಘಟನೆಯ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ತೀವ್ರ ರಾಜಕೀಯ ಆಕ್ರೋಶ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ (NHRC) ಗಂಭೀರ ಟೀಕೆಗಳನ್ನು ಎದುರಿಸುತ್ತಿದೆ.

ಮೀರತ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅವಿನಾಶ್ ಪಾಂಡೆ ಅವರು ಪೊಲೀಸ್ ವ್ಯಾನ್‌ನತ್ತ ವೇಗವಾಗಿ ಧಾವಿಸಿ, ವಾಹನದೊಳಗೆ ಬಂಧಿಯಾಗಿದ್ದ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ರವಿ ಗೌತಮ್ ಅವರಿಗೆ ಪದೇ ಪದೇ ಕಪಾಳಮೋಕ್ಷ ಮಾಡಿ ದೌರ್ಜನ್ಯ ಎಸಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಘಟನೆ ದೆಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.

ಕಾನೂನುಬಾಹಿರ ಸಭೆ, ಗಲಭೆ ಮತ್ತು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ರವಿ ಗೌತಮ್ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ. ಮೃತ ವಿದ್ಯಾರ್ಥಿನಿಯ ಕುಟುಂಬವನ್ನು ಕಾರ್ಯಕರ್ತರು ಪ್ರಚೋದಿಸಿದರು, ಅಕ್ರಮವಾಗಿ ರಸ್ತೆ ತಡೆ ನಡೆಸಿದರು ಮತ್ತು ಕಾನೂನು-ಸುವ್ಯವಸ್ಥೆಗೆ ಧಕ್ಕೆ ತಂದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

‘ಟೈಮ್ಸ್ ಆಫ್ ಇಂಡಿಯಾ’ ವರದಿಯ ಪ್ರಕಾರ, ಪೊಲೀಸರು 13 ಜನರನ್ನು ಹೆಸರಿಸಿ, 50 ಅನಾಮಧೇಯ ವ್ಯಕ್ತಿಗಳ ವಿರುದ್ಧ ಕೊಲೆ ಯತ್ನ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿಯ ಗೌರವಕ್ಕೆ ಧಕ್ಕೆ ತಂದ ಆರೋಪಗಳು ಸೇರಿದಂತೆ ವಿವಿಧ ಕಠಿಣ ರದ್ದುಪಡಿಸಲಾಗದ ಕಾಯ್ದೆಗಳಡಿ ಎಫ್‌ಐಆರ್ ದಾಖಲಿಸಿದ್ದಾರೆ.

‘ಕನಿಷ್ಠ ಬಲಪ್ರಯೋಗದ ಅಗತ್ಯವಿತ್ತು’: ಪೊಲೀಸರ ಸಮರ್ಥನೆ

ಮೇ 15 ರಂದು ಮೀರತ್‌ನ ಟ್ರಾನ್ಸ್‌ಪೋರ್ಟ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ದಲಿತ ಯುವತಿ ಲಲಿತಾ ಗೌತಮ್ ಅವರ ಭೀಕರ ಹತ್ಯೆಯಿಂದ ಈ ಆಕ್ರೋಶ ಭುಗಿಲೆದ್ದಿತ್ತು. ಎರಡು ದಿನಗಳ ನಂತರ, ಮೇ 17 ರಂದು ರೋಹ್ಟಾ ಪ್ರದೇಶದ ಹಳ್ಳಿಯೊಂದರಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಘಟನೆ ನಡೆದ 48 ಗಂಟೆಗಳ ಒಳಗೆ, ಪೊಲೀಸರು ಪ್ರಮುಖ ಶಂಕಿತ ಹಾಗೂ ಲಲಿತಾಳ ಪರಿಚಯಸ್ಥನಾಗಿದ್ದ ಅಂಕುಶ್‌ನನ್ನು ಬಂಧಿಸಿದರು. ತದನಂತರ ಸಾಕ್ಷ್ಯಗಳನ್ನು ನಾಶಪಡಿಸಿದ ಆರೋಪದ ಮೇಲೆ ಇತರ ಇಬ್ಬರನ್ನು ವಶಕ್ಕೆ ಪಡೆದರು.

ಆದರೆ ಜುಲೈ 8 ರಂದು, ಮೀರತ್ ಆಯುಕ್ತರ ಕಚೇರಿಯ ಹೊರಗೆ ನೂರಾರು ಪ್ರತಿಭಟನಾಕಾರರು ಜಮಾಯಿಸಿ, ಈ ಕೊಲೆಯಲ್ಲಿ ಪ್ರಮುಖ ಶಂಕಿತನ ಕುಟುಂಬ ಸದಸ್ಯರೂ ಭಾಗಿಯಾಗಿದ್ದಾರೆ, ಆದ್ದರಿಂದ ಅವರನ್ನೂ ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ರಸ್ತೆ ತಡೆ ನಡೆಸಿದರು.

ಮೀರತ್ ಪೊಲೀಸರ ಪ್ರಕಾರ, ಸಂಚಾರ ತಡೆಯನ್ನು ತೆರವುಗೊಳಿಸಲು ಪದೇ ಪದೇ ಮಾಡಿದ ಮನವಿಗಳನ್ನು ಪ್ರತಿಭಟನಾಕಾರರು ಸಂಪೂರ್ಣವಾಗಿ ನಿರ್ಲಕ್ಷಿಸಿದರು. ಜನಸಮೂಹವು ಅಶಿಸ್ತಿನಿಂದ ವರ್ತಿಸಿ ಹಿಂಸಾಚಾರಕ್ಕೆ ತಿರುಗಿದಾಗ, ರಸ್ತೆಯನ್ನು ತೆರವುಗೊಳಿಸಲು ಪೊಲೀಸರು “ಅಗತ್ಯವಿದ್ದ ಕನಿಷ್ಠ ಬಲಪ್ರಯೋಗ” ಮಾಡಿದರು ಎಂದು ಎಸ್‌ಎಸ್‌ಪಿ ಅವಿನಾಶ್ ಪಾಂಡೆ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರತಿಭಟನಾ ನಾಯಕರನ್ನು ಕುಟುಂಬದ ದುಃಖವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವ “ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳು” ಎಂದು ಬಣ್ಣಿಸಿದ ಎಸ್‌ಎಸ್‌ಪಿ, ಪೊಲೀಸ್ ಕ್ರಮವನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡರು. ಬೃಹತ್ ಪ್ರತಿಭಟನೆ ನಡೆಯುವುದಕ್ಕೂ ಮುನ್ನ, ಲಲಿತಾ ಅವರ ಕುಟುಂಬವು ಪೊಲೀಸ್ ತನಿಖೆಯ ಬಗ್ಗೆ ಸಂಪೂರ್ಣ ತೃಪ್ತಿ ವ್ಯಕ್ತಪಡಿಸಿತ್ತು ಎಂದು ಅವರು ಹೇಳಿದ್ದಾರೆ. 

“ಹೊರಗಿನಿಂದ ಬಂದ ಕೆಲವು ಅಶಿಸ್ತಿನ ಮತ್ತು ಕಾನೂನುಬಾಹಿರ ಅಂಶಗಳು ನೊಂದ ಕುಟುಂಬವನ್ನು ಪ್ರಚೋದಿಸಿ, ಈ ಪ್ರಕರಣಕ್ಕೆ ಅನಗತ್ಯ ಮತ್ತು ವಿಭಿನ್ನವಾದ ಬಣ್ಣ ನೀಡಲು ಯತ್ನಿಸಿದವು” ಎಂದು ಪಾಂಡೆ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಲಲಿತಾ ಪ್ರಮುಖ ಶಂಕಿತನ ಜೊತೆ ಮೋಟಾರ್ ಸೈಕಲ್‌ನಲ್ಲಿ ಪ್ರಯಾಣಿಸುತ್ತಿರುವುದನ್ನು ತೋರಿಸುವ ಟೋಲ್ ಬೂತ್ ಡೇಟಾ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆಯೇ ಇಡೀ ತನಿಖೆ ನಿಂತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಪಾಂಡೆ ಅವರ ಪ್ರಕಾರ, ಯಾವುದೇ ಸಬೂಬುಗಳಿಲ್ಲದೆ ಇತರ ವ್ಯಕ್ತಿಗಳನ್ನು ಬಂಧಿಸುವುದರಿಂದ ಪ್ರಾಸಿಕ್ಯೂಷನ್ ಪ್ರಕರಣವು ನ್ಯಾಯಾಲಯದಲ್ಲಿ ದುರ್ಬಲಗೊಳ್ಳಬಹುದು ಮತ್ತು ವಿಚಾರಣೆ ವೇಳೆ ಇದು ಪ್ರಮುಖ ಆರೋಪಿಗೆ ಅನುಕೂಲಕರವಾಗಿ ಪರಿಣಮಿಸಬಹುದು ಎಂದು ಪೊಲೀಸರು ಕುಟುಂಬಕ್ಕೆ ತಿಳಿಹೇಳಿದ್ದರು. “ನಾವು ಕುಟುಂಬಕ್ಕೆ ಸೂಕ್ತ ಸಲಹೆ ನೀಡಿದ್ದೇವೆ ಮತ್ತು ಅವರು ಅದನ್ನು ಒಪ್ಪಿಕೊಂಡಿದ್ದಾರೆ” ಎಂದ ಎಸ್‌ಎಸ್‌ಪಿ, ಸಂತ್ರಸ್ತೆಯ ಕುಟುಂಬದ ಯಾವುದೇ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಂಚುಕಾರರ ವಿರುದ್ಧ ಕಠಿಣ ಕ್ರಮ

ಆದಾಗ್ಯೂ, ಈ ಪ್ರತಿಭಟನೆ ಮತ್ತು ರಸ್ತೆ ತಡೆಯ ಹಿನ್ನೆಲೆಯಲ್ಲಿದ್ದ ಮುಖ್ಯ “ಸೂತ್ರಧಾರರು ಮತ್ತು ಸಂಚುಕಾರರು” ಸುಮ್ಮನೆ ಇರುವುದಿಲ್ಲ ಎಂದು ಎಸ್‌ಎಸ್‌ಪಿ ಪಾಂಡೆ ಎಚ್ಚರಿಸಿದ್ದಾರೆ. “ಇದು ಪ್ರಾಯೋಗಿಕವಾಗಿ ಒಂದು ದಂಧೆಯಾಗಿ ಮಾರ್ಪಟ್ಟಿದೆ – ಬೇಕೆಂದೇ ಸಂಚಾರ ತಡೆ ಉಂಟುಮಾಡುವುದು ಮತ್ತು ಅದನ್ನೇ ಇಟ್ಟುಕೊಂಡು ದಲ್ಲಾಳಿ ವ್ಯಾಪಾರ ನಡೆಸುವುದು. ಇಂತಹ ಕೃತ್ಯ ಎಸಗಿದವರ ವಿರುದ್ಧ ನಾವು ಖಂಡಿತವಾಗಿಯೂ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದು ಅವರು ಗುಡುಗಿದ್ದಾರೆ.

ಭಾರತೀಯ ಕಿಸಾನ್ ಯೂನಿಯನ್ (ಬಿ.ಆರ್. ಅಂಬೇಡ್ಕರ್ ಬಣ) ಅಧ್ಯಕ್ಷನೆಂದು ಹೇಳಿಕೊಳ್ಳುವ ದಿಗ್ವಿಜಯ್ ಸಿಂಗ್ ಭಾಟಿ ಎಂಬಾತನನ್ನು ಈ ರಸ್ತೆ ತಡೆ ಹಾಗೂ ಪ್ರತಿಭಟನೆಯ ಮುಖ್ಯ “ಸೂತ್ರಧಾರ” ಎಂದು ಪೊಲೀಸರು ಗುರುತಿಸಿದ್ದಾರೆ. ಅಮ್ರೋಹಾ ನಿವಾಸಿಯಾಗಿರುವ ಭಾಟಿಯನ್ನು ಇತ್ತೀಚೆಗಷ್ಟೇ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದ್ದು, ಆತನ ವಿರುದ್ಧ ಒಂಬತ್ತು ಕ್ರಿಮಿನಲ್ ಪ್ರಕರಣಗಳಿವೆ. ಇನ್ನು ಪೊಲೀಸ್ ವ್ಯಾನ್‌ನಲ್ಲಿ ಹಲ್ಲೆಗೊಳಗಾದ ವಕೀಲ ರವಿ ಗೌತಮ್ ವಿರುದ್ಧವೂ ಈಗಾಗಲೇ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುಪಿ ಸರ್ಕಾರಕ್ಕೆ ಎನ್‌ಹೆಚ್‌ಆರ್‌ಸಿ (NHRC) ನೋಟಿಸ್

ಪೋಲಿಸರ ಈ ಅತಿರೇಕದ ನಡವಳಿಕೆಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಮೇಲ್ನೋಟಕ್ಕೆ ತೀವ್ರ ಮಾನವ ಹಕ್ಕುಗಳ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗೃಹ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಆಯೋಗವು ನೋಟಿಸ್ ಜಾರಿ ಮಾಡಿದೆ.

ಭೋಪಾಲ್ ಮೂಲದ ‘ಡಾ. ಅಂಬೇಡ್ಕರ್ ಜನ ಕಲ್ಯಾಣ ಸಮಿತಿ’ ಸಲ್ಲಿಸಿದ ದೂರಿನ ಆಧಾರದ ಮೇಲೆ NHRC ಈ ಕ್ರಮ ಕೈಗೊಂಡಿದ್ದು, ಪ್ರಕರಣದ ಸ್ವತಂತ್ರ ತನಿಖೆ ಹಾಗೂ ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿಗಳ ವೈಯಕ್ತಿಕ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕೆಂದು ಒತ್ತಾಯಿಸಿದೆ. ಪೊಲೀಸರು “ಯಾವುದೇ ಪ್ರಚೋದನೆಯಿಲ್ಲದೆ ಕ್ರೂರವಾಗಿ ಲಾಠಿಚಾರ್ಜ್ ನಡೆಸಿದ್ದಾರೆ, ಇದರಿಂದಾಗಿ ಅನೇಕ ಪ್ರತಿಭಟನಾಕಾರರು ತೀವ್ರವಾಗಿ ಗಾಯಗೊಂಡಿದ್ದಾರೆ” ಎಂದು ಸಂಘಟನೆ ಗಂಭೀರ ಆರೋಪ ಮಾಡಿದೆ.

“ಈಗಾಗಲೇ ಪೊಲೀಸ್ ಕಸ್ಟಡಿಗೆ ಪಡೆಯಲಾದ, ತಮ್ಮನ್ನು ತಾವು ರಕ್ಷಿಸಿಕೊಳ್ಳಲಾಗದ ನಿರಪರಾಧಿ ವ್ಯಕ್ತಿಗಳನ್ನು ನಿರ್ದಯವಾಗಿ ಥಳಿಸುವ ಮೂಲಕ ಹಿರಿಯ ಪೊಲೀಸ್ ಅಧಿಕಾರಿಗಳೇ ಕಸ್ಟಡಿ ಚಿತ್ರಹಿಂಸೆಗೆ ಇಳಿದಿದ್ದಾರೆ. ಇದು ಕಾನೂನಿನ ಆಡಳಿತದ ಸಂಪೂರ್ಣ ಕುಸಿತ ಮತ್ತು ವ್ಯಕ್ತಿಗತ ಘನತೆಯ ಸಾಂಸ್ಥಿಕ ಉಲ್ಲಂಘನೆಯಾಗಿದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ವೈರಲ್ ಆಗಿರುವ ವೀಡಿಯೊ ದೃಶ್ಯಗಳನ್ನು ದೂರಿನಲ್ಲಿ ಪ್ರಮುಖ ಸಾಕ್ಷಿಯಾಗಿ ನೀಡಲಾಗಿದೆ.

ಪ್ರತಿಪಕ್ಷಗಳ ತೀವ್ರ ಆಕ್ರೋಶ

ಪೋಲಿಸರ ಈ ದಮನಕಾರಿ ಕ್ರಮಕ್ಕೆ ವಿರೋಧ ಪಕ್ಷಗಳ ನಾಯಕರಿಂದ ತೀವ್ರ ಖಂಡನೆ ವ್ಯಕ್ತವಾಗಿದ್ದು, ಬಿಜೆಪಿ ಆಡಳಿತವು ದಲಿತ ವಿರೋಧಿ ಮನಸ್ಥಿತಿಯನ್ನು ಹೊಂದಿದೆ ಎಂದು ನಾಯಕರು ಆರೋಪಿಸಿದ್ದಾರೆ.

ನಗೀನಾ ಕ್ಷೇತ್ರದ ಸಂಸದ ಹಾಗೂ ಆಜಾದ್ ಸಮಾಜ ಪಕ್ಷದ (ಕಾನ್ಶಿರಾಮ್) ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ‘X’ (ಟ್ವಿಟರ್) ನಲ್ಲಿ ನೇರವಾಗಿ ಗುರಿಯಾಗಿಸಿಕೊಂಡು, ನೊಂದ ದಲಿತ ಸಮುದಾಯದ ಮೇಲೆ ಬಲಪ್ರಯೋಗ ಮಾಡಿರುವುದು ಸರ್ಕಾರದ “ದಲಿತ ವಿರೋಧಿ ಮತ್ತು ದಬ್ಬಾಳಿಕೆಯ ಸ್ವಭಾವವನ್ನು” ಎತ್ತಿಹಿಡಿಯುತ್ತದೆ ಎಂದು ಕಿಡಿಕಾರಿದ್ದಾರೆ.

“ಈ ಕೊಲೆ ಪ್ರಕರಣದಲ್ಲಿ ಇತರರ ಕೈವಾಡವೂ ಇದೆ ಎಂದು ನೊಂದ ಕುಟುಂಬ ಆರೋಪಿಸುತ್ತಿರುವಾಗ, ಅವರ ಧ್ವನಿಯನ್ನು ಹತ್ತಿಕ್ಕುವ ಬದಲು ನ್ಯಾಯಯುತ, ಪಾರದರ್ಶಕ ಮತ್ತು ಕಾಲಮಿತಿಯ ತನಿಖೆ ನಡೆಸಬೇಕಿತ್ತು” ಎಂದು ಆಜಾದ್ ಹೇಳಿದ್ದಾರೆ. “ಯಾವುದೇ ತಪ್ಪಿತಸ್ಥ ವ್ಯಕ್ತಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು ಮತ್ತು ಯಾವೊಬ್ಬ ನಿರಪರಾಧಿಯೂ ಈ ಪ್ರಕರಣದಲ್ಲಿ ಸಿಲುಕಬಾರದು.”ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಆಡಳಿತದ ಈ ಕ್ರಮವನ್ನು “ಸಂಪೂರ್ಣವಾಗಿ ಖಂಡನೀಯ” ಎಂದು ಕರೆದಿದ್ದಾರೆ. “ಬಿಜೆಪಿ ಆಡಳಿತದಲ್ಲಿ ಪೊಲೀಸರು ಅನ್ಯಾಯದ ಎಲ್ಲಾ ಎಲ್ಲೆಗಳನ್ನು ಮೀರುತ್ತಿದ್ದಾರೆ” ಎಂದು ರವಿ ಗೌತಮ್ ಮೇಲೆ ಎಸ್‌ಎಸ್‌ಪಿ ಹಲ್ಲೆ ನಡೆಸಿದ ವೀಡಿಯೊವನ್ನು ಹಂಚಿಕೊಂಡ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರಾಜ್ಯದ ಉನ್ನತ ನಾಯಕರೇ ಮೃತರ ತಾಯಿಯ ಬಗ್ಗೆ ಬಹಿರಂಗವಾಗಿ ಅಸಂವೇದನಾಶೀಲತೆಯ ಉದಾಹರಣೆ ನೀಡುತ್ತಿರುವಾಗ, ಅವರ ಅಧೀನದಲ್ಲಿರುವ ಪೊಲೀಸ್ ಪಡೆಯಿಂದ ಉತ್ತಮ ನಡವಳಿಕೆಯನ್ನು ನಿರೀಕ್ಷಿಸುವುದು ವ್ಯರ್ಥ.”ರಾಜ್ಯದಲ್ಲಿ ಹಿಂದೆ ನಡೆದ ಮಹಿಳೆಯರ ಮೇಲಿನ ದೌರ್ಜನ್ಯದ ಘಟನೆಗಳನ್ನು ಸ್ಮರಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸರ್ಕಾರವನ್ನು ಪ್ರಶ್ನಿಸುವವರ ಧ್ವನಿಯನ್ನು ಅಡಗಿಸಲು ಯೋಗಿ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

“ಲಲಿತಾ ಗೌತಮ್ ಅವರ ಭೀಕರ ಹತ್ಯೆಯು ಬಿಜೆಪಿಯ ‘ಡಬಲ್-ಎಂಜಿನ್’ ಸರ್ಕಾರದ ಮಹಿಳಾ ವಿರೋಧಿ ಹಾಗೂ ದಲಿತ ವಿರೋಧಿ ಕ್ರೂರ ಮುಖವನ್ನು ಜಗತ್ತಿನೆದುರು ಬಯಲು ಮಾಡಿದೆ” ಎಂದು ಖರ್ಗೆ ‘X’ ನಲ್ಲಿ ಬರೆದುಕೊಂಡಿದ್ದಾರೆ. “ಹತ್ರಾಸ್ ಮತ್ತು ಉನ್ನಾವೊ ಪ್ರಕರಣಗಳಲ್ಲೂ ಬಿಜೆಪಿ ಸರ್ಕಾರ ಬಲಿಪಶುಗಳ ಧ್ವನಿಯನ್ನು ಹೇಗೆ ಹತ್ತಿಕ್ಕಿತು ಮತ್ತು ಅಧಿಕಾರದಲ್ಲಿರುವವರನ್ನು ರಕ್ಷಿಸಲು ಹೇಗೆ ಯತ್ನಿಸಿತು ಎಂಬುದನ್ನು ಇಡೀ ದೇಶ ನೋಡಿದೆ. ಈಗ ಮೀರತ್‌ನಲ್ಲೂ ಅದೇ ದಬ್ಬಾಳಿಕೆಯ ಮನೋಭಾವವನ್ನು ಪುನರಾವರ್ತಿಸಲಾಗುತ್ತಿದೆ.” ಎಂದು ಆರೋಪಿಸಿದ್ದಾರೆ. 

ಪೊಲೀಸರ ಪ್ರತಿ-ಸಮರ್ಥನೆ

ವಕೀಲ ಗೌತಮ್ ಅವರಿಗೆ ಹೊಡೆದ ವೈರಲ್ ವೀಡಿಯೊ ಕುರಿತು ದೇಶಾದ್ಯಂತ ವ್ಯಕ್ತವಾದ ತೀವ್ರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಎಸ್‌ಎಸ್‌ಪಿ ಅವಿನಾಶ್ ಪಾಂಡೆ, “ನಮ್ಮ ಸಂವಿಧಾನವು ‘ಭಾರತದ ಪ್ರಜೆಗಳಾದ ನಾವು’ ಎಂಬ ವಾಕ್ಯದಿಂದ ಪ್ರಾರಂಭವಾಗುತ್ತದೆ. ಅದು ಯಾವುದೇ ನಿರ್ದಿಷ್ಟ ಜಾತಿ, ಧರ್ಮ ಅಥವಾ ಸಮುದಾಯದ ಬಗ್ಗೆ ಪ್ರತ್ಯೇಕವಾಗಿ ಮಾತನಾಡುವುದಿಲ್ಲ. ನಾವು ಕೈಗೊಂಡ ಪ್ರತಿಯೊಂದು ಕ್ರಮವೂ ಕಾನೂನು ಉಲ್ಲಂಘಿಸಿದ ಅಪರಾಧಿಗಳ ವಿರುದ್ಧವೇ ಹೊರತು ಸಮುದಾಯದ ವಿರುದ್ಧವಲ್ಲ” ಎಂದು ಪೋಲಿಸರ ನಡವಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

“ನಮ್ಮ ಬಳಿ ಪ್ರತಿಯೊಂದಕ್ಕೂ ಸ್ಪಷ್ಟ ಸಾಕ್ಷ್ಯಾಧಾರಗಳಿವೆ. ನಾವು ಕೈಗೊಂಡ ಎಲ್ಲಾ ಕ್ರಮಗಳಿಗೆ ಸೂಕ್ತ ದಾಖಲೆ ಮತ್ತು ಸಮರ್ಥನೆ ಇದೆ. ಹೊರಗಿನಿಂದ ಬಂದು ವಿನಾಕಾರಣ ಪ್ರಚೋದನೆ ನೀಡುತ್ತಿದ್ದವರ ವಿರುದ್ಧವೂ ನಮ್ಮ ಬಳಿ ಪಕ್ಕಾ ಸಾಕ್ಷ್ಯಗಳಿವೆ” ಎಂದು ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ. 

ಅಷ್ಟೇ ಅಲ್ಲದೆ, ತಮ್ಮ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡುತ್ತಿರುವ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಕೌನ್ಸೆಲಿಂಗ್ ನೀಡುವುದಾಗಿಯೂ ಎಸ್‌ಎಸ್‌ಪಿ ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನಬದ್ಧ ದಾಖಲೆಗಳಿದ್ದರೂ ಪಶ್ಚಿಮ ಬಂಗಾಳದ ಮುಸ್ಲಿಂ ಮಹಿಳೆ ‘ಒಳನುಸುಳುಕೋರ’ರೆಂದು ಬಾಂಗ್ಲಾಕ್ಕೆ ಗಡೀಪಾರು: ಭಾರತದಲ್ಲೇ ಉಳಿದ ಪತಿ, ಇಬ್ಬರು ಮಕ್ಕಳು

ಭಾರತೀಯ ಪೌರತ್ವವನ್ನು ಸ್ಪಷ್ಟವಾಗಿ ಸಾಬೀತುಪಡಿಸುವ ಜನನ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಮತ್ತು ಸ್ವಂತ ಭೂಮಿಯ ದಾಖಲೆಗಳು ಕೈಯಲ್ಲಿದ್ದರೂ, ಪಶ್ಚಿಮ ಬಂಗಾಳದ 40 ವರ್ಷದ ಮುಸ್ಲಿಂ ಮಹಿಳೆಯೊಬ್ಬರನ್ನು 'ಒಳನುಸುಳುಕೋರ' ಎಂಬ...

SIR ನಂತರ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ : ನಟ ಪ್ರಕಾಶ್ ರಾಜ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಂತರ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ ಎಂದು ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ...

ಸರ್ಕಾರಿ ಶಾಲೆಗಳ ಸುಧಾರಣೆಗೆ ದೇಶಾದ್ಯಂತ ಅಭಿಯಾನ ಘೋಷಿಸಿದ ಅಭಿಜೀತ್ ದೀಪ್ಕೆ

ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳನ್ನು ಸುಧಾರಿಸಲು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ರಾಷ್ಟ್ರವ್ಯಾಪಿ ಅಭಿಯಾನ ಘೋಷಿಸಿದ್ದಾರೆ. "ಪೋಷಕರು ಶಾಲೆಗಳ ಮೂಲಭೂತ ಸೌಲಭ್ಯಗಳ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು, ಶಾಲೆಗಳನ್ನು ಸುಧಾರಿಸುವ...

ಕರ್ನಾಟಕದ ASDDO ಸಂಖ್ಯೆ 3 ಲಕ್ಷದಷ್ಟು ಇಳಿಕೆ : SIR ಪ್ರಕ್ರಿಯೆ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದ ವರದಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಲ್ಲಿ ಇದುವರೆಗಿನ ಅತಿ ದೊಡ್ಡ ತಿದ್ದುಪಡಿ ಕರ್ನಾಟಕದಲ್ಲಿ ಆಗಿದ್ದು, ಮತದಾನದ ಹಕ್ಕನ್ನು ಕಳೆದುಕೊಳ್ಳುವ ಹಂತದಲ್ಲಿದ್ದ ಸುಮಾರು 3 ಲಕ್ಷ ಜನರನ್ನು ಮತ್ತೆ ಮತದಾರರ ಪಟ್ಟಿಗೆ...

ವಸತಿಗೃಹದಲ್ಲಿ ಹೋಮ-ಪೂಜೆ ಆಯೋಜನೆ; ಬಾಗಲಕೋಟೆ ತೋಟಗಾರಿಕೆ ವಿವಿ ಕುಲಪತಿಗಳಿಂದ ಅಧಿಕಾರ ದುರುಪಯೋಗ

ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಸತಿಗೃಹದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಅಧಿಕೃತ‌ ಲೆಟರ್‌ಹೆಡ್‌ ಮೂಲಕ ಆಹ್ವಾನವನ್ನೂ ಹೊರಡಿಸುವ ಮೂಲಕ ಕುಲಪತಿ ಡಾ. ವಿಷ್ಣುವರ್ಧನ ಅವರು ಅಧಿಕಾರ ದುರುಪಯೋಗ...

ಕಪ್ಪು ಕುರ್ತಾ-ಪೈಜಾಮ ಧರಿಸಿದ್ದ ಕಲಾವಿದನಿಗೆ ಥಳಿಸಿದ ಹಿಂದುತ್ವ ಗುಂಪು: ಮುಸ್ಲಿಂ ಎಂದು ಶಂಕಿಸಿ ಅಮಾನವೀಯ ಹಲ್ಲೆ

ರಂಗಭೂಮಿ ಕಲಾವಿದರೊಬ್ಬರು ಕಪ್ಪು ಕುರ್ತಾ-ಪೈಜಾಮ ಧರಿಸಿದ್ದಕ್ಕಾಗಿ ಮುಸ್ಲಿಂ ಎಂದು ಶಂಕಿಸಿ ಹಿಂದುತ್ವ ಯುವಕರ ಗುಂಪೊಂದು ಅವರನ್ನು ಕ್ರೂರವಾಗಿ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಶುಭಂಕರ್ ದಾಸ್ ಶರ್ಮಾ...

SIR: ಚುನಾವಣಾ ಆಯೋಗ ನೀಡಿದ ಅಂಕಿ ಅಂಶಕ್ಕೂ, ಬೆಂಗಳೂರು ಮತದಾರರ ಪಟ್ಟಿಗೂ ತಲೆಬುಡವಿಲ್ಲ, ಮತ ಕಾವಲು ಸಮಿತಿ ಆರೋಪ

ರಾಜ್ಯದಲ್ಲಿ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹಕ್ಕುಗಳನ್ನು ಕಸಿಯಲಾಗುತ್ತಿದ್ದು, ಬೆಂಗಳೂರು ನಗರದ ಶೇಕಡಾ 48.41 ರಷ್ಟು—ಅಂದರೆ ಸುಮಾರು ಇಬ್ಬರಲ್ಲಿ ಒಬ್ಬ ಮತದಾರನನ್ನು—ಆಗಸ್ಟ್ 17ರ ಒಳಗಾಗಿ ಮತದಾರರ...

ಬೆಂಗಳೂರಿನಲ್ಲಿ ಮುಂದುವರೆದ ಆಹಾರ ಸುರಕ್ಷತೆಗೆ ವಿಶೇಷ ಕಾರ್ಯಾಚರಣೆ: ಯುಬಿ ಸಿಟಿಯ ಹೋಟೆಲ್‌ಗಳಲ್ಲಿ ಕೊಳೆತ ಮಾಂಸ ಪತ್ತೆ!

'ಆಹಾರ ಸುರಕ್ಷತೆ ಇಲಾಖೆ ಮತ್ತು ಔಷಧಿ ಆಡಳಿತ ಇಲಾಖೆ'ಯ ಆಹಾರ ಸುರಕ್ಷತೆಗೆ ವಿಶೇಷ ಕಾರ್ಯಾಚರಣೆ ಮುಂದುವರೆದಿದ್ದು, ಬೆಂಗಳೂರಿನ ಯುಬಿ ಸಿಟಿಯ ಐದು ಪ್ರಮುಖ ಹೋಟೆಲ್‌ಗಳ ಅಡುಗೆ ಮನೆಗಳ ಮೇಲೆ ಅಧಿಕಾರಿಗಳು ಇಂದು (ಆ.10)...

ಮತಗಳ್ಳತನದ ವಿರುದ್ಧ ‘ಕ್ವಿಟ್ ವೋಟ್ ಚೋರಿ’ ಆಂದೋಲನಕ್ಕೆ ಕರೆ ನೀಡಿದ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು: ದೇಶದಲ್ಲಿ ನಡೆಯುತ್ತಿರುವ 'ಮತ ಕಳ್ಳತನ'ವನ್ನು ತಡೆಗಟ್ಟಲು ಕ್ವಿಟ್ ಇಂಡಿಯಾ ಚಳವಳಿಯ ಮಾದರಿಯಲ್ಲೇ ದೇಶಾದ್ಯಂತ 'ಕ್ವಿಟ್ ವೋಟ್ ಚೋರಿ' (ಮತ ಬಿಟ್ಟು ತೊಲಗಿ) ಆಂದೋಲನವನ್ನು ಪ್ರಾರಂಭಿಸುವ ಅಗತ್ಯವಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ....

SIR ಅವಾಂತರ : ಎನ್ಯುಮರೇಷನ್ ಫಾರಂ ಸರಿಯಾಗಿ ತುಂಬಿಕೊಟ್ಟರೂ ಕರಡು ಪಟ್ಟಿಯಲ್ಲಿ ಹೆಸರಿಲ್ಲ; ಆತಂಕಗೊಂಡು ಮತಗಟ್ಟೆಗಳತ್ತ ಧಾವಿಸಿದ ಜನರು-ವರದಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಭಾಗವಾಗಿ ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಕಾರಣ ಆತಂಕಗೊಂಡ ಜಾರ್ಖಂಡ್‌ನ ರಾಂಚಿ ನಗರದ ಜನರು ಭಾನುವಾರ (ಆ.9) ಮತಗಟ್ಟೆಗಳಿಗೆ...