Homeಮುಖಪುಟಜಸ್ಟ್ ಆಸ್ಕಿಂಗ್: ಹಿಂದೆ ಅಮಿತ್ ‍ಶಾರನ್ನು ಕಸ್ಟಡಿಗೆ ಕಳುಹಿಸಿದ್ದ ಜಸ್ಟೀಸ್ ಖುರೇಷಿಯವರಿಗೆ ಪದೋನ್ನತಿ ಇಲ್ಲ!

ಜಸ್ಟ್ ಆಸ್ಕಿಂಗ್: ಹಿಂದೆ ಅಮಿತ್ ‍ಶಾರನ್ನು ಕಸ್ಟಡಿಗೆ ಕಳುಹಿಸಿದ್ದ ಜಸ್ಟೀಸ್ ಖುರೇಷಿಯವರಿಗೆ ಪದೋನ್ನತಿ ಇಲ್ಲ!

ಅಂದರೆ... ಮತ್ತೊಮ್ಮೆ ಮೋದಿ ಸರ್ಕಾರದ ಒತ್ತಡಕ್ಕೆ ಉನ್ನತ ನ್ಯಾಯಾಂಗ ಮಣಿಯಿತೇ?

- Advertisement -
- Advertisement -

ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನಿನ್ನೆ ಶಿಫಾರಸ್ಸುಗೊಂಡಿರುವ ನ್ಯಾಯಾಧೀಶರುಗಳಿಗಿಂತ ಹಿರಿಯರಾದ ತ್ರಿಪುರ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ಜಸ್ಟೀಸ್ ಖುರೇಷಿ ಯವರನ್ನು ಏಕೆ ಸುಪ್ರೀಂ ನ್ಯಾಯಮೂರ್ತಿಯಾಗಿ ಆಯ್ಕೆ ಮಾಡಲಿಲ್ಲ?

ಮೋದಿ ಸರ್ಕಾರ ಪೆಗಾಸಸ್ ಬೇಹು ತಂತ್ರಜ್ಞಾನ ಖರೀದಿಸಿತ್ತೋ ಇಲ್ಲವೋ ಎಂದು ಉತ್ತರಿಸುವುದು ರಾಷ್ಟ್ರ ಭದ್ರತೆಯ ವಿಷಯವೇ?

ಜಸ್ಟೀಸ್ NV ರಮಣ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೋದಿ ಸರ್ಕಾರದ ಮುಲಾಜಿಲ್ಲದೆ ಕೊಟ್ಟ ಕೆಲವು ಸ್ವತಂತ್ರ ತೀರ್ಮಾನಗಳು ಉನ್ನತ ನ್ಯಾಯಾಂಗದ ಬಗ್ಗೆ ಮತ್ತೆ ಭರವಸೆಗಳನ್ನು ಮೂಡಿಸಿತ್ತಷ್ಟೇ..

ಆದರೆ ಸುಪ್ರೀಂ ಕೋರ್ಟಿನ ಹಾಗೂ ದೇಶದ ಭವಿಷ್ಯದ ದಿಕ್ಕಿನ ಮೇಲೆ ಪ್ರಭಾವ ಬೀರಬಹುದಾದ ಎರಡು ಪ್ರಮುಖ ನಿರ್ಣಯಗಳಲ್ಲಿ ಮತ್ತೆ ಮೋದಿ ಸರ್ಕಾರದ ಕರಾಳ ನೆರಳುಗಳು ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸುವಂತಿದೆ.

1. ತ್ರಿಪುರಾದ ಮುಖ್ಯ ನ್ಯಾಯಮೂರ್ತಿ ಖುರೇಷಿಯವರನ್ನು ಸುಪ್ರೀಂ ಕೋರ್ಟಿಗೆ ಪದೋನ್ನತಿಗೆ ಪರಿಗಣಿಸದಿರುವುದರ ಹಿಂದಿನ ಕಾರಣವೇನು?

– ಕಳೆದ 22 ತಿಂಗಳಿಂದ ಸುಪ್ರೀಂ ಕೋರ್ಟಿಗೆ ಹೊಸ ನ್ಯಾಯಾಧೀಶರಾರು ನೇಮಕವಾಗಿರಲಿಲ್ಲ. ಏಕೆಂದರೆ ಅದರ ಬಗ್ಗೆ ಶಿಫಾರಸ್ಸು ಮಾಡಬೇಕಿದ್ದ ಸುಪ್ರೀಂ ಕೋರ್ಟಿನ ಐವರು ಅತಿ ಹಿರಿಯ ನ್ಯಾಯಾಧೀಶರ ಕೊಲಿಜಿಯಂ ನಲ್ಲಿ ಒಂದು ಹೆಸರಿನ ಬಗ್ಗೆ ಏಕಾಭಿಪ್ರಾಯವಿರಲಿಲ್ಲ.

ಆ ಹೆಸರು ಈಗ ತ್ರಿಪುರಾದ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿರುವ ನ್ಯಾಯಾಧೀಶ ಅಖಿಲ್ ಖುರೇಷಿಯವರದ್ದು.

ಈಗ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿರುವ ಒಂಭತ್ತು ನ್ಯಾಯಾಧೀಶರಲ್ಲಿ ಬಹುಪಾಲು ನ್ಯಾಯಮೂರ್ತಿಗಳಿಗಿಂತ ಖುರೇಷಿಯವರು ಹಿರಿಯರು. ಆದರೂ ಅವರಿಗ್ಯಾಕೆ ಬಡ್ತಿ ಕೊಡಲಿಲ್ಲ?

ಕಾರಣ ನಿಗೂಢವೇನಲ್ಲ. ಖುರೇಷಿಯವರು ಬಾಂಬೆ ಹೈಕೋರ್ಟಿನ ಹಿರಿಯ ನ್ಯಾಯಾಧೀಶರಾಗಿದ್ದಾಗ ಗುಜರಾತಿನಲ್ಲಿ ಶೊಹ್ರಾಬುದ್ದೀನ್ ಏನ್ಕೌಂಟರ್ ಪ್ರಕರಣದಲ್ಲಿ ಆಪಾದಿತರಾಗಿದ್ದ ಈಗಿನ ಗೃಹಮಂತ್ರಿ ಅಮಿತ್ ಷಾ ರವರನ್ನು ವಿಚಾರಣೆಗೆಂದು ಸಿಬಿಐ ಕಸ್ಟಡಿಗೆ ಒಪ್ಪಿಸಿದ್ದರು.

2014ರಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬಂದ ನಂತರ ಈ ಸೇಡನ್ನು ಕಾಪಿಟ್ಟುಕೊಂಡಿದ್ದ ಮೋದಿ-ಶಾ ಸರ್ಕಾರ ಎಲ್ಲ ಹಂತದಲ್ಲೂ ಖುರೇಷಿಯವರಿಗೆ ತೊಂದರೆ ಕೊಡಲು ಪ್ರಾರಂಭಿಸಿತು.

2019ರಲ್ಲಿ ಖುರೇಷಿಯರನ್ನು 40 ನ್ಯಾಯಾಧೀಶರಿರುವ ಮಧ್ಯಪ್ರದೇಶದ ಹೈಕೋರ್ಟಿಗೆ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ವರ್ಗಾವಣೆ ಮಾಡಿ ಕೊಲಿಜಿಯಂ ಕಳಿಸಿದ್ದ ಶಿಪಾರಸ್ಸನ್ನು ಮೋದಿ ಸರ್ಕಾರ ಒಪ್ಪಿಕೊಳ್ಳಲೇ ಇಲ್ಲ.

ಆ ನಂತರ ಮೋದಿ ಸರ್ಕಾರದ ಒತ್ತಡಕ್ಕೆ ಮಣಿದ ಸುಪ್ರೀಂಕೋರ್ಟ್ ಖುರೇಷಿಯವರನ್ನು ಕೇವಲ 4 ನ್ಯಾಯಾಧೀಶರಿರುವ ತ್ರಿಪುರಾದ ಹೈಕೋರ್ಟಿಗೆ ಮುಖ್ಯ ನ್ಯಾಯಾಧೀಶರಾಗಿ ವರ್ಗಾವಣೆ ಮಾಡಿತು.

ನಂತರ 2020ರಲ್ಲಿ ಸುಪ್ರೀಂ ಕೋರ್ಟಿಗೆ ಹೈಕೋರ್ಟಿನಿಂದ ಪದೋನ್ನತಿ ಪಡೆಯಬೇಕಾದ ಮುಖ್ಯ ನ್ಯಾಯಾಧೀಶರ ಪಟ್ಟಿಯಲ್ಲಿ ಯಾವಾಗಲೂ ಖುರೇಷಿಯವರ ಹೆಸರೇ ಪ್ರಥಮವಾಗಿರುತ್ತಿತ್ತು.

ಆದರೆ ಆಗಿನ ಮುಖ್ಯ ನ್ಯಾಯಾಧೀಶರಾಗಿದ್ದ ಬೋಬಡೆಯವರು ನ್ಯಾಯದ ಪ್ರತಿನಿಧಿಯಾಗದೆ ಮೋದಿಯ ಪ್ರತಿನಿಧಿಯಾಗಿ ವರ್ತಿಸುತ್ತಾ ಖುರೇಷಿಯವರ ಹೆಸರನ್ನು ಕೈಬಿಟ್ಟು ಉಳಿದವರನ್ನು ಸೂಚಿಸುತ್ತಿದ್ದರು.

ಆದರೆ the wire ನಂತ ಕೆಲವು ಪತ್ರಿಕೆಗಳ ಅಧ್ಯಯನ ವರದಿಗಳು ಸೂಚಿಸುವಂತೆ, ಆಗ ಸುಪ್ರೀಂ ಕೋರ್ಟಿನ ಕೊಲಿಜಿಯಂನಲ್ಲಿದ್ದ ನ್ಯಾಯಮೂರ್ತಿ ರೊಹಿಂಗ್ಟನ್ ನಾರಿಮನ್ ಅವರು ಈ ಅನ್ಯಾಯವನ್ನು ಖಡಾಖಂಡಿತವಾಗಿ ವಿರೋಧಿಸುತ್ತ ಬಂದಿದ್ದರು.

ಹೀಗಾಗಿ ನಾರಿಮನ್ ಅವರು ಕೊಲಿಜಿಯಂನಲ್ಲಿ ಇರುವ ತನಕ ಖುರೇಶಿಯವರ ಜೊತೆಗೆ ಯಾರ ಪದೋನ್ನತಿಯೂ ಆಗಿರಲಿಲ್ಲ. ಮೊನ್ನೆ ಆಗಸ್ಟ್ 12 ರಂದು ನಾರಿಮನ್ ಅವರು ನಿವೃತ್ತರಾದರು.

ಅವರ ನಿವೃತ್ತಿಯೊಂದಿಗೆ ಮುಖ್ಯ ನ್ಯಾಯಮೂರ್ತಿ ರಮಣ, ನ್ಯಾಯಮೂರ್ತಿ ಕಾನ್ವಿಲ್ಕರ್, ಲಲಿತ್, ಚಂದ್ರಚೂಡ್, ಮತ್ತು ನಾಗೇಶ್ವರರಾವ್ ಅವರನ್ನೊಳಗೊಂಡ ಹೊಸ ಕೊಲಿಜಿಯಂ ರೂಪುಗೊಂಡಿತು.

ನ್ಯಾಯಮೂರ್ತಿ ನಾರಿಮನ್ ಇಲ್ಲದ ಹೊಸ ಕೊಲಿಜಿಯಂನ ಮೊತ್ತ ಮೊದಲ ಸಭೆಯಲ್ಲೇ ಅತ್ಯಂತ ಹಿರಿಯರಾದ ನ್ಯಾಯಮೂರ್ತಿ ಖುರೇಷಿಯವರನ್ನು ಕೈಬಿಟ್ಟು ಅವರಿಗಿಂತ ಕಿರಿಯರಾದ ಒಂಭತ್ತು ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟಿಗೆ ಆಯ್ಕೆ ಮಾಡಲಾಗಿದೆ.

ನ್ಯಾಯಮೂರ್ತಿ ಖುರೇಷಿಯವರನ್ನು ಕೈಬಿಟ್ಟಿರುವುದಕ್ಕೆ ಯಾವ ಕಾರಣವನ್ನು ಈವರೆಗೆ ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶರ ಕೊಲಿಜಿಯಂ ಒದಗಿಸಿಲ್ಲ.

ಅಂದರೆ… ಮತ್ತೊಮ್ಮೆ ಮೋದಿ ಸರ್ಕಾರದ ಒತ್ತಡಕ್ಕೆ ಉನ್ನತ ನ್ಯಾಯಾಂಗ ಮಣಿಯಿತೇ?

2. ಪೆಗಾಸಸ್ ಅನ್ನು ಭಾರತ ಸರ್ಕಾರ ಖರೀದಿಸಿದೆಯೇ ಇಲ್ಲವೇ ಎಂಬ ಮಾಹಿತಿ ದೇಶದ ಭದ್ರತೆಯ ವಿಷಯವೇ?

– ಪೆಗಾಸಸ್ ಗೂಢಚರ್ಯೆ ಪ್ರಕರಣ ಹೇಗೆ ಈ ದೇಶದ ಸಾರ್ವಭೌಮತೆ ಯನ್ನೂ ಹಾಗು ಈ ದೇಶದ ಮಾಧ್ಯಮ ಹಾಗೂ ಭಿನ್ನಮತದ ಸ್ವಾತಂತ್ರ್ಯವನ್ನು ಉಲ್ಲಂಘಿಸಿದೆ ಎಂಬುದು ಈಗ ಎಲ್ಲರಿಗೂ ಗೊತ್ತಿರುವ ವಿಚಾರ .

ಈಗ ಆ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ಮುಖ್ಯ ನ್ಯಾಯಮೂರ್ತಿ ರಮಣ ಅವರ ಪೀಠದ ಮುಂದಿದೆ.

ಮೋದಿ ಸರ್ಕಾರ ಈ ಪ್ರಕರಣದಲ್ಲಿ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ.

ಏಕೆಂದರೆ ಈಗಾಗಲೇ ಪೆಗಾಸಸ್ ಅನ್ನು ಬಳಸಿ ಕೆಲವು ಪತ್ರಕರ್ತರ ಮೇಲೆ ಬೇಹುಗಾರಿಕೆ ನಡೆಸಿರುವುದಕ್ಕೆ ನಿರಾಕರಿಸಲಾಗದ ಪುರಾವೆಗಳು ಸಿಕ್ಕಿದೆ. ಮತ್ತೊಂದು ಕಡೆ ಪೆಗಾಸಸ್ ಮಾರುವ ಇಸ್ರೇಲಿನ NSO ಕಂಪನಿ ಅದನ್ನು ಸರ್ಕಾರಗಳಿಗೆ ಮಾತ್ರವೇ ಮಾರಿರುವುದಾಗಿ ಸ್ಪಷ್ಟಪಡಿಸಿದೆ.

ಹೀಗಾಗಿ ಭಾರತದಲ್ಲಿ ಪೆಗಾಸಸ್ ಬಳಕೆಯಾಗಿದೆ ಎಂದರೆ ಅದನ್ನು ಭಾರತ ಸರ್ಕಾರವೇ ಖರೀದಿಸಿರಬೇಕು. ಹೀಗಾಗಿ ಪತ್ರಕರ್ತರ ಮೇಲೆ ಬೇಹುಗಾರಿಕೆ ನಡೆಸಲು ಸರ್ಕಾರವೇ ಬಳಸಿರಬೇಕು.

ಆದರೆ ಇದಕ್ಕೆ ಯಾವುದೇ ಕಾನೂನಿನ ಬೆಂಬಲವಿಲ್ಲ. ಹೀಗಾಗಿ ಸರ್ಕಾರ ಮಾಡಿದ್ದರೆ ಅದು ಕಾನೂನು ಬಾಹಿರ, ಸಂವಿಧಾನ ವಿರೋಧಿ…

ಹೀಗಾಗಿ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿರುವ ಅರ್ಜಿದಾರರು ಭಾರತ ಸರ್ಕಾರವು ಪೆಗಾಸಸ್ ಅನ್ನು ಖರೀದಿಸಿದೆಯೋ ಇಲ್ಲವೋ ಎಂಬ ಸರಳ ಪ್ರಶ್ನೆಗೆ ಮೋದಿ ಸರ್ಕಾರದಿಂದ ಉತ್ತರ ಬಯಸುತ್ತಿದ್ದಾರೆ…

ಆದರೆ ಸರ್ಕಾರ ಆ ಮಾಹಿತಿ ದೇಶದ ಭದ್ರತೆಗೆ ಸಂಬಂಧಪಟ್ಟ ವಿಷಯವಾದ್ದರಿಂದ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಜಾರಿಕೊಳ್ಳುತ್ತಿದೆ.

ಈ ಬಗ್ಗೆ ಪ್ರಶ್ನಿಸುವ ಅಧಿಕಾರ ಹೊಂದಿರುವ ಸದನದ ಸಮಿತಿಯ ಮುಂದೆ ಅಧಿಕಾರಿಗಳು ಹಾಜರಾಗದಂತೆ ತಡೆಯುತ್ತಿದೆ. ಮತ್ತೊಂದು ಕಡೆ ಬೇಕಿದ್ದರೆ ಈ ವಿಷಯದ ಬಗ್ಗೆ ತನಿಖೆ ಮಾಡಲು ಸಿದ್ಧ ಎಂದು ಹೇಳುತ್ತಿದೆ.

ಅಂದರೆ ತಾನು ಮಾಡಿರಬಹುದಾದ ಅಪರಾಧದ ಬಗ್ಗೆ ತಾನೇ ‘ಆತ್ಮನಿರ್ಭರ’ ತನಿಖೆ ಮಾಡಿಕೊಳ್ಳುವುದು! ಈ ವಾದ ಮೋದಿ ಸರ್ಕಾರ ಎದುರಾಗಿರುವ ಕುತ್ತಿನಿಂದ ಬಚಾವಾಗಲು ಬಳಸುತ್ತಿರುವ ತಂತ್ರ ಎಂದು ಎಂಬುದು ಸ್ಪಷ್ಟ.

ಹೀಗಾಗಿ ದೇಶದ ಸಾರ್ವಭೌಮತೆಗೆ ಸಂಬಂಧಪಟ್ಟ ಈ ವಿಷಯದಲ್ಲಿ ಸುಪ್ರೀಂಕೋರ್ಟ್ ಸರ್ಕಾರದ ಬಗ್ಗೆ ಕಠಿಣ ನಿಲುವು ತಳೆಯಬಹುದು ಎಂದು ನಿರೀಕ್ಷಿಸಲಾಗಿತ್ತು.

ಆದರೆ ಮುಖ್ಯ ನ್ಯಾಯಮೂರ್ತಿಗಳ ಪೀಠ ಈ ಬಗ್ಗೆ ಸರ್ಕಾರ ಮುಂದಿಟ್ಟಿರುವ ಆಳವಾದ ತನಿಖೆಯ ಪ್ರಸ್ತಾಪದಿಂದ ತೃಪ್ತವಾದಂತೆ ಕಾಣುತ್ತಿದೆ.

ಹಾಗೂ “ದೇಶದ ಭದ್ರತೆಗೆ ಸಂಬಂಧಪಟ್ಟ ವಿಷಯದ ಬಗ್ಗೆ ಯಾವುದೇ ಮಾಹಿತಿಯನ್ನು ಕೊಡಬೇಕೆಂದು ಕೋರ್ಟು ಕಡ್ಡಾಯ ಮಾಡುವುದಿಲ್ಲ” ವೆಂದು ಭರವಸೆಯನ್ನೂ ನೀಡಿದೆ.

ಆ ಮೂಲಕ, ಮೋದಿ ಸರ್ಕಾರ ದೇಶದ ಭದ್ರತೆಯ ವಿಷಯದಲ್ಲಿ ಮಾಡಿರಬಹುದಾದ ಅಪರಾಧದಿಂದ ಬಚಾವಾಗಲು ಸುಪ್ರೀಂ ಕೋರ್ಟು ಅವಕಾಶ ಕೊಟ್ಟಂತಾಗಲಿಲ್ಲವೇ?

ಪೆಗಾಸಸ್ ಅನ್ನು ಬಳಸಿ ಯಾರ್ಯಾರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ವಿವರ ಹೇಳುವುದು ದೇಶದ ಭದ್ರತೆಗೆ ಸಂಬಂಧಪಟ್ಟ ವಿಷಯವಾಗಬಹುದಾಗಲೀ, ಪೆಗಾಸಸ್ ಅನ್ನು ದೇಶ ಕೊಂಡಿದೆಯೋ ಇಲ್ಲವೋ ಎಂಬುದು ಹೇಗೆ ದೇಶ ಭದ್ರತೆಯ ವಿಷಯವಾದೀತು?

ಅದರಲ್ಲೂ ಮೋದಿ ನಿಲುವುಗಳನ್ನು ವಿರೋಧಿಸುವ ಪತ್ರಕರ್ತರ ಮೇಲೆ ನಡೆಸುವ ಬೇಹುಗಾರಿಕೆ ದೇಶರಕ್ಷಣೆಯ ವಿಷಯ ಹೇಗಾದೀತು?

ಇತ್ತೀಚಿನ ಈ ಎರಡು ಪ್ರಕರಣಗಳು ಏನಾದರೂ ಸಂದೇಶ ಕೊಡುತ್ತಿವೆಯೇ?

ಮುಖ್ಯ ನ್ಯಾಯಮೂರ್ತಿ ರಮಣ ಹಾಗೂ ನ್ಯಾಯಮೂರ್ತಿ ಚಂದ್ರಚೂಡರ ಸ್ವತಂತ್ರ ನ್ಯಾಯ ನಿರ್ಣಯಗಳು ಸುಪ್ರೀಂಕೋರ್ಟಿನ ಬಗ್ಗೆ ಹುಟ್ಟಿಸಿದ್ದ ಭರವಸೆಗಳು ಉತ್ಪ್ರೇಕ್ಷಿತವಾಗಿದ್ದವೇ?

ಶಿವಸುಂದರ್


ಇದನ್ನೂ ಓದಿ: ಇತಿಹಾಸ ಮತ್ತು ಪ್ರಸ್ತುತದ ಹಲವು ’ಹಾರರ್‌’ಗಳ ನಡುವೆ ಬದುಕುತ್ತಿರುವ ನಾವು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...