“ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ.” ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ ಅರೇಬಿಯಾದ ಅಬಾದಲ್ಲಿ ಎಡ್ಲ ಲಚ್ಚಣ್ಣ ಎಂಬುವವರು ಇಸ್ಮಾಯಿಲ್ ಗೆ ನೀಡಿದ್ದ 3,000 ರಿಯಾಲ್(ರೂ.25000) ಹಣವನ್ನು, ಬರೋಬ್ಬರಿ 31 ವರ್ಷಗಳ ನಂತರ ಮರಳಿ ನೀಡುವ ಮೂಲಕ ಅವರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಎಐ ಆಪ್ನ ಮಾರ್ಗದರ್ಶನದಲ್ಲಿ ಕೇರಳದ ಪಾಲಕ್ಕಾಡ್ನಿಂದ ತೆಲಂಗಾಣದ ಧರ್ಮಪುರಿಯವರೆಗೆ ಸುಮಾರು 1,200 ಕಿಲೋಮೀಟರ್ ಪ್ರಯಾಣಿಸಿ, ಕೊನೆಗೂ ಲಚ್ಚಣ್ಣನವರ ಕುಟುಂಬವನ್ನು ಭೇಟಿಯಾದ ಈ ಅಸಾಮಾನ್ಯ ಕಥೆ ನಂಬಿಕೆ ಮತ್ತು ಸ್ನೇಹದ ಮಹತ್ವವನ್ನು ಸಾರುತ್ತಿದೆ.
ಕಳೆದ ಗುರುವಾರ ಬೆಳಿಗ್ಗೆ ತೆಲಂಗಾಣದ ಧರ್ಮಪುರಿಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಬಾಗಿಲು ಬಡಿದಿದ್ದರು. ಆತ 63 ವರ್ಷದ ಬಡಕಲು ದೇಹದ ವ್ಯಕ್ತಿ. ದಿನಗಟ್ಟಲೆ ರೈಲು ಮತ್ತು ಬಸ್ಸುಗಳಲ್ಲಿ ಪ್ರಯಾಣಿಸಿ ಸುಸ್ತಾಗಿದ್ದರೂ, ಆತನ ಮನಸ್ಸಿನಲ್ಲಿ ಒಂದು ಅಚಲವಾದ ಗುರಿಯಿತ್ತು. ಆತನ ಜೇಬಿನಲ್ಲಿ ಒಂದು ಸ್ಯಾಮ್ಸಂಗ್ ಗ್ಯಾಲಕ್ಸಿ ಎ32 ಸ್ಮಾರ್ಟ್ಫೋನ್ ಇತ್ತು. ಆ ಫೋನ್ನಲ್ಲಿರುವ ಎಐ ಅಸಿಸ್ಟೆಂಟ್ ಆಪ್, ದಶಕಗಳ ಕಾಲದ ಪತ್ರಗಳು ಮತ್ತು ಪ್ರಯತ್ನಗಳು ಸಾಧ್ಯವಾಗಿಸದ ಕೆಲಸವನ್ನು ಮಾಡಿ ಮುಗಿಸಿತ್ತು. ಪಾಲಕ್ಕಾಡ್ನಿಂದ ಧರ್ಮಪುರಿಯ ಈ ಬಾಗಿಲಿನವರೆಗೆ 1,200 ಕಿಲೋಮೀಟರ್ಗಳಷ್ಟು ದೂರವನ್ನು ಆ ಆಪ್ ನಿಖರವಾಗಿ ತೋರಿಸಿಕೊಟ್ಟಿತ್ತು.
ಬಾಗಿಲು ತೆರೆದವರು ತನ್ನನ್ನು ಹೇಗೆ ಸ್ವೀಕರಿಸುತ್ತಾರೆ? ತಾವು ಹೇಳುವ ಹೆಸರನ್ನು ಅವರು ಗುರುತಿಸುತ್ತಾರೆಯೇ? ಇಷ್ಟು ವರ್ಷಗಳ ನಂತರ ತಾನೇ ಬಂದು ಹಣ ಕೊಡುತ್ತಿದ್ದೇನೆಂದು ಅವರು ನಂಬುತ್ತಾರೆಯೇ? ಬಾಗಿಲನ್ನು ಸಂಪೂರ್ಣವಾಗಿ ತೆರೆಯುತ್ತಾರೆಯೇ? ಎಂಬಿತ್ಯಾದಿ ಆತಂಕಗಳು ಇಸ್ಮಾಯಿಲ್ ಮನಸ್ಸಿನಲ್ಲಿ ಕಾಡುತ್ತಿದ್ದವು. ಆದರೆ, ತಾನು ಮೈಲುಗಟ್ಟಲೆ ದೂರ ಪ್ರಯಾಣಿಸಿ ಬಂದಿರುವುದು ಕಳೆದ 31 ವರ್ಷಗಳಿಂದ ತನ್ನ ಬಳಿ ಭದ್ರವಾಗಿದ್ದ ಹಣವನ್ನು ಮರಳಿ ಒಪ್ಪಿಸಲು ಎಂಬ ಒಂದೇ ಒಂದು ವಿಷಯ ಆತನಿಗೆ ಸ್ಪಷ್ಟವಾಗಿತ್ತು.

ಕೇರಳ ರಾಜ್ಯದ ಪಾಲಕ್ಕಾಡ್ ಮೂಲದ ಮಹಮ್ಮದ್ ಇಸ್ಮಾಯಿಲ್ ಮತ್ತು ಧರ್ಮಪುರಿಯ ಎಡ್ಲ ಲಚ್ಚಣ್ಣ ಎಂಬುವವರು ಸುಮಾರು 25 ವರ್ಷಗಳ ಹಿಂದೆ ಸೌದಿ ಅರೇಬಿಯಾದ ಕಂಪನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ತಮ್ಮ ವೈಯಕ್ತಿಕ ತುರ್ತು ಅಗತ್ಯಕ್ಕಾಗಿ ಇಸ್ಮಾಯಿಲ್, ಲಚ್ಚಣ್ಣ ಅವರಿಂದ ಒಂದಷ್ಟು ಹಣವನ್ನು ಸಾಲವಾಗಿ ಪಡೆದಿದ್ದರು. ಭಾರತಕ್ಕೆ ಹಿಂತಿರುಗಿದ ನಂತರ ಖಂಡಿತವಾಗಿಯೂ ಸಾಲ ತೀರಿಸುವುದಾಗಿ ಮಾತು ಸಹ ನೀಡಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಸ್ವದೇಶಕ್ಕೆ ಬಂದ ನಂತರ ಲಚ್ಚಣ್ಣ ಅವರೊಂದಿಗಿನ ಸಂಪರ್ಕ ಕಡಿದುಹೋಯಿತು. ಹೀಗಾಗಿ ಅವರಿಗೆ ಆ ಸಾಲವನ್ನು ತೀರಿಸಲು ಸಾಧ್ಯವಾಗಿರಲಿಲ್ಲ.
ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಮತ್ತು ಪಡೆದ ಸಾಲವನ್ನು ಮರೆಯದೇ ಮರಳಿಸುವುದು ನಿಜವಾದ ಪ್ರಾಮಾಣಿಕತೆಗೆ ನಿದರ್ಶನ ಎನ್ನಲಾಗುತ್ತದೆ. ಬರೋಬ್ಬರಿ 25 ವರ್ಷಗಳ ಹಿಂದೆ ಪಡೆದಿದ್ದ ಸಾಲವನ್ನು ತೀರಿಸಲು ಕೇರಳದಿಂದ ವಿಶೇಷವಾಗಿ ಧರ್ಮಪುರಿಗೆ ಬಂದ ವ್ಯಕ್ತಿಯೊಬ್ಬರು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಲ್ಲದೆ, ಭಾವುಕರನ್ನಾಗಿಸಿದ್ದಾರೆ.
ವರ್ಷಗಳೇ ಕಳೆದರೂ ತಾವು ಪಡೆದಿದ್ದ ಸಾಲವನ್ನು ಇಸ್ಮಾಯಿಲ್ ಮರೆಯಲಿಲ್ಲ. ಇತ್ತೀಚೆಗೆ ಹೇಗಾದರೂ ಮಾಡಿ ಆ ಸಾಲವನ್ನು ತೀರಿಸಲೇಬೇಕೆಂದು ಅವರು ನಿರ್ಧರಿಸಿದರು. ಲಚ್ಚಣ್ಣ ಅವರ ಪೂರ್ಣ ವಿಳಾಸವಾಗಲಿ ಅಥವಾ ಫೋನ್ ನಂಬರ್ ಆಗಲಿ ಅವರ ಬಳಿ ಇರಲಿಲ್ಲ. ಅವರ ಸ್ವಂತ ಊರು ‘ಧರ್ಮಪುರಿ’ ಎಂಬ ಒಂದೇ ಒಂದು ಸುಳಿವನ್ನು ಇಟ್ಟುಕೊಂಡು ಗೂಗಲ್ನಲ್ಲಿ ಹುಡುಕಿ ಜಗತಿಯಾಲ ಜಿಲ್ಲೆಗೆ ತಲುಪಿದರು. ಅಲ್ಲಿ ಸ್ಥಳೀಯರನ್ನು ವಿಚಾರಿಸುತ್ತಾ ಕೊನೆಗೂ ಗುರುವಾರ ಮಧ್ಯಾಹ್ನ ಲಚ್ಚಣ್ಣ ಅವರ ಮನೆ ಪತ್ತೆ ಮಾಡಿದರು.
ಆ ಸಮಯದಲ್ಲಿ ಲಚ್ಚಣ್ಣ ಉದ್ಯೋಗಕ್ಕಾಗಿ ಗಲ್ಫ್ ದೇಶದಲ್ಲಿದ್ದ ಕಾರಣ, ಇಸ್ಮಾಯಿಲ್ ಅವರ ಕುಟುಂಬಸ್ಥರನ್ನು ಭೇಟಿಯಾಗಿ ತಮ್ಮ ಪರಿಚಯ ಮಾಡಿಕೊಂಡರು. ನಂತರ ಲಚ್ಚಣ್ಣ ಅವರಿಗೆ ಫೋನ್ ಕರೆ ಮಾಡಿದರು. ತಾವು ಸಾಲ ನೀಡಿದ್ದ ವಿಷಯವನ್ನೇ ಮರೆತುಹೋಗಿದ್ದ ಲಚ್ಚಣ್ಣ, ತಮ್ಮ ಹಳೆಯ ಗೆಳೆಯನ ಧ್ವನಿ ಕೇಳುತ್ತಿದ್ದಂತೆ ತಕ್ಷಣ ಗುರುತಿಸಿ ಅತ್ಯಂತ ಪ್ರೀತಿಯಿಂದ ಮಾತನಾಡಿದರು. ಆ ಬಳಿಕ ಇಸ್ಮಾಯಿಲ್ 25,000 ರೂಪಾಯಿ ನಗದನ್ನು ಲಚ್ಚಣ್ಣ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. “ಇಷ್ಟು ವರ್ಷಗಳಿಂದ ನನ್ನ ಮನಸ್ಸಿನಲ್ಲಿದ್ದ ದೊಡ್ಡ ಸಾಲದ ಹೊರೆ ಈಗ ಇಳಿಯಿತು” ಎಂದು ಇಸ್ಮಾಯಿಲ್ ಭಾವುಕರಾದರು. ಗೆಳೆಯ ಕೊಟ್ಟ ಮಾತನ್ನು ಉಳಿಸಿಕೊಂಡು, ಇಷ್ಟೊಂದು ವರ್ಷಗಳ ನಂತರ ಸಾಲ ತೀರಿಸಲೆಂದೇ ಹುಡುಕಿಕೊಂಡು ಬಂದಿದ್ದನ್ನು ನೋಡಿ ಲಚ್ಚಣ್ಣ ಅವರ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದರು.
ಇಂದಿನ ಕಾಲದಲ್ಲಿ ಸಣ್ಣಪುಟ್ಟ ಸಾಲಗಳನ್ನೂ ಮರಳಿಸದೆ ತಪ್ಪಿಸಿಕೊಳ್ಳುವ ಘಟನೆಗಳು ಹೆಚ್ಚಾಗುತ್ತಿರುವಾಗ 30 ವರ್ಷಗಳ ನಂತರ ಸಾವಿರಾರು ಕಿಲೋಮೀಟರ್ ಪ್ರಯಾಣಿಸಿ ಸಾಲ ತೀರಿಸಿದ ಮಹಮ್ಮದ್ ಇಸ್ಮಾಯಿಲ್ ಅವರ ಈ ನಡೆ ಪ್ರಾಮಾಣಿಕತೆ, ಕೃತಜ್ಞತೆ ಮತ್ತು ಸ್ನೇಹಬಂಧಕ್ಕೆ ಅತ್ಯುತ್ತಮ ನಿದರ್ಶನವಾಗಿದೆ ಎಂದು ಸ್ಥಳೀಯರು ಶ್ಲಾಘಿಸಿದ್ದಾರೆ. ಈ ಘಟನೆ ಪ್ರಸ್ತುತ ಧರ್ಮಪುರಿಯಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ.


